Advertisement

ಸರಕಾರಿ ಶಾಲೆ ಬಲಪಡಿಸಲು ಚಿಂತನೆ

03:16 PM Jul 06, 2017 | |

ಕಲಬುರಗಿ: ಸರಕಾರಿ ಶಾಲೆಯಲ್ಲಿನ ಮಕ್ಕಳ ಸಮಗ್ರ ವಿಕಾಸ ಹಾಗೂ ಕುಸಿಯುತ್ತಿರುವ ದಾಖಲಾತಿ, ಮೂಲ ಸೌಕರ್ಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರಸಕ್ತ ತಿಂಗಳ 31ರೊಳಗೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ರಚಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ ಆಳ್ವ ಸೂಚಿಸಿದರು.

Advertisement

ಬುಧವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಅವರು, ಪ್ರತಿ ಸಂಘದಲ್ಲಿ 150 ವಿದ್ಯಾರ್ಥಿಗಳು ಇರಲೇಬೇಕು. ಇದರಿಂದ ಶಿಕ್ಷಣದ ಗುಣಮಟ್ಟ, ಸೌಲಭ್ಯಗಳನ್ನು ಹಳೆ ವಿದ್ಯಾರ್ಥಿಗಳು ಓದಿರುವ ಶಾಲೆಗೆ ಕೊಡುವ ದೇಣಿಗೆಯಿಂದ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಿದೆ. ಆದ್ದರಿಂದ ಇಂತಹ ಸಂಘಗಳನ್ನು ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಲ್ಲಿ ರಚಿಸಬೇಕು ಎಂದು ಸಂಘ ರಚನೆ ಹಿಂದಿನ ಉದ್ದೇಶ ಸಮರ್ಥಿಸಿಕೊಂಡರು. ಸರಕಾರಿ ಶಾಲೆ ಶಿಕ್ಷಕರಲ್ಲಿ ಹೊಣೆಗಾರಿಕೆ ಇರಬೇಕು. ಇಲ್ಲದಿದ್ದರೆ ಇನ್ನು ಸ್ವಲ್ಪವೇ ಕಾಲಾವಧಿಯಲ್ಲಿ ಸರಕಾರಿ ಶಾಲೆಗಳನ್ನು ಕೇವಲ ಚಿತ್ರಗಳಲ್ಲಿ ಮಾತ್ರ ನೋಡಿ ನೆನಪಿಸಿಕೊಳ್ಳಬೇಕಾಗುತ್ತದೆ ಎಂದು
ಕಳವಳ ವ್ಯಕ್ತಪಡಿಸಿದರು. ಹಳ್ಳಿಗಳಲ್ಲಿ ದೇಣಿಗೆ ನೀಡುವ ಮಹಾತ್ಮರು ಈಗಲೂ ಇದ್ದಾರೆ. ಅಂತಹ ವ್ಯಕ್ತಿಗಳ ಮನವೊಲಿಸುವ ಕೆಲಸ ಆಗಬೇಕು. ಶಾಲೆಗಳಲ್ಲಿ “ಕಂಪ್ಲೆಂಟ್‌ ಬಾಕ್ಸ್‌’ ಅಳವಡಿಸಿ, ಆ ಬಾಕ್ಸ್‌ ತೆರೆದು ನೋಡುವ 
ಅಧಿಕಾರವನ್ನು ಮಕ್ಕಳಿಗೆ ನೀಡಿ. ಫೇಸ್‌ಬುಕ್‌, ವಾಟ್ಸಾಪ್‌ ಬಳಸಿಕೊಂಡರೆ ಹಳೆ ವಿದ್ಯಾರ್ಥಿಗಳ ಸಂಘ ರಚನೆ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.

ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲಿ ಇಂತಹ ಪ್ರಯತ್ನದಿಂದ ಉತ್ತಮ ಫಲಿತಾಂಶ ಬಂದಿದೆ. ಅದನ್ನು ರಾಜ್ಯದ ತುಂಬಾ
ವಿಸ್ತರಣೆಗೆ ಆಯೋಗ ಮುಂದಾಗಿದೆ. ಶಿಕ್ಷಣ ಇದ್ದರೆ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಹಾಗೂ ಭ್ರೂಣ ಹತ್ಯೆಗೆ ತಡೆಯಲು ಜಾಗೃತಿ ತಾನೇತಾನಾಗಿ ಮೂಡುತ್ತದೆ. ಮನುಷ್ಯ ಜೀವನದ ಶೇ.70ರಷ್ಟು ಸಮಸ್ಯೆಗಳಿಗೆ ಶಿಕ್ಷಣದಿಂದಲೇ ಪರಿಹಾರ ಕಂಡುಕೊಳ್ಳಬಹುದು. ಸರಕಾರಿ ಶಾಲೆಗಳ ಬಲವರ್ಧನೆ ಎಲ್ಲರ ಕರ್ತವ್ಯ ಆಗಬೇಕು. ಇದನ್ನು ಸರಿಪಡಿಸಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಸಮಯ ಮತ್ತು ಹೆಚ್ಚು
ಪರಿಶ್ರಮವಹಿಸಿ ಮಕ್ಕಳ ಅಭ್ಯುದಯಕ್ಕಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ವಸ್ತು ಮತ್ತು ಸಾಮಗ್ರಿಗಳನ್ನು
ಬಳಸಿಕೊಂಡು ಜಿಲ್ಲೆಯಲ್ಲಿನ ಎಲ್ಲ ಸರಕಾರಿ ಶಾಲೆಗಳಿಗೆ ಆವರಣ ಗೋಡೆ ನಿರ್ಮಿಸಬೇಕು ಎಂದು ಹೇಳಿದಾಗ, ಜಿಪಂ ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ, ಸಹಮತ ವ್ಯಕ್ತಪಡಿಸಿ, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.  ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್‌, ಜಿಲ್ಲಾ ಪಂಚಾಯಿತಿ ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಕೊಳ್ಳಾ, ಚಂದ್ರಶೇಖರ ಅಲ್ಲಿಪುರ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಸ್ವಾಗತಿಸಿದರು.

ಪೊಲೀಸರೇ ಪಾಠ ಮಾಡಿ ಬನ್ನಿ
ಸರಕಾರಿ ಶಾಲೆಗಳಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಅರ್ಹ ಬೋಧಕರು ಬಂದು ಪಾಠ ಮಾಡಬಹುದು ಎನ್ನುವ ಆಹ್ವಾನವನ್ನು ಆಯೋಗದ ಅಧ್ಯಕ್ಷೆ ಕೃಪಾ ಅಮರ ಆಳ್ವ ಆಹ್ವಾನ ನೀಡುತ್ತಿದ್ದಂತೆ, ಎಸ್ಪಿ ಎನ್‌. ಶಶಿಕುಮಾರ ಮಾತನಾಡಿ, ಈಗಾಗಲೇ ಪರೀಕ್ಷೆ ಸಂದರ್ಭದಲ್ಲಿ ಬಂದೋಬಸ್ತ್ ನೀಡಲಾಗುತ್ತಿದೆ. ಆದರೆ, ಈಗ ನೀವು ಪಾಠ ಮಾಡಲು ಆಹ್ವಾನ ನೀಡುವುದಾದರೆ ನಾವು ಬಂದು ಪಾಠ ಮಾಡ್ತಿವಿ. ಶಿಕ್ಷಕರು ಬಂದೋಬಸ್ತ್ಗೂ ಬರಲಿ ಎಂದಾಗ ಸಭೆಯಲ್ಲಿ ಭಾರಿ ಕಡತಾನದ ಮಧ್ಯೆ ನಗೆ ಉಕ್ಕಿತು. ಅದಾದ ಬಳಿಕ ಎಸ್ಪಿ ಅವರು, ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಅಗತ್ಯ ಬಿದ್ದರೆ ನಮ್ಮ ಸಿಬ್ಬಂದಿ ಪಾಠ ಮಾಡುವರು ಎಂದು ಹೇಳಿದರು. ಅಲ್ರಿ.. ಪೊಲೀಸರು ಶಾಲೆಗೆ ಬಂದು ಪಾಠ ಮಾಡಿದರೆ ಮಕ್ಕಳು ಶಾಲೆಗೆ ಬರುತ್ತಾರಾ ಎನ್ನುವ ಪ್ರಶ್ನೆಯೂ ಕೇಳಿ ಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next