Advertisement

Gowri Movie: ಸಮರ್ಥ ಸಮರ್ಜಿತ; ಇಂದ್ರ ಲೋಕದ ಸುಂದ್ರ ಇವ..

01:49 PM Aug 15, 2024 | Team Udayavani |

ಇಂದ್ರಜಿತ್‌ ಲಂಕೇಶ್‌ ಪುತ್ರ ಸಮರ್ಜಿತ್‌ “ಗೌರಿ’ ಚಿತ್ರದ ಮೂಲಕ ಹೀರೋ ಆಗಿ ಇಂದು ತೆರೆಗೆ ಬರುತ್ತಿದ್ದಾರೆ. ಈ ಚಿತ್ರವನ್ನು ಇಂದ್ರಜಿತ್‌ ಲಂಕೇಶ್‌ ಅವರೇ ನಿರ್ದೇಶನ ಮಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಕುರಿತು ಸಮರ್ಜಿತ್‌ ಮಾತನಾಡಿದ್ದಾರೆ.

Advertisement

ಹೀರೋ ಆಗಿ ಇಂದು ತೆರೆಮೇಲೆ ಬರುತ್ತಿದ್ದೀರಿ?

ತುಂಬ ಖುಷಿಯ ಕ್ಷಣವಿದು. ಸಿನಿಮಾ ಚೆನ್ನಾಗಿ ಬಂದಿದೆ. ಸಿನಿಮಾ ಮೇಲೆ ಮತ್ತು ನಮ್ಮ ಕನ್ನಡ ಜನರ ಮೇಲೆ ನಂಬಿಕೆ ಇದೆ. ಒಳ್ಳೆ ಸಿನಿಮಾ ಮಾಡಿದ್ರೆ ಖಂಡಿತಾ ಅವರು ಗೆಲ್ಲಿಸುತ್ತಾರೆ. ಮೊದಲ ಸಿನಿಮಾವಿದು.. ಹಾಗಾಗಿ ಬಹಳ ಎಕ್ಸೆ„ಟ್‌ ಆಗಿದ್ದೇನೆ. ಸಿನಿಮಾದ ರಿಸಲ್ಟ್ಗೆ ಎದುರು ನೋಡುತ್ತಿದ್ದೇನೆ.

ಅಪ್ಪನ ನಿರ್ದೇನದ ಬಗ್ಗೆ ಹೇಳಿ?

ಇದು ಬಹಳ ವಿಶೇಷ. ಮೊದಲ ಸಿನಿಮಾವನ್ನು ಅಪ್ಪಾಜಿ ನಿರ್ದೇಶನ ಮಾಡ್ತಾರೆ ಅಂದುಕೊಂಡಿರಲಿಲ್ಲ. ಸಿನಿಮಾದಲ್ಲಿ ಸ್ವಲ್ಪ ಹೆಸರು ಮಾಡಿದ ನಂತರ ಅಪ್ಪ ನಿರ್ದೇಶನ ಮಾಡಬಹುದು ಅಂತ ಅಂದುಕೊಂಡಿದ್ದೆ. ಅವರ ಜತೆ ಕೆಲಸ ಮಾಡಿದ್ದಕ್ಕೆ ಖುಷಿಯಾಗ್ತಿದೆ. ಸಿನಿಮಾ ಶುರು ಆದಾಗಿನಿಂದ ಅವರ ಜತೆ ಇನ್ನಷ್ಟು ಕ್ಲೋಸ್‌ ಆಗಿದ್ದೀನಿ.

Advertisement

ನಟನೆ ಮತ್ತು ಸಿನಿಮಾದ ಕಥೆಗೆ ನಿಮ್ಮ ತಯಾರಿ ಹೇಗಿತ್ತು?

ನಟನೆಯಲ್ಲಿ ತಯಾರಿ ಮಹತ್ವದ್ದು. ನಿನ್ನೆಗಿಂತ ಇವತ್ತು ಚೆನ್ನಾಗಿ ಮಾಡಬೇಕು, ಇದೇ ಮನಸ್ಥಿತಿ ಇರುತ್ತದೆ. ನಮ್ಮ ಕನ್ನಡ ಸಿನಿರಂಗದಲ್ಲಿ ಒಬ್ಬ ನಟನಿಗೆ ಏನೇನು ತಯಾರಿ ಅವಶ್ಯವಿದೆಯೋ ಅದೇ ರೀತಿ ನಾನು ತಯಾರಿ ಮಾಡಿಕೊಳ್ಳುತ್ತಲೇ ಇದ್ದೆ. ಇನ್ನು ಸಿನಿಮಾದಲ್ಲಿ ಪಾತ್ರ ಸವಾಲಿನದ್ದಾಗಿತ್ತು. ರಂಗಭೂಮಿಯಿಂದ ಬಂದಿದ್ದಕ್ಕೆ ನನಗೆ ಸಹಾಯವಾಯ್ತು. ನನ್ನ ಪ್ರಕಾರ, ಮುಂದೆ ಯಾರೇ ಸಿನಿಮಾಗೆ ಬರಬೇಕಂದ್ರೆ ರಂಗಭೂಮಿ ಮೂಲಕ ಬರುವುದು ಉತ್ತಮ. ಆಗ ಒಳ್ಳೆ ಅನುಭವ, ತರಬೇತಿ ಪಡೆದುಕೊಳ್ಳಬಹುದು.

ಗೌರಿ’ ಸಿನಿಮಾದ ಟೈಟಲ್‌ನಲ್ಲೇ ಒಂದು ವಿಶೇಷತೆ ಇದೆ?

“ಗೌರಿ’ ಹೆಸರು ಬಹಳ ವಿಶೇಷ. ನನ್ನ ಅತ್ತೆಯ ಸ್ಮರಣೆಗಾಗಿ ಈ ಟೈಟಲ್‌ ಇಟ್ಟಿದ್ದೇವೆ. ಅವರು ನನ್ನನ್ನು ಸ್ವಂತ ಮಗನ ರೀತಿ ನೋಡಿಕೊಳ್ಳುತ್ತಿದ್ದರು. ಸಿನಿಮಾ ಕ್ಷೇತ್ರದಲ್ಲಿ ಇಲ್ಲದಿದ್ದರೂ, ಇದರ ಬಗ್ಗೆ ತುಂಬಾ ಜ್ಞಾನ ಅವರಲ್ಲಿತ್ತು. “ಹೀರೋ ಆಗೋಕು ಮುನ್ನ ಒಳ್ಳೆ ಕಲಾವಿದ ಆಗಬೇಕು. ಆಗ ಜನ ಒಪ್ಪಿಕೊಳ್ತಾರೆ’ ಎಂದು ನನಗೆ ಸಲಹೆ ನೀಡಿದ್ದರು. ನನ್ನ ಮೊದಲನೇ ಸಿನಿಮಾ ಅವರು ನೋಡಬೇಕು, ಅವರ ಪ್ರತಿಕ್ರಿಯೆ ಕೇಳಬೇಕು ಅಂತ ಬಹಳ ಆಸೆ ಇತ್ತು. ಆದರೆ ಆ ಸಂದರ್ಭ ತಪ್ಪಿದೆ. ಇದು ಅವರ ಕಥೆಯೇನಲ್ಲ. ಒಂದು ನೈಜ ಘಟನೆಯ ಪ್ರೇರಣೆಯಿಂದ ಈ ಸಿನಿಮಾ ಮಾಡಿದ್ದೇವೆ.

ಅಪ್ಪನಿಗೆ ನೀವು ಮಗ ಇಷ್ಟವೋ, ನಟನಾಗಿಯೋ

ಸದ್ಯ ಮಗನ ದೃಷ್ಟಿಯಿಂದ ಹೊಗಳುತ್ತಿದ್ದಾರೆ ಎಂದೆನಿಸುತ್ತದೆ. ಚಿತ್ರದ ಶೂಟಿಂಗ್‌ ವೇಳೆ, ಪ್ರತಿ ಶಾಟ್‌ ಚೆನ್ನಾಗಿ ಬಂದಿದೆ ಎಂದು ಹೇಳಿದಾಗ ನನಗೆ ಬಹಳ ಖುಷಿಯಾಗುತ್ತಿತ್ತು. ಈ ಕ್ಷೇತ್ರದಲ್ಲಿ ಅವರೇ ನನಗೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅವರಿಂದಲೇ ನಾನಿಲ್ಲಿದ್ದೇನೆ.

ಪ್ರೇಕ್ಷಕರು “ಗೌರಿ’ ಸಿನಿಮಾ ಏಕೆ ನೋಡಬೇಕು?

ಇದೊಂದು ಕೌಟುಂಬಿಕ ಮನರಂಜನಾತ್ಮಕ ಸಿನಿಮಾ. ಇಲ್ಲಿನ ಆ್ಯಕ್ಷನ್‌, ಹಾಡುಗಳು ಖಂಡಿತ ಜನರಿಗೆ ಇಷ್ಟವಾಗುತ್ತದೆ. ನಾನು, ಸಾನಿಯಾ, ನವಾಜ್‌ ಮತ್ತು ಇನ್ನು ಅನೇಕ ಹೊಸ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದೇವೆ. ಕನ್ನಡ ಜನತೆ ಹೊಸ ಪ್ರತಿಭೆಗಳಿಗೆ ಬೆನ್ನುತಟ್ಟಬೇಕೆಂದು ಕೇಳಿಕೊಳ್ಳುತ್ತೇನೆ. ಜತೆಗೆ ಪ್ರಿಯಾಂಕಾ ಉಪೇಂದ್ರ, ಮಾನಸಿ ಸುಧೀರ್‌, ರಾಜೀವ್‌ ಪಿಳ್ಳೆ ಅವರಂಥ ದೊಡ್ಡ ನಟರೂ ಚಿತ್ರದಲ್ಲಿದ್ದಾರೆ. ಅದಕ್ಕಾಗಿ ಈ ಚಿತ್ರವನ್ನು ಜನ ಬಂದು ನೋಡಬೇಕು.

ನೀವು ಆಕ್ಷನ್‌ ಹೀರೋನಾ? ಯಾವ ಜಾನರ್‌ ನಿಮ್ಮದು?

“ಗೌರಿ’ ಒಂದು ಪ್ರೇರಣಾದಾಯಕ, ಕೌಟುಂಬಿಕ ಸಿನಿಮಾ. ಇದರಲ್ಲಿ ಆ್ಯಕ್ಷನ್‌, ಹಾಡು ಎಲ್ಲವೂ ಇದೆ. ಒಂದು ಫ್ಯಾಮಿಲಿ ಎಂಟರ್‌ಟೇನರ್‌ ಎನ್ನಬಹುದು. ಅಪ್ಪಾಜಿ ಸಹ ಇಂಥದ್ದೆ ಸಿನಿಮಾ ಇಷ್ಟಪಡುತ್ತಾರೆ. ಕಥೆಯ ಅನುಸಾರ ಅದನ್ನು ತೆರೆ ಮೇಲೆ ತಂದಿದ್ದೇವೆ.

Advertisement

Udayavani is now on Telegram. Click here to join our channel and stay updated with the latest news.

Next