Advertisement

ತೆರೆದ ಬಾವಿಗೆ ಅಂತರ್ಜಲ ಮರುಪೂರಣ ಸುಲಭ ವಿಧಾನ

03:30 PM Jun 16, 2023 | Team Udayavani |

ಉಡುಪಿ: ಕುಡಿಯುವ ನೀರಿನ ಸಮಸ್ಯೆ ಹೆಚ್ಚಾದಂತೆ ಮಾನವ ಕಂಡುಕೊಂಡ ವಿಧಾನ ಮಳೆ ನೀರು ಕೊಯ್ಲು. ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಿದ ವಿವಿಧ ಕಡೆಗಳಲ್ಲಿ ಅಂತರ್ಜಲ ಹೆಚ್ಚಿದೆ.

Advertisement

ಪ್ರಕೃತಿಯಲ್ಲಿ ಸಹಜವಾಗಿ ಸುರಿಯುವ ಮಳೆ ನೀರನ್ನು ಬೇರೆ ಬೇರೆ ವಿಧಾನಗಳ ಮೂಲಕ ಭೂಮಿಯ ಜಲಪಾತ್ರೆಯಲ್ಲಿ ತುಂಬಿಸುವ ಕಾರ್ಯವೇ ಮಳೆ ಕೊಯ್ಲು. ಮನೆಯ ಛಾವಣಿಯ ಮೇಲೆ ಬೀಳುವ, ನಮ್ಮ ಅಂಗಳ
ದಲ್ಲಿ ಹರಿಯುವ ಯಾ ನಮ್ಮ ಜಮೀನಿನಲ್ಲಿ ಹರಿಯುವ ಮಳೆ ನೀರನ್ನು ನೇರವಾಗಿ ಯಾ ಮರುಪೂರಕ (ಇಂಗುಗುಂಡಿ) ಹೊಂಡದ ಮೂಲಕ ನೆಲದಲ್ಲಿ ಇಂಗುವಂತೆ ಮಾಡಿ ನಮ್ಮ ಮನೆಯ ತೆರೆದ ಬಾವಿಗೆ
ಅಂತರ್ಜಲ ಮರುಪೂರಣಗೊಳಿಸು ವುದು ನಾವೆಲ್ಲರೂ ಮಾಡಬಹುದಾದ ಅತ್ಯಂತ ಸರಳ, ಸುಲಭದ ಮಳೆಕೊಯ್ಲು ವಿಧಾನವಾಗಿದೆ.

ವಿಧಾನ
ಸೂಕ್ತ ಸ್ಥಳದಲ್ಲಿ ಸಾಮಾನ್ಯವಾಗಿ (5 ಅಡಿ ಉದ್ದ, 3 ಅಡಿ ಅಗಲ ಮತ್ತು 5 ಅಡಿ ಆಳದ ಹೊಂಡ ರಚಿಸುವುದು (ಸ್ಥಳಾವಕಾಶಕ್ಕನುಗುಣವಾಗಿ ಹೊಂಡದ ಗಾತ್ರದಲ್ಲಿ ಬದಲಾವಣೆ ಮಾಡಬಹುದು). ಹೊಂಡದ ತಳಭಾಗದಲ್ಲಿ ಹರಳು ಕಲ್ಲುಗಳನ್ನು, ಮಧ್ಯದಲ್ಲಿ ಜಲ್ಲಿ ಮತ್ತು ಮೇಲ್ಭಾಗದಲ್ಲಿ ದಪ್ಪದ ಮರಳನ್ನು ಬಳಸಿ ಮರುಪೂರಕ ಹೊಂಡವನ್ನು ತುಂಬಿಸಬೇಕು. ಹೊಂಡ ತುಂಬಿಸಲು ಸ್ಥಳಿಯವಾಗಿ ದೊರಕುವ ಇಟ್ಟಿಗೆಯ ಸಣ್ಣ ಸಣ್ಣ ತುಂಡುಗಳನ್ನು, ಹೆಂಚಿನ ಚೂರುಗಳನ್ನು, ಕಟ್ಟದ ನಿರ್ಮಾಣ ಸಮಯದಲ್ಲಿ ಮರಳು ಸೊಸಿದಾಗ ದೊರಕುವ ಹರಳು ಕಲ್ಲು (ಪೆಬಲು)ಗಳನ್ನು, ನದಿ ಪಾತ್ರದಲ್ಲಿ ದೊರಕುವ ಹರಳುಕಲ್ಲು ಮಿಶ್ರಿತ ದಪ್ಪದ ಮರಳನ್ನು ಬಳಸಬಹುದು.

ಈ ರೀತಿಯ ರಚನೆಯನ್ನು ಶೋಧಕದ ರೂಪದಲ್ಲಿ ನೆಲದ ಮೇಲೆ ನಿರ್ಮಿಸಿ, ಛಾವಣಿಯ ನೀರನ್ನು ನೇರ ಬಾವಿಗೆ ಬಿಡುವ ವಿಧಾನವೂ ಚಾಲ್ತಿಯಲ್ಲಿದೆ. ನಮ್ಮ ಸ್ಥಳೀಯ ಅಗತ್ಯ/ಅನುಕೂಲತೆಗನುಗುಣವಾಗಿ ಶುದ್ಧೀಕರಣ ತೊಟ್ಟಿಯನ್ನು ಪ್ಲಾಸ್ಟಿಕ್‌ ಡ್ರಮ್‌/ಕಾಂಕ್ರೀಟ್‌ ಮೂಲಕ ಮಾಡಿಕೊಳ್ಳಬಹುದು. ತೊಟ್ಟಿಯ ತಳದಲ್ಲಿ ಇದ್ದಲು, ಸಣ್ಣಜಲ್ಲಿ, ಶುದ್ಧ ಮರಳು ಇತ್ಯಾದಿಗಳನ್ನು ತುಂಬಿಸುವ ಮೂಲಕ ನಾವೇ ತಯಾರಿಸಬಹುದು. ತೊಟ್ಟಿಯ ತಳಭಾಗದಿಂದ ಶುದ್ಧೀಕರಣಗೊಂಡ ನೀರನ್ನು ಬಾವಿಗೆ ನೇರ ಬಿಡಬಹುದು.

ಬಾವಿಯ ಒಳಬದಿಯಿಂದ ಮಣ್ಣು ಕುಸಿಯುವ ಸಾಧ್ಯತೆಯಿದೆಯೆಂದಾದರೆ ಮರುಪೂರಕ ಹೊಂಡಗಳನ್ನು ಬಾವಿಯ ಹತ್ತಿರ ತೋಡ ಬೇಡಿ. ಮರುಪೂರಕ ಹೊಂಡವು ತೆರೆದ ಬಾವಿಯಿಂದ ಕನಿಷ್ಠ 15 ಅಡಿ ದೂರವಿರಲಿ.
ಮನೆ ಛಾವಣಿಯ ಮೇಲೆ ಬಿದ್ದ ಮಳೆನೀರು ಪೈಪಿನ ಮೂಲಕವಾಗಿ ಯಾ ಸಹಜವಾಗಿ ಮರುಪೂರಕ ಹೊಂಡದೆಡೆ ಹರಿದು ಬರುವಂತೆ ಮಾಡಬೇಕು. ಈ ವಿಧಾನದಿಂದ ಜಲಧರಕ್ಕೆ ಜಲ ಮರುಪೂರಣಗೊಂಡು ತೆರೆದ ಬಾವಿಯ ಅಂತರ್ಜಲದ ಮಟ್ಟದಲ್ಲಿ ಏರಿಕೆ ಉಂಟಾಗಲು ಸಹಕಾರಿಯಾಗುವುದು.

Advertisement

ಮರುಪೂರಕ ಹೊಂಡಗಳನ್ನು ಬಾವಿಯ ಸುತ್ತಲೂ ನಿರ್ಮಿಸಬಹುದು. ಇದರಿಂದಾಗಿ ವಿವಿಧ ದಿಕ್ಕುಗಳಿಂದ ಹರಿದು ಬರುತ್ತಿರುವ ನೀರನ್ನು ನೆಲದೊಳಗೆ ಇಂಗುವಂತೆ ಮಾಡಬಹುದು.

ಗಿಡಗಳೂ ನೀರಿಂಗಲು ಸಹಕಾರಿ
ಬಾವಿಯು ನಮ್ಮ ಜಮೀನಿನಲ್ಲಿ ಎತ್ತರದ ಜಾಗದಲ್ಲಿದ್ದರೆ ಬಾವಿಯ ಸುತ್ತಲೂ ಸ್ವಲ್ಪ ದೂರದಲ್ಲಿ ವಿವಿಧ ನಮೂನೆಯ ಗಿಡಗಳನ್ನು ಬೆಳೆಸಬಹುದು. ಈ ಎಲ್ಲ ಗಿಡಗಳು ಅಪಾರ ಪ್ರಮಾಣದಲ್ಲಿ ನೀರಿಂಗಿಸಲು ಸಹಕಾರಿಯಾಗುತ್ತವೆ.

ಪ್ರಕೃತಿ ಸಹಜ ವ್ಯವಸ್ಥೆ
ಅತ್ಯಂತ ಮುಖ್ಯವಾದ ನೈಸರ್ಗಿಕ ಅಂತರ್ಜಲ ಮರುಪೂರಣ ವ್ಯವಸ್ಥೆಯೆಂದರೆ ವನಸಂಪತ್ತು. ಗಿಡ-ಮರಗಳು ಮಳೆಕೊಯ್ಲಿನ ಪ್ರಕೃತಿದತ್ತವಾದ ವ್ಯವಸ್ಥೆ. ಅವು ರಭಸದಿಂದ ಬೀಳುವ ಮಳೆಯನ್ನು ತಮ್ಮ ಎಲೆ, ರೆಂಬೆ-ಕೊಂಬೆಗಳ ಮೂಲಕ ತಡೆದು, ಭೂತಾಯಿಯ ಮೇಲೆ ಹನಿಹನಿಯಾಗಿ ಬೀಳುವಂತೆ ಮಾಡಿ ತನ್ನ ಬೇರುಗಳ ಮೂಲಕ ಭೂಗರ್ಭಸೇರುವಂತೆ ಮಾಡುವ ಒಂದು ಸಹಜ ವ್ಯವಸ್ಥೆ. ಪ್ರಕೃತಿಯಲ್ಲಿ ಕಾಡಿಗೂ, ನೀರಿಗೂ ಅವಿನಾಭಾವ ಸಂಬಂಧವಿದೆ. ಹಾಗೆಯೇ ಬೆಟ್ಟ-ಗುಡ್ಡಗಳು, ಕಣಿವೆಗಳು, ನದಿ-ಕೆರೆಗಳು, ಹುತ್ತಗಳು ಕೂಡ ಮರುಪೂರಣಕ್ಕೆ ಪ್ರಕೃತಿ ಸಹಜವಾಗಿ ಇರುವ ಕೆಲವು ಮುಖ್ಯ ವ್ಯವಸ್ಥೆಗಳು.

ಹನಿಗೂಡಿ ಹಳ್ಳ
ನಮ್ಮ ನಿವೇಶನ ಸಣ್ಣದಾದರೂ ಅದರಲ್ಲಿ ಒಂದೋ-ಎರಡೋ ತೆಂಗಿನಮರ ಅಥವಾ ಇತರೇ ಮರಗಳು ಖಂಡಿತಾ ಇದ್ದೇ ಇರುತ್ತವೆ. ಕೊನೆಯ ಪಕ್ಷ ಮಳೆನೀರನ್ನು ಮೋರಿಗೆ ಹರಿಯ ಬಿಡುವ ಮೊದಲು ನಮ್ಮ ನಿವೇಶನದಲ್ಲಿರುವ ಇಂತಹ ಗಿಡ-ಮರಗಳ ಬುಡಕ್ಕೆ ಬಿಟ್ಟು, ಅನಂತರ ಹೊರಹೋಗುವಂತೆ ಮಾಡಬಹುದು. ಹನಿಕೂಡಿ ಹಳ್ಳ ಎಂಬ ಗಾದೆ ಮಾತಿನಂತೆ ನಮ್ಮದೂ ಅಳಿಲು ಸೇವೆ ಖಂಡಿತಾ ಆಗ‌ಬಹುದು.

ನಾವು ವಹಿಸಬೇಕಾದ ಎಚ್ಚರಗಳು
– ಮನೆಯ ಪಕ್ಕದ ಮಳೆ ನೀರು ಹರಿಯುವ ಚರಂಡಿಯ ನೀರನ್ನು ಇಂಗಿಸಬೇಕಾದಲ್ಲಿ ಚರಂಡಿಗೆ ಸ್ನಾನ, ಶೌಚ ಮತ್ತು ಇನ್ನಿತರ ಕೊಳಕು ನೀರು ಹರಿದು ಬರುವುದಿಲ್ಲವೆಂದು ಖಚಿತ ಪಡಿಸಿಕೊಳ್ಳಬೇಕು.
– ಕೊಳಚೆ, ಕೈಗಾರಿಕಾ ತ್ಯಾಜ್ಯಗಳು ಹರಿಯುವ ಪರಿಸರದಲ್ಲಿ ನೀರಿಂಗಿಸುವ ಪ್ರಯತ್ನ ಬೇಡ.
– ಶೌಚಾಲಯ ಗುಂಡಿಗೂ ಇಂಗುಗುಂಡಿಗೂ ಕನಿಷ್ಠ 30 ಅಡಿ ಅಂತರವಿರಲಿ.
– ನಮ್ಮ ಜಮೀನಿನ ವಿಸ್ತೀರ್ಣ, ಮನೆ ಛಾವಣಿಯ ವಿಸ್ತೀರ್ಣ ಮತ್ತು ಬಾವಿಯ ದಿಕ್ಕಿನೆಡೆ ಹರಿದುಬರುತ್ತಿರುವ ಮಳೆ ನೀರಿನ ಪ್ರಮಾಣ ಮತ್ತು ಇಂಗಿಸಬಹುದಾದ ನೀರಿನ ಪ್ರಮಾಣಕ್ಕೆ ಹೊಂದಿಕೊಂಡು ಮರುಪೂರಕ ಹೊಂಡದ ಗಾತ್ರವನ್ನು ನಾವೇ ನಿರ್ಧರಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next