Advertisement

ಹರಹರ ಮಹಾದೇವ…

11:55 AM Feb 25, 2017 | |

ಬೆಂಗಳೂರು: ರಾಜಧಾನಿಯಲ್ಲಿ ಶಿವನ ಆರಾಧನೆಯ ಮಹಾಶಿವರಾತ್ರಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಶುಕ್ರವಾರ ಮುಂಜಾನೆಯಿಂದಲೇ ಶಿವನ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಸಾಲುಗಟ್ಟಿ ನಿಂತು, ದೇವರ ದರ್ಶನ ಮಾಡಿದರು. ಶಿವರಾತ್ರಿ ಪ್ರಯಕ್ತ ವಿಶೇಷ ಅಲಂಕಾರ, ಪೂಜೆ ಏರ್ಪಡಿಸಲಾಗಿತ್ತು.

Advertisement

ಗವಿಪುರದ ಶ್ರೀ ಗವಿಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು. ಭಕ್ತರ ಅನುಕೂಲಕ್ಕಾಗಿ ಅಗತ್ಯ  ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 6 ಗಂಟೆಗೆ ಆರಂಭಗೊಂಡ ವಿಶೇಷ ಪೂಜೆ ಶನಿವಾರ ಬೆಳಗ್ಗೆ 6 ಗಂಟೆ ವರೆಗೂ ಮುಂದುವರೆದಿತ್ತು. ಭಜನೆ, ಸಂಕೀರ್ತನೆ ಸಹ ಆಯೋಜಿಸಲಾಗಿತ್ತು. 

ದೇಶದ ವಿವಿಧೆಡೆಯಿಂದ ಭಕ್ತರ ಆಗಮನ: ಹಳೆ ವಿಮಾನ ನಿಲ್ದಾಣ ರಸ್ತೆಯ ಶಿವೋಹಂ ಶಿವ ದೇವಾಲಯದಲ್ಲೂ ಸಾವಿ­ರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಆರ್‌ಎಂವಿ ಫೌಂಡೇಶನ್‌ ನಿರ್ಮಿಸಿರುವ ದೇವಾಲಯಕ್ಕೆ ದೇಶದ ವಿವಿಧೆ ಡೆ­ಯಿಂದ ಸಾವಿರಾರು ಭಕ್ತರು ಆಗಮಿಸಿ, ಪೂಜೆ ಸಲ್ಲಿಸಿದರು.

ಗಿರಿನಗರದ ಶ್ರೀ ತಾರೆಮರದ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ಗಣಪತಿ ಪೂಜೆ, ಕಲಶ ಸ್ಥಾಪನೆ, ನಾಂದಿ ನವಗ್ರಹ ಪೂಜೆ, ಗಣ ಹೋಮ, ನವಗ್ರಹ ಹೋಮ, ಶನೇಶ್ವರಸ್ವಾಮಿ ಹೋಮ, ಮೃತ್ಯುಂಜಯ ಹೋಮ, ರುದ್ರ ಹೋಮ ಮತ್ತು ಅಭಿಷೇಕಗಳು ನಡೆದವು. ಸಂಜೆ ದೇವರ ಪಲ್ಲಕ್ಕಿ ಉತ್ಸವ ಮತ್ತು ರಾತ್ರಿ ಜಾಗರಣೆ ಪ್ರಯುಕ್ತ ಭಜನೆ ನಡೆಯಿತು. 

ಬಿನ್ನಿಮಿಲ್‌ ರಸ್ತೆಯ ಮಾರ್ಕಂಡೇಶ್ವರ ನಗರದಲ್ಲಿ ಸಾಮೂಹಿಕ ಕುಲದೇವರ ಪೂಜೆ, ಮಹಾಮಂಗಳಾರತಿ, ರಾತ್ರಿ ನಾಲ್ಕು ಯಾಮಗಳಲ್ಲಿ ಪೂಜೆ ನಡೆಸಲಾಯಿತು. ಎಚ್‌.ಸಿದ್ದಯ್ಯ ರಸ್ತೆಯ ಕೊಳದ ಮಠದಲ್ಲಿ ಶ್ರೀ ಜಲಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಕ್ಷೀರಾಭಿಷೇಕ, ಲಕ್ಷ ಬಿಲ್ವಾರ್ಚನೆ ನೆರವೇರಿತು. ರಾಜಾಜಿನಗರದ ಶ್ರೀ ವ್ಯಾಸರಾಜ ಮಠದಲ್ಲಿ ಶಿವರಾತ್ರಿ ಅಂಗವಾಗಿ ಮುಂಜಾನೆ ರುದ್ರದೇವರಿಗೆ ಫ‌ಲಪಂಚಾಮೃತ ಅಭಿಷೇಕ, ರುದ್ರ ಚಮಕ ಪಾರಾಯಣ, ರುದ್ರ ಹೋಮ, ಪೂರ್ಣಾಹುತಿ, ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

Advertisement

ಜರಗನಹಳ್ಳಿಯ ಶ್ರೀ ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಸ್ಥಾನ, ಅಗ್ರಹಾರ ದಾಸರಹಳ್ಳಿಯ ಶ್ರೀ ಭಕ್ತ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ರಾಜರಾಜೇಶ್ವರಿ ನಗರದಲ್ಲಿ ಸ್ವಾಮಿಗೆ ಶ್ರೀರುದ್ರಾಭಿಷೇಕ ಹಾಗೂ 1008 ಬಿಲ್ವಾಷ್ಟೋತ್ತರ, ಬಂಗಾರ ಲೇಪಿತ ಬೆಳ್ಳಿ ಕವಚಧಾರಣೆ ಕಾರ್ಯಕ್ರಮ ನೆರವೇರಿದವು. 

ಅಹೋರಾತ್ರಿ ಕಾರ್ಯಕ್ರಮ
ಶಿವರಾತ್ರಿ ಅಂಗವಾಗಿ ವಿವಿಧ ಶಿವನ ದೇವಾಲಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೆಲವು ಕಡೆಗಳಲ್ಲಿ ರಾತ್ರಿಯಿಂದ ಶನಿವಾರದ ವರೆಗೆ ಜಾಗರಣೆ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಯಶವಂತಪುರದ ಗಾಯತ್ರಿ ದೇವಸ್ಥಾನದಲ್ಲಿ ಜಾಗರಣೆ ಅಂಗವಾಗಿ ಅಹೋರಾತ್ರಿ ಸಂಗೀತ ನೃತ್ಯೋತ್ಸವ ಆಯೋಜಿಸಲಾಗಿತ್ತು.  ಜೆ.ಪಿ.ನಗರದ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ  ಮಹಾಶಿವರಾತ್ರಿ ಉತ್ಸವ. ರೋಹಿತ್‌ಭಟ್‌ ಮತ್ತು ತಂಡದಿಂದ  ಗಾನವೈಭವ,  ಎಂ.ಡಿ.ಪಲ್ಲವಿ ಅರುಣ್‌ರಿಂದ ಗಾನ ಲಹರಿ, ಸಹನಾರಿಂದ ಭಕ್ತಿ ಸುಧೆ, ಅಸಾದುಲ್ಲಾ ಬೇಗ್‌ ಮತ್ತು ತಂಡದಿಂದ ಹಾಸ್ಯ ರಂಜನೆ, ಅನೀಶ್‌ ವಿದ್ಯಾಶಂಕರ್‌ ಅವರಿಂದ ಪಿಟೀಲು ವಾದನ, ಪ್ರಭಾತ್‌ ಆರ್ಟ್ಸ್ ಇಂಟರ್‌ನ್ಯಾಷನಲ್‌ ಕಥಾಸ್ತ್ರ-ನೃತ್ಯ ಕಾವ್ಯ ಕಥಾ, ಬಿಂಕ ಬಿನ್ನಾಣರು ತಂಡದಿಂದ “ಗುರುಶಿಷ್ಯರು’ ಹಾಸ್ಯ ನಾಟಕ ನಡೆಯಿತು.  

ಇಂದಿರಾನಗರದಲ್ಲಿ ಶ್ರೀಸಾಯಿ ದರ್ಶನ್‌ ಅವರಿಂದ ವಿಶೇಷ ಭಜನೆ. ಮಂತ್ರಿಮಾಲ್‌ ಮುಂಭಾಗದ ಸಿರೂರು ಪಾರ್ಕ್‌ನಲ್ಲಿ ಜಾಣ ಜಾಣೆಯರ ನಗೆ ಜಾಗರಣೆ, ಶಿವಾನಂದ ನಗರದಲ್ಲಿ ಸಿದ್ದಾರೂಢ ಭಜನಾ ಮಂಡಳಿಯಿಂದ ಅಹೋರಾತ್ರಿ ಭಜನಾ ಪದ, ತತ್ವಪದ, ಜಾನಪದ, ಭಾವಗೀತೆ ಮತ್ತು ಭಕ್ತಿಗೀತೆಗಳ ಗಾಯನ ನಡೆಯಿತು. ಅದ್ವೆ„ತ ಕೇಂದ್ರದಿಂದ ಭೂಕೈಲಾಸ ನಾಟಕ ಪ್ರದರ್ಶನಗೊಂಡಿತು. 

ಶಿವ ಶಿವ ಎಂದರೆ ಭಯವಿಲ್ಲ…
ಬಸವನಗುಡಿಯ ಕಹಳೆ ಬಂಡೆ ಉದ್ಯಾನವನದಲ್ಲಿ “ಶಿವ ಶಿವ ಎಂದರೆ ಭಯವಿಲ್ಲ…’ ಶೀರ್ಷಿಕೆಯಡಿ ಹಳೆಯ ಕನ್ನಡ ಚಲನಚಿತ್ರ ಗೀತೆಗಳ  ಗಾಯನವಿತ್ತು. ಗಾಯಕರಾದ ರಾಜರಾಮ್‌, ಶೈಲಜಾ, ಶಶಿಧರ್‌, ದಾಕ್ಷಾಯಿಣಿ, ಎಚ್‌.ಆರ್‌.ಕೆ.ಪ್ರಸಾದ್‌ ಅವರ ಗಾಯನ ನಿರಂತರವಾಗಿ 16 ಗಂಟೆಗಳ ಕಾಲ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ಹಿರಿಯ ಕವಿ ದೊಡ್ಡರಂಗೇಗೌಡ, ಎಸ್‌ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಫಾರೂಖ್‌ ಶಹಾಬ್‌ ಪಾಲ್ಗೊಂಡಿದ್ದರು.

ಭಕ್ತರಿಂದಲೇ ಜಲಾಭಿಷೇಕ
ಕೆಂಗೇರಿ: ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲ ಸಮೂದಾಯದ ಭಕ್ತರೂ ಓಂಕಾರೇಶ್ವರ ಜ್ಯೋತಿರ್ಲಿಂಗ ಸ್ವಾಮಿಯ ಗರ್ಭಗುಡಿ ಪ್ರವೇಶಿಸಿ ಸ್ವಾಮಿಗೆ ಜಲಾಭಿಷೇಕ ಮಾಡುವ ಅವಕಾಶವನ್ನು ಓಂಕಾರಾಶ್ರಮ ಮಹಾಸಂಸ್ಥಾನದಲ್ಲಿ ಕಲ್ಪಿಸಲಾಗಿತ್ತು. 

ಮಹಾಶಿವರಾತ್ರಿ ಪ್ರಯುಕ್ತ ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯಲ್ಲಿನ ಓಂಕಾರಾಶ್ರಮ ಮಹಾಸಂಸ್ಥಾನದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನವನ್ನು ಭಕ್ತರಿಗಾಗಿ ಏರ್ಪಡಿಸಲಾಗಿತ್ತು. ಬೆಳಿಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಜ್ಯೋತಿರ್ಲಿಂಗ ದರ್ಶನ ಪಡೆಯುವುದರ ಜೊತೆಗೆ ಜ್ಯೋತಿರ್ಲಿಂಗಕ್ಕೆ ಜಲಾಭಿಷೇಕ ಮಾಡುವ ಮೂಲಕ ಭಕ್ತಿ ಭಾವದಿಂದ ಮಿಂದೆದ್ದರು.

ಮಧುಸೂದನಾ ನಂದಪುರಿ ಸ್ವಾಮೀಜಿ ದೇವಸ್ಥಾನದ ಆವರಣದಲ್ಲಿ ಮುಂಜಾನೆ ಗೋ ಪೂಜೆ, ಅಶ್ವ ಪೂಜೆ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಓಂಕಾರೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶ್ರೀಗಳು, ಮಹಾಶಿವರಾತ್ರಿ ಜನತೆಯ ಬಾಳಿನಲ್ಲಿ ಸಂಕಷ್ಟಗಳನ್ನು ದೂರಮಾಡಿ ಕತ್ತಲು ಕವಿದಿರುವ ಬದುಕಿಗೆ ಬೆಳಕಿನ ಹೊಂಗಿರಣ ಮೂಡಲಿ ಎಂದು ಆಶಿಸಿದರು. ಮಹಾಶಿವರಾತ್ರಿಯಂದು ಪೂಜೆ, ಧ್ಯಾನ, ಶಿವನ ಆರಾಧನೆ ಮಾಡುವ ಮೂಲಕ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರೆ ಕಷ್ಟಗಳೆಲ್ಲ ಕರಗಿ ಸುಖದ ಹಾದಿ ಸುಗಮವಾಗಲಿದೆ ಎಂದು ತಿಳಿಸಿದರು.

ಸಂಜೆ ಪಲ್ಲಕ್ಕಿ ಉತ್ಸವ 4 ಯಾಮಗಳ ಪೂಜೆ, ಭಜನೆ ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ನಗರಸಭೆ ಮಾಜಿ ಸದಸ್ಯ ಡಿ.ಮುನಿರಾಜು, ಉದ್ಯಮಿ ಗೋಪಾಲನ್‌, ಯಶವಂತಪುರ ವಿಧಾನಸಭಾ ಕ್ಷೇತ್ರ ಆರಾಧನ ಸಮಿತಿ ಅಧ್ಯಕ್ಷ ದೊಡ್ಡಬೆಲೆ ನಾರಾಯಣಪ್ಪ, ನಗರಸಭೆ ಮಾಜಿ ಸದಸ್ಯ ಮೈಲಸಂದ್ರ ಮುನಿರಾಜು ಹಾಗೂ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next