Advertisement

ಹಂಪಿ-ಆನೆಗೊಂದಿ: ಫಾರ್ಮ್ ಸ್ಟೇಗಳಿಗೆ ಪರವಾನಿಗೆಗೆ ಎಎಸ್‌ಐ ಅಭಿಪ್ರಾಯ ಕೇಳಿದ ಸರಕಾರ

06:08 PM Feb 27, 2023 | Team Udayavani |

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ 29 ಗ್ರಾಮಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನಕ್ಕಾಗಿ ರೈತರ ಹೊಲ ಗದ್ದೆಗಳಲ್ಲಿ ಫಾರ್ಮ್ ಸ್ಟೇಗಳಿಗೆ ಆರಂಭಿಸಲು ಸರಕಾರ ಕರಡು ಸಿದ್ಧಪಡಿಸಿದ್ದು ಇದೀಗ ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಅಭಿಪ್ರಾಯವನ್ನು ಪಡೆದು ವರದಿ ಸಲ್ಲಿಸುವಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಗರಾಭಿವೃದ್ಧಿ ಇಲಾಖೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

Advertisement

ಇದರಿಂದ ಮತ್ತಷ್ಟು ವಿಳಂಭವಾಗುವುದಿಂದ ಆನೆಗೊಂದಿ ಕಿಷ್ಕಿಂಧಾ ಭಾಗದಲ್ಲಿ ಪ್ರವಾಸೋದ್ಯಮ ಮತ್ತಷ್ಟು ಪೆಟ್ಟು ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಂಪಿ ಸೇರಿ ಆನೆಗೊಂದಿ ಭಾಗದ 29 ಗ್ರಾಮಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವುದರಿಂದ ಇಲ್ಲಿ ವ್ಯಾಪಾರ ವಹಿವಾಟು ನಡೆಸಲು ಪ್ರಾಧಿಕಾರದ ಪರವಾನಿಗೆ ಅಗತ್ಯವಾಗಿದ್ದು ಪ್ರಸ್ತುತ ಎರಡು ಕಡೆ ಇರುವ ಹೊಟೇಲ್ ಸೇರಿ ವಾಣಿಜ್ಯ ನಡೆಸುವುದು ಅನಧಿಕೃತವಾಗಿದೆ. 15 ಭಾರಿ ಹಂಪಿ ಆನೆಗೊಂದಿ ಭಾಗದಲ್ಲಿ ಅನಧಿಕೃತ ಹೊಟೇಲ್‌ಗಳನ್ನು ತೆರವು ಮಾಡಿದರೂ ಪುನಃ ಪ್ರವಾಸಿಗರಿಗೆ ಊಟ ವಸತಿ ಕಲ್ಪಿಸಲು ಸ್ಥಳೀಯರು ಹೊಲ ಗದ್ದೆಗಳಲ್ಲಿ ಗುಡಿಸಲು ನಿರ್ಮಿಸಿಕೊಂಡು ಹೊಟೇಲ್ ನಡೆಸಲಾಗುತ್ತಿದೆ. ಈ ಮಧ್ಯೆ ಆನೆಗೊಂದಿ ಭಾಗದ ಜನರು ಮತ್ತು ವ್ಯಾಪಾರಿಗಳು ಒಂದು ವರ್ಷದ ಹಿಂದೆ ಬೆಂಗಳೂರಿಗೆ ನಿಯೋಗ ಹೋಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕಂಡು ಪ್ರಾಧಿಕಾರದ ನಿಯಮಗಳ ಹೊರತಾಗಿಯೂ ರೈತರ ಹೊಲಗದ್ದೆಗಳ ಸ್ವಲ್ಪ ಜಾಗದಲ್ಲಿ ಫಾರ್ಮ್ ಸ್ಟೇ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ, ಜಿಲ್ಲಾಡಳಿತ ಮತ್ತು ಹಂಪಿ ಪ್ರಾಧಿಕಾರದ ಅಭಿಪ್ರಾಯ ಪಡೆದು ಸ್ಮಾರಕಗಳ ಸ್ಥಳದಿಂದ ಇಂತಿಷ್ಟು ದೂರ ಫಾರ್ಮ್ ಸ್ಟೇ ಗಳ ನಿರ್ಮಾಣಕ್ಕೆ ನಿಯಮ ರೂಪಿಸುವ ಅಭಿಪ್ರಾಯದಂತೆ ಸಾರ್ವಜನಿಕರಿಂದ ಆಕ್ಷೇಪ ಸಲಹೆ ಸೂಚನೆ ಸ್ವೀಕರಿಸಿ ಫಾರ್ಮ್ ಸ್ಟೇ ಗಳ ಕಾರ್ಯ ನಿರ್ವಾಹಣೆಯ ನಿಯಮಗಳನ್ನೊಳಗೊಂಡ ಕರಡಿ ಪ್ರತಿ ತಯಾರಿಸಲಾಗಿದೆ.

ಎಎಸ್‌ಐ ಅಧಿಕೃತ ನೋಡೆಲ್ ಎಜೆನ್ಸಿ
ಹಂಪಿ ಹಾಗೂ ಇದರ ವ್ಯಾಪ್ತಿಯಲ್ಲಿರುವ ಸ್ಮಾರಕಗಳ ಸಂರಕ್ಷಣೆ ಮತ್ತು ನಿರ್ವಾಹಣೆ ಮಾಡುವ ಜವಾಬ್ದಾರಿ ಅಧಿಕೃತವಾಗಿ ಭಾರತೀಯ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ ಸೇರಿರುವುದರಿಂದ ಈ ಭಾಗದಲ್ಲಿ ಅನುಷ್ಠಾನವಾಗುವ ನಿಯಮಗಳ ರಚನೆ ಮೊದಲು ಎಎಸ್‌ಐ ಅಭಿಪ್ರಾಯ ಪಡೆಯುವುದು ಕಡ್ಡಾಯವಾಗಿದೆ. ಕೆಟಿಸಿಟಿ, ಪ್ರವಾಸೋದ್ಯಮ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ,ಕನ್ನಡ ಸಂಸ್ಕೃತಿ ಇಲಾಖೆ ಮತ್ತು ರಾಜ್ಯ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಈ ವಿಷಯ ತಿಳಿದಿದ್ದರೂ ಫಾರ್ಮ್ ಸ್ಟೇ ನಿಯಮ ರಚನೆಯ ಸಂದರ್ಭದಲ್ಲಿ ಮೌನವಹಿಸಿರುವುದು ವಿಳಂಭಕ್ಕೆ ಕಾರಣವಾಗಿದೆ. ಇದೀಗ ಕಾನೂನು ಇಲಾಖೆಯ ಅಭಿಪ್ರಾಯದಂತೆ ಎಎಸ್‌ಐ ಅಧಿಕೃತ ಎಜೆನ್ಸಿಯಾಗಿದ್ದು ಕೂಡಲೇ ಫಾರ್ಮ್ ಸ್ಟೇ ನಿಯಮಾವಳಿಯ ಸಮಗ್ರ ಮಾಹಿತಿ ನೀಡಿ ಎಎಸ್‌ಐ ಅಭಿಪ್ರಾಯ ಪಡೆಯುವಂತೆ ನಗರಾಭಿವೃದ್ಧಿ ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದೆ.

ಆಕ್ರೋಶ
ಕಳೆದ ಒಂದು ವರ್ಷದಿಂದ ಫಾರ್ಮ್ ಸ್ಟೇಗಳಿಗೆ ಅವಕಾಶ ಕಲ್ಪಿಸುವ ನಿಯಮ ರಚನೆ ಮಾಡುವ ಕಾರ್ಯ ನಡೆದಿದ್ದು ಆನೆಗೊಂದಿ ಭಾಗದಿಂದ ಹತ್ತು ಹಲವು ಭಾರಿ ಸಂಬಂಧಪಟ್ಟ ಇಲಾಖೆಗಳಿಗೆ ಸ್ಥಳೀಯ ಶಾಸಕರು, ಸಂಸದರ, ಜಿಲ್ಲಾ ಉಸ್ತುವಾರಿ ಸಚಿವರ ಜತೆ ತೆರಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಫಾರ್ಮ್ ಸ್ಟೇ ಪರವಾನಿಗೆ ನೀಡುವ ನಿಯಮಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸುವಂತೆ ಮನವಿ ಮಾಡಿದಾಗ ತಕ್ಷಣ ಅಧಿಕಾರಿಗಳು ಎಎಸ್‌ಐ ಅಭಿಪ್ರಾಯವನ್ನು ಕಾನೂನು ಇಲಾಖೆ ಪಡೆಯುವಂತೆ ಸೂಚನೆ ನೀಡಿದೆ ಎಂದು ಹೇಳುತ್ತಿರುವುದು ಮತ್ತಷ್ಟು ವಿಳಂಬ ಮಾಡುವ ಷಡ್ಯಂತ್ರ ಅಡಗಿದೆ. ಇದು ಹಂಪಿ-ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಹಾಳುವ ಮಾಡುವ ನೀತಿಯಾಗಿದೆ. ಶೀಘ್ರವೇ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲಿದ್ದು ಎಲ್ಲಾ ಕೆಲಸಗಳು ಸ್ಥಗಿತವಾಗಲಿವೆ ಸರಕಾರ ವಿಳಂಭ ಧೋರಣೆಯಿಂದ ಸ್ಥಳೀಯರಿಗೆ ಬಹಳ ತೊಂದರೆಯಾಗಿದೆ. ನೀತಿ ಸಂಹಿತೆ ಜಾರಿಗೆ ಮೊದಲೇ ಫಾರ್ಮ್ ಸ್ಟೇಗಳ ನಿಯಮದ ಗೆಜೆಟ್ ಪ್ರಕಟಿಸುವಂತೆ ಸಾಣಾಪೂರ ಗ್ರಾಮದ ರೈತ ಅಜಗರ್ ಹುಸೇನ್ ಅನ್ಸಾರಿ ಒತ್ತಾಯಿಸಿದ್ದಾರೆ.

Advertisement

ಮಾಸ್ಟರ್ ಪ್ಲಾನ್ ನಿಯಮಾಳಿಗಳಿಗೆ ತಿದ್ದುಪಡಿ ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಪತ್ರದ ಅನ್ವಯ ಈಗಾಗಲೇ ವಿಜಯನಗರ, ಕೊಪ್ಪಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಎಸ್‌ಐ ಅಧಿಕಾರಿಗಳನ್ನೊಳಗೊಂಡಂತೆ ಸಭೆ ನಡೆಸಿ ವ್ಯಾಪಕ ಚರ್ಚೆ ನಡೆಸಲಾಗಿದೆ. ಎಎಸ್‌ಐ ಇಲಾಖೆಯವರು ಅಭಿಪ್ರಾಯ ನೀಡಲು ಕಾಲಾವಕಾಶ ಕೇಳಿದ್ದು ಲಿಖಿತವಾಗಿ ಎಎಸ್‌ಐ ಇಲಾಖೆಯವರು ಅಭಿಪ್ರಾಯ ಕೊಟ್ಟ ನಂತರ ನಗರಾಭಿವೃದ್ಧಿ ಇಲಾಖೆಯ ಆಯುಕ್ತರಿಗೆ ವರದಿ ಕಳಿಸಲಾಗುತ್ತದೆ.
-ಸಿದ್ದರಾಮೇಶ್ವರ ಆಯುಕ್ತರು, ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಎಸಿ ಹೊಸಪೇಟೆ

Advertisement

Udayavani is now on Telegram. Click here to join our channel and stay updated with the latest news.

Next