Advertisement

ಅಭಿಯಾನದಿಂದ ಹಿಂದೆ ಸರಿದ ಹುತಾತ್ಮ ಕಾರ್ಗಿಲ್ ಯೋಧನ ಪುತ್ರಿ

11:40 AM Feb 28, 2017 | Team Udayavani |

ಹೊಸದಿಲ್ಲಿ : ದಿಲ್ಲಿ ವಿಶ್ವವಿದ್ಯಾಲಯದ ರಾಮ್‌ಜಾಸ್‌ ಕಾಲೇಜಿನಲ್ಲಿ ಕಳೆದ ಫೆ.22ರಂದು ಸಂಭವಿಸಿದ್ದ ಹಿಂಸಾತ್ಮಕ ಘಟನೆಯನ್ನು ವಿರೋಧಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ವಿರುದ್ಧ ಆನ್‌ಲೈನ್‌ ಅಭಿಯಾನವನ್ನು ಆರಂಭಿಸಿ ತೀವ್ರ ವಿವಾದವನ್ನು ಸೃಷ್ಟಿಸಿದ್ದ ದಿಲ್ಲಿ ವಿವಿ ವಿದ್ಯಾರ್ಥಿನಿ ಗುರ್‌ವೆುಹರ್‌ ಕೌರ್‌ ಇಂದು ತಾನು ಈ ಅಭಿಯಾನದಿಂದ ಹಿಂದೆ ಸರಿದಿರುವುದಾಗಿಯೂ ಇಂದು ನಡೆಯಲಿರುವ ಎಐಎಸ್‌ಎ ಜಾಥಾದಲ್ಲಿ ತಾನು ಪಾಲ್ಗೊಳ್ಳೆನೆಂದೂ ಟ್ವೀಟ್‌ ಮಾಡಿದ್ದಾಳೆ. 

Advertisement

“ನಾನು ಅಭಿಯಾನದಿಂದ ಹಿಂದೆ ಸರಿಯುತ್ತಿದ್ದೇನೆ; ಎಲ್ಲರಿಗೂ ನನ್ನ ಅಭಿನಂದನೆಗಳು; ನನ್ನನ್ನು  ಒಂಟಿಯಾಗಿರಲು ಬಿಡಿ ಎಂದು ಕೇಳಿಕೊಳ್ಳುತ್ತೇನೆ; ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೇನೆ;  ತೋರಬೇಕಾಗಿದ್ದ ಧೈರ್ಯ, ದಿಟ್ಟತನವನ್ನು ತೋರಿಸಿದ್ದೇನೆ’ ಎಂದಾಕೆ ಹೇಳಿದ್ದಾಳೆ.

ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾಗಿದ್ದ ಕ್ಯಾಪ್ಟನ್‌ ಮನ್‌ದೀಪ್‌ ಸಿಂಗ್‌ ಅವರ ಪುತ್ರಿಯಾಗಿರುವ ಗುರ್‌ವೆುಹರ್‌ ಕೌರ್‌, ದಿಲ್ಲಿಯ ರಾಮ್‌ಜಾಸ್‌ ಕಾಲೇಜಿನಲ್ಲಿ ಎಬಿವಿಪಿ ನಡೆಸಿದ್ದ ಹಿಂಸೆಯನ್ನು ಪ್ರತಿಭಟಿಸಿ ಆನ್‌ಲೈನ್‌ ಅಭಿಯಾನವನ್ನು ಆರಂಭಿಸಿದ್ದಳು. ಈ ನಡುವೆ ಆಕೆಗೆ ಜೀವ ಬೆದರಿಕೆ, ರೇಪ್‌ ಬೆದರಿಕೆ ಇತ್ಯಾದಿಗಳು ಬಂದಿದ್ದವು. ಆ ಬಗ್ಗೆ ಆಕೆ ದಿಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ರಕ್ಷಣೆಯನ್ನೂ ಬೇಡಿದ್ದಳು. 

ಇಂದು ತನ್ನ ಈ ಅಭಿಯಾನದಿಂದ ತಾನು ಹಿಂದೆ ಸರಿಯುತ್ತಿರುವುದಾಗಿ ಆಕೆ ಮಾಡಿರುವ ಸರಣಿ ಟ್ವೀಟ್‌ನಲ್ಲಿ ಹೀಗೆ ಹೇಳಿದ್ದಾಳೆ : 

“ನನ್ನ ದೈರ್ಯ, ಶೌರ್ಯವನ್ನು ಪ್ರಶ್ನಿಸುವವರಿಗೆ ನಾನು ಅದನ್ನು ಈಗಾಗಲೇ ಸಾಕಷ್ಟು ತೋರಿಸಿದ್ದೇನೆ. ಹಿಂಸೆಯ ವಿರುದ್ಧದ ಅಭಿಯಾನವನ್ನು ನಾನು ಕೈಗೊಂಡದ್ದು ನನಗಾಗಿ ಅಲ್ಲ; ವಿದ್ಯಾರ್ಥಿ ಸಮುದಾಯಕ್ಕಾಗಿ. ಮುಂದಿನ ಬಾರಿ ಹಿಂಸೆ, ಬೆದರಿಕೆಗಳು ಎದುರಾದಾಗ ನಾವು ಆ ಬಗ್ಗೆ ಎಚ್ಚರಿಕೆಯಿಂದ ಎರಡೆರಡು ಬಾರಿ ಯೋಚಿಸುವೆವು’.

Advertisement

ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಂದು ಕ್ಯಾಂಪಸ್‌ ಒಳಗೆ ಶಾಂತಿ ಮತ್ತು ಸುರಕ್ಷೆಗಾಗಿ, ಎಐಎಸ್‌ಎ ಕಾರ್ಯಕರ್ತರೊಂದಿಗೆ ಖಾಲ್ಸಾ ಕಾಲೇಜಿನಿಂದ ಜಾಥಾ ನಡೆಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next