Advertisement

ಶಾಲೆ ಮಾಳಿಗೆ ಬಿದ್ದಿತು ಜೋಕೆ!

05:11 PM Jun 06, 2022 | Team Udayavani |

ವಾಡಿ: ತರಗತಿ ಕೋಣೆಗಳ ಗೋಡೆಗಳಿಗೆ ಬಿರುಕಿನ ಗೆರೆಗಳ ಚಿತ್ತಾರ. ಕೊಳೆತ ಸಿಮೆಂಟ್‌ ರಾಡುಗಳ ಹರಕು ಮಾಳಿಗೆ ಕತ್ತರಿಸಿ ಬೀಳುವ ಆತಂಕ. ಮುರುಕು ಕಿಟಕಿ ಬಾಗಿಲುಗಳಲ್ಲಿ ಇಣುಕಿ ನೋಡುವ ನೇಸರ ಮಕ್ಕಳ ಪ್ರಾಣ ಭೀತಿಗೆ ಮರುಗಲಿಲ್ಲ ಎಂಬುದೇ ಬೇಸರ.

Advertisement

ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ತೀರಾ ಹಳೆಯದ್ದಾಗಿದ್ದು, ತರಗತಿ ಕೋಣೆಗಳು ಸಂಪೂರ್ಣ ಶಿಥಿಲಗೊಂಡಿವೆ. ಕಟ್ಟಡದ ತಳಪಾಯ ದಿನೇದಿನೆ ಕುಸಿಯಲು ಶುರು ಮಾಡಿದೆ. ಬಿಸಿಯೂಟ ಕೋಣೆ ಸೇರಿದಂತೆ ಶಾಲೆಯ ಒಟ್ಟು ಹನ್ನೆರಡು ತರಗತಿ ಕೋಣೆಗಳ ನಾಲ್ಕೂ ದಿಕ್ಕಿನ ಗೋಡೆಗಳಲ್ಲಿ ಬಿರುಕು ಮೂಡಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೆಳಗಡೆ ಕುಳಿತು ಪಾಠ ಕೇಳುವ ಮಕ್ಕಳ ತಲೆಯ ಮೇಲೆ ಕಾಂಕ್ರೀಟ್‌ ಮಾಳಿಗೆಯ ತುಣುಕುಗಳು ಆಗಾಗ ಕಳಚಿ ಬೀಳುತ್ತಿವೆ. ಈಗಲೋ ಆಗಲೋ ಕಟ್ಟಡ ಕುಸಿದು ಬೀಳುವ ಭಾರಿ ಆತಂಕ ಎದುರಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲಾ ಶಿಕ್ಷಕರು ಲಿಖೀತ ರೂಪದಲ್ಲಿ ವಿಷಯವನ್ನು ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದ್ದು, ಪ್ರಾಣಾಪಾಯದಂತಹ ಸಮಸ್ಯೆಗೆ ಶಿಕ್ಷಣ ಇಲಾಖೆ ತಕ್ಷಣ ಪರಿಹಾರ ಒದಗಿಸದಿರುವುದು ವಿಷಾದದ ಸಂಗತಿ.

ರಾಷ್ಟ್ರೀಯ ಹೆದ್ದಾರಿ-150ಗೆ ಹೊಂದಿಕೊಂಡಿ ರುವ ಈ ಹಳಕರ್ಟಿ ಗ್ರಾಮದ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಶಿಕ್ಷಣ ಬೋಧಿಸಲಾಗುತ್ತಿದೆ. ಒಟ್ಟು 13 ತರಗತಿ ಕೋಣೆಗಳಿದ್ದು, 260 ಮಕ್ಕಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈ ವರ್ಷ ಇನ್ನಷ್ಟು ಮಕ್ಕಳು ಶಾಲೆಗೆ ದಾಖಲಾಗುವ ಸಾಧ್ಯತೆಯಿದ್ದು, ಶಿಕ್ಷಕರ ಸಂಖ್ಯೆಗೇನೂ ಕೊರತೆಯಿಲ್ಲ. ಶೌಚಾಲಯ ಸೌಲಭ್ಯವಿದೆ. ಗ್ರಂಥಾಲಯ, ಪ್ರಯೋಗಾಲಯ ಸೌಲಭ್ಯ ಇಲ್ಲ. ಇದರ ನಡುವೆ ಬೀಳುವ ಮುನ್ಸೂಚನೆ ನೀಡಿರುವ ಕಟ್ಟಡದಲ್ಲೇ ಪಾಠ ಪ್ರವಚನ ಮುಂದುವರಿಸಿರುವ ಅಸಹಾಯಕ ಶಿಕ್ಷಕರು, ಎದುರಾದ ಸಂಕಷ್ಟಕ್ಕೆ ಮರುಗುತ್ತಿದ್ದಾರೆ. ಮಕ್ಕಳ ಪ್ರಾಣ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಅಂಗಳದಲ್ಲಿ ಕೂಡಿಸಿ ಪಾಠ ಬೋಧಿಸುತ್ತಿದ್ದಾರೆ. ಮಳೆ ಸುರಿದರೆ ಕೋಣೆಗಳಲ್ಲೆಲ್ಲ ನೀರು ಹರಿದಾಡುತ್ತದೆ. ಪಠ್ಯಪುಸ್ತಕಗಳು ನೀರಿಗೆ ನೆನೆದು ಹಾಳಾಗುತ್ತಿವೆ. ಬಿಸಿಯೂಟದ ದಸವ ಧಾನ್ಯಗಳು ನೀರು ಪಾಲಾಗುತ್ತಿವೆ. ಶಾಲೆಗೆ ತಡೆಗೋಡೆ ಇಲ್ಲದ ಕಾರಣ ಹಂದಿಗಳ ಹಿಂಡು ಆಟದ ಅಂಗಳಕ್ಕೆ ನುಗ್ಗಿ ಬರುತ್ತಿವೆ. ಬಿಸಿಯೂಟದ ಮುಸುರೆ ತಿನ್ನುವ ಭರದಲ್ಲಿ ತರಗತಿ ಕೋಣೆಗಳಿಗೂ ಸೇರಿಕೊಂಡು ಕೊಳೆ ಹರಡುತ್ತಿವೆ. ಹೇಗಾದರೂ ಮಾಡಿ ನಮ್ಮ ಶಾಲೆಗೆ ಹೊಸ ಕಟ್ಟಡ ಮಂಜೂರು ಮಾಡಿಸಿಕೊಡಿ ಎಂದು ಈ ಶಾಲೆಯ ಶಿಕ್ಷಕರು ಕಂಡ ಕಂಡವರಲ್ಲಿ ಮನವಿ ಮಾಡುತ್ತಿದ್ದಾರೆ.

ಮಕ್ಕಳ ಬೌದ್ಧಿಕ ವಿಕಸನ ವೃದ್ಧಿಯಾಗಿ ಪಠ್ಯದ ಜ್ಞಾನ ಮಸ್ತಕ ಸೇರಲು ಉತ್ತಮ ಪರಿಸರ ನಿರ್ಮಿಸಿಕೊಡಬೇಕಾದ ಶಿಕ್ಷಣ ಇಲಾಖೆ, ಶಿಥಿಲ ಶಾಲಾ ಕಟ್ಟಡದ ಜೀರ್ಣೋದ್ಧಾರಕ್ಕೆ ಕಾಸಿಲ್ಲ ಎಂದು ಕೈಚೆಲ್ಲಿದೆ.

ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಶೈಕ್ಷಣಿಕ ವಲಯಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣಪ್ರೇಮಿ ಎನ್ನಿಸಿಕೊಂಡಿರುವ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಹಳಕರ್ಟಿ ಗ್ರಾಮ ದಂತಹ ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳ ಪ್ರಾಣಭೀತಿಯ ಪ್ರಸಂಗಗಳಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ವಿಫಲರಾಗಿರುವುದು ತರವಲ್ಲ. ಶಾಸಕ ಖರ್ಗೆ ಇನ್ನಾದರೂ ಹಳಕರ್ಟಿಯ ಮುರುಕು ಶಾಲೆಯ ಮಕ್ಕಳ ಭವಿಷ್ಯ ಕಾಪಾಡಲು ಬರ್ತಾರಾ ಕಾಯ್ದು ನೋಡೋಣ.

Advertisement

ನಮ್ಮೂರ ಶಾಲೆಗೆ ಮಕ್ಕಳ ಸಂಖ್ಯೆ ಅಥವಾ ಶಿಕ್ಷಕರ ಕೊರತೆ ಎದುರಾಗಿಲ್ಲ. ಅಗತ್ಯಕ್ಕೆ ತಕ್ಕಷ್ಟು ತರಗತಿ ಕೋಣೆಗಳಿದ್ದರೂ ಅವು ಬಳಕೆಗೆ ಯೋಗ್ಯವಾಗಿಲ್ಲ. ಬಹಳ ಹಳೆಯ ಕಟ್ಟಡವಾದ್ದರಿಂದ ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಛಾವಣಿ ಕೊಳೆತು ಸೋರುತ್ತಿದೆ. ಸಿಮೆಂಟ್‌ ಕಳಚಿ ಬೀಳುತ್ತಿದೆ. ರಾಡುಗಳು ಹೊರ ಕಾಣುತ್ತಿವೆ. ಎಲ್ಲಾ ತರಗತಿ ಕೋಣೆಗಳಲ್ಲಿ ಮಳೆ ನೀರು ಹರಿದಾಡುತ್ತದೆ. ಪಾಠ ಮಾಡುವುದೇ ದುಸ್ತರವಾಗಿದೆ. ಕಟ್ಟಡದಿಂದ ಮಕ್ಕಳಿಗೆ ಜೀವ ಭಯ ಕಾಡುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿ ಕಾರಿಗಳಿಗೆ ಲಿಖೀತ ಮಾಹಿತಿ ನೀಡಿ ಹೊಸ ಕಟ್ಟಡದ ಬೇಡಿಕೆ ಇಟ್ಟಿದ್ದೇನೆ. ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. –ಕನಕಪ್ಪ ಮ್ಯಾಗೇರಿ, ಮುಖ್ಯಶಿಕ್ಷಕ, ಸ.ಹಿ.ಪ್ರಾಥಮಿಕ ಶಾಲೆ ಹಳಕರ್ಟಿ

ಬೀಳುವ ಹಂತಕ್ಕೆ ತಲುಪಿರುವ ಹಳೆಯ ಶಿಥಿಲ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಪಾಠ-ಪ್ರವಚನಗಳಿಗೆ ಅರ್ಹವಲ್ಲದ ಕೋಣೆಗಳಲ್ಲಿ ಅಕ್ಷರ ಬೋಧನೆ ಸಾಗಿದೆ. ವಿದ್ಯಾರ್ಥಿಗಳು ಆತಂಕದಲ್ಲಿ ಪಾಠ ಕೇಳುವಂತಾಗಿದ್ದರೆ, ಶಿಕ್ಷಕರು ಏಕಾಗ್ರತೆಯಿಂದ ಅಕ್ಷರ ಕಲಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ನೋಡಿದರೆ ಇಡೀ ಕಟ್ಟಡ ಧರೆಗುರುಳುವ ಅಪಾಯವಿದೆ. ಅವಘಡ ಸಂಭವಿಸುವ ಮುಂಚೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಹಳೆಯ ಕಟ್ಟಡ ತೆರವುಗೊಳಿಸಿ ಹೊಸತನ್ನು ನಿರ್ಮಿಸಲು ಮುಂದಾಗಬೇಕು. ಕ್ಷೇತ್ರದ ಶಾಸಕರು ಬಡ ಮಕ್ಕಳಿಗಾಗಿ ಹೆಚ್ಚಿನ ಕಾಳಜಿ ವಹಿಸಬೇಕು. ನಿರ್ಲಕ್ಷé ವಹಿಸಿದರೆ ಹೋರಾಟ ಹಮ್ಮಿಕೊಳ್ಳುತ್ತೇವೆ? –ಸಿದ್ದು ಮದ್ರಿ, ಕಾರ್ಯದರ್ಶಿ, ಅಖೀಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ)   

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next