Advertisement

ಅಂತರ್ಜಲ ಹೆಚ್ಚಿಸಿದ ಮುಂಗಾರು ಮಳೆ 

07:14 AM Nov 03, 2017 | |

ಬೆಂಗಳೂರು: ಸತತ ಮೂರು ವರ್ಷಗಳ ಬರದಿಂದ ಪಾತಾಳಕ್ಕೆ ಕುಸಿದಿದ್ದ ರಾಜ್ಯದ ಅಂತರ್ಜಲ ಮಟ್ಟದಲ್ಲಿ ನಿರಂತರ ಎರಡು ತಿಂಗಳ ಮಳೆಯಿಂದ ಏರಿಕೆ ಕಂಡಿದ್ದು, ಮುಂಗಾರು ಹಂಗಾಮು ಅಂತ್ಯಕ್ಕೆ ಸುಮಾರು 27 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕನಿಷ್ಠ 0.5 ಮೀಟರ್‌ನಿಂದ ಗರಿಷ್ಠ 15.22 ಮೀಟರ್‌ ಹೆಚ್ಚಳ ಆಗಿದೆ. 

Advertisement

ಪೂರ್ವ ಮುಂಗಾರಿಗೆ ಹೋಲಿಸಿದರೆ, ಮುಂಗಾರಿನಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಅದರಲ್ಲೂ ದಕ್ಷಿಣ ಕರ್ನಾಟಕದ ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ ಸೇರಿದಂತೆ ಸುತ್ತಲಿನ ಭಾಗಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಹೆಚ್ಚಿದೆ. ಈ ಪೈಕಿ ರಾಮನಗರ ಮತ್ತು ಮಾಗಡಿ ತಾಲೂಕುಗಳಲ್ಲಿ ಅಂತರ್ಜಲ ಕ್ರಮವಾಗಿ 32 ಮತ್ತು 33 ಮೀಟರ್‌ನಷ್ಟು ಏರಿಕೆಯಾಗಿದೆ. ಅಂತರ್ಜಲ ನಿರ್ದೇಶನಾಲಯವು ರಾಜ್ಯಾದ್ಯಂತ ಅಂತರ್ಜಲ ಪ್ರಮಾಣ ಅಧ್ಯಯನ ನಡೆಸಿದ್ದು, ಅದರಂತೆ 176 ತಾಲ್ಲೂಕುಗಳ ಪೈಕಿ ಸೆಪ್ಟೆಂಬರ್‌ ಅಂತ್ಯಕ್ಕೆ 116 ತಾಲೂಕುಗಳಲ್ಲಿ ಅಂತರ್ಜಲ ಏರಿಕೆಯಾಗಿದೆ.  ಇದರಲ್ಲಿ ಹಳೆಯ ಮೈಸೂರು ಭಾಗಗಳ ಬಹುತೇಕ ಎಲ್ಲ ತಾಲೂಕುಗಳಲ್ಲೂ ಸಕಾರಾತ್ಮಕ ಫ‌ಲಿತಾಂಶ ಕಂಡುಬಂದಿದೆ.

ಮಳೆಯಷ್ಟೇ ಕಾರಣವಲ್ಲ; ಶ್ರೀನಿವಾಸರೆಡ್ಡಿ: ಈ ಬಾರಿ ದಕ್ಷಿಣ ಒಳನಾಡಿನ ಮುಂಗಾರಿನಲ್ಲಿ ವಾಡಿಕೆಗಿಂತ ಶೇ. 27ರಷ್ಟು ಹೆಚ್ಚು ಮಳೆಯಾಗಿದೆ. ಇದರಲ್ಲಿ ಬಹುತೇಕ ಮಳೆ ಆಗಸ್ಟ್‌ 15ರಿಂದ ಸೆಪ್ಟೆಂಬರ್‌ ಅವಧಿಯಲ್ಲೇ ಆಗಿದೆ. ಹಾಗಂತ, ಅಂತರ್ಜಲ ಮಟ್ಟ ಏರಿಕೆಗೆ ಮಳೆಯೊಂದೇ ಕಾರಣವಲ್ಲ, ಬಳಕೆ ಪ್ರಮಾಣವೂ ಕಡಿಮೆ ಇದೆ. ಆರಂಭದಲ್ಲೇ ಮಳೆ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳು ಬಹುತೇಕ ಕಡಿಮೆಯಾಯಿತು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿದೆ. ಆದರೆ, ಎರಡು ತಿಂಗಳಲ್ಲಿ ಬಿದ್ದ ಮಳೆಗೆ ಹೋಲಿಸಿದರೆ, ಅಂತರ್ಜಲ ಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಆದರೆ, ಸತತ ಬರದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಇದೊಂದು ಆಶಾದಾಯಕ ಬೆಳವಣಿಗೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ದ ನಿರ್ದೇಶಕ ಡಾ.ಜಿ.ಎಸ್‌. ಶ್ರೀನಿವಾಸ ರೆಡ್ಡಿ ಹೇಳುತ್ತಾರೆ.

ಹೋಲಿಕೆ ಸರಿ ಅಲ್ಲ; ಶೆಟ್ಟೆಣ್ಣವರ: ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ, ಅಂತರ್ಜಲ ಮಟ್ಟ ಇನ್ನೂ ಕಡಿಮೆಯೇ ಇದೆ. ಆದರೆ, ಈ ಹಿಂದಿನ ವರ್ಷಗಳಲ್ಲಿ ನಿರಂತರ ಬರ ಇರುವುದರಿಂದ ಅಂತರ್ಜಲದ ಅವಲಂಬನೆ ಹೆಚ್ಚಿರುತ್ತದೆ. ಇನ್ನೂ ಸುಮಾರು ದಿನಗಳು ಮಳೆಯೇ ಆಗಿರಲಿಲ್ಲ. ಈಗ ಬರೀ ಎರಡು ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ, ಹಿಂದಿನ ವರ್ಷಗಳಿಗೆ ಇದನ್ನು ಹೋಲಿಕೆ ಮಾಡಲು ಬರುವುದಿಲ್ಲ. ಪ್ರಸ್ತುತ ವರ್ಷಕ್ಕೆ ಹೋಲಿಸಿದರೆ, ಎಲ್ಲ ತಾಲೂಕುಗಳಲ್ಲಿ ಏರಿಕೆ ಕಂಡುಬಂದಿದ್ದು ಸಮಾಧಾನಕರ ಬೆಳವಣಿಗೆ ಎಂದು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಎಸ್‌.ಬಿ. ಶೆಟ್ಟೆಣ್ಣವರ ತಿಳಿಸುತ್ತಾರೆ.

ಬೇಸಿಗೆಗೆ ಹೋಲಿಸಿದರೆ, ಮುಂಗಾರಿನ ಮೊದಲ ಮೂರು ತಿಂಗಳು (ಜೂನ್‌-ಆಗಸ್ಟ್‌) ಶೇ. 25ರಷ್ಟು ಹೆಚ್ಚು ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗಿದೆ. ಅಂದರೆ, ಮುಂಗಾರಿನಲ್ಲೂ ನೀರಿನ ಕೊರತೆ ಇತ್ತು. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಮಳೆಯಿಂದ
ಪರಿಸ್ಥಿತಿ ಸುಧಾರಣೆಯಾಯಿತು. ಇದು ಭೂಮಿಯ ಆಳಕ್ಕಿಳಿದು, ಅಂತರ್ಜಲ ಮರುಪೂರಣಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ ಎಂದೂ ಶೆಟ್ಟೆಣ್ಣವರ ಹೇಳಿದರು.

Advertisement

ಇಳಿಮುಖ: ಈ ಬಾರಿ ಅಂತರ್ಜಲ ಮಟ್ಟ ಏರಿಕೆ ಕಂಡುಬಂದಿದ್ದರೂ, ಕಳೆದ ಹತ್ತು ವರ್ಷಗಳ ಸರಾಸರಿ ತೆಗೆದುಕೊಂಡರೆ ಅಂತರ್ಜಲ ಮಟ್ಟದಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಕೇವಲ 34 ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಅವುಗಳ ವಿವರ ಹೀಗಿದೆ (ಮೀ.ಗಳಲ್ಲಿ). ಈ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (0.28), ಬಳ್ಳಾರಿಯ ಹಗರಿಬೊಮ್ಮನಹಳ್ಳಿ (1.42), ಹೊಸಪೇಟೆ (0.43), ಬಳ್ಳಾರಿಯ ಸಂಡೂರು (1.64), ಸಿರಗುಪ್ಪ (0.41), ಚಾಮರಾಜನಗರದ ಯಳಂದೂರು (0.26), ಚಿಕ್ಕಬಳ್ಳಾಪುರದ ಗೌರಿಬಿದನೂರು (2.54), ಚಿತ್ರದುರ್ಗ (2.11) ಮತ್ತು ಹೊಳಲ್ಕೆರೆ (3.13), ಮಂಗಳೂರಿನ ಸುಳ್ಯ (0.12), ದಾವಣಗೆರೆಯ ಚನ್ನಗಿರಿ (2.53) ಮತ್ತು ಹೊನ್ನಾಳಿ (2.55), ಧಾರವಾಡದ ನವಲಗುಂದ (2.03), ಗದಗ (0.14), ರೋಣ (3.70) ಶಿರಹಟ್ಟಿ (8.17), ಕಲಬುರಗಿಯ ಅಫ‌jಲ್ಪುರ (3.02), ಚಿಂಚೋಳಿ (1.16), ಹಾಸನದ ಹೊಳೆನರಸೀಪುರ (1.78),
ಸಕಲೇಶಪುರ (0.02), ಹಾವೇರಿಯ ರಾಣೇಬೆನ್ನೂರು (8.12), ಕೊಪ್ಪಳದ ಗಂಗಾವತಿ (2.78), ಕುಷ್ಟಗಿ (5.24), ಕೊಪ್ಪಳ (1.92), ಯಲಬುರ್ಗ (3.90), ಮಂಡ್ಯದ ಶ್ರೀರಂಗಪಟ್ಟಣ (0.38), ಮೈಸೂರು (1.32), ರಾಯಚೂರಿನ ಸಿಂಧನೂರು (0.99), ತುಮಕೂರು (1.45), ಉಡುಪಿ (0.27), ಕುಂದಾಪುರ (0.40), ಕಾರವಾರ (0.07), ಕುಮಟಾ (0.04), ಸೂಪ (0.06) .

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next