Advertisement

ಗುಂಪು ಘರ್ಷಣೆ; ಚಾಕು ಇರಿತ

12:31 PM Jun 08, 2019 | Suhan S |

ಹುಬ್ಬಳ್ಳಿ: ಕ್ಷುಲ್ಲಕ ವಿಷಯವಾಗಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದು, ಓರ್ವನಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಗಾಯಗೊಳಿಸಿದ ಘಟನೆ ಶುಕ್ರವಾರ ಸಂಜೆ ಹಳೇಹುಬ್ಬಳ್ಳಿ ನೇಕಾರನಗರದ ಈಶ್ವರನಗರದಲ್ಲಿ ನಡೆದಿದ್ದು, ಈ ವೇಳೆ ಓರ್ವ ಗಂಭೀರ ಗಾಯಗೊಂಡಿದ್ದಾನೆ.

Advertisement

ಘಟನೆಯಲ್ಲಿ ನೇಕಾರನಗರದ ಹುಸೇನಸಾಬ ಬಿಜಾಪುರಿ (28) ಎಂಬಾತ ಚಾಕು ಇರಿತಕ್ಕೊಳಗಾಗಿ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೆಟ್ಲಮೆಂಟ್‌ನ ಹುಸೇನಸಾಬ ಮತ್ತು ನೇಕಾರನಗರದ ದರ್ಶನ್‌ ಮಧ್ಯೆ ವೈಯಕ್ತಿಕ ವಿಷಯವಾಗಿ ಕ್ಷುಲ್ಲಕ ಕಾರಣಕ್ಕೆ ಗುರುವಾರ ಜಗಳವುಂಟಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ ಎರಡು ಗುಂಪುಗಳ ಸುಮಾರು 15-20 ಜನರು ಮಾರಕಾಸ್ತ್ರ, ಕಲ್ಲು, ಕಟ್ಟಿಗೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಇನ್ನೊಂದು ಗುಂಪಿನ ಸೂರಿ, ಗಿರಿ, ಸತೀಶ ಸಹೋದರರು ಸೇರಿದಂತೆ ಇನ್ನಿತರರು ಹುಸೇನಸಾಬ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಗಾಯಗೊಂಡಿರುವ ಸುರೇಶ ಮಾನಶೆಟ್ಟರ, ವಿಶ್ವಾಸ ಆರೋಪಿಸಿದ್ದಾರೆ.

ಹೊಡೆದಾಟದ ವೇಳೆ ಹುಸೇನಸಾಬ ಸೇರಿದಂತೆ 4-5 ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕಸಬಾಪೇಟೆ ಪೊಲೀಸರು ತೆರಳಿ ಹೊಡೆದಾಟ ನಡೆಸುತ್ತಿದ್ದವರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕಸಬಾಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದರ್ಶನ್‌ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವವರ ಪತ್ತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next