Advertisement

ಸರ್ವಧರ್ಮೀಯರ ಕಲ್ಯಾಣ ಕ್ಷೇತ್ರ ಧರ್ಮಸ್ಥಳ ;ರಾಜ್ಯಪಾಲ ಗೆಹ್ಲೋಟ್ ಬಣ್ಣನೆ

02:45 AM Dec 03, 2021 | Team Udayavani |

ಬೆಳ್ತಂಗಡಿ: ಲೋಕಹಿತಕ್ಕಾಗಿ ಎಲ್ಲರನ್ನೂ ಉದ್ಧರಿಸುವುದೇ ಧರ್ಮದ ಮೂಲ ಉದ್ದೇಶವಾಗಿದೆ. ಸರ್ವಧರ್ಮಗಳೂ ಸಮಾನವಾಗಿದ್ದು ಇತರ ಧರ್ಮಗಳ‌ನ್ನು ಗೌರವಿಸಿ ಮುನ್ನಡೆದಾಗ ವಿಶ್ವಶಾಂತಿ ಮತ್ತು ವಿಶ್ವಕಲ್ಯಾಣವಾಗುವುದು. ಧರ್ಮಸ್ಥಳ ಕ್ಷೇತ್ರ ಹಾಗೂ ಡಾ| ಹೆಗ್ಗಡೆ ಅವರು ಜಾತಿ, ಪಂಥದ ಎಲ್ಲೆ ಮೀರಿ ದಕ್ಷಿಣ ಭಾರತದ ಶ್ರೇಷ್ಠ ಸರ್ವಧರ್ಮೀಯರ ಕಲ್ಯಾಣ ಪುರುಷರಾಗಿದ್ದಾರೆ ಎಂದು ರಾಜ್ಯಪಾಲ ಥಾವರ್‌‍ಚಂದ್‌ ಗೆಹ್ಲೋಟ್ ಬಣ್ಣಿಸಿದರು.

Advertisement

ಶ್ರೀ ಕ್ಷೇತ್ರ ದರ್ಮಸ್ಥಳ ಲಕ್ಷದೀಪೋತ್ಸವದ 4ನೇ ದಿನವಾದ ಗುರುವಾರ ನಡೆದ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬದುಕು ಮತ್ತು ಬದುಕಲು ಬಿಡು ಎಂಬ ತಣ್ತೀದಡಿ ಸತ್ಯ, ಅಹಿಂಸೆ, ತ್ಯಾಗ, ಪರರ ಸೇವೆಯಿಂದ ಜೀವನ ಪಾವನವಾಗುತ್ತದೆ ಎಂದು ಭಗವಾನ್‌ ಮಹಾವೀರರು ಬೋಧಿಸಿದ್ದಾರೆ. ಸ್ವಾಮಿ ವಿವೇಕಾನಂದರು ವೈಚಾರಿಕ ಚಿಂತನೆ ಬೆಳೆಸಿ ಸಮಾಜ ಸುಧಾರಕರಾಗಿದ್ದಾರೆ. ಎಲ್ಲರ ಸಂದೇಶ ಒಂದೇ ಎಲ್ಲರೂ ಸುಖದಿಂದ ಬಾಳಿ ವಿಶ್ವ ಶಾಂತಿ ನೆಲೆಸಬೇಕೆಂಬುದಾಗಿದೆ ಎಂದ ಅವರು, ಈ ದಿಸೆಯಲ್ಲಿ ಪವಿತ್ರ ಕ್ಷೇತ್ರ ಧರ್ಮಸ್ಥಳದ ಸೇವೆ – ಸಾಧನೆ ಶ್ಲಾಘನೀಯ ಎಂದರು.

88 ವರ್ಷಗಳಿಂದ
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿ, ಕ್ಷೇತ್ರದಲ್ಲಿ ಸ್ವಾಮಿಯ ದರ್ಶನಕ್ಕೆ ಸರ್ವಧರ್ಮೀ ಯರೂ ಬರುತ್ತಾರೆ. ಹಾಗೆಂದೇ ನಮ್ಮ ಹಿರಿಯರಾದ ಕೀರ್ತಿಶೇಷ ಡಿ. ಮಂಜಯ್ಯ ಹೆಗ್ಗಡೆಯವರು, ಸರ್ವಧರ್ಮ ಸಮ್ಮೇಳನ ಪ್ರಾರಂಭಿಸಿದರು ಹಾಗೂ ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರು ಮುಂದುವರಿಸಿದರು. 88 ವರ್ಷಗಳ ಸಮ್ಮೇಳನಗಳಲ್ಲಿ ಅನೇಕ ಮಹಾನುಭಾವರು ಭಾಗಿಯಾಗಿದ್ದಾರೆ ಎಂದರು.

ನಾನು ಪೀಠವನ್ನು ಅಲಂಕರಿಸಿದ ದಿನದಿಂದ ದೇಶದಲ್ಲಿನ ವಿವಿಧ ಧರ್ಮಗಳ ಮಹತ್‌ ಸಂದೇಶಗಳ ಸದ್‌ವಿಚಾರಗಳನ್ನು ತಿಳಿದು ನಮ್ಮ ಪರಂಪರೆಯನ್ನು ಪಾಲಿಸುತ್ತಾ ಯಾವುದೇ ಸಂಕುಚಿತ ಭಾವನೆಗಳಿಗೆ ನಿರ್ಬಂಧಿಸಿಕೊಳ್ಳದೆ, ಪ್ರಗತಿಪರ ಚಿಂತನೆಗಳೊಂದಿಗೆ, ಲೌಕಿಕ ಹಾಗೂ ಪಾರಮಾರ್ಥಿಕ ಎರಡೂ ದಿಕ್ಕುಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಿದ್ದೇನೆ ಎಂದು ಹೇಳಿದರು.

Advertisement

ಸಂಸ್ಕೃತಿ, ಸಂಸ್ಕಾರ, ಸಂಸ್ಕೃತ
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಎಸ್‌. ವ್ಯಾಸ ಯೋಗ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ| ರಾಮಚಂದ್ರ ಭಟ್ಟ ಮಾತನಾಡಿ, ಧರ್ಮದಲ್ಲಿ ಸರ್ವವೂ ಇದೆ, ಆದರೆ ಸರ್ವವೂ ಧರ್ಮವಲ್ಲ. ಸಂಸ್ಕೃತಿ, ಸಂಸ್ಕಾರ, ಸಂಸ್ಕೃತ ಜಗತ್ತನ್ನು ಬೆಳಗಿಸುವ ದೀಪಗಳಾಗಿವೆ. ಸರ್ವರ ಸ್ವಾಸ್ಥ್ಯಕ್ಕಾಗಿ ನಾವು ಪ್ರಕೃತಿಗೆ ಪೂರಕವಾಗಿ ಬದುಕಬೇಕು. ಮಾನವನ ಅಪರಾಧಗಳು ಹಾಗೂ ಪ್ರಕೃತಿಗೆ ವಿರುದ್ಧವಾಗಿ ವರ್ತಿಸುವ ಸ್ವಭಾವವೇ ಇಂದಿನ ಪ್ರಾಕೃತಿಕ ವಿಕೋಪಗಳಿಗೆ ಕಾರಣ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಮಾಹೆ ಗಾಂಧಿಯನ್ ಸೆಂಟರ್ : ನೊಬೆಲ್ ಪುರಸ್ಕೃತರ ಕೊಡುಗೆಯ ವಿಚಾರಗೋಷ್ಠಿ

ಉಪನ್ಯಾಸ
ಭಾರತೀಯ ಧರ್ಮಗಳು ಕುರಿತು ಸಾಹಿತಿ ಸಾಗರದ ಪ್ರಾಧ್ಯಾಪಕ ಡಾ| ಸಫ್ರಾಜ್‌ ಚಂದ್ರಗುತ್ತಿ, ಜೈನ ಧರ್ಮದ ಮೌಲಿಕತೆ ಮತ್ತು ಮಹತ್ವದ ಕುರಿತು ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕಿ ಡಾ| ಎಂ.ಎಸ್‌. ಪದ್ಮ, ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ್ಯ ಕುರಿತು ಶಿವಮೊಗ್ಗ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ವೀರೇಶ್‌ ವಿ. ಮೊರಾಸ್‌ ಉಪನ್ಯಾಸ ನೀಡಿದರು.

ಶಾಸಕ ಹರೀಶ್‌ ಪೂಂಜ, ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಡಿ. ಶ್ರೇಯಸ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮಾನ
ಧರ್ಮಾಧಿಕಾರಿಗಳು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್ ಹಾಗೂ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಪ್ರೊ| ರಾಮಚಂದ್ರ ಭಟ್ಟ ಅವರನ್ನು ಕ್ಷೇತ್ರದ ವತಿಯಿಂದ ಸಮ್ಮಾನಿಸಿದರು. ಇದಕ್ಕೂ ಮುನ್ನ ಬೀಡಿನಿಂದ ಗಣ್ಯರನ್ನು ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.

ಸರ್ವಧರ್ಮ ಉಪನ್ಯಾಸ ನೀಡಿದ ಗಣ್ಯರನ್ನು ಲಕ್ಷ ದೀಪೋತ್ಸವ ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್‌ಗೌರವಿಸಿದರು. ಶ್ರದ್ಧಾ ಅಮಿತ್‌ ಬೆಂಗಳೂರು ಮತ್ತು ಸುನೀಲ್‌ ಪಂಡಿತ್‌ ಸಮ್ಮಾನಿತರ ಪತ್ರ ವಾಚಿಸಿದರು. ಪ್ರಾಧ್ಯಾಪಕ ಡಾ| ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿ, ಧರ್ಮಸ್ಥಳ ಪಂಚಾಯತ್‌ ಪಿಡಿಒ ಉಮೇಶ್‌ ಕುರ್ಮಾಣಿ ವಂದಿಸಿದರು.

ನೇಮ ವೀಕ್ಷಿಸಿದ ರಾಜ್ಯಪಾಲರು
ಧರ್ಮಸ್ಥಳದಿಂದ ನೇರವಾಗಿ ಉಡುಪಿಗೆ ಹೊರಟ ರಾಜ್ಯಪಾಲರು ಅಳದಂಗಡಿ ಶ್ರೀ ಸತ್ಯದೇವತೆ ಕಲ್ಲುರ್ಟಿ ಸನ್ನಿಧಾನದಲ್ಲಿ ನಡೆಯುತ್ತಿದ್ದ ನೇಮೋತ್ಸವ ವೀಕ್ಷಣೆಗೆ ತೆರಳಿದರು. ಈ ವೇಳೆ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ಸುಮಾರು ಅರ್ಧತಾಸುಗಳ ಕಾಲ ನೇಮ ವೀಕ್ಷಿಸಿ ಸ್ಥಳ ಮಹತ್ವ, ನೇಮ ಕುರಿತು ಮಾಹಿತಿ ಪಡೆದರು. ಈ ವೇಳೆ ಶಾಸಕ ಹರೀಶ್‌ ಪೂಂಜ, ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸಹಿತ ಅಧಿಕಾರಿಗಳು ಜತೆಗಿದ್ದರು.

ಇಂದು ಸಾಹಿತ್ಯ ಸಮ್ಮೇಳನ
ಡಿ. 3ರಂದು ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 89 ಅಧಿವೇಶನ ಉದ್ಘಾಟನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಆಗಮಿಸುವರು. ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಮಲ್ಲೇಪುರಂ ಜಿ. ವೆಂಕಟೇಶ್‌ಅಧ್ಯಕ್ಷತೆ ವಹಿಸುವರು. ಡಾ| ಹೆಗ್ಗಡೆ ಸ್ವಾಗತ ಭಾಷಣ ಮಾಡುವರು. ಸಾಗರದ ಖ್ಯಾತ ಸಾಹಿತಿ ಡಾ| ಪಿ. ಗಜಾನನ ಶರ್ಮ, ಕಿರುಚಿತ್ರ ನಿರ್ದೇಶಕಿ, ಸಾಹಿತಿ ಡಾ| ಪಿ. ಚಂದ್ರಿಕಾ ಮತ್ತು ಬೆಂಗಳೂರಿನ ಡಾ| ಕೆ.ಪಿ. ಪುತ್ತೂರಾಯ ಉಪನ್ಯಾಸ ನೀಡುವರು. ಬಳಿಕ ಬೆಂಗಳೂರಿನ ಮಂಜುಳಾ ಪರಮೇಶ್‌ ನಿರ್ದೇಶನದಲ್ಲಿ ನೃತ್ಯ ಸಂಭ್ರಮ, ಶ್ವೇತಾ ದೇವನಹಳ್ಳಿ ಮತ್ತುತಂಡದವರಿಂದ ಗಾನ ಲಹರಿ ಜರಗಲಿದೆ.

ಲೋಕಸಭೆಯಲ್ಲಿ ಹಾಗೂ ಸರ್ವೋಚ್ಚ ನ್ಯಾಯಾ ಲಯ ದಲ್ಲಿಯೂ ಸರ್ವ ಧರ್ಮಗಳ ಸಮನ್ವಯದಿಂದಲೇ ಲೋಕ ಕಲ್ಯಾಣ ಸಾಧ್ಯ ಎಂಬ ಆಶಯ ವ್ಯಕ್ತಪಡಿಸಲಾಗಿದೆ. ಧರ್ಮದ ತಣ್ತೀ, ಸಿದ್ಧಾಂತಗಳನ್ನು ಅರಿತು ಬದುಕಿನಲ್ಲಿ ಪಾಲನೆ ಮಾಡಿದರೆ ಎಲ್ಲರಲ್ಲಿಯೂ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆದು ಸಾಮಾಜಿಕ ಸಾಮರಸ್ಯ ಸಾಧ್ಯವಾಗುತ್ತದೆ.
– ಥಾವರ್‌‍ಚಂದ್‌ ಗೆಹ್ಲೋಟ್

ಸಂಭ್ರಮದ ಲಲಿತೋದ್ಯಾನ ಉತ್ಸವ
ಬೆಳ್ತಂಗಡಿ: ಧರ್ಮಸ್ಥಳ ಲಕ್ಷದೀಪೋತ್ಸವದ ಮೂರನೇ ದಿನ ಡಿ. 1ರಂದು ರಾತ್ರಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಲಲಿತೋದ್ಯಾನ ಉತ್ಸವ ಮತ್ತು ರಥೋತ್ಸವ ಸಂಭ್ರಮದಿಂದ ನೆರವೇರಿತು.

ದೇವಸ್ಥಾನದ ಅಂಗಣದಲ್ಲಿ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿರಿಸಿ 16 ಸುತ್ತು ಪ್ರದಕ್ಷಿಣೆ ಬಂದು ಸಂಗೀತ ಸೇವೆ, ವಾಲಗ, ಕೊಳಲು, ಚೆಂಡೆ, ಶಂಖ ಸೇವೆಗಳೊಂದಿಗೆ ದೇವಸ್ಥಾನ ಮುಂಭಾಗವಿರುವ ಲಲಿತೋದ್ಯಾನಕ್ಕೆ ವಿಹಾರಕ್ಕೆ ಕರೆತಂದು ವಿವಿಧ ವಿಧಿ ನೆರವೇರಿಸಲಾಯಿತು. ರಥೋತ್ಸವದೊಂದಿಗೆ ಲಲಿತೋದ್ಯಾನ ಉತ್ಸವ ಪೂರ್ಣಗೊಂಡಿತು. ಮಾಣಿ ಶ್ರೀ ಧಾಮದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.

ಲಲಿತಕಲಾಗೋಷ್ಠಿ
ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ ಲಲಿತಕಲಾಗೋಷ್ಠಿ ನಡೆಯಿತು. ವಾದ್ಯಗೋಷ್ಠಿ, ಬಳಿಕ ಡಾ| ಪದ್ಮಿನಿ ಓಕ್‌ ಮತ್ತು ತಂಡದವರಿಂದ ತಣ್ತೀಸಿಂಚನ-ಗಾಯನ, ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ನೃತ್ಯರೂಪಕ ಸಾದರಪಡಿಸಿದರು. ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next