Advertisement

ಬರಿಗಾಲಲ್ಲಿ ವಿಂಧ್ಯಗಿರಿ ಹತ್ತಿಳಿದ ದೇವೇಗೌಡ

06:00 AM Feb 25, 2018 | Team Udayavani |

ಹಾಸನ: ಶ್ರವಣಬೆಳಗೊಳದ ವಿಂಧ್ಯಗಿರಿಯನ್ನೇರಲು ಡೋಲಿ ನಿರಾಕರಿಸಿ ಮೆಟ್ಟಲುಗಳನ್ನತ್ತಿ ಶ್ರೀ ಬಾಹುಬಲಿಮೂರ್ತಿಗೆ
ಶನಿವಾರ ಮಹಾಮಸ್ತಕಾಭಿಷೇಕ ನೆರವೇರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಶಕ್ತಿ ಮೀರಿ ಭಕ್ತಿಯ ಪರಾಕಾಷ್ಠೆ ಮೆರೆದರು. 85ರ ಇಳಿವಯಸ್ಸಿನಲ್ಲೂ ಬರಿಗಾಲಿನಲ್ಲಿ ಬೆಟ್ಟ ಹತ್ತಿ, ಇಳಿದು ಈ ಬಾರಿಯ ಮಹಾಮಸ್ತಕಾಭಿಷೇಕದಲ್ಲಿ ದಾಖಲೆ ನಿರ್ಮಿಸಿದರು.

Advertisement

ಮಧ್ಯಾಹ್ನ 12.8ಕ್ಕೆ ವಿಂಧ್ಯ ಗಿರಿಯ ಪಶ್ಚಿಮದ ಪ್ರವೇಶದ್ವಾರದ ಬಳಿ ಪತ್ನಿ ಚನ್ನಮ್ಮ ಅವರೊಂದಿಗೆ ಕಾರಿನಲ್ಲಿ ಬಂದಿಳಿದ ದೇವೇಗೌಡರಿಗೆ ಡೋಲಿಗಳನ್ನು ಕಾಯ್ದಿರಿಸಲಾಗಿತ್ತು. ಅದರೆ ಡೋಲಿ ಹತ್ತಲು ನಿರಾಕರಿಸಿ ಮೆಟ್ಟಲುಗಳನ್ನು ಹತ್ತಿಯೇ ಬಾಹುಬಲಿಗೆ ಅಭಿಷೇಕ ನೆರವೇರಿಸುವುದಾಗಿ ಹೇಳಿದಾಗ ಅವರ ಅಂಗರಕ್ಷಕರು, ಜೆಡಿಎಸ್‌ ಮುಖಂಡರು ಅವಕ್ಕಾದರು. ಅಂಗರಕ್ಷಕನ ಹೆಗಲ ಮೇಲೆ ಮಾಮೂಲಿನಂತೆ ಕೈ ಹಾಕಿಕೊಂಡು ಮೆಟ್ಟಿಲೇರಲು ಆರಂಭಿಸಿದರು.

ಸ್ಥಳೀಯ ಶಾಸಕ ಸಿ.ಎನ್‌.ಬಾಲಕೃಷ್ಣ ಅವರೂ ದೇವೇಗೌಡರಿಗೆ ಭುಜ ಕೊಟ್ಟು ಸಹಕರಿಸಿದರು.85ರ ಹರೆಯದಲ್ಲೂ 412 ಮೆಟ್ಟಿಲುಗಳನ್ನು ಬರಿಗಾಲಲ್ಲಿ ಹತ್ತಿ ನನಗಿನ್ನೂ ದೈಹಿಕ ಶಕ್ತಿ ಕುಂದಿಲ್ಲ. ಹೋರಾಟ ಮಾಡಬಲ್ಲೆ ಎಂಬ ಸಂದೇಶ ರವಾನಿಸಿದರು. ದೇವೇಗೌಡರ ಪತ್ನಿ ಚನ್ನಮ್ಮ ಅವರು ಡೋಲಿಯಲ್ಲಿ ಪತಿಯನ್ನು ಹಿಂಬಾಲಿಸಿದರು.

ಮೆಟ್ಟಿಲು ಹತ್ತುವಾಗ ಒಮ್ಮೆ ನಿಂತು ಸುಧಾರಿಸಿಕೊಂಡ ಅವರು, ಮತ್ತೂಮ್ಮೆ ಕೆಲ ಕ್ಷಣ ಕುಳಿತು ಲಘು ವಿರಾಮ ಪಡೆದು ಮುಂದೆ ಸಾಗಿದರು. ವೈದ್ಯರು ತಪಾಸಣೆಗೆಮುಂದಾದರೂ ನಿರಾಕರಿಸಿ ಬೆಟ್ಟದ ತುದಿ ಏರಲಾರಂಭಿಸಿದರು.

ಆದರೂ ಒತ್ತಾಯಕ್ಕೆ ಮಣಿದು ಬೆಟ್ಟದ ತುದಿಯಲ್ಲಿರುವ ತಾತ್ಕಾಲಿಕ ಆಸ್ಪತ್ರೆಯಲ್ಲಿ ತಪಾಸಣೆಗೆ ಸಹಕರಿಸಿದರು. ತಪಾಸಣೆ ನಡೆಸಿದಾಗ ರಕ್ತದೊತ್ತಡ, ಸಕ್ಕರೆ ಅಂಶ ಸಹಜವಾಗಿತ್ತು. ಓಆರ್‌ಎಸ್‌ ಅನ್ನು ಕುಡಿಯಲು ನೀಡಿದಾಗಲೂ ನಿರಾಕರಿಸಿದ ಗೌಡರು,
ಬಾಹುಬಲಿ ಮೂರ್ತಿಗೆ ಅಭಿಷೇಕ ನೆರವೇರಿಸುವವರೆಗೆ ನೀರನ್ನೂ ಕುಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಧ್ಯಾಹ್ನ 12.45 ನಿಮಿಷಕ್ಕೆ ಗೊಮ್ಮಟೇಶ್ವರನ ನೆಲೆ ತಲಪಿದ ಗೌಡರು 37 ನಿಮಿಷದಲ್ಲಿ ವಿಂಧ್ಯಗಿರಿಯನ್ನೇರಿ ದಾಖಲೆ ನಿರ್ಮಿಸಿದರು.

Advertisement

ಅನಂತರ ಲಿಫ್ಟ್ನಲ್ಲಿ ಅಟ್ಟಣಿಗೆಯನ್ನೇರಿ ಬಾಹುಬಲಿ ಮೂರ್ತಿಗೆ ಕ್ಷೀರಾಭಿಷೇಕ ನೆರವೇರಿಸಿ ಧನ್ಯತಾಭಾವ ಮೆರೆದರು. ಶ್ರೀ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕ ಬಾಲಕಷ್ಣ, ಜೆಡಿಎಸ್‌ ಮುಖಂಡ, ಹಿರಿಯ ವಕೀಲ ಎಸ್‌.ಎಲ್‌. ಭೋಜೇಗೌಡ, ಚನ್ನರಾಯಪಟ್ಟಣ ತಾಲೂಕು ಜೆಡಿಎಸ್‌ ಮುಖಂಡ ಪರಮದೇವರಾಜೇಗೌಡ ಮತ್ತಿತರರು ದೇವೇಗೌಡರೊಂದಿಗಿದ್ದರು.

ನಂತರ ಬೆಟ್ಟ ಇಳಿಯಲು ವ್ಯವಸ್ಥೆ ಮಾಡಿದ್ದ ಡೋಲಿ ಏರಲು ನಿರಾಕರಿಸಿದ ಗೌಡರು, ಮಾಧ್ಯಮ ಪ್ರತಿನಿಧಿಗಳು, ಜೆಡಿಎಸ್‌
ಮುಖಂಡರೊಂದಿಗೆ ಮಾತನಾಡುತ್ತಾ ಸರಾಗವಾಗಿ ಮೆಟ್ಟಲು ಇಳಿಯುತ್ತಿದ್ದರೆ, ಪತ್ನಿ ಚನ್ನಮ್ಮ ಅವರು ಡೋಲಿಯಲ್ಲಿ ಕುಳಿತು
ಗೌಡರನ್ನು ಹಿಂಬಾಲಿಸಿದರು. ಬೆಟ್ಟದ ಬುಡದ ಪ್ರವೇಶ ದ್ವಾರದ ಬಳಿ ನಿಂತಿದ್ದ ಕೆಲ ಜೆಡಿಎಸ್‌ ಮುಖಂಡರನ್ನು ಮಾತನಾಡಿಸುತ್ತಾ ಎಳನೀರು ಕುಡಿದು ಸುಧಾರಿಸಿಕೊಂಡು ಗೌಡರು ಹೊರಟರು.

Advertisement

Udayavani is now on Telegram. Click here to join our channel and stay updated with the latest news.

Next