Advertisement

ಸಿನಿಮಾ ಮಂದಿ ಒಕ್ಕೊರಲ ಪ್ರಶ್ನೆಗೆ ಮಣಿದ ಸರ್ಕಾರ: ಉದಯವಾಣಿ ವರದಿಗೆ ಎಲ್ಲೆಡೆಯಿಂದ ಸ್ಪಂದನೆ

08:56 AM Feb 04, 2021 | Team Udayavani |

ಕೇಂದ್ರ ಸರ್ಕಾರ ಇದೇ ಫೆ. 1 ರಿಂದ ದೇಶಾದ್ಯಂತ ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳಿಗೆ ಶೇಕಡ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿದೆ. ಕಳೆದ ಎಂಟು – ಹತ್ತು ತಿಂಗಳಿನಿಂದ ಪ್ರೇಕ್ಷಕರಿಲ್ಲದೆ ಖಾಲಿ ಹೊಡೆಯುತ್ತಿದ್ದ ಥಿಯೇಟರ್‌ಗಳು ಮತ್ತು ಮಲ್ಟಿಫ್ಲೆಕ್ಸ್‌ಗಳ ಪ್ರದರ್ಶಕರು, ವಿತರಕರು, ನಿರ್ಮಾಪಕರು ಸರ್ಕಾರದ ಈ ನಿರ್ಧಾರದಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು.

Advertisement

ಚಿತ್ರೋದ್ಯಮ ಕೂಡ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿತ್ತು. ಆದರೆ ಇದ್ದಕ್ಕಿದ್ದಂತೆ, ಕೋವಿಡ್‌ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಕರ್ನಾಟಕದ ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಶೇಕಡ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಬ್ರೇಕ್‌ ಹಾಕಿತ್ತು. ಈ ತಿಂಗಳ ಅಂತ್ಯದವರೆಗೂ ಥಿಯೇಟರ್‌ಗಳಲ್ಲಿ ಈ ಹಿಂದಿನ ಆದೇಶದಂತೆ ಶೇಕಡಾ ಐವತ್ತರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸೂಚಿಸಿತ್ತು.

ಇದನ್ನೂ ಓದಿ:ಥಿಯೇಟರ್‌ಗಳಲ್ಲಿ ಶೇ.50 ಸೀಟಿಗೆ ಮಾತ್ರ ಅವಕಾಶ:ಸರ್ಕಾರದ ದ್ವಂದ್ವನೀತಿಗೆ ಸಿನಿಮಂದಿ ಸಿಡಿಮಿಡಿ

ರಾಜ್ಯ ಸರ್ಕಾರದ ಈ ನಿರ್ಧಾರ ಇನ್ನೇನು ಸಿನಿಮಾ ಬಿಡುಗಡೆ ಮಾಡಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪ್ರದರ್ಶಕರು, ವಿತರಕರು, ನಿರ್ಮಾಪಕರು ಮತ್ತು ಸ್ಟಾರ್‌ಗಳ ಆಕ್ರೋಶಕ್ಕೆ ಕಾರಣವಾಗಿತ್ತು. “ದೇವರ ಕೊಟ್ಟರು ಪೂಜಾರಿ ಕೊಡಲಿಲ್ಲ’ ಎಂಬ ಮಾತಿನಂತೆ ಕೇಂದ್ರ ಸರ್ಕಾರದ ಆದೇಶವನ್ನು ಜಾರಿಗೊಳಿಸದ ರಾಜ್ಯ ಸರ್ಕಾರದ ವಿರುದ್ಧ ಇಡೀ ಚಿತ್ರೋದ್ಯಮವೇ ಒಕ್ಕೊರಲ ಹೋರಾಟಕ್ಕೆ ನಿಂತಿತ್ತು.  ರಾಜ್ಯ ಸರ್ಕಾರದ ನಿರ್ಧಾರ ಸಹಜವಾಗಿಯೇ ಚಿತ್ರರಂಗದ ಬೇಸರ, ಆಕ್ರೋಶ ಮತ್ತು ಹೋರಾಟಕ್ಕೆ ಕಾರಣವಾಗಿದ್ದು, “ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಏಕೆ? ಎಂದು ಪ್ರಶ್ನಿಸಿದ್ದರು. ಈಗ ಸರ್ಕಾರ ಚಿತ್ರರಂಗದ ಹೋರಾಟಕ್ಕೆ ಮಣಿದಿದ್ದು, ಹೊಸ ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಇನ್ನು, ಬುಧವಾರ ಬೆಳಿಗ್ಗೆಯಿಂದಲೇ ಸೋಶಿಯಲ್‌ ಮೀಡಿಯಾ ದಲ್ಲಿ ಥಿಯೇಟರ್‌ಗಳಲ್ಲಿ ಪೂರ್ಣ ಪ್ರವೇಶಕ್ಕೆ ಅನುಮತಿ ಕೊಡಿ ಎಂದು ಹ್ಯಾಶ್‌ ಟ್ಯಾಗ್‌ ಬಳಸಿ ಸೋಶಿಯಲ್‌ ಮೀಡಿಯಾದಲ್ಲಿ ಅಭಿಯಾನವೇ ಶುರುವಾಗಿತ್ತು. ಕಳೆದ ಒಂದು ವರ್ಷದಿಂದ ಕೋವಿಡ್‌ ಸಂಕಷ್ಟಕ್ಕೆ ಗುರಿಯಾಗಿದ್ದ ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

Advertisement

ರಾಜಕೀಯ ಸಭೆ – ಸಮಾರಂಭಗಳು, ಪ್ರತಿಭಟನೆ – ಹೋರಾಟಗಳು, ಮಾರ್ಕೆಟ್‌ – ಮಾಲ್‌, ಹೋಟೆಲ್‌ಗ‌ಳು, ವಿಮಾನ, ರೈಲು, ಬಸ್‌ ಹೀಗೆ ಎಲ್ಲ ಕಡೆ ಜನರ ಓಡಾಟ ನಡೆಯುತ್ತಿದೆ. ಆದರೆ, ಎಲ್ಲೂ ಇದರ ನಿರ್ಬಂಧ ಚಿತ್ರಮಂದಿರಕ್ಕೆ ಮಾತ್ರ ಯಾಕೆ? ಎಂದು ಸಿನಿಮಾ ಮಂದಿ ಪ್ರಶ್ನೆ ಎತ್ತಿದ್ದರು. ಇನ್ನು ಫೆಬ್ರವರಿ 19ಕ್ಕೆ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಕೂಡ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಕನ್ನಡ, ತೆಲುಗು ಹಾಗೂ

ತಮಿಳಿನಲ್ಲಿ ಏಕಕಾಲಕ್ಕೆ “ಪೊಗರು’ ರಿಲೀಸ್‌ಗೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದರ ನಡುವೆಯೇ ರಾಜ್ಯ ಸರ್ಕಾರದ ಈ ನಿರ್ಧಾರ “ಪೊಗರು’ ಚಿತ್ರತಂಡವನ್ನು ಗರಂ ಆಗುವಂತೆ ಮಾಡಿತ್ತು.

ಥಿಯೇಟರ್‌ನಿಂದ ಕಲೆಕ್ಷನ್‌ಗಾಗಿ..

ಚಿತ್ರಮಂದಿರಗಳಿಗೆ ಶೇ 100 ರಷ್ಟು ಅವಕಾಶ ನೀಡದ್ದನ್ನು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದು ಥಿಯೇಟರ್‌ನಿಂದ ಕಲೆಕ್ಷನ್‌ ಪಡೆಯುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿರ ಬಹುದು ಎಂದರು

ಉದಯವಾಣಿ ವರದಿಗೆ ಎಲ್ಲೆಡೆಯಿಂದ ಸ್ಪಂದನೆ

ಚಿತ್ರೋದ್ಯಮ ಮತ್ತೆ ಸಂಕಷ್ಟಕ್ಕೆ ಸಿಲುಕುವ ಕುರಿತು ಉದಯವಾಣಿ ಬುಧವಾರ ವರದಿ ಮಾಡಿತ್ತು.ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ನಡೆದ ಬಿರುಸಿನ ಅಭಿಯಾನಕ್ಕೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ನಟರಾದ ಧ್ರುವ ಸರ್ಜಾ, ದುನಿಯಾ ವಿಜಯ್‌ ಟ್ವಿಟ್ಟರ್‌ ಮೂಲಕ ಪ್ರಶ್ನಿಸಿದ್ದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ “ಉದಯವಾಣಿ’ ವಿನ್ಯಾಸದ ಪೋಸ್ಟರ್‌ ಫೋಟೋವನ್ನು ಹಂಚಿಕೊಂಡಿರುವ ಧ್ರುವ ಸರ್ಜಾ, “ಬಸ್‌ ನಲ್ಲಿ ಫ‌ುಲ್‌ ರಶ್‌..! ಮಾರ್ಕೆಟ್‌ನಲ್ಲಿ ಗಿಜಿ ಗಿಜಿ..! ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ?’ ಪ್ರಶ್ನಿಸಿ ಸಿಎಂ, ಡಿಸಿಎಂ ಹಾಗೂ ಸಚಿವ ಡಾ. ಸುಧಾಕರ್‌ ಅವರನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ನಟ ದುನಿಯಾ ವಿಜಯ್‌ ಕೂಡ ಅದೇ ಪೋಸ್ಟ್‌ನ್ನು ಹಂಚಿಕೊಂಡು ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ. ಅದಾದ ನಂತರ ಸೋಶಿಯಲ್‌ ಮೀಡಿಯಾದಲ್ಲಿ ಒಬ್ಬರ ಹಿಂದೊಬ್ಬರು ಸ್ಟಾರ್‌ಗಳು ಅಭಿಯಾನ ರೂಪದಲ್ಲಿ ಈ ಹೋರಾಟದಲ್ಲಿ ಕೈ ಜೋಡಿಸಿದ್ದರು. ಅವರು ಮಾಡಿರುವ ಟ್ವೀಟ್‌ಗಳು ಇಲ್ಲಿವೆ..

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದ ಡೆಂತಯ್ನಾ? ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲು ಥಿಯೇಟರ್‌ ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ?

  • ಧನಂಜಯ್‌, ನಟ

ಎಲ್ಲಾ ಸಾರ್ವಜನಿಕ ಸ್ಥಳಗಳು ಜನರಿಂದ ವ್ಯವಹರಿಸು ತ್ತಿದ್ದರೂ, ಕರ್ನಾಟಕ ಸರ್ಕಾರ ಮತ್ತೂಮ್ಮೆ ಚಿತ್ರಮಂದಿರವನ್ನು 50% ಕ್ಕೆ ಸೀಮಿತಗೊಳಿಸಿದೆ. ಏಕೆ? ಸಿನಿಮಾ ಅನೇಕರಿಗೆ ಜೀವನೋಪಾಯವಾಗಿದೆ ಎಂಬುದನ್ನು ನಾವು ಮರೆಯುತ್ತಿದ್ದೇವೆಯೇ!

  • ರಕ್ಷಿತ್‌ ಶೆಟ್ಟಿ, ನಟ

ವಿಮಾನದೊಳಗೆ ಭುಜಕ್ಕೆ ಭುಜ ತಾಕಿ ಕೂರಬಹುದು. ದೇವಸ್ಥಾನದಲ್ಲಿ ಎಲ್ಲರ ಕೈಗಳು ಒಂದೇ ಗಂಟೆ ಬಾರಿಸಬಹುದು. ಮಾರ್ಕೇಟ್‌ನಲ್ಲಿ ಮಾಮೂಲಿ ವ್ಯಾಪಾರ, ರಾಜಕೀಯ ರ್ಯಾಲಿಗೆ ಜನಸಾಗರ, ಪಬ್‌ ಹೋಟೆಲ್‌ ನಲ್ಲಿ ಎಲ್ಲರ ವಿಹಾರ, ಚಿತ್ರಮಂದಿರಕ್ಕೆ ಮಾತ್ರ ಯಾಕೆ ಕಟ್ಟೆಚ್ಚರ?

  • ಸುನಿ, ನಿರ್ದೇಶಕ

ಸೋಶಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ್‌

ಚಿತ್ರಮಂದಿರಗಳಿಗೆ ಶೇ 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿರುವ ಸರ್ಕಾರದ ನಿರ್ಧಾರ ಎಷ್ಟು ಸರಿ, ಎಷ್ಟು ತಪ್ಪು ಎಂದು ಉದಯವಾಣಿ ಸೋಶಿಯಲ್‌ ಮೀಡಿಯಾದಲ್ಲೂ ಅಭಿಯಾನ ನಡೆಸಿತ್ತು. ಉದಯವಾಣಿ ಫೇಸ್‌ಬುಕ್‌, ಟ್ವೀಟರ್‌ನಲ್ಲಿ ನಡೆದ ಅಭಿಯಾನಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶೇ. 60 ಜನ ಸರ್ಕಾರದ ನಿರ್ಧಾರವನ್ನು ವಿರೋಧಿಸಿದರೆ, ಶೇ. 28ರಷ್ಟು ಮಂದಿ ಸರಿ ಎಂದಿದ್ದರು

Advertisement

Udayavani is now on Telegram. Click here to join our channel and stay updated with the latest news.

Next