Advertisement

ಪರೀಕ್ಷಾಅಕ್ರಮ: ಮರುಪರೀಕ್ಷೆ ನಡೆಸುವುದೇ ಉತ್ತಮ

11:04 PM Apr 28, 2022 | Team Udayavani |

ರಾಜ್ಯದಲ್ಲೀಗ ಪೊಲೀಸ್‌ ನೇಮಕಾತಿ ಮತ್ತು ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಭಾರೀ ಅಕ್ರಮವಾಗಿರುವ ಸುದ್ದಿ ಚರ್ಚೆಯಲ್ಲಿದ್ದು, ಇದರಿಂದಾಗಿ ನೇಮಕಾತಿ ವ್ಯವಸ್ಥೆ ಬಗ್ಗೆಯೇ ಅಸಹ್ಯ ಮೂಡಿದೆ. ಈ ಎರಡು ನೇಮಕಾತಿ ಪರೀಕ್ಷೆಗಳ ಜತೆಗೆ, ಉಳಿದ ಆಯ್ಕೆ ವೇಳೆಯಲ್ಲಿಯೂ ಅಕ್ರಮ ನಡೆದಿರಬಹುದೇ ಎಂಬ ಚರ್ಚೆಗಳೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

Advertisement

ಸದ್ಯ ಎದ್ದಿರುವ ಈ ಅಕ್ರಮ ಸುಂಟರಗಾಳಿಯಲ್ಲಿ ನಿಜವಾಗಿ, ಶ್ರಮಪಟ್ಟು ಓದಿರುವಂಥವರು ಮುಳುಗಿ ಹೋಗಿದ್ದಾರೆ. ಆದರೆ, ದುಡ್ಡುಕೊಟ್ಟವರು ಮತ್ತು ಪ್ರಭಾವ ಬೆಳೆಸಿರುವಂಥವರು ಮಾತ್ರ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ನೊಂದ ಅಭ್ಯರ್ಥಿಗಳಿಂದ ಕೇಳಿಬರುತ್ತಿದೆ. ಇದರ ಜತೆಯಲ್ಲೇ ಸಾರ್ವಜನಿಕ ವಲಯದಿಂದ ಮೂಡಿಬಂದಿರುವ ಹೊಸ ಆಗ್ರಹವೆಂದರೆ ಅಕ್ರಮ ನಡೆದಿರುವ ಪರೀಕ್ಷೆಗಳನ್ನು ರದ್ದು ಮಾಡಿ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂಬುದು.

ಈಗಿನ ವ್ಯವಸ್ಥೆಯನ್ನು ನೋಡಿದರೆ, ಈ ಆಗ್ರಹದ ಹಿಂದೆ ಸಮರ್ಪಕ ಉದ್ದೇಶವಿದೆ ಎಂಬುದನ್ನು ಹೇಳಬಹುದು. ಪಿಎಸ್‌ಐ ಪರೀಕ್ಷೆಯಲ್ಲಿ 545 ಹುದ್ದೆಗಳಿಗಾಗಿ ಪರೀಕ್ಷೆ ನಡೆದಿದ್ದು, ದೈಹಿಕ ಪರೀಕ್ಷೆ ಉತ್ತೀರ್ಣರಾಗಿದ್ದ 57 ಸಾವಿರ ಮಂದಿ ಪರೀಕ್ಷೆ ಬರೆದಿದ್ದರು. ಈಗ ಸರಕಾರದ ಮುಂದೆ ಕೇವಲ 545 ಮಂದಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡುವುದೊ ಅಥವಾ ಎಲ್ಲ  57 ಸಾವಿರ ಮಂದಿಗೂ ಪರೀಕ್ಷೆ ನಡೆಸುವುದೋ ಎಂಬ ಪ್ರಶ್ನೆಗಳಿವೆ. ಆದರೆ ಅಭ್ಯರ್ಥಿಗಳ ನೋವಿನ ಆಧಾರದ ಮೇಲೆ ಹೇಳುವುದಾದರೆ, ಎಲ್ಲಾ 57 ಸಾವಿರ ಮಂದಿಗೂ ಪರೀಕ್ಷೆ ನಡೆಸುವುದೇ ಸೂಕ್ತವಾದ ನಿರ್ಧಾರವೆಂದು ಕಾಣಿಸುತ್ತದೆ.

ಈಗಿನ ಅಕ್ರಮದಿಂದಾಗಿ 545 ಮಂದಿಯಲ್ಲಿ ಕೆಲವರಾದರೂ ಆಯ್ಕೆಯಾಗಿರುತ್ತಾರೆ. ಇವರು ಯಾರು ಎಂದು ಗುರುತಿಸುವುದು ಕಷ್ಟ. ಸದ್ಯ ತನಿಖೆ ನಡೆಯುತ್ತಿದ್ದರೂ, ಇದು ಆಚೆಗೆ ಬರುವಷ್ಟರಲ್ಲಿ ಒಂದಷ್ಟು ಸಮಯವಾದರೂ ಆಗಬಹುದು.

ಇನ್ನು ಎರಡನೇ ವಾದವೂ ಇದೆ. ಆಯ್ಕೆಯಾಗಿರುವ ಈ 545 ಮಂದಿಯಲ್ಲಿ ಬಹಳಷ್ಟು ಮಂದಿ ಪ್ರಾಮಾಣಿಕವಾಗಿಯೇ ಓದಿ ಉತ್ತೀರ್ಣರಾಗಿದ್ದಾರೆ. ಮರು ಪರೀಕ್ಷೆ ನಡೆದು, ಯಾವುದೋ ಕಾರಣಕ್ಕಾಗಿ ಅನುತ್ತೀರ್ಣರಾದರೆ ಅನ್ಯಾಯವಾಗುತ್ತದೆ ಎಂಬ ಮಾತನ್ನು ಹೇಳುತ್ತಿದ್ದಾರೆ. ಆದರೆ ಈಗ ಸಿಐಡಿ ನಡೆಸುತ್ತಿರುವ ತನಿಖೆ ಮುಗಿದ ಬಳಿಕವಷ್ಟೇ ಆಯ್ಕೆಯಾಗಿರುವವರಲ್ಲಿ ಎಷ್ಟು ಮಂದಿ ಪ್ರಾಮಾಣಿಕವಾಗಿ ಆಯ್ಕೆಯಾಗಿದ್ದಾರೆ ಎಂಬುದನ್ನು ಗುರುತಿಸಬಹುದು. ಆಗ ಮಾತ್ರ ಮರುಪರೀಕ್ಷೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.

Advertisement

ಇನ್ನು ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲೂ ಅಕ್ರಮದ ವಾಸನೆ ಕಂಡು ಬಂದು ಆಗಲೇ ದಿನಗಳೇ ಕಳೆದಿವೆ. ಇಲ್ಲಿ ದೊಡ್ಡ ದೊಡ್ಡ ಕುಳಗಳೇ ಬಲೆಗೆ ಬಿದ್ದಿವೆ. ಧಾರವಾಡದ ಕವಿವಿಯ ಮೌಲ್ಯಮಾಪನ ಕುಲಸಚಿವರೇ ಬಂಧಿತರಾಗಿರುವುದರಿಂದ ಪ್ರಕರಣ ಇನ್ನೂ ಗಂಭೀರತೆ ಪಡೆದಿದೆ.

ಇಲ್ಲಿಯೂ ಅಷ್ಟೇ 1,200ಕ್ಕೂ ಹೆಚ್ಚು ಹುದ್ದೆಗಳಿಗೆ ಪರೀಕ್ಷೆ ನಡೆದಿದ್ದು, ಅಕ್ರಮದ ಬೇರು ಎಲ್ಲಿವರೆಗೆ ಚಾಚಿದೆ ಎಂದು ಹೇಳುವುದು ಕಷ್ಟಕರ. ಇಲ್ಲಿಯೂ ಮರು ಪರೀಕ್ಷೆ ನಡೆದರೆ ನಿಜವಾದ ಅಭ್ಯರ್ಥಿಗಳಿಗೆ ನ್ಯಾಯ ಸಿಕ್ಕಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next