Advertisement

ಹಳ್ಳಿ-ಹಳ್ಳಿಗಳಲ್ಲಿ ಹರ್‌ ಘರ್‌ ತಿರಂಗಾ

01:22 AM Jul 27, 2022 | Team Udayavani |

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹರ್‌ ಘರ್‌ ತಿರಂಗಾ ಎಂಬ ಅಭಿಯಾನ ಆರಂಭಿಸಿದ್ದು, ಪ್ರತಿಯೊಂದು ಮನೆ, ಶಾಲೆ, ಸಂಘ-ಸಂಸ್ಥೆಗಳ ಕಚೇರಿಗಳ ಮೇಲೂ ತಿರಂಗಾ ಧ್ವಜ ಹಾರಿಸುವಂತೆ ಕರೆ ಕೊಟ್ಟಿದೆ. ಇದಕ್ಕಾಗಿ ರಾಜ್ಯದಲ್ಲಿ ಭಾರೀ ಸಿದ್ಧತೆಯಾಗಿದ್ದು, ಸುಮಾರು 80 ಲಕ್ಷ ರಾಷ್ಟ್ರಧ್ವಜಕ್ಕಾಗಿ ಆರ್ಡರ್‌ ನೀಡಲಾಗಿದೆ.

Advertisement

ಯಾರಿಂದ ಪೂರೈಕೆ?
ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಇದರ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆ (ಎನ್‌ಆರ್‌ಎಲ್‌ಎಂ)ಯ ಸಹಯೋಗದೊಂದಿಗೆ ಈ ಅಭಿಯಾನ ಯಶಸ್ವಿಗೊಳಿಸಲು ಯೋಜನೆ ಹಾಕಿಕೊಂಡಿದ್ದು ನಗರ ಪ್ರದೇಶಗಳಿಗೆ 50 ಲಕ್ಷ ರಾಷ್ಟ್ರಧ್ವಜ ಹಾಗೂ ಗ್ರಾಮೀಣ ಭಾಗಕ್ಕೆ ಸುಮಾರು 30 ಲಕ್ಷಕ್ಕೂ ಅಧಿಕ ರಾಷ್ಟ್ರಧ್ವಜ ಪೂರೈಕೆ ಮಾಡಲು ಸಜ್ಜಾಗುತ್ತಿವೆ. ವಿಶೇಷವೆಂದರೆ, ಗ್ರಾಮೀಣ ಭಾಗದಲ್ಲಿ ನಡೆಯುವ ಹರ್‌ ಘರ್‌ ತಿರಂಗಾ ಅಭಿಯಾನದ ವೇಳೆ ಹಳ್ಳಿಗಳಲ್ಲಿ ಹಾರಾಡುವ ರಾಷ್ಟ್ರಧ್ವಜಗಳನ್ನು ಸ್ಥಳೀಯ ಸ್ವಸಹಾಯ ಗುಂಪುಗಳು ಹಾಗೂ ಗ್ರಾಮ ಪಂಚಾಯತ್‌ ಮಟ್ಟದ ಒಕ್ಕೂಟಗಳು ತಯಾರಿಸಲಿವೆ. ಧ್ವಜಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳದೇ ಸ್ಥಳೀಯವಾಗಿ ತಯಾರಿಸುವ ಮೂಲಕ “ದೇಸಿತನಕ್ಕೆ’ ಉತ್ತೇಜನ ನೀಡುವ ಉದ್ದೇಶವೂ ಇದರ ಹಿಂದಿದೆ.ಸ್ವಸಹಾಯ ಗುಂಪುಗಳು ತಯಾರಿಸಿದ ಧ್ವಜವನ್ನು ಖರೀದಿಸಿ ಗ್ರಾಮ ಪಂಚಾಯತ್‌ಗಳು ಉಚಿತವಾಗಿ ಹಂಚಿಕೆ ಮಾಡಲಿವೆ.

8ರಿಂದ 10 ಸ್ವಸಹಾಯ ಗುಂಪುಗಳ ಆಯ್ಕೆ
ಪ್ರತಿ ತಾಲೂಕಿಗೆ 8ರಿಂದ 10 ಸ್ವಸಹಾಯ ಗುಂಪುಗಳನ್ನು ಆಯ್ಕೆ ಮಾಡಲಾಗಿದೆ. ಧ್ವಜ ತಯಾರಿಸುವ ಬಗ್ಗೆ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಸ್ವ ಉದ್ಯೋಗ ಸಂಸ್ಥೆ (ರುಡ್‌ಸೆಟ್‌) ಹಾಗೂ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಆರ್‌ಎಸ್‌ಇಟಿಐ)ಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಸ್ವಸಹಾಯ ಗುಂಪುಗಳು ತಯಾರಿಸಿದ ಕನಿಷ್ಠ 450 ಧ್ವಜಗಳನ್ನು ಪ್ರತಿ ಗ್ರಾಮ ಪಂಚಾಯತ್‌ ಖರೀದಿಸಬೇಕು ಎಂದು ಗುರಿ ನಿಗದಿ ಮಾಡಲಾಗಿದೆ. ಅದರಂತೆ, ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾ.ಪಂ.ಗಳಿದ್ದು ಒಂದೊಂದು ಪಂಚಾಯತ್‌ ಕನಿಷ್ಠ 450 ಧ್ವಜಗಳನ್ನು ಖರೀದಿಸಿದರೂ ಎಲ್ಲ ಪಂಚಾಯತ್‌ಗಳು ಸುಮಾರು 28ರಿಂದ 30 ಲಕ್ಷ ಧ್ವಜಗಳನ್ನು ಖರೀದಿಸಿ ಅದನ್ನು ಉಚಿತವಾಗಿ ಹಂಚಲಿವೆ. ಈ ಲೆಕ್ಕದಲ್ಲಿ ಅಭಿಯಾನದ ಅವಧಿಯಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ರಾಷ್ಟ್ರಧ್ವಜಗಳು ರಾರಾಜಿಸಲಿವೆ ಎಂದು ಅಂದಾಜಿಸಲಾಗಿದೆ.

10 ಲಕ್ಷ ಪೂರೈಕೆ
ಹರ್‌ ಘರ್‌ ತಿರಂಗಾ ಅಭಿಯಾನದಡಿ ಕೇಂದ್ರ ಸರಕಾರವು ಪ್ರಾರಂಭಿಕ ಹಂತವಾಗಿ 10 ಲಕ್ಷ ರಾಷ್ಟ್ರಧ್ವಜವನ್ನು ರಾಜ್ಯಕ್ಕೆ ಪೂರೈಸುತ್ತಿದ್ದು, ಅದನ್ನು 9 ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ ಅಭಿಯಾನವನ್ನು ಯಶಸ್ವಿಗೊಳಿಸುವ ಸಲುವಾಗಿ ಕೇಂದ್ರ ಸರಕಾರದಿಂದ 50 ಲಕ್ಷ ರಾಷ್ಟ್ರಧ್ವಜ ಪೂರೈಕೆಗೆ ಮನವಿ ಸಲ್ಲಿಸಲಾಗಿದ್ದು ಅದರ ಭಾಗವಾಗಿ ಆರಂಭದಲ್ಲಿ ಕೇಂದ್ರ ಸರಕಾರ 10 ಲಕ್ಷ ಧ್ವಜಗಳನ್ನು ಪೂರೈಸುತ್ತಿದೆ. ಅದರಲ್ಲಿ 5 ಲಕ್ಷ ಧ್ವಜಗಳನ್ನು 14 ಜಿಲ್ಲೆಗಳಿಗೆ ಹಂಚಿಕೆ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶಿಸಿದೆ. ಅದರಲ್ಲಿ ಬಹುತೇಕ ರಾಷ್ಟ್ರಧ್ವಜ ಸರಕಾರಿ ಕಚೇರಿ, ಕಟ್ಟಡಗಳಿಗೆ ಪೂರೈಸಲಾಗುತ್ತದೆ. ಉಳಿದ ರಾಷ್ಟ್ರಧ್ವಜವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ. ಜಿಲ್ಲಾ ವ್ಯಾಪ್ತಿಯಲ್ಲಿ ಅದರಲ್ಲೂ ಜಿಲ್ಲಾ ಕೇಂದ್ರದ ನಗರ ಪ್ರದೇಶದಲ್ಲಿ ರಾಷ್ಟ್ರಧ್ವಜಗಳನ್ನು ಹೆಚ್ಚಾಗಿ ಹಂಚಿಕೆ ಮಾಡಲಾಗುತ್ತಿದೆ. ಅದರ ಹೊಣೆಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಅವರ ಜತೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ನೇಮಿಸಲಾಗಿದೆ. ಅದೇ ಬಿಬಿಎಂಪಿ ವ್ಯಾಪ್ತಿಗೆ ಮುಖ್ಯ ಆಯುಕ್ತ ಹಾಗೂ ಆಡಳಿತ ವಿಭಾಗದ ವಿಶೇಷ ಆಯುಕ್ತರಿಗೆ ಅದರ ಹೊಣೆಯನ್ನು ನೀಡಲಾಗಿದೆ.

ರಾಷ್ಟ್ರಧ್ವಜಕ್ಕೆ ಹೆಚ್ಚಾದ ಬೇಡಿಕೆ
ಹರ್‌ ಘರ್‌ ತಿರಂಗಾ ಅಭಿಯಾನದ ಬಗ್ಗೆ ಸಾರ್ವಜನಿಕರೂ ಈಗಾಗಲೆ ಆಸಕ್ತಿ ವಹಿಸುತ್ತಿದ್ದಾರೆ. ಹೀಗಾಗಿಯೇ ನಗರ ಪ್ರದೇಶದಲ್ಲಿನ ಧ್ವಜ ಮಾರಾಟಗಾರರಿಗೆ ರಾಷ್ಟ್ರಧ್ವಜ ಪೂರೈಕೆಗಾಗಿ ಸಂಘ-ಸಂಸ್ಥೆಗಳಿಗೆ ಬೇಡಿಕೆಗಳು ಹೆಚ್ಚಿಗೆ ಬರುತ್ತಿವೆ. ಬೆಂಗಳೂರು ನಗರದಲ್ಲಿ ಪ್ರತಿವರ್ಷ ಸ್ವಾತಂತ್ರ್ಯ ದಿನದ ಹಿನ್ನೆಲೆ 1 ಲಕ್ಷದಷ್ಟು ರಾಷ್ಟ್ರಧ್ವಜ ಮಾರಾಟವಾಗುತ್ತಿದ್ದವು. ಆದರೆ, ಈವರ್ಷ ಈಗಾಗಲೆ 1 ಲಕ್ಷಕ್ಕೂ ಹೆಚ್ಚಿನ ರಾಷ್ಟ್ರಧ್ವಜ ಮಾರಾಟವಾಗಿವೆ. ಆ. 1ರಿಂದ ರಾಷ್ಟ್ರಧ್ವಜಕ್ಕೆ ಬೇಡಿಕೆ ಹೆಚ್ಚುವ ಸಾಧ್ಯತೆಯಿದ್ದು, ಈ ಬಾರಿ ಬೆಂಗಳೂರಿನಲ್ಲೇ 5 ಲಕ್ಷಕ್ಕೂ ಹೆಚ್ಚಿನ ರಾಷ್ಟ್ರಧ್ವಜ ಮಾರಾಟವಾಗುವ ಸಾಧ್ಯತೆಗಳಿವೆ. ಹೀಗಾಗಿ ಧ್ವಜ ಮಾರಾಟಗಾರರು ಗಾರ್ಮೆಂಟ್ಸ್‌ ಹಾಗೂ ಟೈಲರ್‌ ಗುಂಪುಗಳಿಗೆ ಧ್ವಜ ಹೊಲೆದು ಕೊಡಲು ಸೂಚಿಸಿದ್ದಾರೆ.

Advertisement

2.02 ಕೋಟಿ ರೂ. ಪಾವತಿ
ಕೇಂದ್ರ ಸರಕಾರ ಪೂರೈಸುತ್ತಿರುವ 10 ಲಕ್ಷ ರಾಷ್ಟ್ರಧ್ವಜಕ್ಕೆ ಬದಲಾಗಿ ರಾಜ್ಯ ಸರಕಾರ ಹಣ ಪಾವತಿಸಲಿದೆ. ಅದರಂತೆ ಪ್ರತಿ ರಾಷ್ಟ್ರಧ್ವಜಕ್ಕೆ 20 ರೂ. ಹಾಗೂ ಸಾರಿಗೆ ವೆಚ್ಚದ ರೂಪದಲ್ಲಿ 2.30 ಲಕ್ಷ ರೂ. ಪಾವತಿಸಲಾಗುತ್ತದೆ. ಒಟ್ಟಾರೆ 2,02,30,000 ರೂ.ಗಳನ್ನು ರಾಜ್ಯ ಸರಕಾರ ಕೇಂದ್ರಕ್ಕೆ ನೀಡಬೇಕಿದೆ.

ವಾರದಲ್ಲಿ ಹಂಚಿಕೆ
ಕೇಂದ್ರ ಸರಕಾರದಿಂದ ಗುರುವಾರದೊಳಗೆ 10 ಲಕ್ಷ ರಾಷ್ಟ್ರಧ್ವಜಗಳು ರಾಜ್ಯಕ್ಕೆ ಬರಲಿದೆ. ಉಳಿದ 40 ಲಕ್ಷ ರಾಷ್ಟ್ರಧ್ವಜಗಳ ಪೂರೈಕೆ ಬಗ್ಗೆ ಕೇಂದ್ರ ಸರಕಾರ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಮೊದಲಿಗೆ ಬರಲಿರುವ 10 ಧ್ವಜಗಳಲ್ಲಿ 5 ಲಕ್ಷ ರಾಷ್ಟ್ರಧ್ವಜಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿರುವ ಜಿಲ್ಲೆಗಳಲ್ಲಿ ವಾರದೊಳಗೆ ಹಂಚಿಕೆ ಕಾರ್ಯ ಆರಂಭವಾಗಲಿದೆ.

ಪ್ರತಿಧ್ವಜಕ್ಕೆ 20ರಿಂದ 25 ರೂ.
ಕೇಂದ್ರ ಸರಕಾರ ಪೂರೈಸುತ್ತಿರುವ ರಾಷ್ಟ್ರಧ್ವಜಕ್ಕೆ ಬದಲಾಗಿ ರಾಜ್ಯ ಸರಕಾರ ಹಣ ಪಾವತಿಸುತ್ತಿರುವ ಕಾರಣ ಜಿಲ್ಲಾ ಮಟ್ಟದಲ್ಲಿ ರಾಷ್ಟ್ರಧ್ವಜವನ್ನು ಪಡೆಯುವ ಸಾರ್ವಜನಿಕರು ಹಣ ಪಾವತಿಸಬೇಕಿದೆ. ಆ ಕುರಿತಂತೆ ಕೇಂದ್ರ ಸರಕಾರದಿಂದ ಇನ್ನೂ ಮಾರ್ಗಸೂಚಿ ಪ್ರಕಟವಾಗಿಲ್ಲ. ಅಧಿಕಾರಿಗಳ ಪ್ರಕಾರ ಪ್ರತಿ ರಾಷ್ಟ್ರಧ್ವಜಕ್ಕೆ 20ರಿಂದ 25 ರೂ. ನಿಗದಿ ಮಾಡುವ ಸಾಧ್ಯತೆಗಳಿವೆ.

ಧ್ವಜ ತಯಾರಿಕೆ ಹೇಗೆ
ಕೇಂದ್ರ ಸರಕಾರ ನಿಗದಿಪಡಿಸಿದ ಅಳತೆಗಳಲ್ಲಿ ಪಾಲಿಸ್ಟರ್‌ ಬಟ್ಟೆಯಲ್ಲಿ ಧ್ವಜಗಳನ್ನು ತಯಾರಿಸಲಾಗುತ್ತದೆ. ಒಂದು ಧ್ವಜ ತಯಾರಿಸಲು ಕನಿಷ್ಠ 30ರಿಂದ 40 ರೂ. ವೆಚ್ಚ ಆಗುತ್ತದೆ. ಕನಿಷ್ಠ 2ರಿಂದ 3 ರೂ. ಲಾಭಾಂಶ ಇಟ್ಟುಕೊಂಡು ಸ್ವಹಸಾಯ ಗುಂಪುಗಳು ರಾಷ್ಟ್ರಧ್ವಜಗಳನ್ನು ಪಂಚಾಯತ್‌ಗಳಿಗೆ ಮಾರಾಟ ಮಾಡುತ್ತವೆ. ಪ್ರತಿ ಪಂಚಾಯತ್‌ ಕನಿಷ್ಠ 450 ಧ್ವಜಗಳನ್ನು ಖರೀದಿಸಬೇಕು. ಖರೀದಿಸಿದ ಧ್ವಜಗಳನ್ನು ಪಂಚಾಯತ್‌ಗಳು ಉಚಿತವಾಗಿ ಹಂಚಿಕೆ ಮಾಡಬೇಕು. ಧ್ವಜಗಳ ಖರೀದಿಗೆ ತಗಲುವ ವೆಚ್ಚವನ್ನು ಪಂಚಾಯತ್‌ಗಳು ತಮ್ಮ ಸ್ವಂತ ನಿಧಿಯಿಂದ ಭರಿಸಬೇಕು. ಧ್ವಜಗಳ ಮಾರಾಟ ಮಳಿಗೆಗಳನ್ನು ತೆರೆಯಲೂ ಅವಕಾಶವಿದೆ. ಬಟ್ಟೆ ಖರೀದಿಗೆ ಸ್ವಸಹಾಯ ಗುಂಪುಗಳಿಗೆ ಎನ್‌ಆರ್‌ಎಲ್‌ಎಂ ವತಿಯಿಂದ ಸಮುದಾಯ ಹೂಡಿಕೆ ನಿಧಿ ರೂಪದಲ್ಲಿ ಹಣ ನೀಡಲಾಗುತ್ತದೆ ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)ದ ನಿರ್ದೇಶಕಿ ಎನ್‌. ಮಂಜುಶ್ರೀ ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಧ್ವಜ ಹಾರಾಟ
ಪಂಚಾಯತ್‌ ವ್ಯಾಪ್ತಿಯ ರಾಜ್ಯ ಸರಕಾರದ ಎಲ್ಲ ಕಚೇರಿಗಳು, ಅಂಗನವಾಡಿ ಕೇಂದ್ರಗಳು, ಪ್ರಾಥ ಮಿಕ ಆರೋಗ್ಯ ಕೇಂದ್ರಗಳು, ಸಹಕಾರ ಸಂಘ ಗಳು, ಅಂಚೆ ಕಚೇರಿ, ಶಾಲೆಗಳು, ವಸತಿ ಶಾಲೆ ಗಳು, ಹಾಸ್ಟೆಲ್‌ಗ‌ಳು, ಗ್ರಾಮ ಪಂಚಾಯತ್‌ ಗ್ರಂಥಾಲಯಗಳು, ಅರೆ ಸರಕಾರಿ ಕಚೇರಿಗಳು, ನಿಗಮ-ಮಂಡಳಿಗಳು, ಸಾರ್ವಜನಿಕ ಉದ್ಯಮ ಗಳು, ಪಶು ಪಾಲನಾ ಕೇಂದ್ರ ಸೇರಿದಂತೆ ಇತರ ಸರಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಿಸ ಬೇಕು. ಇದರ ಜತೆಗೆ ಸ್ವಸಹಾಯ ಗುಂಪುಗಳು, ಸಾರ್ವಜನಿಕರು, ಶಾಲಾ, ಕಾಲೇಜು ಮಕ್ಕಳು, ಇತರ ಎಲ್ಲ ಸಿಬಂದಿ ಹಾಗೂ ಅವರ ಕುಟುಂಬ ವರ್ಗದವರು ಸೇರಿ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಾರ್ವಜನಿಕರ ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಪ್ರೇರೇಪಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸ್ವಾತಂತ್ರ್ಯ ಚಳವಳಿ ಮತ್ತು ರಾಷ್ಟ್ರದ ಹಿರಿಮೆಯ ದೃಷ್ಟಿಯಿಂದ ಗ್ರಾಮೀಣ ಮಟ್ಟದಲ್ಲಿ ಇದೊಂದು ಮಹತ್ವದ ಅಭಿಯಾನ. ಗ್ರಾಮ ಪಂಚಾಯತ್‌ಗಳು ಮತ್ತು ಸ್ವಸಹಾಯ ಗುಂಪುಗಳು ಆಸಕ್ತಿಯಿಂದ ಸಕ್ರೀಯವಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ.
– ಉಮಾ ಮಹದೇವನ್‌,
ಅಪರ ಮುಖ್ಯ ಕಾರ್ಯದರ್ಶಿ, ಆರ್‌ಡಿಪಿಆರ್‌ ಇಲಾಖೆ.

– ರಫೀಕ್‌ ಅಹ್ಮದ್‌/ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next