Advertisement

ಹಳೆಯಂಗಡಿ : ಮದುವೆ ಮಂಟಪದಿಂದ ವರನೊಂದಿಗೆ ವಧು ಪರಾರಿ? ಆ ಮಹಿಳೆ ಬಂದಿದ್ದೆ ಘಟನೆಗೆ ಕಾರಣ…

08:26 PM May 05, 2022 | Team Udayavani |

ಹಳೆಯಂಗಡಿ : ಇನ್ನೇನು ಮದುವೆ ಮಂಟಪದಲ್ಲಿ ವಧುವಿಗೆ ವರ ತಾಳಿ ಕಟ್ಟುವ ಶುಭಗಳಿಗೆ ನಡೆಯಬೇಕು ಎನ್ನುವ ಹಂತದಲ್ಲಿ ಅದೇ ವರನು ಏಕಾಏಕಿ ವಧುವಿನೊಂದಿಗೆ ಪರಾರಿಯಾದ ಘಟನೆ ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪಡುಪಣಂಬೂರು ಬಳಿಯ ಮದುವೆ ಸಭಾಂಗಣವೊಂದರಲ್ಲಿ ನಡೆದಿದೆ.

Advertisement

ಶಿವಮೊಗ್ಗ-ಮೂಡುಬಿದಿರೆ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ನ ಚಾಲಕನಾಗಿರುವ ತೀರ್ಥಹಳ್ಳಿ ಮೂಲದ ನಲ್ವತ್ತರ ಹರೆಯದ ವರನೇ ಮಂಟಪದಿಂದ ಸಸಿಹಿತ್ಲು ಮೂಲದ ವಧುವನ್ನು ಅಪಹರಿಸಿದವ. ಇವರಿಬ್ಬರು ಪರಸ್ಪರ ಪ್ರೀತಿಸಿದ್ದರು ಎನ್ನಲಾಗಿದೆ.

ಸಭಾಂಗಣದಲ್ಲಿ ಮದುವೆ ಶಾಸ್ತ್ರ ನಡೆಯುತ್ತಿರುವಾಗ ವರನ ಮೊದಲನೇ ಹೆಂಡತಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಬಂದು ತಗಾದೆ ತೆಗೆದು, ವರನಿಗೆ ಈ ಮೊದಲೇ ಒಂದು ಮದುವೆಯಾಗಿದ್ದು ಗಂಡು ಮಗುವಿದೆ ಎಂದು ಬೊಬ್ಬಿಟ್ಟಿದ್ದಾರೆ. ಇದೇ ಸಂದರ್ಭ ಸಭಾಂಗಣದ ಹೊರಭಾಗದಲ್ಲಿ ವರ ಹಾಗೂ ವಧುವಿನ ಫೋಟೋ ಶೂಟಿಂಗ್‌ ನಡೆಯುತ್ತಿತ್ತು. ವರನಿಗೆ ಗಲಾಟೆಯ ಮಾಹಿತಿ ಸಿಕ್ಕ ತತ್‌ಕ್ಷಣ ಆತ ಅಲ್ಲಿಂದಲೇ ವಧುವನ್ನು ಆಕೆಯ ಮೈಮೇಲಿನ ಚಿನ್ನಾಭರಣ ಸಹಿತ ತನ್ನ ಕಾರಿನಲ್ಲಿ ಕುಳ್ಳಿರಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆತನ ಕಡೆಯಿಂದ ಐದು ಮಂದಿ ಮಾತ್ರ ಮದುವೆಗೆ ಬಂದಿದ್ದರು ಎಂದು ಹೇಳಲಾಗಿದೆ.

ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ವಧುವಿನ ಪೋಷಕರು ನಡೆದ ಘಟನೆಯೊಂದಿಗೆ ದೂರು ಮಾತ್ರ ನೀಡಿದ್ದು ಅಧಿಕೃತವಾಗಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ರಾಜ್ಯಾದ್ಯಂತ 200ರ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ: ಇಂದು 191ಮಂದಿಗೆ ಸೋಂಕು ದೃಢ

Advertisement
Advertisement

Udayavani is now on Telegram. Click here to join our channel and stay updated with the latest news.

Next