Advertisement

ಸ್ವರ್ಣವಲ್ಲೀ ಶ್ರೀಗಳಿಂದ ಶಿಷ್ಯರಿಗೆ ‘ಹಸುರು’ ಮಂತ್ರಾಕ್ಷತೆ

03:21 PM Jul 27, 2023 | Team Udayavani |

ಶಿರಸಿ: ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣೆಗೆ ಕಂಕಣ ಕಟ್ಟಿಕೊಂಡ ಪರಿಸರ ಪ್ರಿಯ ಸ್ವಾಮೀಜಿಗಳು ಎಂದೇ ಜನ ಮಾನಸದಲ್ಲಿ ನೆಲೆ ನಿಂತ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರು ಚಾತುರ್ಮಾಸ್ಯದ ಅವಧಿಯಲ್ಲಿ ಗುರುವಿನ ದರ್ಶನಕ್ಕೆ ಮಠಕ್ಕೆ ಬರುವ ಶಿಷ್ಯರಿಗೆ ಪ್ರೀತಿಯಿಂದ ಹಸುರು ಮಂತ್ರಾಕ್ಷತೆ ನೀಡುತ್ತಿದ್ದಾರೆ. ಸದ್ದಿಲ್ಲದೇ ಶಿಷ್ಯರಲ್ಲಿ ಪರಿಸರ ಪ್ರೀತಿಯನ್ನೂ ಬಿತ್ತುವ ಕಾರ್ಯ ಮಾಡುತ್ತಿರುವುದು ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.

Advertisement

ಪ್ರವಚನಗಳಲ್ಲಿ, ಅಣೇಕಟ್ಟು ವಿರೋಧಿ ಹೋರಾಟದಲ್ಲಿ ಮಾತ್ರ ಕಾಣಿಸಿಕೊಳ್ಳದೇ, ಸಮಷ್ಟಿ ಪರಿಸರದ ಉಳಿಸಿಗೆ ಸ್ವತಃ ಗಿಡಗಳನ್ನೂ ಈ ಪವಿತ್ರ ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಗಳು ಶಿಷ್ಯರಿಗೆ ನೀಡುತ್ತಿರುವದು ಹಾಗೂ ವರ್ಷದಿಂದ ವರ್ಷಕ್ಕೆ ಪರಿಸರ ಸಂರಕ್ಷಣೆಯ ಈ ಯಜ್ಞದ ವಿಸ್ತಾರ ನಡೆಸುತ್ತಿರುವದು ಮಾದರಿಯ ಕೈಂಕರ್ಯವಾಗಿದೆ.

ಇದು ವಿಶೇಷ ಇಲ್ಲಿ!
ಚಾತುರ್ಮಾಸ್ಯ ಸಂಕಲ್ಪದ ಬಳಿಕ ಶ್ರೀಮಠಕ್ಕೆ ಶಿಷ್ಯರು ಅವರವರ ಸೀಮಾ, ಭಾಗಿಯ ಆಧಾರದಲ್ಲಿ ಬಂದು ಪಾದಪೂಜೆ, ಕುಂಕುಮಾರ್ಚನೆ ಹಾಗೂ ಇತರ ಸೇವೆ ಸಲ್ಲಿಸುತ್ತಾರೆ. ಇದು ಯಾವತ್ತಿನ ಕ್ರಮ, ಸಂಪ್ರದಾಯ. ಹೀಗೆ ಸೇವೆ ಸಲ್ಲಿಸಿದ ಶಿಷ್ಯರಿಗೆ ಗುರುಗಳು ಪವಿತ್ರ ಆಶೀರ್ವಚನದ ಸಂದೇಶ ಕೂಡ ನೀಡುತ್ತಾರೆ. ಸಂದೇಶ ಸ್ವೀಕರಿಸಿದ ಶಿಷ್ಯರು ಮಂತ್ರಾಕ್ಷತೆ ಪಡೆಯುವಾಗ ಶ್ರೀಗಳು ವೃಕ್ಷ ಮಂತ್ರಾಕ್ಷತೆ ಕೂಡ ನೀಡುತ್ತಾರೆ. ಶಿಷ್ಯರಿಗೆ ಮಂತ್ರಾಕ್ಷತೆಯ ರೂಪದಲ್ಲಿ ನೀಡಲಾದ ಗಿಡವನ್ನು ಬೆಳಸಿ ರಕ್ಷಿಸಲೂ ಶ್ರೀಗಳು ಸೂಚಿಸುತ್ತಾರೆ.

85 ಸಾವಿರಕ್ಕೂ ಹೆಚ್ಚು!
ಸ್ವರ್ಣವಲ್ಲೀ ಪೀಠವೇ ಪರಿಸರ ಸಂರಕ್ಷಣಾ ಪೀಠ. ಹಿಂದಿನ ಯತಿಗಳಾದ ಶ್ರೀಸರ್ವಜ್ಞೇಂದ್ರ ಸರಸ್ವತೀ ಶ್ರೀಗಳೂ ಪರಿಸರ ಕಾಳಜಿ ಹೊಂದಿದ್ದರು. 33 ವರ್ಷಗಳ ಹಿಂದೆ ಪೀಠಾರೋಹರಾದ ಈಗಿನ ಶ್ರೀಗಂಗಾಧರೇಂದ್ರ ಸರಸ್ವತೀ ಶ್ರೀಗಳಿಗೆ ಹಸಿರು ಎಂದರೆ ತುಂಬಾ ಕಾಳಜಿ.
ವೃಕ್ಷಾರೋಪಣ, ಸಸ್ಯ ಲೋಕ ಸೃಷ್ಟಿಯ ಜೊತೆಗೆ 2006ರಿಂದ ಶ್ರೀಗಳು ವೃಕ್ಷ ಮಂತ್ರಾಕ್ಷತೆಯನ್ನೂ ನೀಡುತ್ತಿದ್ದಾರೆ. ಪ್ರತೀ ವರ್ಷ ಚಾತುರ್ಮಾಸ್ಯದಲ್ಲಿ ಶಿಷ್ಯರಿಗೆ ಬಿಡದೇ ವನಸ್ಪತಿ ವೃಕ್ಷ ಕೊಟ್ಟು ಹರಸುತ್ತಿದ್ದಾರೆ. ಈ ಬಾರಿ ಮಠದ ಈ ಕೈಂಕರ್ಯಕ್ಕೆ ಅರಣ್ಯ ಇಲಾಖೆ ಅಪರೂಪದ ವನಸ್ಪತಿ ಗಿಡಗಳನ್ನೂ ನೀಡಿದೆ. ಸ್ವರ್ಣವಲ್ಲೀ ಶ್ರೀಗಳ ಈ ಸಮಾಜಮುಖಿ ಆಶಯಕ್ಕೆ ಇಲಾಖೆ ಕೂಡ ಹೆಗಲು ನೀಡಿದೆ.

ಸ್ವರ್ಣವಲ್ಲೀ ಶ್ರೀಗಳು ಚಾತುರ್ಮಾಸ್ಯ ಅವಧಿಯಲ್ಲಿ ಹಾಗೂ ಪೀಠಾರೋಹಣದ 25, 30 ವರ್ಷದ ಕಾಲಘಟ್ಟದಲ್ಲೂ ವೃಕ್ಷಾರೋಪಣವನ್ನು ಅಭಿಯಾನದ ಮಾದರಿಯಲ್ಲಿ ನಡೆಸಲಾಗಿತ್ತು. ಪ್ರತೀ ವರ್ಷದ ಚಾತುರ್ಮಾಸ್ಯದಲ್ಲೂ ಕನಿಷ್ಠ 5 ಸಾವಿರ ವನಸ್ಪತಿ ಹಾಗೂ ಇತರ ಜಾತುವಾರು ಗಿಡಗಳನ್ನು ನೀಡಲಾಗುತ್ತಿದೆ. ಬಸವನಪಾದ, ಅಶೋಕ, ಹಲಸು, ಮಾವು, ರಕ್ತ ಚಂದನ ಜೊತೆ ಪೇರಲ, ಗೇರು, ಹಲಸು ಸೇರಿದಂತೆ ಒಳ್ಳೊಳ್ಳೆ ಜಾತಿಯ ಸಸಿಗಳನ್ನು ನೀಡಲಾಗಿದೆ. ನಮ್ಮ ಕೊರತೆ ನೀಗಿಸಲು ಇಲಾಖೆ ಸಹಕಾರ ನೀಡಿದೆ ಎನ್ನುತ್ತಾರೆ ಸಸ್ಯ ಲೋಕದ ಉಸ್ತುವಾರಿ ಮಹಾಬಲೇಶ್ವರ ಗುಮ್ಮಾನಿ.

Advertisement

ಶಿಷ್ಯರಲ್ಲಿ ಪರಿಸರ ಪ್ರೀತಿಯನ್ನು ಬಿತ್ತಿ, ಪ್ರಕೃತಿಯ ಸಂರಕ್ಷಣೆಗೆ ಆಯ್ದುಕೊಂಡ ಮಾರ್ಗ. ಗಿಡಗಳನ್ನು ವಿತರಿಸುವಾಗ ನಮಗೆ ಖುಷಿ ಇದೆ. ಶಿಷ್ಯರೂ ಗಿಡ ನೆಟ್ಟು ಬೆಳೆಸುತ್ತಿರುವದು ಗಮನಕ್ಕಿದೆ– ಸ್ವರ್ಣವಲ್ಲೀ ಶ್ರೀ

ಸ್ವರ್ಣವಲ್ಲೀ ಪೀಠದಿಂದ ಶಿಷ್ಯರಲ್ಲಿ ಇಂತಹ ವೃಕ್ಷ ಮಂತ್ರಾಕ್ಷತೆ ಅಭಿಯಾನ ನಡೆಸಿ ವೃಕ್ಷ ಪ್ರೀತಿ ಬೆಳಸುವದು ಇಡೀ ರಾಜ್ಯಕ್ಕೆ ಮಾದರಿ. ಪರಿಸರ ಸಂರಕ್ಷಣೆಗೆ ಇಂಥ ಸಹಭಾಗಿತ್ವದ ಕೊಡುಗೆಗಳು ಕೂಡ ದೊಡ್ಡವು– ಡಾ. ಅಜ್ಜಯ್ಯ, ಡಿಎಫ್‌ಒ , ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next