Advertisement

ಗುರುಪ್ರಸಾದ್‌ ಬದಲಾಗಿದ್ದಾರೆ!

11:27 AM Apr 25, 2017 | Team Udayavani |

ಗುರುಪ್ರಸಾದ್‌ ಬದಲಾಗಿದ್ದಾರೆ. ಅವರು ಮನೆಬಿಟ್ಟು ಹೊರಗಡೆ ಬಂದಿದ್ದಾರೆ. ಕ್ಲೋಸಪ್‌ನಿಂದ ವೈಡ್‌ ಆಗಿದ್ದಾರೆ. ಲಕ್ಷದಿಂದ ಕೋಟಿಗೆ ಏರಿದ್ದಾರೆ. ಜೊತೆಗೆ ಸ್ಮಶಾನ ಕೂಡಾ ಹುಡುಕುತ್ತಿದ್ದಾರೆ! – ಹೀಗೆಂದರೆ ನೀವು ತಪ್ಪು ತಿಳಿಯುವ ಅಗತ್ಯವಿಲ್ಲ. ಇದು ಗುರುಪ್ರಸಾದ್‌ ಅವರು ತಮ್ಮ ಹೊಸ ಸಿನಿಮಾಕ್ಕಾಗಿ ಬದಲಾದ ಹಾಗೂ ತಯಾರಿ ಮಾಡಿಕೊಂಡಿರುವ ರೀತಿ. ಗುರುಪ್ರಸಾದ್‌ ಅವರು ಈಗ “ಅದೇಮಾ’ ಎಂಬ ಮಾಡುತ್ತಿದ್ದಾರೆ. ಅನೂಪ್‌ ಸಾ.ರಾ.ಗೋವಿಂದು ಈ ಚಿತ್ರದ ನಾಯಕ.

Advertisement

ಸೋಮವಾರ ಆ ಚಿತ್ರದ ಮುಹೂರ್ತ ಕೂಡಾ ಅದ್ಧೂರಿಯಾಗಿ ನಡೆದಿದೆ. ಗುರುಪ್ರಸಾದ್‌ ಅವರ ಈ ಹಿಂದಿನ ಚಿತ್ರಗಳನ್ನು ನೀವು ನೋಡಿದ್ದರೆ ಬಹುತೇಕ ಒಂದು ಮನೆ ಅಥವಾ ಒಂದೆರಡು ಲೊಕೇಶನ್‌ಗಳಲ್ಲಷ್ಟೇ ಕಾಣುತ್ತಿತ್ತು. ಜೊತೆಗೆ ಕ್ಲೋಸಪ್‌ ಶಾಟ್‌ಗಳಲ್ಲೇ ಸಿನಿಮಾ ಮುಗಿಸುತ್ತಿದ್ದರು ಗುರು. ಬಹುತೇಕ ಲಕ್ಷದೊಳಗೆ ಸಿನಿಮಾ ಕೂಡಾ ಮುಗಿದು ಹೋಗುತ್ತಿತ್ತು. ಆದರೆ, ಗುರುಪ್ರಸಾದ್‌ “ಅದೇಮಾ’ ಚಿತ್ರದಲ್ಲಿ ಸಂಪೂರ್ಣ ಬದಲಾಗಿದ್ದಾರೆ.

ಈ ಬಾರಿ ಮನೆ ಬದಲು ಸಂಪೂರ್ಣವಾಗಿ ಔಟ್‌ಡೋರ್‌ ಶೂಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಕರ್ನಾಟಕದ ಸುಂದರ ತಾಣಗಳಲ್ಲಿ “ಅದೇಮಾ’ ಚಿತ್ರೀಕರಣ ಮಾಡಲಿದ್ದಾರಂತೆ. ಹಾಗಾಗಿ, ಬಜೆಟ್‌ ಕೂಡಾ ಲಕ್ಷದಿಂದ ಕೋಟಿ ದಾಟುತ್ತದೆ. ಕೆಲವೇ ಕೆಲವು ಕಲಾವಿದರನ್ನಿಟ್ಟುಕೊಂಡು ಸಿನಿಮಾ ಮುಗಿಸುತ್ತಿದ್ದ ಗುರುಪ್ರಸಾದ್‌ ಈ ಬಾರಿ ತುಂಬು ತಾರಾಗಣದ ಜೊತೆಗೆ ಚಿತ್ರೀಕರಣ ಮಾಡಲಿದ್ದಾರೆ. ಶ್ರೀಧರ್‌ ರೆಡ್ಡಿ ಈ ಸಿನಿಮಾದ ನಿರ್ಮಾಪಕರು.

ಅಂದಹಾಗೆ, “ಅದೇಮಾ’ ಎಂದರೆ ಏನು ಎಂಬ ಕುತೂಹಲವಿದೆ. ಆ ಕುತೂಹಲವನ್ನು ಈಗಲೇ ಬಿಟ್ಟುಕೊಡಲು ಗುರುಪ್ರಸಾದ್‌ ರೆಡಿಯಿಲ್ಲ. ಮುಂದಿನ ದಿನಗಳಲ್ಲಿ “ಅದೇಮಾ’ ಅಂದರೇನು, ಅದರ ಹಿಂದಿನ ಅರ್ಥವೇನು ಎಂಬುದನ್ನು ಹೇಳುತ್ತಾರಂತೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಈ ತರಹದ ಒಂದು ಕಥೆ ಬಂದಿಲ್ಲ ಎಂಬುದು ಗುರುಪ್ರಸಾದ್‌ ಅವರ ವಿಶ್ವಾಸದ ನುಡಿ.

ಚಿತ್ರದ ಬಹುತೇಕ ಚಿತ್ರೀಕರಣ ಸ್ಮಶಾನದಲ್ಲೇ ನಡೆಯುವುದರಿಂದ ಸ್ಮಶಾನಗಳಿಗಾಗಿ ಗುರುಪ್ರಸಾದ್‌ ಅಂಡ್‌ ಟೀಂ ಹುಡುಕಾಟ ನಡೆಸುತ್ತಿದೆಯಂತೆ. ನಾಯಕಿಯ ಪಾತ್ರ ತುಂಬಾ ವಿಭಿನ್ನವಾಗಿದ್ದು, ಸ್ಪಷ್ಟವಾಗಿ ಕನ್ನಡ ಮಾತನಾಡುವ ನಾಯಕಿ ಬೇಕಾಗಿದೆಯಂತೆ. ಹಾಗಾಗಿ, ಆಡಿಷನ್‌ ಮೂಲಕ ನಾಯಕಿಯನ್ನು ಆಯ್ಕೆ ಮಾಡಲು ಗುರುಪ್ರಸಾದ್‌ ತೀರ್ಮಾನಿಸಿದ್ದಾರೆ.ಈ ಸಿನಿಮಾದ ಜೊತೆಗೆ ಕೊನೆವರೆಗೂ ಇದ್ದು, ವಿಜಯದಶಮಿಗೆ ಬಿಡುಗಡೆ ಮಾಡುತ್ತಾರಂತೆ ಗುರು.

Advertisement
Advertisement

Udayavani is now on Telegram. Click here to join our channel and stay updated with the latest news.

Next