Advertisement

ಬಿಜೆಪಿಯಿಂದ ರಾಜ್ಯಪಾಲರ ದುರ್ಬಳಕೆ

10:48 PM Jul 20, 2019 | Team Udayavani |

ಬೆಂಗಳೂರು: “ಬಿಜೆಪಿಯವರು ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಪಾಲರು ಶಾಸಕಾಂಗ ಕಾರ್ಯಕಲಾಪಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ.

Advertisement

ಸೋಮವಾರ ವಿಶ್ವಾಸಮತಯಾಚನೆ ನಡೆಯಲಿದೆ. ಬಿಜೆಪಿಯವರು ನಮ್ಮ ಶಾಸಕರಿಗೆ ಆಮಿಷ ಒಡ್ಡುತ್ತಲೇ ಇದ್ದಾರೆ. ಶಾಸಕರನ್ನು ಹೆದರಿಸಿ, ಬೆದರಿಸಿ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರಿಗೆ ರಾಜೀನಾಮೆ ಕೊಡಿಸಲು ಪ್ರಯತ್ನ ನಡೆಸಿದ್ದಾರೆಂದು ಆರೋಪಿಸಿದರು.

ಬಿಜೆಪಿಯವರು ಆಪರೇಷನ್‌ ಕಮಲದ ಮೂಲಕ ಜನರಿಗೆ ಶಾಪ ಕೊಟ್ಟಿದ್ದಾರೆ. ನಮ್ಮ ಶಾಸಕರು ಅವರ ಕಡೆ ಹೋಗುವುದಿಲ್ಲ, ಆದರೂ ಪುನಃ ಒತ್ತಡ ಹೇರುತ್ತಲೇ ಇದ್ದಾರೆ. ಮುಂಬೈನಲ್ಲಿ ನಮ್ಮ ಶಾಸಕರನ್ನು ಒತ್ತೆಯಾಳುಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ ಶಾಸಕರು ಹೆದರಿಕೆಗೆ ಬಲಿಯಾಗಬಾರದು. ಅವರ ಕ್ಷೇತ್ರದ ಜನತೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ. ಅವರು ವಾಪಸ್‌ ಬಂದು ಸರ್ಕಾರಕ್ಕೆ ಕೈಜೋಡಿಸಬೇಕು. ಸಚಿವ ರಹೀಂಖಾನ್‌ಗೂ ಅಮಿಷ ಒಡ್ಡುತ್ತಿದ್ದಾರೆ. ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವ ರಾಜ್ಯಪಾಲರು ಇದರ ಬಗ್ಗೆ ಯಾಕೆ ಗಮನಹರಿಸಬಾರದು ಎಂದು ಪ್ರಶ್ನಿಸಿದರು.

ಕುದುರೆ ವ್ಯಾಪಾರ ಮಾಡುತ್ತಿರುವವರು ನಾವಲ್ಲ: ದಿನೇಶ್‌
ಬೆಂಗಳೂರು: “ರಾಜ್ಯದಲ್ಲಿ ಶಾಸಕರ ಕುದುರೆ ವ್ಯಾಪಾರ ಮಾಡುತ್ತಿರುವವರು ನಾವಲ್ಲ. ಕುದುರೆಗಳು ರಾಜ್ಯಪಾಲರ ಬಳಿಯೇ ಹೋಗಿದ್ದವು. ಆಗ ರಾಜ್ಯಪಾಲರು ಬಿಜೆಪಿಯವರಿಗೆ ಪತ್ರ ಬರೆಯಬೇಕಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ರಾಜಭವನ ಬಿಜೆಪಿ ಸ್ವಾರ್ಥಕ್ಕೆ ಬಳಕೆಯಾಗುತ್ತಿದೆ. ರಾಜ್ಯಪಾಲರು ಶರವೇಗದಲ್ಲಿ ಕೆಲಸ ಮಾಡುತ್ತಿರುವುದೇಕೆ? ಪ್ರಜಾಪ್ರಭುತ್ವದ ಉಳಿವಿಗೆ ರಾಜ್ಯಾದ್ಯಂತ ನಮ್ಮ ಹೋರಾಟ ನಡೆಸುವುದಾಗಿ ತಿಳಿಸಿದರು.

ವಿಪ್‌ ಜಾರಿ ವಿಚಾರದಲ್ಲಿ ಸುಪ್ರೀಂ ತೀರ್ಪಿನಲ್ಲಿ ಗೊಂದಲವಿದೆ. ಈ ಎರಡು ವಿಚಾರಗಳ ಬಗ್ಗೆಯೂ ಸ್ಪಷ್ಟೀಕರಣ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ಇದರ ವಿಚಾರಣೆ ಯಾವಾಗ ಬರುತ್ತದೋ ಕಾದು ನೋಡಬೇಕು ಎಂದರು.

ಸೋಮವಾರ ವಿಶ್ವಾಸಮತಯಾಚನೆ ಚರ್ಚೆ ಅಂತ್ಯಗೊಳ್ಳಲಿದೆ. ಬಹುಮತ ಯಾರಿಗೆ ಎನ್ನುವುದು ಅಂದೇ ಸಾಬೀತಾಗಲಿದೆ. ಉದ್ದೇಶಪೂರ್ವಕವಾಗಿ ನಾವು ವಿಳಂಬ ಮಾಡಿಲ್ಲ. ಸಂಸದೀಯ ನಡವಳಿಕೆಗಳಲ್ಲಿ ಗೊಂದಲಗಳಿವೆ. ಅವುಗಳನ್ನು ಬಗೆಹರಿಸಿಕೊಳ್ಳುವ ಹಕ್ಕು ನಮಗಿದೆ. ಸೋಮವಾರ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು.

ಇದೇ ವೇಳೆ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‍ರನ್ನು ಎದೆ ನೋವು ಎಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ ವಿಭಾಗವೇ ಇಲ್ಲ. ಬಿಜೆಪಿಯವರು ಸುಳ್ಳು ದಾಖಲೆ ಸೃಷ್ಟಿ ಮಾಡಿಸುತ್ತಿದ್ದಾರೆ. ಆ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿದೆ. ಯಾರಿಗೂ ಒಳಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಇದನ್ನೆಲ್ಲ ನೋಡಿದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವಾ ಎಂದು ದಿನೇಶ್‌ ಪ್ರಶ್ನಿಸಿದರು.

ಮಧ್ಯಂತರ ಚುನಾವಣೆ ಬೇಡ: ರಾಜೇಗೌಡ
ಬೆಂಗಳೂರು: ಮಧ್ಯಂತರ ಚುನಾವಣೆ ನಡೆದರೆ ತುಂಬಾ ಹಣ ವ್ಯಯವಾಗುತ್ತದೆ. ನಮಗೆ ಮಧ್ಯಂತರ ಚುನಾವಣೆ ಬೇಡ ಎಂದು ಕಾಂಗ್ರೆಸ್‌ನ ಶೃಂಗೇರಿ ಶಾಸಕ ರಾಜೇಗೌಡ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಮಧ್ಯಂತರ ಚುನಾವಣೆ ಬಂದರೆ ಹಣ ಖರ್ಚಾಗುತ್ತದೆ. ಅದು ಸಾರ್ವಜನಿಕರು ಕಷ್ಟಪಟ್ಟು ತೆರಿಗೆ ಕಟ್ಟಿದ ಹಣ. ನಾವು ಕಷ್ಟಪಟ್ಟು ಪಕ್ಷದಿಂದ ಟಿಕೆಟ್‌ ಪಡೆದು ಸ್ಪರ್ಧಿಸಿ, ಗೆದ್ದು ಶಾಸಕರಾಗಿದ್ದೇವೆ. 15 ಶಾಸಕರು ಹೋಗಿ ಮುಂಬೈನಲ್ಲಿ ಕುಳಿತರೆ ಹೇಗೆ?

ಕ್ಷೇತ್ರಗಳಲ್ಲಿ ಜನರ ಕೆಲಸ ಮಾಡುವವರು ಯಾರು? ಜನ ನಮನ್ನು ಆರಿಸಿ ಕಳುಹಿಸಿದ್ದು ಕೆಲಸ ಮಾಡಲು. ಇದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. ಕಾಂಗ್ರೆಸ್‌ನ ಯಾವುದೇ ಶಾಸಕರನ್ನು ಕೂಡಿ ಹಾಕಿಲ್ಲ. ನಮ್ಮ ನಾಯಕರು ನಮ್ಮನ್ನ ಮುಕ್ತವಾಗಿರಲು ಬಿಟ್ಟಿದ್ದಾರೆ. ಸೋಮವಾರ ವಿಶ್ವಾಸಮತಯಾಚನೆ ನಡೆಯಲಿದೆ. ನಮಗೂ ಚರ್ಚೆಗೆ ಅವಕಾಶ ಸಿಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next