Advertisement

ಭರ್ಜರಿ ಗೆಲುವು

03:14 PM Sep 22, 2017 | Team Udayavani |

ಹಿಂದೆ, “ಮೆಗಾ ಬ್ಲಾಕ್‌ಬಸ್ಟರ್‌’ ಎಂಬ ಪೋಸ್ಟರ್‌. ಅದರ ಮುಂದೆ ಧ್ರುವ ಸರ್ಜಾ. ಯಾರಿಗಾದರೂ ಅದು ಖುಷಿಯ ಕ್ಷಣವೇ. ಚಿತ್ರರಂಗದ ಸದ್ಯದ ಮಟ್ಟಿಗೆ ಹಾಕಿದ ಬಂಡವಾಳ ವಾಪಾಸ್‌ ಬಂದರೆ ಸಾಕು ಎಂಬಂತಿರುವಾಗ ಧ್ರುವ ಸರ್ಜಾ ನಟಿಸಿರುವ ಮೂರನೇ ಸಿನಿಮಾ “ಭರ್ಜರಿ’ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಅದು ಯಾವ ಮಟ್ಟಿಗೆಂದರೆ ಬಿಡುಗಡೆಯಾದ ಮೂರೇ ದಿನಕ್ಕೇ “ಮೆಗಾ ಬ್ಲಾಕ್‌ ಬ್ಲಿಸ್ಟರ್‌’ ಎಂಬ ಪೋಸ್ಟರ್‌ ಬೀಳುವ ಮಟ್ಟಕ್ಕೆ. ಅದೇ ಕಾರಣಕ್ಕೆ ಇಡೀ ಚಿತ್ರತಂಡ ಖುಷಿಯಾಗಿದೆ.

Advertisement

“ಚಿತ್ರದ ಕಲೆಕ್ಷನ್‌ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಜನ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದಲ್ಲಿ ಲವ್‌, ಕಾಮಿಡಿ, ಆ್ಯಕ್ಷನ್‌, ಸೆಂಟಿಮೆಂಟ್‌ ಎಲ್ಲವೂ ಇದೆ. ಮುಂದೇನು ಮಾಡಬೇಕೆಂಬ ಭಯ ಕಾಡುತ್ತಿದೆ. ನಾನು ಏನೂ ನಿರೀಕ್ಷಿಸದೇ ಬಂದೆ. ಜನನೇ ಒಂದು ದಾರಿ ತೋರಿಸಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದೇನೆ. ಆರಂಭದಲ್ಲಿ ಈ ಸಿನಿಮಾ ಬಗ್ಗೆನೂ ಭಯವಿತ್ತು. ಚಿತ್ರ ಆರಂಭವಾಗಿ ಎರಡು ವರ್ಷ ಆಗಿದೆ, ಜನ ಎಲ್ಲಿ ಮರೆತುಬಿಡುತ್ತಾರಾ ಎಂದು. ಹಾಗಾಗಿಯೇ ನಿರ್ಮಾಪಕರಿಗೆ ಆಗಾಗ ಫೋನ್‌ ಮಾಡಿ, ಚಿತ್ರವನ್ನು ಚೆನ್ನಾಗಿ ಪಬ್ಲಿಸಿಟಿ ಮಾಡಿ ಎನ್ನುತ್ತಿದ್ದೆ’ ಎಂದು ಚಿತ್ರ ಗೆದ್ದ ಖುಷಿ ವ್ಯಕ್ತಪಡಿಸಿದರು. ನಾಯಕಿಯರಾದ ರಚಿತಾ ರಾಮ್‌ ಹಾಗೂ ವೈಶಾಲಿ ದೀಪಕ್‌ ಕೂಡಾ ಚಿತ್ರದ ಗೆಲುವನ್ನು ಸಂಭ್ರಮಿಸಿದರು.

ನಿರ್ದೇಶಕ ಚೇತನ್‌ ಕೂಡಾ “ಭರ್ಜರಿ’ ಯಶಸ್ಸಿನಿಂದ ಖುಷಿಯಾಗಿದ್ದರು. “ಸಿನಿಮಾದ ಮೇಲೆ ನಂಬಿಕೆ ಇತ್ತು. ಆದರೆ, ಈ ತರಹದ ಓಪನಿಂಗ್‌ ನಿರೀಕ್ಷಿಸಿರಲಿಲ್ಲ. ನೂರು ದಿನ ಮಾಡುವ ಕಲೆಕ್ಷನ್‌ ಅನ್ನು ನಮ್ಮ ಚಿತ್ರ ಮೂರು ದಿನದಲ್ಲಿ ಮಾಡಿದೆ’ ಎಂದು ಖುಷಿಯಾದರು. “ಭರ್ಜರಿ’ ಚಿತ್ರ ಮೂರು ದಿನಕ್ಕೆ 16 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಎಲ್ಲಾ ಕಡೆಗಳಲ್ಲೂ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿದ್ದು, ವಾರಾಂತ್ಯದಲ್ಲಿ ಚಿತ್ರ 25 ಕೋಟಿ ರೂಪಾಯಿ ಕಲೆಕ್ಟ್ ಮಾಡಲಿದೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ.

ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಪ್ರದರ್ಶನವಾಗದ ಊರ್ವಶಿ, ರೆಕ್ಸ್‌ಗಳಲ್ಲೂ “ಭರ್ಜರಿ’ ಪ್ರದರ್ಶನ ಕಂಡಿದೆ. ಜೊತೆಗೆ ಮುಂಬೈನಲ್ಲೂ ಚಿತ್ರ ಬಿಡುಗಡೆಯಾಗಿದೆ. ನಿರ್ಮಾಪಕ ಶ್ರೀನಿವಾಸ್‌ ಎರಡು ತಿಂಗಳು ಬಿಟ್ಟು, “ಭರ್ಜರಿ’ ಚಿತ್ರವನ್ನು ತೆಲುಗಿನಲ್ಲೂ ಬಿಡುಗಡೆ ಮಾಡಲಿದ್ದು, ಈಗಾಗಲೇ ಡಬ್ಬಿಂಗ್‌ ಕಾರ್ಯ ಮುಕ್ತಾಯವಾಗಿದೆಯಂತೆ. ತಮಿಳಿನಿಂದ ರೀಮೇಕ್‌ ರೈಟ್ಸ್‌ಗೆ ಬೇಡಿಕೆ ಬರುತ್ತಿದೆಯಂತೆ. ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್‌, ವಿತರಕರಾದ ಭಾಷಾ, ಸುಪ್ರಿತ್‌ ಕೂಡಾ ಚಿತ್ರ ಗೆದ್ದ ಬಗ್ಗೆ ಖುಷಿ ಹಂಚಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next