Advertisement

ಹೊರ ರಾಜ್ಯ, ಜಿಲ್ಲೆಗಳಿಂದ ಸಂಚಾರಕ್ಕೆ ಮಾರ್ಗಸೂಚಿ

09:34 AM May 03, 2020 | mahesh |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಇತರ ರಾಜ್ಯಗಳಿಗೆ ಪ್ರಯಾಣಿಸುವ ಹಾಗೂ ಇತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ, ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಪ್ರಯಾಣಿಸುವರಿಗೆ ಜಿಲ್ಲಾಡಳಿತ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

Advertisement

ಜಿಲ್ಲೆಯಿಂದ ಇತರ ರಾಜ್ಯಗಳಿಗೆ ಪ್ರಯಾಣಿಸುವವರು sevasindhu.karnataka.gov.in ನಲ್ಲಿ ಲಾಗಿನ್‌ ಆಗಿ ಹೆಸರು, ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲದವರು ಗ್ರಾ.ಪಂ. ಕಚೇರಿಗಳು, ಪಟ್ಟಣ ಪಂಚಾಯತ್‌, ನಗರಸಭೆ, ಪುರಸಭೆ ಕಚೇರಿಗಳು, ತಾಲೂಕು ಕಚೇರಿ, ನಗರಪಾಲಿಕೆಯ ವಲಯ ಕಚೇರಿಗಳು, ಮಂಗಳೂರು ಒನ್‌ಗಳಲ್ಲೂ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಸ್ವೀಕೃತವಾದ ಅರ್ಜಿಗಳನ್ನು ರಾಜ್ಯಮಟ್ಟದಲ್ಲಿ ಪರಿಶೀಲನೆ ಮಾಡಿ ಸ್ವೀಕರಿಸುವ ರಾಜ್ಯದ ಸಹಮತ ಇದ್ದಲ್ಲಿ ಮಾತ್ರ ಅನುಮೋದಿಸಲ್ಪಡುತ್ತವೆ. ಅನುಮೋದಿತ ಅರ್ಜಿದಾರರಿಗೆ ರಾಜ್ಯ ಸರಕಾರದ ನೋಡಲ್‌ ಅಧಿಕಾರಿಯವರ ನಿರ್ದೇಶನದ ಮೇರೆಗೆ ಪ್ರಯಾಣದ ವ್ಯವಸ್ಥೆ ನಡೆಸಲಾಗುವುದು. ಪ್ರಯಾಣಿಕರು ಟಿಕೆಟ್‌ ಖರೀದಿಸಿ ಪ್ರಯಾಣಿಸಬೇಕು. ಪ್ರಯಾಣ ಪೂರ್ವದಲ್ಲಿ ವೈದ್ಯಕೀಯ ಸ್ಕ್ರೀನಿಂಗ್‌ ಮಾಡಲಾಗುವುದು. ಅನುಮೋದಿತ ಪ್ರಯಾಣಿಕರು ಪ್ರಯಾಣಿಸುವಾಗ ತಮ್ಮೊಂದಿಗೆ ಡ್ರೈವಿಂಗ್‌ ಲೈಸನ್ಸ್‌ /ಪಾಸ್‌ಪೋರ್ಟ್‌/ ಮತದಾರರ ಗುರುತು ಚೀಟಿ /ಆಧಾರ್‌ ಕಾರ್ಡ್‌/ಪಾನ್‌ ಕಾರ್ಡ್‌ ಹೊಂದಬೇಕು. ಯಾವುದೇ ಸಂದೇಹ ವಿದ್ದಲ್ಲಿ ಕಂಟ್ರೋಲ್‌ ರೂಂ ಟೋಲ್‌ಫ್ರೀ 1077ಗೆ ಅಥವಾ ವಾಟ್ಸ್‌ಆ್ಯಪ್‌ ನಂ. 9483908000 ಸಂಪರ್ಕಿಸಬಹುದು.

ಬೇರೆ ಜಿಲ್ಲೆಗಳಿಗೆ ಪ್ರಯಾಣಿಸುವವರು
ಮುಖ್ಯಮಂತ್ರಿಯರ ಅಧ್ಯಕ್ಷತೆಯಲ್ಲಿ ಮೇ 2ರಂದು ನಡೆದ ವೀಡಿಯೋ ಸಂವಾದದಲ್ಲಿ ನೀಡಲಾಗಿರುವ ಸೂಚನೆಯಂತೆ ದ.ಕ.ದಿಂದ ಹೊರ ಜಿಲ್ಲೆಗಳಿಗೆ ಪ್ರಯಾಣಿಸುವವರಿಗೆ ಒಂದು ಬಾರಿ ಪ್ರಯಾಣಿಸಲು ಅವಕಾಶವಿರುತ್ತದೆ. ಇದಕ್ಕಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿಗಳು, ಗ್ರಾಮಾಂತರ ಪ್ರದೇಶಗಳಲ್ಲಿ ಸಮೀಪದ ಪೊಲೀಸ್‌ ಠಾಣೆಗಳಲ್ಲಿ ಅರ್ಜಿ ಸಲ್ಲಿಸಬೇಕು. ಪ್ರಯಾಣದ ಅನುಮತಿಯನ್ನು ಪೊಲೀಸ್‌ ಆಯುಕ್ತರು, ಪೊಲೀಸ್‌ ಅಧೀಕ್ಷಕರು ಅಥವಾ ಪೊಲೀಸ್‌ ಉಪ ಆಯುಕ್ತರ ಕಚೇರಿ ಗಳಿಂದ ನೀಡಲಾಗುವುದು. ಕೋವಿಡ್ ಲಕ್ಷಣರಹಿತರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಅನುಮೋದಿತ ಪ್ರಯಾಣಿಕರು ಮಾಸ್ಕ್, ಗ್ಲೌಸ್‌ ಧರಿಸಬೇಕು. ಕೇಂದ್ರ, ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಮುಂಜಾಗರೂಕತ ಕ್ರಮಗಳನ್ನು ವಹಿಸಬೇಕು. ಪ್ರಯಾಣವನ್ನು ಸ್ವೀಕರಿಸುವ ಜಿಲ್ಲೆಗಳಲ್ಲಿನ ಎಲ್ಲ ಕ್ವಾರಂಟೈನ್‌ ಸಂಬಂಧಿತ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಸಂಚರಿಸುವ ಮಾರ್ಗದ ಮಧ್ಯೆ ಎಲ್ಲಿಯೂ ನಿಲುಗಡೆ ಮಾಡುವಂತಿಲ್ಲ. ನೀಡಲಾಗುವ ಪಾಸ್‌ಗಳನ್ನು ದುರುಪಯೋಗಪಡಿಸಿದರೆ ಕಾನೂನುರೀತಿ ಕ್ರಮ ಕೈಗೊಳ್ಳಲಾಗು ವುದು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ದ.ಕ. ಜಿಲ್ಲೆಗೆ ಬೇರೆ ರಾಜ್ಯಗಳಿಂದ ಆಗಮಿಸ ಬಯಸುವವರೂ ಇದೇ ಮಾದರಿಯನ್ನು ಅನುಸರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next