Advertisement

Session: ಗ್ರಾ.ಪಂ. ಸದಸ್ಯರಿಗೆ “ಉಚಿತ ಬಸ್‌ ಪಾಸ್‌” ಪ್ರಸ್ತಾವ

10:52 PM Feb 14, 2024 | Team Udayavani |

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್‌ ಸದಸ್ಯರುಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮ ಪಂಚಾಯತ್‌ಗಳ ಸುಧಾರಣೆಗೆ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಸದಸ್ಯರ ಗೌರವಧನ ಹೆಚ್ಚಿಸುವುದರ ಬಗ್ಗೆ ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಪಿಡಿಒ ಸೇರಿದಂತೆ ಅಧಿಕಾರಿಗಳ ಹಸ್ತಕ್ಷೇಪ ತಡೆಯಲು ಕಾರ್ಯಸೂಚಿ ಒಳಗೊಂಡ ಕೈಪಿಡಿಯನ್ನು ತಯಾರು ಮಾಡಲಾಗಿದ್ದು ಪಂಚಾಯತ್‌ಗಳ ಕೈಸೇರಲಿದೆ ಎಂದರು.

ಸೋಲಾರ್‌ ಅಳವಡಿಕೆಗೆ ಚಿಂತನೆ
ಗ್ರಾಮ ಪಂಚಾಯತ್‌ಗಳಿಂದ 9 ಸಾವಿರ ಕೋಟಿ ರೂ. ಎಸ್ಕಾಂಗೆ ಬಾಕಿ ನೀಡಬೇಕಾಗಿದೆ. ಇದನ್ನು ಗಂಭೀರವಾಗಿ ಪರಿಣಿಸಲಾಗಿದ್ದು ಗ್ರಾಮ ಪಂಚಾಯತ್‌ಗಳಲ್ಲಿ ಸೋಲಾರ್‌ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಸೋಲಾರ್‌ ದೀಪಗಳ ಅಳವಡಿಕೆಗೆ ಬಜೆಟ್‌ನಲ್ಲಿ ಸರಕಾರದ ಬಳಿ ಅನುದಾನ ಕೇಳಲಾಗಿದೆ. ಸೋಲಾರ್‌ ದೀಪಗಳ ಅಳವಡಿಕೆ ಪ್ರಾಯೋಗಿಕ ಯೋಜನೆ ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

472 ಅಧಿಕಾರಿಗಳ ಅಮಾನತು
ನಾನು ಅಧಿಕಾರ ವಹಿಸಿಕೊಂಡ ಮೇಲೆ ಸುಮಾರು 472 ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ. ಇ- ಹಾಜರಾತಿ ಪ್ರಕ್ರಿಯೆ ಅನಂತರ ಪಿಡಿಒಗಳ ಹಾಜರಾತಿ ಹೆಚ್ಚಾಗಿದ್ದು ಬಯೋಮೆಟ್ರಿಕ್‌ ಮಾಡಿದಷ್ಟು ದಿನ ಅವರಿಗೆ ಸಂಬಳ ನೀಡುವ ಕೆಲಸ ಕೂಡ ನಡೆಯಲಿದೆ. ಇ-ಸ್ವತ್ತಿನ ಬಗ್ಗೆ ಗಂಭೀರ ದೂರುಗಳು ಕೇಳಿಬಂದಿವೆ. ಕಂದಾಯ ಇಲಾಖೆ ಜತೆಗೆ ಬಗೆಹರಿಸುವ ಕೆಲಸ ನಡೆಯಲಿದೆ. ಬಾಪೂಜಿ ಸೇವಾ ಕೇಂದ್ರಕ್ಕೆ 72 ನಾಗರಿಕ ಸೇವೆಗಳನ್ನು ಅಳವಡಿಕೆ ಮಾಡಲಾಗಿದೆ ಎಂದರು.

ಗ್ರಾಮ ಪಂಚಾಯತ್‌ಗಳಿಗೆ ರೇಟಿಂಗ್‌
ಗ್ರಾಮ ಪಂಚಾಯತ್‌ಗಳಿಗೆ ಗ್ರೇಡಿಂಗ್‌ ಮತ್ತು ರೇಟಿಂಗ್‌ ನೀಡುವ ಕೆಲಸ ನಡೆಯಲಿದೆ. ಮೂಲ ಸೌಕರ್ಯ, ಗ್ರಾಮಸಭೆ, ಕಂದಾಯ ವಸೂಲಿ ಸೇರಿದಂತೆ ಮತ್ತಿತ‌ರ ಮಾನದಂಡಗಳನ್ನಿಟ್ಟುಕೊಂಡು ಯಾವುದು ಉತ್ತಮ ಪಂಚಾಯತ್‌ ಎಂದು ಗ್ರೇಡಿಂಗ್‌ ಮತ್ತು ರೇಟಿಂಗ್‌ ನೀಡುವ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next