Advertisement

ಹಸಿ ಕಸ ವಿಲೇವಾರಿ: ಬೆಂಗಳೂರು ಮಾದರಿ ಅನುಷ್ಠಾನವಾಗಲಿ

01:02 PM Oct 28, 2018 | |

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಇದಕ್ಕಾಗಿ ಸಾಕಷ್ಟು ಹೊಸ ಹೊಸ ಪ್ರಯೋಗಗಳು ನಡೆದರೂ ಈವರೆಗೆ ಸಂಪೂರ್ಣ ಯಶಸ್ವಿಯಾಗಿಲ್ಲ. ಹಸಿ ಕಸ ವಿಲೇವಾರಿ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಬೆಂಗಳೂರಿನ ಸಂಜಯ ನಗರದಲ್ಲಿ ಅನುಷ್ಠಾನಗೊಂಡಿರುವ ಕ್ರಮವನ್ನು ಅನುಸರಿಸಿದರೆ ಕೊಂಚ ಮಟ್ಟಿಗೆ ನಮ್ಮ ನಗರದ ಸಮಸ್ಯೆಯನ್ನು ಪರಿಹರಿಸಬಹುದು. ಭವಿಷ್ಯದ ದೃಷ್ಟಿಯಿಂದಲೂ ಇದು ಅನುಕೂಲಕರವಾಗಲಿದೆ.

Advertisement

ಸ್ಮಾರ್ಟ್‌ ನಗರ ಮಂಗಳೂರು ಮಾತ್ರವಲ್ಲ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲೂ ತ್ಯಾಜ್ಯ ನಿರ್ವಹಣೆ ಪ್ರಸ್ತುತ ಗಂಭೀರ ಸವಾಲುಗಳಲ್ಲೊಂದು. ಸರಕಾರ ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು, ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಾ ಬಂದಿವೆ. ಹೊಸ ಆವಿಷ್ಕಾರಗಳು, ಮಾದರಿಗಳು ಬರುತ್ತಿವೆ. ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಇದನ್ನು ವಿವಿಧ ನೆಲೆಗಳಲ್ಲಿ ಉಪಯೋಗಿಸುವ ಬಗ್ಗೆ ಈಗಾಗಲೇ ಹಲವಾರು ಪ್ರಯತ್ನಗಳೂ ನಡೆದಿವೆ. ಮನೆ, ಹೊಟೇಲ್‌, ವಸತಿ ನಿಲಯಗಳ ತ್ಯಾಜ್ಯಗಳ ವಿಲೇವಾರಿ ಹಾಗೂ ವಿಂಗಡನೆಯಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಬೆಂಗಳೂರಿನ ಬಡಾವಣೆಯೊಂದರ ನಿವಾಸಿಗಳು ಮಾದರಿ ವಿಧಾನವೊಂದನ್ನು ಕಂಡುಕೊಂಡಿದ್ದಾರೆ .

ಹಸಿ ಕಸ ವಿಲೇವಾರಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಂದ ಬೇಸತ್ತ ಬೆಂಗಳೂರಿನ ಸಂಜಯ ನಗರದ ರಾಜಮಹಲ್‌ ವಿಲಾಸ ಬಡಾವಣೆಯ (ಎರಡನೆ ಹಂತ) ನಿವಾಸಿಗಳು ಇದಕ್ಕೆ ತಮ್ಮದೇ ಮಟ್ಟದಲ್ಲಿ ಪರಿಹಾರವೊಂದನ್ನು ಕಂಡುಕೊಳ್ಳಲು ನಿರ್ಧರಿಸಿದರು. ಕ್ಷೇಮಾಭಿವೃದ್ಧಿ ಸಂಘಗಳ ಪ್ರಮುಖರು ಒಂದೆಡೆ ಸೇರಿ ತಮ್ಮ ಬೀದಿಯ ಹಸಿ ಕಸವನ್ನು ತಮ್ಮ ಬೀದಿಯಲ್ಲೇ ವಿಲೇವಾರಿ ಮಾಡಲು ನಿರ್ಧರಿಸಿದರು. ಹಸಿಕಸವನ್ನು ಬಳಸಿ ಬೀದಿಯಲ್ಲೇ ಕಾಂಪೋಸ್ಟ್‌ ತಯಾರಿಸಲು ಸಜ್ಜಾಗಿದ್ದಾರೆ. ಕಾಂಪೋಸ್ಟರ್‌ ಸಾಧನ ಬಳಸಿ ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸಲು ಕಾರ್ಯೋನ್ಮುಖರಾಗಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮೇಯರ್‌, ಅಧಿಕಾರಿಗಳ ಉಪಸ್ಥಿತಿಯಲ್ಲಿ ಬಡಾವಣೆ ನಿವಾಸಿಗಳಿಗೆ ಪ್ರಾತ್ಯಕ್ಷಿಕೆ ಕೂಡ ಆಯೋಜಿಸಲಾಗಿತ್ತು.

ಕಾಂಪೋಸ್ಟರ್‌ ಬಳಕೆ
ಕಾಂಪೋಸ್ಟರ್‌ಗಳನ್ನು ಬೀದಿಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಇಡಲಾಗುತ್ತಿದೆ. ನಿತ್ಯವೂ ಮನೆಗಳಿಂದ ಸಂಗ್ರಹಿಸುವ ಹಸಿ ಕಸವನ್ನು ಪೌರಕಾರ್ಮಿಕರು ಈ ಕಾಂಪೋಸ್ಟರ್‌ಗಳಿಗೆ ತುಂಬಿಸುತ್ತಾರೆ. ದುರ್ವಾಸನೆ ಬಾರದಂತೆ ಅದಕ್ಕೆ ಕೋಕೋಪಿಟ್‌ ಮಿಶ್ರ ಮಾಡಿ ಮುಚ್ಚಳಕ್ಕೆ ಬೀಗ ಹಾಕಲಾಗುತ್ತದೆ. ಸುಮಾರು 40 ದಿನಗಳಲ್ಲಿ ಸಾವಯವ ಗೊಬ್ಬರ ತಯಾರಾಗುತ್ತದೆ. ಒಂದು ಕಾಂಪೋಸ್ಟರ್‌ ತುಂಬಿದ ಬಳಿಕ ಇನ್ನೊಂದು ಕಂಪೋಸ್ಟರ್‌ನ್ನು ಬಳಸಲಾಗುತ್ತದೆ. ಪ್ರಸ್ತುತ ಅಲ್ಲಿನ ಕ್ಷೇಮಾಭಿವೃದ್ಧಿ ಸಂಘ ಸುಮಾರು 20 ಕಾಂಪೋಸ್ಟರ್‌ ಗಳನ್ನು ಬಳಸಲು ನಿರ್ಧರಿಸಿದೆ. ಒಂದು ಕಾಂಪೋಸ್ಟರ್‌ಗೆ ಸುಮಾರು 70,000 ರೂ. ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಮಾದರಿ ಯೋಜನೆಯ ಬಗ್ಗೆ ಬಿಬಿಎಂಪಿ ಆಸಕ್ತಿ ತಾಳಿದೆ. ಕಾಂಪೋಸ್ಟರ್‌ ಗಳ ಅಳವಡಿಕೆಗೆ ಬಿಬಿಎಂಪಿ ವತಿಯಿಂದ ನೆರವು ನೀಡುವ ಭರವಸೆಯನ್ನು ನೀಡಲಾಗಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಬೆಂಗಳೂರಿನ ಇನ್ನಷ್ಟು ಬಡಾವಣೆಗಳಲ್ಲಿ ಈ ಮಾದರಿಯ ಅನುಷ್ಠಾನಕ್ಕೆ ಪ್ರೋತ್ಸಾಹಿಸಲು ಬಿಬಿಎಂಪಿ ಉತ್ಸುಕತೆ ತೋರಿದೆ.

Advertisement

ಆದಾಯಕ್ಕೂ ಮೂಲ
ಕಾಂಪೋಸ್ಟರ್‌ಗಳ ಮೂಲಕ ತಯಾರಾದ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿನ ಆದಾಯವನ್ನು ಕೂಡ ಇದು ತರಲಿದೆ. ಉತ್ಪತ್ತಿಯಾಗುವ ಸಾವಯವ ಗೊಬ್ಬರವನ್ನು ಕಾಂಪೋಸ್ಟ್‌ ಸಂತೆಯ ಮೂಲಕ ವಿಲೇವಾರಿ ಮಾಡಬಹುದಾಗಿದೆ. ಬೆಂಗಳೂರಿನಲ್ಲಿ ಇಂತದ್ದೇ ಕಾಂಪೋಸ್ಟ್‌ ಸಂತೆಯ ಪ್ರಯೋಗ ಮಾಡಿ ಯಶಸ್ಸು ಕಂಡುಕೊಳ್ಳಲಾಗಿದೆ. ಇದಲ್ಲದೆ ಸ್ಥಳೀಯರು ತಮ್ಮ ಮನೆಯ ಹೂವಿನ ಗಿಡಗಳು, ಕೈತೋಟಗಳಿಗೆ ಬಳಸಬಹುದು. ಪಾಲಿಕೆಯ ಉದ್ಯಾನಗಳಲ್ಲಿರುವ ಗಿಡಗಳಿಗೂ ಇದನ್ನು ಉಪಯೋಗಿಸಬಹುದು.

ಮಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಯಶಸ್ವಿಯಾಗಿಲ್ಲ
ತ್ಯಾಜ್ಯ ವಿಲೇವಾರಿ ಕೆಲಸ ಸಮಯ ಪರಿಮಿತಿಯೊಳಗೆ ನಡೆಯಬೇಕು. ಆದರೆ ಕಸ ಸಂಗ್ರಹದಲ್ಲೂ ಸಮಸ್ಯೆಗಳಿರುತ್ತವೆ. ಹಸಿಕಸ ಹಾಗೂ ಒಣ ಕಸವನ್ನು ವಿಂಗಡಿಸಿ ಕೊಡುವ ವ್ಯವಸ್ಥೆಯೂ ಇದೆ. ಆದರೆ ಇದು ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ.. ಕೆಲವು ಬಾರಿ ದಿಢೀರ್‌ ಕಸ ಸಂಗ್ರಹ ಪಿಕ್‌ಅಪ್‌ ವ್ಯಾನ್‌ ಗಳು ಬರುವುದೇ ಇಲ್ಲ. ಕಾರಣ ಕೇಳಿದರೆ ವಾಹನ ಹಾಳಾಗಿದೆ, ಕೆಲಸಗಾರರು ಮುಷ್ಕರ ಹೂಡಿದ್ದಾರೆ. ಕಾರ್ಮಿಕರಿಗೆ ಸಂಬಳ ಪಾವತಿಯಾಗಿಲ್ಲ ಎಂಬ ಉತ್ತರಗಳಿರುತ್ತವೆ. ಮಂಗಳೂರು ನಗರ ಬೆಳೆಯುತ್ತಿದೆ. ಜತೆಗೆ ತ್ಯಾಜ್ಯ ನಿರ್ವಹಣೆ ಕೂಡ ಒಂದ ಸವಾಲಾಗಿ ಪರಿಣಾಮಿಸುತ್ತಿದೆ.

ಬೆಂಗಳೂರು ನಗರ ಈಗಾಗಲೇ ಈ ಸಮಸ್ಯೆಗೆ ಸಿಲುಕಿ ನಲುಗುತ್ತಿದೆ. ಮಂಗಳೂರು ನಗರದಲ್ಲಿ ಪ್ರಸ್ತುತ ಹಾಗೂ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತ್ಯಾಜ್ಯ ನಿರ್ವಹಣೆಗೆ ವಿಭಿನ್ನ ಯೋಜನೆಗಳನ್ನು ರೂಪಿಸುವುದು ಅತೀ ಅವಶ್ಯವಾಗಿದೆ. ಪ್ರತಿ ವಾರ್ಡ್‌ನ ಕಸವನ್ನು ವಾರ್ಡ್‌ ಮಟ್ಟದಲ್ಲೇ ವಿಲೇವಾರಿ ಆಗುವ ನಿಟ್ಟಿನಲ್ಲಿ ವಾರ್ಡ್‌ನ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಯೋಜನೆಗಳು ರೂಪುಗೊಂಡರೆ ಲ್ಯಾಂಡ್‌ಪಿಲ್‌ (ಭೂ ಭರ್ತಿ) ಕೇಂದ್ರಗಳನ್ನು ಮಿತಿ ಮೀರಿ ಅವಲಂಬಿಸುವುದು ಮತ್ತು ಹೊಸದಾಗಿ ಹುಡುಕುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. 

ಮಂಗಳೂರಿನಲ್ಲೂ ಜಾರಿಯಾಗಲಿ
ಮಂಗಳೂರು ನಗರದಲ್ಲಿ ದಿನಂಪ್ರತಿ ಸರಾಸರಿ 325 ರಿಂದ 330 ಟನ್‌ ಕಸ ಸಂಗ್ರಹವಾಗುತ್ತದೆ.ಇದರಲ್ಲಿ ಬಹುಪಾಲು ಹಸಿ ಕಸವಾಗಿರುತ್ತದೆ ಹೊಟೇಲ್‌, ಮನೆ ಸಹಿತ ಒಟ್ಟಾರೆ 97,294 ಕಟ್ಟಡಗಳಿವೆ. 1,180 ಕಿ.ಮೀ. ರಸ್ತೆಗಳಿವೆ. 823 ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ಮನೆಮನೆಗಳಿಂದ ಸಂಗ್ರಹಿಸಿದ ಕಸವನ್ನು ಪಚ್ಚನಾಡಿಗೆ ಸಾಗಿಸಲಾಗುತ್ತದೆ. ವಾರದಲ್ಲಿ ಒಂದು ದಿನ ಒಣಕಸವನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಉಳಿದ ದಿನಗಳಲ್ಲಿ ಹಸಿಕಸವನ್ನು ಕೊಂಡೊಯ್ಯಲಾಗುತ್ತಿದೆ. ಪಚ್ಚನಾಡಿಯಲ್ಲಿ ಹಸಿ ಕಸದಿಂದ ಕಾಂಪೋಸ್ಟ್‌ ತಯಾರಿಸುವ ಘಟಕವಿದೆ. ಉರ್ವದಲ್ಲಿ ಹಸಿಕಸದಿಂದ ಬಯೋಗ್ಯಾಸ್‌ ತಯಾರಿಸುವ ಘಟಕವಿದೆ. ಆದರೆ ಇವುಗಳಿಂದ ಹೇಳಿಕೊಳ್ಳುವ ಯಶಸ್ಸು ಸಾಧ್ಯವಾಗಿಲ್ಲ. 

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next