Advertisement

ವೇತನವಿಲ್ಲದಿದ್ದರೂ ನಿರ್ವಹಿಸಬೇಕು ಪರೀಕ್ಷೆ ಕರ್ತವ್ಯ!

02:06 AM Apr 01, 2021 | Team Udayavani |

ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಅವಧಿ ಮಾ. 31ಕ್ಕೆ ಮುಕ್ತಾಯಗೊಂಡಿದೆ. ಎ. 1ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳ ಸೆಮಿಸ್ಟರ್‌ ಪರೀಕ್ಷೆ ಆರಂಭಗೊಳ್ಳುತ್ತಿದ್ದು, ಅತಿಥಿ ಉಪನ್ಯಾಸಕರು ವೇತನವಿಲ್ಲದಿದ್ದರೂ ಪರೀಕ್ಷಾ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ.

Advertisement

ಪರೀಕ್ಷಾ ಕರ್ತವ್ಯ ನಿರ್ವಹಿಸದೇ ಇದ್ದರೆ ಅನಂತರ ಉತ್ತರಪತ್ರಿಕೆ ಮೌಲ್ಯಮಾಪನದ ಕೆಲಸ ಕೈತಪ್ಪಬಹುದು ಎಂಬ ಆತಂಕ ಅವರನ್ನು ಈ ಇಕ್ಕಟ್ಟಿಗೆ ಸಿಲುಕಿಸಿದೆ. ಉತ್ತರಪತ್ರಿಕೆಯ ಮೌಲ್ಯಮಾಪನಕ್ಕೆ 7 ದಿನಗಳ ಕರ್ತವ್ಯಕ್ಕೆ 10 ಸಾವಿರ ರೂ. ವರೆಗೆ ಸಿಗುವುದರಿಂದ ಅನಿವಾರ್ಯವಾಗಿ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಬೇಕಿದೆ.

ಜ. 15ಬಳಿಕ ಕರ್ತವ್ಯದ ಆದೇಶ :

ಕೋವಿಡ್ ಕಾರಣ ಶಾಲಾ ಕಾಲೇಜುಗಳು ವಿಳಂಬವಾಗಿ ಆರಂಭವಾಗಿದ್ದು, ಪ್ರಾರಂಭದಲ್ಲಿ ಸರಕಾರಿ ಪದವಿ ಕಾಲೇಜುಗಳಲ್ಲಿ ಪೂರ್ಣಕಾಲಿಕ ಉಪನ್ಯಾಸಕರು ಮಾತ್ರ ಕರ್ತವ್ಯ ನಿರ್ವಹಿಸಿದ್ದರು. ಆದರೆ ಕೆಲವೊಂದು ವಿಷಯಗಳಿಗೆ ಪೂರ್ಣಕಾಲಿಕ ಉಪನ್ಯಾಸಕರು ಕೂಡ ಇಲ್ಲದ್ದರಿಂದ ಅಂತಹ ಪಾಠಗಳೇ ಆರಂಭಗೊಂಡಿರಲಿಲ್ಲ. ಬಳಿಕ ಅತಿಥಿ ಉಪನ್ಯಾಸಕರ ಮನವಿ ಮೇರೆಗೆ ಜ. 15ಕ್ಕೆ ಶೇ. 50ರಷ್ಟು ಅತಿಥಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಲು ಸರಕಾರ ಆದೇಶ ನೀಡಿತು.

ಅತಿಥಿ ಉಪನ್ಯಾಸಕರ ಹಿತರಕ್ಷಣ ಸಮಿತಿಯ ಹೋರಾಟದ ಫಲವಾಗಿ ಫೆ. 9ರಂದು ಎಲ್ಲ ಅತಿಥಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗುವಂತೆ ಸರಕಾರ ಆದೇಶಿಸಿತು. ಮೇಲಿನ ಎರಡು ಆದೇಶ ಗಳಲ್ಲೂ ನೇಮಕಾತಿ ಮಾ. 31ರ ವರೆಗೆ ಮಾತ್ರ ಎಂದು ತಿಳಿಸಿದೆ. ಪ್ರಸ್ತುತ ಒಂದು ಸೆಮಿಸ್ಟರ್‌ ಮಾತ್ರ ಮುಕ್ತಾಯಗೊಳ್ಳುತ್ತಿದ್ದು, ಮುಂದೆ ಅತಿಥಿ

Advertisement

ಉಪನ್ಯಾಸಕರ ಅನಿವಾರ್ಯತೆ ಇಲ್ಲವೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಹಿತರಕ್ಷಣ ಸಮಿತಿ ಆಗ್ರಹಿಸಿದೆ.

ಒಂದು ಪರೀಕ್ಷೆಗೆ 100 ರೂ.! :

ಅತಿಥಿ ಉಪನ್ಯಾಸಕರಿಗೆ ಪರೀಕ್ಷಾ ಕರ್ತವ್ಯಕ್ಕೆ ಮೂರು ಗಂಟೆಯ ಅವಧಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಕೇವಲ 100 ರೂ. ಗೌರವ ಧನ ನೀಡುತ್ತಿದೆ. ಅದು ಪರೀಕ್ಷಾ ಸ್ಥಳಕ್ಕೆ

ನಾವು ಬಂದು ಹೋಗುವ ಪ್ರಯಾಣದ ಖರ್ಚಿಗೂ ಸಾಲುತ್ತಿಲ್ಲ ಎಂಬುದು ಅತಿಥಿ ಉಪನ್ಯಾಸಕರ ಅಳಲು. ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಇಷ್ಟೇ ಅವಧಿಗೆ 250ರಿಂದ 300 ರೂ. ನೀಡುತ್ತಾರೆ. ಕೂಲಿ ಕಾರ್ಮಿಕ ಕೂಡ ದಿನಕ್ಕೆ ಕನಿಷ್ಠ 500ರಿಂದ 600 ರೂ. ವೇತನ ಪಡೆಯುತ್ತಾನೆ. ನಾವು ಮಾತ್ರ ಕೇವಲ 100 ರೂ.ಗಳಿಂದ ದಿನ ಸಾಗಿಸುವುದೆಂತು? ಈ  ಮೊತ್ತವನ್ನು  ಹೆಚ್ಚಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಅವಧಿ ವಿಸ್ತರಿಸಿ :

ಕೋವಿಡ್ ಕಾರಣ ಈ ವರ್ಷ ನಮಗೆ ಕೇವಲ 2 ತಿಂಗಳ ಕೆಲಸ ಸಿಕ್ಕಿದ್ದು, ಮಾ. 31ಕ್ಕೆ ಅವಧಿ ಮುಕ್ತಾಯಗೊಂಡಿದೆ. ಪರೀಕ್ಷಾ ಕರ್ತವ್ಯ ಮಾಡದೇ ಇದ್ದರೆ ಮೌಲ್ಯಮಾಪನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೆದರಿಸುತ್ತಿರುವ ಕಾರಣ ವೇತನವಿಲ್ಲದಿದ್ದರೂ ಪರೀಕ್ಷಾ ಕರ್ತವ್ಯ ಮಾಡಬೇಕು. ಹೀಗಾಗಿ ನಮ್ಮ ನೇಮಕಾತಿಯ ಅವಧಿಯನ್ನು ವಿಸ್ತರಿಸಬೇಕು. ಜತೆಗೆ ವಿ.ವಿ. ನೀಡುತ್ತಿರುವ ಅಲ್ಪ ಮೊತ್ತವನ್ನು ಹೆಚ್ಚಿಸಬೇಕು. ಧೀರಜ್‌ ಕುಮಾರ್‌, ಅಧ್ಯಕ್ಷರು, ಸ.ಪ್ರ.ದ. ಕಾಲೇಜು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ದಕ್ಷಿಣ ಕನ್ನಡ

ಗೌರವ ಧನ ಹೆಚ್ಚಳ ಪ್ರಸ್ತಾವ :

ಹೊಸ ವ್ಯವಸ್ಥೆಯಲ್ಲಿ ಪರೀಕ್ಷಾ ಕರ್ತವ್ಯ ನಿರ್ವಹಿಸುವವರಿಗೆ ಹೆಚ್ಚಿನ ಕಾರ್ಯಭಾರ ಇರುವುದನ್ನು ಗಮನಿಸಿ ಗೌರವ ಧನವನ್ನು ಹೆಚ್ಚಿಸುವ ವಿಚಾರವನ್ನು ಶುಲ್ಕ ಪರಿಷ್ಕರಣ ಸಮಿತಿಯಲ್ಲಿ ಇಟ್ಟು, ಎಪ್ರಿಲ್‌ನ ಸಿಂಡಿಕೇಟ್‌ ಸಭೆಗೆ ತಂದು ಅನುಮೋದನೆ ಪಡೆದುಕೊಳ್ಳುತ್ತೇವೆ. ಜತೆಗೆ ಮೌಲ್ಯಮಾಪಕರ ಗೌರವಧನವನ್ನೂ ಹೆಚ್ಚು ಮಾಡುವ ಪ್ರಸ್ತಾವವಿದೆ. ಆದರೆ ಎಷ್ಟು ಹೆಚ್ಚಿಸುತ್ತೇವೆ ಎಂದು ಈಗಲೇ ಹೇಳುವಂತಿಲ್ಲ. -ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಕುಲಪತಿಗಳು, ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next