Advertisement

ನಾಳೆ ಕೋಲಾರದಲ್ಲಿ ಕೆಂಪೇಗೌಡರ ರಥಯಾತ್ರೆ

06:03 PM Oct 26, 2022 | Team Udayavani |

ಕೋಲಾರ: ಪ್ರಧಾನಿ ನರೇಂದ್ರ ಮೋದಿ ನ.11ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 108 ಅಡಿಗಳ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಕೆಂಪೇಗೌಡ ಪ್ರಗತಿಯ ರಥಯಾತ್ರೆಗೆ ಅ.27ರಂದು ಬೆಳಗ್ಗೆ 10.30ಕ್ಕೆ ನಗರದ ಟೇಕಲ್‌ ರಸ್ತೆಯ ಬ್ರಿಡ್ಜ್ ಸಮೀಪ ರಾಜ್ಯ ಕಂದಾಯ ಸಚಿವ ಆರ್‌.ಅಶೋಕ್‌ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌, ಕೆಂಪೇಗೌಡರ 108 ಅಡಿಗಳ ಪುತ್ಥಳಿ ಲೋಕಾರ್ಪಣೆ ಮಾಡಲಿರುವ ಹಿನ್ನೆಲೆಯಲ್ಲಿ ಕೆಂಪೇಗೌಡರ ವಿಚಾರಧಾರೆಗಳನ್ನು ಪಸರಿಸಲು ಈ ರಥಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಜಿಲ್ಲೆಯ ಪವಿತ್ರ ಕ್ಷೇತ್ರಗಳ ಮೃತ್ತಿಕೆ ಸಂಗ್ರಹಿಸಲಾಗುವುದು ಎಂದು ವಿವರಿಸಿದರು.

ಅದ್ಭುತವಾಗಿ ಮೂಡಿ ಬಂದಿದೆ: ಬಿ.ಎಸ್‌ .ಯಡಿಯೂರಪ್ಪ ಅವರ ಆಡಳಿತದಲ್ಲಿ ಕೆಂಪೇಗೌಡರ ಅಭಿವೃದ್ಧಿ ಪ್ರಾಧಿ ಕಾರಕ್ಕೆ 100 ಕೋಟಿ ರೂ. ಮಂಜೂರಾತಿ ಆಗಿದ್ದು. ಇದರಲ್ಲಿ 64 ಕೋಟಿ ರೂ.ನಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿಯನ್ನು 100 ಟನ್‌ ಕಂಚು, 120 ಟನ್‌ ಸ್ಟೀಲ್‌ ಬಳಸಿ ನಿರ್ಮಿಸಿದ್ದು, ಗುಜರಾತ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪುತ್ಥಳಿ ನಿರ್ಮಿಸಿದ ಶಿಲ್ಪಿ ರಾಮ್‌ಸುತಾರ್‌ ಇದನ್ನು ನಿರ್ಮಿಸಿದ್ದು, ಅದ್ಬುತವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ರಥಯಾತ್ರೆ ಸಂಚಾರ: ರಾಜ್ಯದ 20 ಜಿಲ್ಲೆಗಳಲ್ಲಿ ರಥಯಾತ್ರೆ ಕೈಗೊಂಡಿದ್ದು, ದೇವಾಲಯ, ಕಲ್ಯಾಣಿಗಳು, ಆದರ್ಶ ವ್ಯಕ್ತಿಗಳು ಇರುವಂತಹ ಪ್ರದೇಶಗಳಿಂದ ಮೃತ್ತಿಕೆ ಸಂಗ್ರಹಿಸಲಾಗುವುದು. ಈ ರಥಯಾತ್ರೆಗೆ ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದು, ಕೋಲಾರ ಜಿಲ್ಲೆಯಲ್ಲಿ ಅ.27ರಂದು ಕಂದಾಯ ಸಚಿವ ಅಶೋಕ್‌ ಅವರು ಚಾಲನೆ ನೀಡಲಿದ್ದಾರೆ ಎಂದರು.

ಸಂಘ ಸಂಸ್ಥೆಗಳು ಭಾಗವಹಿಸಲಿ: ರಥಯಾತ್ರೆ ಅ.27 ರಿಂದ ನ.8ರವರೆಗೂ ಜಿಲ್ಲೆಯ 6 ತಾಲೂಕುಗಳಲ್ಲಿ ಸಂಚರಿಸಲಿದ್ದು, ಗ್ರಾಪಂ ಕೇಂದ್ರಗಳಿಗೂ ಭೇಟಿ ನೀಡಿ ಕೆಂಪೇಗೌಡರ ಆದರ್ಶವನ್ನು ಪ್ರಚಾರಪಡಿಸಲಿದೆ. ಇದು ಸರ್ಕಾರದ ಕಾರ್ಯಕ್ರಮವಾಗಿದ್ದು, ಎಲ್ಲಾ ಜಾತಿ, ಧರ್ಮ, ಪಕ್ಷಬೇಧ ಮರೆತು, ಎಲ್ಲಾ ಸಂಘ ಸಂಸ್ಥೆಗಳೂ ಭಾಗವಹಿಸುವಂತೆ ಕೋರಿದರು.

Advertisement

ಸಂಚಾಲಕರ ನೇಮಕ: ರಥಯಾತ್ರೆ ಯಶಸ್ವಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಂಚಾಲಕರನ್ನು ನೇಮಿಸಿದ್ದು, ಕೋಲಾರ ತಾಲೂಕಿನಲ್ಲಿ ಸರ್ಕಾರಿ ಅಭಿಯೋಜಕ ಮಾಗೇರಿ ನಾರಾಯಣಸ್ವಾಮಿ, ಬೆಗ್ಲಿ ಪ್ರಕಾಶ್‌, ಶ್ರೀನಿವಾಸಪುರ ತಾಲೂಕಿಗೆ ಚಂದ್ರಶೇಖರ್‌ ನಾಗದೇನಹಳ್ಳಿ, ಮಾಲೂರಿಗೆ ಪ್ರಭಾಕರ್‌, ವೆಂಕಟೇಶಗೌಡ, ಹರೀಶ್‌ಗೌಡರನ್ನು, ಬಂಗಾರಪೇಟೆ ತಾಲೂಕಿಗೆ ಹನುಮಯ್ಯ, ಕೆ.ಚಂದ್ರಾರೆಡ್ಡಿ, ಶ್ರೀನಿವಾಸಗೌಡರನ್ನು, ಮುಳಬಾಗಿಲು ತಾಲೂಕಿಗೆ ವೆಂಕಟರಮಣ, ನಾಗಾರ್ಜುನ್‌ ಹಾಗೂ ಕೆಜಿಎಫ್‌ ತಾಲೂಕಿಗೆ ವೆಂಕಟಪತಿ ಅವರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಎಲ್ಲರೂ ಭಾಗವಹಿಸಿ: ಇದು ಸರ್ಕಾರದ ಕಾರ್ಯಕ್ರಮವಾಗಿದ್ದು, ಜಿಲ್ಲಾಡಳಿತ ಸಹಕಾರದಿಂದ ಎಲ್ಲಾ ಗ್ರಾಪಂಗೆ ಭೇಟಿ ನೀಡಲಾಗುವುದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್‌.ಮುನಿಸ್ವಾಮಿ, ಶಾಸಕರು, ಮಾಜಿ ಶಾಸಕರು, ವಿವಿಧ ಪಕ್ಷಗಳ ಮುಖಂಡರು ಭಾಗವಹಿಸುವ ಮೂಲಕ ಸಾಮರಸ್ಯಕ್ಕೆ ನಾಂದಿಯಾಡಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಹಾಗೂ ರಥಯಾತ್ರೆ ಜಿಲ್ಲಾ ಸಹಸಂಚಾಲಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌, ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾ ವಕ್ತಾರ ಎಸ್‌.ಬಿ. ಮುನಿವೆಂಕಟಪ್ಪ, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್‌, ಮಾಜಿ ಅಧ್ಯಕ್ಷ ಓಂ ಶಕ್ತಿ ಚಲಪತಿ, ಜಿಲ್ಲಾ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ, ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ರಾಜೇಶ್‌ಸಿಂಗ್‌, ಸತ್ಯನಾರಾಯಣರಾವ್‌, ಮಂಜುನಾಥ್‌, ಮಾಧ್ಯಮ ಪ್ರಮುಖ್‌ ಕೆಂಬೋಡಿ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next