Advertisement

ಪಕ್ಷಗಳಿಗೆ ಪ್ರತಿಷ್ಠೆಯಾದ ಗ್ರಾಪಂ ಚುನಾವಣೆ

06:54 PM Dec 21, 2020 | Suhan S |

ಸೊರಬ: ಓಯ್‌… ಭಾವ ಅರಮದೀಯಾ, ಮಾವ ಚೆನ್ನಾಗಿದ್ದೀರಾ, ದೊಡ್ಡಪ್ಪ-ಚಿಕ್ಕಪ್ಪ ಹೇಗಿದ್ದೀರಿ, ಎಲ್ಲರಿಗೂ ಹೇಳಿ ಈ ಸಲ ಓಟ್‌ ನನಗೆ ಕೊಡಿ. ನಾನು ನಿಮ್ಮ ಮನೆಯ ಮಗ. ಒಂದು ಸಲ ಚಾನ್ಸ್‌ ಕೊಡಿ, ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಇದು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಅಭ್ಯರ್ಥಿಗಳು ನಗುನಗುತ್ತಲೇ ಮತಯಾಚನೆ ನಡೆಸುತ್ತಿರುವ ದೃಶ್ಯ ಎಲ್ಲೆಡೆಯೂ ಕಂಡು ಬರುತ್ತಿದೆ.

Advertisement

ತಾಲೂಕಿನ 41 ಗ್ರಾಪಂಗಳ ಪೈಕಿ 27 ಗ್ರಾಪಂಗಳ 304 ಸ್ಥಾನಗಳಿಗೆ ಡಿ. 27ರಂದು ಚುನಾವಣೆ ನಡೆಯಲಿದ್ದು, ಈವರೆಗೆ 964 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಪುರಸಭೆಯಾಗಿ ಸೊರಬ ಮೇಲ್ದರ್ಜೆಗೆ ಏರಿದ್ದು, ಸುತ್ತಲಿನ ಕೊಡಕಣಿ, ಹಳೇಸೊರಬ,ಮುಟುಗುಪ್ಪೆ, ಹೆಚ್ಚೆ, ತವನಂದಿ ಸೇರಿದಂತೆ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿದ ಆನವಟ್ಟಿಸುತ್ತಲಿನಆಗಸನಹಳ್ಳಿ, ಕುಬಟೂರು, ಆನವಟ್ಟಿ,ತಲ್ಲೂರು, ಎಣ್ಣೆಕೊಪ್ಪ, ಸಮನವಳ್ಳಿ, ಕಾತುವಳ್ಳಿ, ಗೆಂಡ್ಲಾ, ತತ್ತೂರು ಪಂಚಾಯತ್‌ಗಳಿಗೆ ಚುನಾವಣೆ ನಡೆಯುವುದಿಲ್ಲ.

ಪಂಚಾಯತ್‌ ಚುನಾವಣೆಗೆ ಚಿಹ್ನೆ ಇಲ್ಲದಿದ್ದರೂ, ರಾಜಕೀಯ ಪಕ್ಷಗಳಿಗೆ ಜಿದ್ದಾಜಿದ್ದಿನ ಕಣವಾಗಿಪರಿಣಮಿಸಿದ್ದು, ವಿವಿಧ ರಾಜಕೀಯ ಪಕ್ಷಗಳುಚುನಾವಣೆ ಎದುರಿಸಲು ಸಜ್ಜಾಗಿವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಇನ್ನು ಸಂಸದ ಮತ್ತು ಶಾಸಕ ಬಿಜೆಪಿಯವರೇ ಆಗಿರುವುದುಸಹಜವಾಗಿಯೇ ಈ ಬಾರಿಯ ಚುನಾವಣೆ ರಂಗೇರಿದೆ. ಇನ್ನು ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್‌ ಸೇರಿ ಇತರೆ ಪಕ್ಷಗಳು ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಬೇಕು ಎಂಬ ದೃಢ ಸಂಕಲ್ಪ ಮಾಡಿವೆ.

ಮಧು ಜೊತೆ ಕೈ ಜೋಡಿಸಿದ ಕಾಂಗ್ರೆಸ್‌!:

ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಮಧುಪರವಾಗಿ ಚುನಾವಣೆ ಪ್ರಚಾರ ನಡೆಸಿದ್ದರು. ಈ ಬಾರಿಯ ಗ್ರಾಪಂ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ ಕೈಗೊಂಡಿದ್ದು, ಪಕ್ಷದ ವರಿಷ್ಠರ ಹಾಗೂ ಜಿಲ್ಲಾ ಸಮಿತಿಯ ಸೂಚನೆಯಂತೆ ಮಧು ಬಂಗಾರಪ್ಪ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲಾಗುವುದು ಎಂದು ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರು ಹಾಗೂ ಚುನಾವಣಾ ಉಸ್ತುವಾರಿ ಗೋಪಾಲಕೃಷ್ಣ ಬೇಳೂರು ಮಾಹಿತಿ ನೀಡಿದ್ದಾರೆ.

Advertisement

ಮಧು ಬಂಗಾರಪ್ಪ ನಿಲುವು ನಿಗೂಢ!: ಜೆಡಿಎಸ್‌ ಕಾರ್ಯಾಧ್ಯಕ್ಷರಾಗಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಈಗಾಗಲೇ ತಾಲೂಕಿನಲ್ಲಿ ಒಂದು ಸುತ್ತಿನ ಮುಖಂಡರ ಮತ್ತು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಈವೇಳೆ ಎಲ್ಲಿಯೂ ಪಕ್ಷದ ಬ್ಯಾನರ್‌ ಅಡಿಯಲ್ಲಿ ಕಾರ್ಯಕ್ರಮ ಕೈಗೊಂಡಿಲ್ಲ. ಇದರಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಮಧು ಬಂಗಾರಪ್ಪ ಅಭಿಮಾನಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುತ್ತಾರೆ ಮುಖಂಡರು. ಆದರೆ, ಈವರೆಗೂ ಕಾಂಗ್ರೆಸ್‌ ಹಾಗೂ ಮಧು ಬಂಗಾರಪ್ಪ ಅಭಿಮಾನಿಗಳು ಒಂದೇ ವೇದಿಕೆಯಲ್ಲಿ ಗೋಚರಿಸಿಲ್ಲ.ಇದು ಸಹಜವಾಗಿಯೇ ಮಧು ಬಂಗಾರಪ್ಪನವರ  ನಿಲುವಿನ ಕುರಿತು ಚರ್ಚೆಯಾಗುತ್ತಿದೆ. ಒಟ್ಟಾರೆ ಈ ಬಾರಿ ಗ್ರಾಪಂ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌-ಮಧು ಬಂಗಾರಪ್ಪ ಬೆಂಬಲಿಗರಿಗೆ ಪ್ರತಿಷ್ಟೆಯ ಕಣವಾಗಿದ್ದು, ಮತದಾರಯಾರಿಗೆ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಬಿಜೆಪಿಯಲ್ಲಿ ಗೊಂದಲವಿಲ್ಲ ! :

ಬಿಜೆಪಿ ಪಾಳಯದಲ್ಲಿ ಸಂಸದರ ಹಾಗೂ ಶಾಸಕರ ಬಲವಿದ್ದರೂ, ಕಳೆದ ಕೆಲ ತಿಂಗಳಿಂದ ಸ್ಥಳೀಯ ಶಾಸಕ ಕುಮಾರ್‌ ಬಂಗಾರಪ್ಪ ಬೆಂಬಲಿಗರು ಹಾಗೂ ಮೂಲ ಬಿಜೆಪಿ ಕಾರ್ಯಕರ್ತರ ನಡುವೆ ಮುಸುಕಿನ ಗುದ್ದಾಟ ಬಹಿರಂಗವಾಗಿಯೇ ನ್ಪೋಟಗೊಂಡಿತ್ತು. ಇದು ಗ್ರಾಪಂ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆಂತರಿಕ ಮಾಹಿತಿಯನ್ನಾಧರಿಸಿದ ಜಿಲ್ಲಾ ಬಿಜೆಪಿ ಚುನಾವಣೆಗಾಗಿ 15 ಜನ ಉಸ್ತುವಾರಿಗಳನ್ನು ನೇಮಿಸಿ, ಶಾಸಕರ ಬೆಂಬಲಿಗರು ಮತ್ತು ಪಕ್ಷದಲ್ಲಿ ಕಲಹವನ್ನು ಶಮನಗೊಳಿಸಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದಾರೆ.

ಕ್ಷೇತ್ರದಲ್ಲಿ ವಿರೋಧ ಪಕ್ಷಗಳು ನಿಷ್ಕ್ರಿಯವಾಗಿವೆ. ತಾಲೂಕಿನ ಅಭಿವೃದ್ಧಿ ಕಾಮಗಾರಿಗಳು ಸಾಕಷ್ಟು ವೇಗವಾಗಿ ನಡೆಯುತ್ತಿವೆ.. ಸೋತವರು ಇದುರೆಗೂತಾಲೂಕಿನ ಅಭಿವೃದ್ಧಿ ಬಗ್ಗೆಚಿಂತಿಸಿಲ್ಲ, ವಿರೋಧ ಪಕ್ಷಗಳು ಅಸ್ತಿತ್ವ ಕಳೆದುಕೊಂಡಿರುವುದರಿಂದಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ. – ಎಸ್‌. ಕುಮಾರ್‌ ಬಂಗಾರಪ್ಪ, ಶಾಸಕರು

ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆಯಲಾಗುವುದು. ಈ ಬಾರಿಯ ಚುನಾವಣೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಕಾರ್ಯಕರ್ತರನ್ನು ಗ್ರಾಮ ಮಟ್ಟದಲ್ಲಿ ಗೆಲ್ಲಿಸುವ ಮೂಲಕ ನನ್ನ ಗೆಲುವನ್ನು ಕಾಣುತ್ತೇನೆ. ಕಾರ್ಯಕರ್ತರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲಿದ್ದೇನೆ. – ಎಸ್‌. ಮಧು ಬಂಗಾರಪ್ಪ, ಮಾಜಿ ಶಾಸಕ

 

-ದತ್ತಾ ಸೊರಬ

Advertisement

Udayavani is now on Telegram. Click here to join our channel and stay updated with the latest news.

Next