Advertisement

ವ್ಯಾಪ್ತಿ ಪ್ರದೇಶದಿಂದ ದೂರವಾಗುತ್ತಿದೆ ಬಿಎಸ್ಸೆನ್ನೆಲ್‌

10:19 PM Apr 11, 2019 | mahesh |

ಬೆಳ್ಳಾರೆ: ಟವರ್‌ನ ಅಡಿಯಲ್ಲಿ ನಿಂತರೂ ಬೆಳ್ಳಾರೆ ಹಾಗೂ ಆಸುಪಾಸಿನ ಗ್ರಾಮೀಣ ಭಾಗಗಳಲ್ಲಿ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ಸಿಗುತ್ತಿಲ್ಲ. ವಿದ್ಯುತ್‌ ಹೋದರೆ ಇಲ್ಲಿ ಮೊಬೈಲ್‌ ಸಿಗ್ನಲ್‌ ಸಿಗುವುದೇ ಇಲ್ಲ. ಜನರೇಟರ್‌ ಇದ್ದರೂ ನಿರ್ವಹಣೆ ಕೊರತೆಯಿಂದ ಕೈಕೊಡುವ ನೆಟ್‌ವರ್ಕ್‌ನಿಂದಾಗಿ ಗ್ರಾಹಕರು ಬೇಸತ್ತು ಹೋಗಿದ್ದಾರೆ.

Advertisement

ಬಿಎಸ್ಸೆನ್ನೆಲ್‌ ಸಿಮ್‌ ಅನ್ನು ಖಾಸಗಿ ಕಂಪೆನಿಗಳ ನೆಟ್‌ವರ್ಕ್‌ಗೆ ಬದಲಾಯಿಸಿಕೊಳ್ಳಲು (ಪೋರ್ಟ್‌) ಗ್ರಾಹಕರು ನಿರ್ಧರಿಸಿದ್ದಾರೆ. ವಿದ್ಯುತ್‌ ಇಲ್ಲದಿರುವಾಗ ಗ್ರಾಮೀಣ ಭಾಗದ ಬಿಎಸ್ಸೆನ್ನೆಲ್‌ ನಂಬರ್‌ಗೆ ಕರೆ ಮಾಡಿದರೆ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎನ್ನುವ ಉತ್ತರ ಸಿಗುತ್ತದೆ. ಪ್ರತಿದಿನ ತಾಂತ್ರಿಕ ತೊಂದರೆಗಳು ಕಾಡುತ್ತಲೇ ಇದ್ದು, ಇಲಾಖೆಯ ನಿರ್ಲಕ್ಷ್ಯದಿಂದ ಸರಕಾರಿ ಸ್ವಾಮ್ಯದ ಸಂಸ್ಥೆಯ ನೆಟ್‌ವರ್ಕ್‌ ಗ್ರಾಹಕರಿಂದ ದೂರವಾಗುವ ಕಾಲ ಸನ್ನಿಹಿತವಾಗುತ್ತಿದೆ. ಇದರ ಮುನ್ಸೂಚನೆ ಎಂಬಂತೆ ಟವರ್‌ಗಳ ನಿರ್ವಹಣೆ ಆಗಲೇ ಸ್ಥಗಿತವಾಗಿದೆ.

ಉದ್ಯೋಗಿಗಳ ಸಮಸ್ಯೆ
ಬಿಎಸ್ಸೆನ್ನೆಲ್‌ ಟವರ್‌ನ ನಿರ್ವಹಣೆಗೆ ಕನಿಷ್ಠ ಇಬ್ಬರು ಉದ್ಯೋಗಿಗಳಾದರೂ ಬೇಕು. ಆದರೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರಿಗೆ ಸಂಬಳ ಸಿಗದೆ ಉದ್ಯೋಗ ಬಿಟ್ಟಿದ್ದಾರೆ. ವಿದ್ಯುತ್‌ ಕೈಕೊಟ್ಟಾಗ ಜನರೇಟರ್‌ ನಿರ್ವಹಣೆಗೆ ಕೆಲಸದವರಿಲ್ಲದೆ ನೆಟ್‌ವರ್ಕ್‌ ಕೈಕೊಡುತ್ತಿದೆ. ಬೆಳ್ಳಾರೆಯಲ್ಲಿ ಅಧಿಕಾರಿಯೇ ಟವರ್‌ ನಿರ್ವಹಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ನಿಗಮವನ್ನು ಸಂಪರ್ಕಿಸಿದರೆ ಕೂಲಿಯಾಳುಗಳ ಸಮಸ್ಯೆಯನ್ನೇ ಮುಂದಿಡುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಖಾಸಗಿ ನೆಟ್‌ವರ್ಕ್‌ ಗಳೂ ಇಲ್ಲದೆ ಬಿಎಸ್ಸೆನ್ನೆಲ್‌ ಗ್ರಾಹಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ವಿದ್ಯುತ್ತಿದ್ದರೆ ನೆಟ್‌ವರ್ಕ್‌ ಇರುತ್ತದೆ. ಕಲ್ಮಡ್ಕ, ನಿಂತಿಕಲ್ಲು, ಎಡಮಂಗಲ, ಬಾಳಿಲ, ಕಳಂಜ ಮೊದಲಾದ ಗ್ರಾಮೀಣ ಭಾಗದಲ್ಲಿ ಬಿಎಸ್ಸೆನ್ನೆಲ್‌ ಸಿಗ್ನಲ್‌ ಸಮಸ್ಯೆ ತೀವ್ರವಾಗಿದೆ.

ಸ್ಥಿರ ದೂರವಾಣಿಯೂ ಭಿನ್ನವಾಗಿಲ್ಲ
ಗ್ರಾ.ಪಂ., ಹಣಕಾಸು ಸಂಸ್ಥೆಗಳು, ವಾಣಿಜ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ವ್ಯಾಪಾರ ಮಳಿಗೆಗಳು, ಆನ್‌ಲೈನ್‌ ಸೇವಾ ಕೇಂದ್ರಗಳು ನಿರಂತರ ಬಿಎಸ್ಸೆನ್ನೆಲ್‌ ಮುಖಾಂತರ ವ್ಯವಹಾರ ನಡೆಸುತ್ತಿದ್ದು, ಇಂಟರ್‌ನೆಟ್‌ ವ್ಯವಸ್ಥೆಯಲ್ಲೂ ತೊಡಕುಗಳಾಗುತ್ತಿದೆ. ಬ್ಯಾಂಕ್‌ ವ್ಯವಹಾರ ಆನ್‌ಲೈನ್‌ ಮುಖಾಂತರವೇ ನಡೆಯುತ್ತಿ¤ದ್ದು, ನೆಟ್‌ವರ್ಕ್‌ ಸಮಸ್ಯೆಯಿಂದ ಗ್ರಾಹಕರು ಬ್ಯಾಂಕ್‌ಗಳಲ್ಲಿ ಕಾಯುವ ಸ್ಥಿತಿ ಇದೆ. ಹೆಚ್ಚಿನ ಸ್ಥಿರ ದೂರವಾಣಿ ಗ್ರಾಹಕರು ಬೇಸತ್ತು ಸಂಪರ್ಕವನ್ನೇ ರದ್ದುಪಡಿಸುತ್ತಿದ್ದಾರೆ.

ಭರವಸೆ ಈಡೇರಲೇ ಇಲ್ಲ
ಬೆಳ್ಳಾರೆ ಪರಿಸರದಲ್ಲಿ ಅತೀ ಹೆಚ್ಚು ಬಿಎಸ್ಸೆನ್ನೆಲ್‌ ಮೊಬೈಲ್‌ ಹಾಗೂ ಸ್ಥಿರ ದೂರವಾಣಿ ಗ್ರಾಹಕರಿದ್ದು, ಇಲ್ಲಿನ ನೆಟ್‌ವರ್ಕ್‌ ಹಾಗೂ ಇತರ ಸಮಸ್ಯೆಗಳ ಪರಿಹಾರಕ್ಕೆ ರೋಟರಿ ಕ್ಲಬ್‌ ಹಾಗೂ ವರ್ತಕರ ಸಂಘ ಮೂರು ವರ್ಷಗಳ ಹಿಂದೆ ಬಿಎಸ್ಸೆನ್ನೆಲ್‌ ಅಧಿಕಾರಗಳೊಂದಿಗೆ ಸಂವಾದ ಏರ್ಪಡಿಸಿ ಗ್ರಾಹಕರ ಸಮಸ್ಯೆಗಳನ್ನು ವಿವರಿಸಿದ್ದರು. ನೆಟ್‌ವರ್ಕ್‌, ಸ್ಥಿರ ದೂರವಾಣಿ ಹಾಗೂ ಬ್ರಾಡ್‌ ಬ್ಯಾಂಡ್‌ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿದ್ದರು. ಆಗ ಭರವಸೆ ನೀಡಿ ತೆರಳಿದ್ದ ಅಧಿಕಾರಿಗಳು ತಿರುಗಿಯೂ ನೋಡಿಲ್ಲ.

Advertisement

ನಮ್ಮಿಂದಾದ ಪ್ರಯತ್ನ
ಡೀಸೆಲ್‌ ಸಮಸ್ಯೆ ಇರುವುದು ನಿಜ. ಕಾರ್ಮಿಕರ ಸಮಸ್ಯೆಯೂ ಇದೆ. ಟವರ್‌ ನಿರ್ವಹಣೆಗೆ ನಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ.
ಶಿವರಾಮ ಗೌಡ
ಉಪ ವಿಭಾಗೀಯ ನಿಯಂತ್ರಣಾಧಿಕಾರಿ, ಬೆಳ್ಳಾರೆ‌

 ಸಮಸ್ಯೆ ಬಗೆಹರಿಸಿ
ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ನೆಟ್‌ವರ್ಕ್‌ ಸಮಸ್ಯೆಯಿಂದ ಜನ ಬೇಸತ್ತಿದ್ದಾರೆ. ನೆಟ್‌ವರ್ಕ್‌ ಸಮಸ್ಯೆಯಿಂದ ಕಚೇರಿಗಳಲ್ಲಿ ಕೆಲಸ-ಕಾರ್ಯಗಳು ಸಕಾಲದಲ್ಲಿ ಆಗುತ್ತಿಲ್ಲ. ನಾವು ರೋಟರಿ ಸಂಸ್ಥೆ ಮತ್ತು ವರ್ತಕರ ಸಂಘದ ಮೂಲಕ ಸಂವಾದ ನಡೆಸುವಾಗಲೇ ಬಿಎಸ್ಸೆನ್ನೆಲ್‌ನ ಎಲ್ಲ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದೇವೆ. ಆಗಲೇ ಸರಿಪಡಿಸಬಹುದಿತ್ತು. ಇನ್ನು ಮುಂದೆಯಾದರೂ ಇಲಾಖೆ ಎಚ್ಚೆತ್ತುಕೊಂಡರೆ ಗ್ರಾಹಕರು ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ನಲ್ಲೇ ಉಳಿಯಬಹುದು.
ಬಿ. ಸುಬ್ರಹ್ಮಣ್ಯ ಜೋಶಿ ಬಿಎಸ್ಸೆನ್ನೆಲ್‌ ಗ್ರಾಹಕ

ಬಿಎಸ್ಸೆನ್ನೆಲ್‌ ಉಳಿಸಿ
ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚಿನ ಮೊಬೈಲ್‌ ಬಳಕೆದಾರರು ಬಿಎಸ್ಸೆನ್ನೆಲ್‌ ಸಿಮ್‌ ಹೊಂದಿದ್ದಾರೆ. ಕಲ್ಮಡ್ಕದಲ್ಲಿ ಕರೆಂಟ್‌ ಹೋದರೆ ನೆಟ್‌ವರ್ಕ್‌ ಪದೇ ಪದೇ ಕೈಕೊಡುತ್ತಿದೆ. ಖಾಸಗಿ ನೆಟ್‌ವರ್ಕ್‌ ಇಲ್ಲದೇ ಇರುವುದರಿಂದ ಬಿಎಸ್ಸೆನ್ನೆಲ್‌ ಅನ್ನು ಉಳಿಸಲೇಬೇಕಿದೆ.
ಭಾಸ್ಕರ ಜೆ., ಬಿಎಸ್ಸೆನ್ನೆಲ್‌ ಗ್ರಾಹಕ

ಉಮೇಶ್‌ ಮಣಿಕ್ಕಾರ

Advertisement

Udayavani is now on Telegram. Click here to join our channel and stay updated with the latest news.

Next