Advertisement

ವಯಸ್ಸು 60 ತಿರುಗಾಟ 50 ಹಾಸ್ಯಚಕ್ರವರ್ತಿ ಹಳ್ಳಾಡಿ

03:50 AM Mar 24, 2017 | |

ಬಡಗು ತಿಟ್ಟಿನ ರಾಜ ಹಾಸ್ಯಗಾರ ಎಂದು ಗುರುತಿಸಲ್ಪಡುವ ಹಳ್ಳಾಡಿ ಜಯರಾಮ ಶೆಟ್ಟರಿಗೆ ಈಗ ವಯಸ್ಸು ಅರುವತ್ತಾದರೆ ಅವರ ತಿರುಗಾಟಕ್ಕೆ ಐವತ್ತು ವರ್ಷ. ಈ ಸುಸಂದರ್ಭವನ್ನು ಅರ್ಥಪೂರ್ಣ ಗೊಳಿಸಲು ಅವರ ಅಭಿಮಾನಿಗಳು ನಾಳೆ, (ಮಾರ್ಚ್‌ 25) ಕುಂದಾಪುರ ದಲ್ಲಿ ಅಭಿನಂದನಾ ಕಾರ್ಯಕ್ರಮ ಇರಿಸಿಕೊಂಡಿದ್ದಾರೆ. ಹಳ್ಳಾಡಿ ಅಭಿಮಾನಿ ಬಳಗ ಮತ್ತು ಕುಂದಾಪುರ ಯುವ ಬಂಟರ ಸಂಘ ಜಂಟಿ ಯಾಗಿ ಆಯೋಜಿಸಿರುವ ಈ ಅಭಿನಂದನಾ ಕಾರ್ಯಕ್ರಮದ ಬಳಿಕ ಶ್ರೀ ಸಾಲಿಗ್ರಾಮ ಮೇಳದವರಿಂದ ಹಳ್ಳಾಡಿಯವರಿಗೆ ವಿಶೇಷ ಹೆಸರು ತಂದಿತ್ತ ಈಶ್ವರಿ-ಪರಮೇಶ್ವರಿ ಪ್ರಸಂಗದ ಯಕ್ಷಗಾನ ಪ್ರದರ್ಶನವಿದೆ.

Advertisement

ಬಡಗುತಿಟ್ಟು ಯಕ್ಷಲೋಕದಲ್ಲಿ ಯಕ್ಷಗಾನ ಹಾಸ್ಯಪ್ರಿಯರಿಗೆ ಹಳ್ಳಾಡಿ ಎಂಬ ಊರು ಐತಿಹಾಸಿಕವಾಗಿ ತೆನ್ನಾಲಿ ಎಂಬಷ್ಟೇ ಚಿರಪರಿಚಿತ. ತನ್ನ ಶ್ರುತಿಬದ್ಧ ಹಾಸ್ಯಮಿಶ್ರಿತ ಮಾತುಗಾರಿಕೆಯಿಂದ ಯಕ್ಷಗಾನದ ಗಂಭೀರ ರಾಜ ಹಾಸ್ಯಗಾರ ಎಂದು ಗುರುತಿಸಿಕೊಂಡವರು ಹಳ್ಳಾಡಿ ಜಯರಾಮ ಶೆಟ್ಟರು; ಕುಂಜಾಲು ರಾಮಕೃಷ್ಣ ಹಾಸ್ಯಗಾರರ ಹಾದಿಯಲ್ಲೇ ಕ್ರಮಿಸಿ ಯಶಸ್ಸು ಕಂಡವರು. ಸಭ್ಯತೆಯ ಎಲ್ಲೆಯನ್ನು ಮೀರದೆ ಸುಸಂಸ್ಕೃತವಾಗಿ ಪಾತ್ರ ಪೋಷಣೆ ಮಾಡುತ್ತಾ ಪೌರಾಣಿಕ ಪ್ರಸಂಗದ ಹಾಸ್ಯಗಳಿಗೆ ನ್ಯಾಯ ಒದಗಿಸಿದ್ದಾರೆ. ಇವರು ಯಕ್ಷಲೋಕದಲ್ಲಿ ಐವತ್ತು ವರ್ಷ ಮಿಂಚಿದ್ದು ಒಂದು ಸ್ವಾರಸ್ಯಕರ ಕಥೆ.

ಹಳ್ಳಾಡಿ-ಶಿರಿಯಾರ ಪರಿಸರದ ಯಕ್ಷಗಾನ ಕಲಾವಿದರಿಗೆ ಹುಟ್ಟಿನಿಂದ ಬಂದ ಶ್ರುತಿ ಬದ್ಧತೆ ಇವರ ಆಸ್ತಿ. ಎಂತಹ ಹಾಸ್ಯ ಸನ್ನಿವೇಶವೇ ಇರಲಿ, ಅವರ ಮಾತು ಶ್ರುತಿಗೆ ಹೊಂದಿಕೊಂಡು ಇರುತ್ತದೆ ಮಾತ್ರವಲ್ಲ ಚೆಂಡೆ ಮದ್ದಳೆಯವರು ಕೂಡ ಅವರ ಮಾತಿನಲ್ಲಿ ಶ್ರುತಿ ಹೊಂದಿಸಬಹುದಾದಷ್ಟು ಅದಕ್ಕೆ ಖಚಿತತೆಯೂ ಇರುತ್ತದೆ. ಹಾಸ್ಯಕ್ಕೆ ಬೇಕಾದ ಮಾತುಗಾರಿಕೆ, ಅಪಾರ ಪ್ರತ್ಯುತ್ಪನ್ನ ಮತಿತ್ವ, ತಾನು ನಗದೆ ಅನ್ಯರನ್ನು ನಗಿಸುವ ಗಂಭೀರವದನ, ತುಂಬು ಶರೀರ -ಶಾರೀರ, ಅಪಾರ ವಿಷಯ ಸಂಪತ್ತು, ಪೌರಾಣಿಕ ಪ್ರಸಂಗಗಳಲ್ಲಿ ಹಿಡಿತ ಮುಂತಾದ ಗುಣಗಳು ಇವರನ್ನು ಹಾಸ್ಯಚಕ್ರವರ್ತಿ ಎಂದು ಗುರುತಿಸುವಂತೆ ಮಾಡಿವೆ. ಭೀಷ್ಮವಿಜಯದ ಬ್ರಾಹ್ಮಣ, ಕನಕಾಂಗಿ ಕಲ್ಯಾಣದ ಬಲರಾಮ ದೂತ, ರಕ್ಕಸ ದೂತ, ಸಮುದ್ರ ಮಥನದ ಮೂಕಾಸುರ, ಕಾರ್ತವೀರ್ಯದ ಮೂಗ, ಮಂಥರೆ, ಕಂದರ, ಬಾಹುಕ ಪಾತ್ರಗಳು ಇವರದ್ದೇ ಸೃಷ್ಟಿ ಎನ್ನಬಹುದಾಗಿದೆ. ಯಕ್ಷಗಾನ ಹಾಸ್ಯಪಾತ್ರಗಳಲ್ಲಿ ಕುಂದಾಪುರ ಆಡುಗನ್ನಡ ಬಳಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಲವಾರು ಧ್ವನಿಸುರುಳಿಗಳಲ್ಲಿ ಅವರ ಕುಂದಗನ್ನಡ ಹಾಸ್ಯದ ಸೊಗಸು ಮೇಳೈಸಿದೆ. 

ಕುಂದಾಪುರ ತಾಲೂಕಿನ ಶಿರಿಯಾರ ಸಮೀಪ ಹಳ್ಳಾಡಿ ಎಂಬಲ್ಲಿ ಮಧ್ಯಮ ವರ್ಗದ ಬಂಟ ಸಮಾಜದಲ್ಲಿ 1956 ರಲ್ಲಿ ಜನಿಸಿದ ಇವರು ಅಕ್ಕಮ್ಮ ಶೆಡ್ತಿ ಮತ್ತು ಅಣ್ಣಪ್ಪ ಶೆಟ್ಟಿ ದಂಪತಿಯ ಸುಪುತ್ರ. ಎಳವೆಯಲ್ಲಿಯೇ ಯಕ್ಷಗಾನ ಆಸಕ್ತಿ ಬೆಳೆಸಿಕೊಂಡ ಶೆಟ್ಟರು ಐದನೇ ತರಗತಿಗೆ ಶಾಲಾ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿದರು. ತನ್ನ 12ನೇ ವಯಸ್ಸಿಗೆ ಕಲಾಜೀವನ ಪ್ರಾರಂಭಿಸಿದರು. ಅಮಾಸೆಬೈಲು ಕಿಟ್ಟಪ್ಪ ಹೆಬ್ಟಾರರು ಇವರನ್ನು ಮೇಳಕ್ಕೆ ಪರಿಚಯಿಸಿದರೆ ಹಿರಿಯ ಕಲಾವಿದ ಹಳ್ಳಾಡಿ ಮಂಜಯ್ಯ ಶೆಟ್ಟರು ಮೇಳದಲ್ಲಿ ಇವರಿಗೆ ಗುರುಗಳಾದರು. ಉಳಿದದ್ದೆಲ್ಲ ಕಂಡು ಕೇಳಿ ಕಲಿತದ್ದೇ ಹೆಚ್ಚು. ಸತತ ಪ್ರಯತ್ನ, ಸ್ವಯಂ ಪ್ರತಿಭೆಯಿಂದ ರಂಗದಲ್ಲಿ ಸಾರ್ಥಕ ಯಶಸ್ಸು ಕಂಡ ಹಳ್ಳಾಡಿಯವರು ನಾರ್ಣಪ್ಪ ಉಪ್ಪೂರರ ನಿರ್ದೇಶನದಲ್ಲಿ ಮೊದಲು ಹಾಸ್ಯ ಭೂಮಿಕೆ ನಿರ್ವಹಿಸಿ ಗೆಲವು  ಕಂಡವರು. ಅಮೃತೇಶ್ವರಿ ಮೇಳದಲ್ಲಿ ಸಾಲ್ಕೋಡು ಗಣಪತಿ ಹೆಗಡೆಯವರ ಅನಿವಾರ್ಯ ಗೈರು ಹಾಜರಿಯಲ್ಲಿ ಗುರು ನಾರ್ಣಪ್ಪ ಉಪ್ಪೂರರು ಇವರಲ್ಲಿ ಆ ಪಾತ್ರ ಮಾಡಿಸಿ ದಾಗ, ಅವರಿಂದ ಪ್ರಶಂಸೆ ಪಡೆದು ಮುಂದೆ ಹಾಸ್ಯಗಾರರಾಗಿ ಉತ್ತುಂಗಕ್ಕೆ ಏರಿದ್ದು ಈಗ ಇತಿಹಾಸ. ಅಮೃತೇಶ್ವರಿ, ಮಂದಾರ್ತಿ, ಕಮಲಶಿಲೆ, ಪೆರ್ಡೂರು, ಮೂಲ್ಕಿ ಮೇಳಗಳಲ್ಲಿ ಸೇವೆ ಸಲ್ಲಿಸಿದ ಹಳ್ಳಾಡಿ ಜಯರಾಮ ಶೆಟ್ಟರು ಆ ಬಳಿಕ ಸಾಲಿಗ್ರಾಮ ಮೇಳ ಸೇರಿ ಅಲ್ಲಿ ದೀರ್ಘ‌ ಕಾಲ ನೆಲೆನಿಂತರು. 

ನಿರಂತರ 24 ವರ್ಷ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸಿದ ಇವರು ಕಾಳಿಂಗ ನಾವಡ, ಜಲವಳ್ಳಿ ವೆಂಕಟೇಶರಾವ್‌, ಅರಾಟೆ ಮಂಜುನಾಥ, ರಾಮನಾಯರಿ, ಐರೋಡಿ ಗೋವಿಂದಪ್ಪ, ಬಳ್ಕೂರು ಕೃಷ್ಣ ಯಾಜಿ, ಕೊಂಡದಕುಳಿಯವರ ದೀರ್ಘ‌ಕಾಲದ ಒಡನಾಡಿ. ತೆಂಕಿನ ಕುಂಬಳೆ ಮೇಳದಲ್ಲೂ ತಿರುಗಾಟ ಮಾಡಿದ ಇವರು ಮೂರು ತಿಟ್ಟುಗಳ ಕಲಾವಿದರೊಂದಿಗೆ ಹೊಂದಾಣಿಕೆಯಿಂದ ತಿರುಗಾಟ ಮಾಡಿದವರು. ಯಾಜಿಯವರ ಮತ್ತು ಹಳ್ಳಾಡಿ ಯವರ ಅಪೂರ್ವ ಹೊಂದಾಣಿಕೆಯ ಪೌರಾಣಿಕ ಮತ್ತು ಆಧುನಿಕ ಪ್ರಸಂಗಗಳ ಜೋಡಿ ವೇಷಗಳು ಸಾಲಿಗ್ರಾಮ ಮೇಳಕ್ಕೆ ಹೊಸ ಪ್ರೇಕ್ಷಕರನ್ನೇ ಸೃಷ್ಟಿ ಮಾಡಿವೆ. ಸುಮಾರು ಮೂರು ತಲೆಮಾರಿನ ಹಿರಿಯ ಕಿರಿಯ ಕಲಾವಿದರೊಂದಿಗೆ ರಂಗಸ್ಥಳ ಹಂಚಿಕೊಂಡ ಮೇರು ಕಲಾವಿದನಾದರೂ ಎನಗಿಂತ ಕಿರಿಯರಿಲ್ಲ ಎನ್ನುವ ಮನೋಧರ್ಮದವರು. ಏಕಕಾಲದಲ್ಲಿ ಕಲಾವಿದನೂ ವಿಮರ್ಶಕನೂ ಆಗಬಲ್ಲ ವಿಚಕ್ಷಣಮತಿ.

Advertisement

 ಪರಿಶುದ್ಧ ಪಾರಂಪರಿಕ ಸೊಗಡಿನ, ಪರಿಷ್ಕಾರಗೊಂಡ ವಾಗರಣಿ, ಸುಸಂಸ್ಕೃತ ನೃತ್ಯಾಭಿನಯ, ಖಚಿತ ಲಯಗಾರಿಕೆ, ಹೆಜ್ಜೆಗಾರಿಕೆೆ ಮುಂತಾದ ಯಕ್ಷ ಸಲ್ಲಕ್ಷಣಗಳಿಂದ ಪರಿಪಕ್ವ ಗೊಂಡ ಹಳ್ಳಾಡಿಯವರು ಯಕ್ಷಗಾನ ವಿಮರ್ಶಕರಿಂದ ರಾಜ ಹಾಸ್ಯಗಾರ ಎಂಬ ಬಿರುದನ್ನು ಪಡೆದವರು. ಉಡುಪಿ ಯಕ್ಷಗಾನ ಕಲಾರಂಗದ ಕಳೆದ ಸಾಲಿನ ಡಾ| ಬಿ.ಬಿ. ಶೆಟ್ಟಿ ಪ್ರಶಸ್ತಿ ಸಹಿತ ನೂರಾರು ಸಂಘಸಂಸ್ಥೆಗಳಿಂದ ಸಮ್ಮಾನಕ್ಕೆ ಭಾಜನರಾಗಿದ್ದಾರೆ. ಮಡದಿ ರೇಣುಕಾ, ಇಬ್ಬರು ಮಕ್ಕಳೊಂದಿಗೆ ಹಳ್ಳಾಡಿಯಲ್ಲಿ ವಾಸಿಸುತ್ತಿರುವ ಶೆಟ್ಟರು ಅರುವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲು ಸಜ್ಜಾಗಿರುವುದು ಯೋಗ್ಯವಾಗಿದೆ

ಪ್ರೊ| ಎಸ್‌.ವಿ. ಉದಯಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next