ನವದೆಹಲಿ: ನರೇಂದ್ರ ಮೋದಿ ಸರ್ಕಾರ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಗಂಗಾ ನದಿ ಶುದ್ಧೀಕರಣಕ್ಕೆಂದೇ ಒಂದು ಇಲಾಖೆಯನ್ನು ಆರಂಭಿಸಿತ್ತು.
ಎನ್ಎಂಸಿಜಿಯಡಿ (ಗಂಗಾ ನದಿ ಶುದ್ಧೀಕರಣ ರಾಷ್ಟ್ರೀಯ ಯೋಜನೆ) ಗಂಗೆಯನ್ನು ಶುದ್ಧೀಕರಣ ಮಾಡುವುದರೊಂದಿಗೆ ಪರಿಸ್ಥಿತಿಯ ಅಧ್ಯಯನವನ್ನೂ ನಡೆಸುತ್ತಿದೆ. ಇದೀಗ ಗಂಗೆಯಲ್ಲಿರುವ ಡಾಲ್ಫಿನ್ಗಳ ಜೀವನ, ಹಿಲ್ಸಾ ಮೀನಿನ ಸಂಖ್ಯೆಯನ್ನು ಅಧ್ಯಯನ ನಡೆಸಲಿದೆ.
ಗಂಗೆಯ ನೀರಿನ ಗುಣಮಟ್ಟ ಎಷ್ಟರಮಟ್ಟಿಗೆ ಸುಧಾರಿಸಿದೆ ಎಂದು ತಿಳಿದುಕೊಳ್ಳುವುದೇ ಇದರ ಉದ್ದೇಶ.
ಗಂಗೆ ಭಾರತೀಯರಿಗೆ ಅತ್ಯಂತ ಪವಿತ್ರವಾದ ಜೀವನದಿ. ಇಲ್ಲಿ ಶರೀರ ತ್ಯಜಿಸಿದರೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿಂದ; ಹಲವರ ಶರೀರವನ್ನು ಈ ನದಿಯಲ್ಲೇ ತೇಲಿಬಿಡಲಾಗುತ್ತದೆ. ಕೈಗಾರೀಕರಣ ಆರಂಭವಾದ ನಂತರ ಗಲೀಜು ನೀರನ್ನೆಲ್ಲ ಗಂಗೆಗೇ ಹರಿಬಿಡುವ ಕೆಟ್ಟ ಪದ್ಧತಿಯೂ ಶುರುವಾಗಿತ್ತು. ಅವಕ್ಕೆಲ್ಲ ಕಡಿವಾಣ ಹಾಕುವ ಯತ್ನವನ್ನು ಕೇಂದ್ರ ಮಾಡಿದೆ.
ಎನ್ಎಂಸಿಜಿಯು ಸಿಎಸ್ಐಆರ್ನೊಂದಿಗೆ ಜಂಟಿಯಾಗಿ ಈ ಅಧ್ಯಯನ ಮಾಡುತ್ತಿದೆ. ಎನ್ಎಂಸಿಜಿ ನೀರಿನ ಗುಣಮಟ್ಟವನ್ನು ವೃದ್ಧಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಈಗ ಎಷ್ಟು ಬದಲಾವಣೆ ಆಗಿದೆ ಎಂದು ತಿಳಿದುಕೊಳ್ಳಲು ಭಿನ್ನಭಿನ್ನ ಅಧ್ಯಯನ ಮಾಡುತ್ತಿದೆ. ಗಂಗೆಯಲ್ಲಿನ ಸೂಕ್ಷ್ಮಾಣು ಜೀವಿಗಳು, ಇನ್ನಿತರೆ ಸಂಗತಿಗಳನ್ನೂ ಇಲ್ಲಿ ಪರಿಶೀಲಿಸಲಾಗುತ್ತದೆ.
ಸದ್ಯ ಗಂಗೆಯ ನಡುಭಾಗದಲ್ಲಿ 6 ಲಕ್ಷಕ್ಕೂ ಅಧಿಕ ಹಿಲ್ಸಾ ಮೀನುಗಳಿವೆ. ಇವು ನೀರಿನ ಶುದ್ಧೀಕರಣಕ್ಕೆ ಬಹಳ ಮುಖ್ಯವಾಗಿರುವುದರಿಂದ, ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗಿದೆ. ಅದರ ಪರಿಣಾಮವನ್ನು ಇಲ್ಲಿ ಅಧ್ಯಯನ ಮಾಡಲಾಗುತ್ತಿದೆ.