Advertisement

ಭೂ ಒತ್ತುವರಿ ತಡೆಗೆ ಮುಂದಾದ ಸರ್ಕಾರ

11:58 AM Jun 19, 2018 | Team Udayavani |

ಬೆಂಗಳೂರು: ಇಪ್ಪತೈದು ಸಾವಿರ ಕೋಟಿ ರೂ. ಮೌಲ್ಯದ ಐದು ಸಾವಿರ ಎಕರೆಯಷ್ಟು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಮೀನು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವುದು ಅಥವಾ ಸಕ್ರಮಗೊಳಿಸುವ ಬಗ್ಗೆ ಅಗತ್ಯ ಕಾನೂನು ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಸೋಮವಾರ ಬೆಂಗಳೂರು ವ್ಯಾಪ್ತಿಯ ಸಂಸದರು, ಶಾಸಕರೊಂದಿಗೆ ಇಡೀ ದಿನ ಸುದೀರ್ಘ‌ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಗರದಲ್ಲಿ ಬಿಡಿಎ ವ್ಯಾಪ್ತಿಯ ಪ್ರದೇಶದಲ್ಲಿ 5000 ಎಕರೆ ಒತ್ತುವರಿಯಾಗಿದೆ. ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಭೂಮಿಯನ್ನು ವಶಕ್ಕೆ ಪಡೆಯುವ ಇಲ್ಲವೇ ಸಕ್ರಮಗೊಳಿಸುವ ಬಗ್ಗೆ ತೀರ್ಮಾನ ಮಾಡಬೇಕಿದೆ. ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗವುದು. ಅಗತ್ಯವಾದರೆ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು.

ಕಸ ವಿಲೇವಾರಿಯಲ್ಲಿನ ಅವ್ಯವಸ್ಥೆಯಿಂದ ಬೆಂಗಳೂರಿಗೆ ಅಪಕೀರ್ತಿ ಬಂದಿದೆ. ಇದನ್ನು ಬಗೆಹರಿಸಲು ಎಲ್ಲರ ಸಹಕಾರ ಅಗತ್ಯ. ನಗರದಲ್ಲಿ ನಿತ್ಯ 4,500 ಟನ್‌ ಕಸ ಉತ್ಪತ್ತಿಯಾಗುತ್ತಿದ್ದು, ಅಪಾರ್ಟ್‌ಮೆಂಟ್‌ಗಳಿಂದ ಸುಮಾರು 1,000 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಇದರ ವೈಜ್ಞಾನಿಕ ನಿರ್ವಹಣೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ತ್ಯಾಜ್ಯ ವಿಲೇವಾರಿಗೆ ನೀಡುವ ಮೊತ್ತ ಪರಿಷ್ಕರಣೆ ಹಿನ್ನೆಲೆಯಲ್ಲಿ ನಾಲ್ಕು ತಿಂಗಳಿನಿಂದ ಪೌರ ಕಾರ್ಮಿಕರಿಗೆ ವೇತನ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಬಳಿಕ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲಾಗಿದ್ದು, ಇದೀಗ ಕಸ ವಿಲೇವಾರಿ ತ್ವರಿತವಾಗಿ ನಡೆಯುತ್ತಿದೆ. ವಾರ ಇಲ್ಲವೇ 10 ದಿನದಲ್ಲಿ ನಗರದಲ್ಲಿ ಸಂಪೂರ್ಣ ಕಸ ವಿಲೇವಾರಿಯಾಗಲಿದೆ ಎಂದು ಭರವಸೆ ನೀಡಿದರು.

ವೇಸ್ಟ್‌ ಟು ಎನರ್ಜಿ: ಪಾಲಿಕೆಯಿಂದ ಆರು ಘಟಕ ನಿರ್ಮಿಸಲಾಗಿದ್ದು, ಬಫ‌ರ್‌ ಜೋನ್‌ ಕಲ್ಪಿಸಿಲ್ಲ. ಹಾಗಾಗಿ ದುರ್ವಾಸನೆ, ನೊಣದ ಹಾವಳಿ ತೀವ್ರವಾಗಿದೆ ಎಂದು ಇತ್ತೀಚೆಗೆ ಎರಡು ಘಟಕಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ ಕಸವನ್ನು ಸುಟ್ಟು ವಿದ್ಯುತ್‌ ಉತ್ಪಾದಿಸಿ ಬಳಸುವ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗಿದೆ.

Advertisement

ಎರಡು ಘಟಕಗಳಿಂದ ಈಗಾಗಲೇ ಪ್ರಸ್ತಾವ ಸಲ್ಲಿಕೆಯಾಗಿದ್ದು, ಅನುಮೋದನೆ ನೀಡಲಾಗುವುದು. ನಂತರ ಆರು ಘಟಕಗಳಲ್ಲೂ “ವೇಸ್ಟ್‌ ಟು ಎನರ್ಜಿ’ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ರಸ್ತೆ ಗುಂಡಿ ಮುಚ್ಚುವುದು, ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮಳೆ ಸುರಿದಾಗ ಹೆಚ್ಚು ಗುಂಡಿಗಳು ಸೃಷ್ಟಿಯಾಗಲಿವೆ. ಈಗಾಗಲೇ ವೈಟ್‌ ಟಾಪಿಂಗ್‌, ಟೆಂಡರ್‌ಶ್ಯೂರ್‌ ವಿಧಾನದಡಿ 800 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಸ್ತೆ ದುರಸ್ತಿ ಜವಾಬ್ದಾರಿಯನ್ನು ಎಂಟು ವಲಯಗಳ ಮುಖ್ಯ ಇಂಜಿನಿಯರ್‌ಗೆ ವಹಿಸಲಾಗಿದೆ. ಇದಕ್ಕೆ ಅಗತ್ಯ ಅನುದಾನ ಒದಗಿಸುವಂತೆಯೂ ಸೂಚಿಸಲಾಗಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್‌ಮುಕ್ತ ನಗರಕ್ಕೆ ಮನವಿ: ನಗರವನ್ನು ಪ್ಲಾಸ್ಟಿಕ್‌ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದ್ದಾರೆ. ಈಗಾಗಲೇ ನಗರದಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದ್ದು, ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಮಾತುಕತೆ ನಡೆದಿದೆ. ಬೆಂಗಳೂರಿನ ಕೆರೆಗಳು ಮಲಿನವಾಗದಂತೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಿದರು.

ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಒತ್ತು: ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಬಹುಮಹಡಿ ಪಾರ್ಕಿಂಗ್‌ ತಾಣಗಳನ್ನು ನಿರ್ಮಿಸಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. ನಿಷೇಧವಿರುವ ಕಡೆ ವಾಹನ ನಿಲುಗಡೆ ಸೇರಿದಂತೆ ಇತರೆ ನಿಯಮ ಉಲ್ಲಂಘನೆಗೂ ದಂಡ ಪ್ರಯೋಗಕ್ಕೆ ಸೂಚಿಸಲಾಗುವುದು. ಆಯ್ದ ರಸ್ತೆಗಳನ್ನು ಗುರುತಿಸಿ ಪರಿಣಾಮಕಾರಿಯಾಗಿ ದಂಡ ವಿಧಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿವರಿಸಿದರು.

ರಾಮಲಿಂಗಾರೆಡ್ಡಿ, ಜಾರ್ಜ್‌ ಗೈರು: ಬೆಂಗಳೂರಿನ ಸಮಸ್ಯೆ ನಿವಾರಣೆ ಹಾಗೂ ಅಭಿವೃದ್ಧಿ ಕುರಿತಂತೆ ಚರ್ಚಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆಗೆ ನಗರ ವ್ಯಾಪ್ತಿಯ ಸಂಸದರು, ಶಾಸಕರ ಸಭೆಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಸೋಮವಾರ ಕರೆದಿದ್ದರು. ಈ ಸಭೆ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಹಾಗೂ ಕೆ.ಜೆ.ಜಾರ್ಜ್‌ ಗೈರಾಗಿದ್ದರು.

ವಿಭಜನೆಯಲ್ಲಿ ಪುನಾರಚನೆ: ಬೆಂಗಳೂರನ್ನು ಕೇಕ್‌ ಕತ್ತರಿಸುವ ಮಾದರಿಯಲ್ಲಿ ವಿಭಜಿಸುವುದಿಲ್ಲ. ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ನೇತೃತ್ವ ಸಮಿತಿ ನೀಡಿರುವ ವರದಿಯನ್ನು ಸಂಪೂರ್ಣ ಓದಿಲ್ಲ. ಬಿಬಿಎಂಪಿಯ ವಿಭಜನೆ ಎಂಬುದಕ್ಕೆ ಬದಲಾಗಿ ಪುನರಾಚನೆಯಾಗಬೇಕಿದೆ. ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿದರು.

ಹೊಸ ಮೇಲುಸೇತುವೆ ನಿರ್ಮಾಣ: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಆದ್ಯತೆ ನೀಡಲಾಗುವುದು. ಮುಖ್ಯವಾಗಿ ಹೆಬ್ಟಾಳ ಜಂಕ್ಷನ್‌ನಲ್ಲಿ ದಟ್ಟಣೆ ನಿವಾರಣೆಗಾಗಿ ಮೇಲುಸೇತುವೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲೂ ದಟ್ಟಣೆ ಉಂಟಾಗುತ್ತಿದ್ದು, ಮೇಲುಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ.

ಈ ಕಾರ್ಯಕ್ಕೆ ರಕ್ಷಣಾ ಇಲಾಖೆಯ ಭೂಮಿ ಪಡೆದು ಬದಲಿ ಭೂಮಿ ನೀಡಲು ನಿರ್ಧಾರವಾಗಿದೆ. ಶೀಘ್ರವೇ ಮೇಲುಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಕೆ.ಆರ್‌.ಪುರ ಜಂಕ್ಷನ್‌ನಲ್ಲೂ ಬೆಳಗ್ಗೆ, ಸಂಜೆ ತೀವ್ರ ದಟ್ಟಣೆ ಉಂಟಾಗುತ್ತಿದ್ದು, ಸಂಚಾರ ನಿಯಂತ್ರಣಕ್ಕೆ ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಪ್ರಸ್ತಾವ ಸಲ್ಲಿಕೆಯಾಗಿದ್ದು, ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಡಾ.ಜಿ.ಪರಮೇಶ್ವರ್‌ ಹೇಳಿದರು. ಹೇಳಿದರು.

110 ಹಳ್ಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌: ಬಿಬಿಎಂಪಿ ರಚನೆಯಾದ 2007ರಲ್ಲಿ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನೀಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಅಭಿವೃದ್ಧಿ ಸಚಿವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಪಾಲಿಕೆಗೆ ಸೇರ್ಪಡೆಯಾಗಿರುವ 110 ಹಳ್ಳಿಯಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿಲ್ಲ.

ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಇತರೆ ಮೂಲ ಸೌಕರ್ಯವನ್ನು ವ್ಯವಸ್ಥಿತವಾಗಿ ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ. ಜತೆಗೆ ಕುಡಿಯುವ ನೀರಿನ ಸೌಲಭ್ಯವನ್ನು ಆದ್ಯತೆ ಮೇರೆಗೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. 110 ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಲಿಂಗನಮಕ್ಕಿಯಿಂದ ನಗರಕ್ಕೆ ನೀರು!: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸುವ ಪ್ರಸ್ತಾವಕ್ಕೆ ಸಂಬಂಧಪಟ್ಟಂತೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ಹೇಳಿದರು. ಲಿಂಗನಮಕ್ಕಿ ಜಲಾಶಯದಿಂದ ನಗರಕ್ಕೆ ನೀರು ಪೂರೈಸುವ ಸಂಬಂಧ ಹಿಂದೆಯೇ ಪ್ರಸ್ತಾವ ಸಲ್ಲಿಕೆಯಾಗಿತ್ತು.

ಅದರ ಸಾಧಕ ಬಾಧಕ ತಿಳಿಸಲು ಡಿಪಿಆರ್‌ ತಯಾರಿಸಲು ಸೂಚಿಸಲಾಗಿದೆ. ಬೆಂಗಳೂರಿನ ಕಾವೇರಿ 5ನೇ ಹಂತದಡಿ ನೀರು ಪಡೆಯುವುದೇ ಅಂತಿಮವೆನಿಸಿದ್ದು, ನಂತರ ಹೆಚ್ಚು ನೀರು ಪಡೆಯಲು ಸಾಧ್ಯವಾಗದಿರಬಹುದು. ಹಾಗಾಗಿ ಪರ್ಯಾಯಗಳನ್ನು ಹುಡುಕುವ ಕಾರ್ಯ ನಡೆದಿದೆ ಎಂದು ತಿಳಿಸಿದರು. ತಿಪ್ಪಗೊಂಡನಹಳ್ಳಿ ಜಲಾಶಯ ನೀರು ಕಲುಷಿತಗೊಂಡಿದೆ.

ಜಲಾಶಯಕ್ಕೆ ಕಲುಷಿತ ನೀರು ಸೇರದಂತೆ ತಡೆಯಲಾಗುವುದು. ಜತೆಗೆ ಎತ್ತಿನಹೊಳೆ ಯೋಜನೆಯಡಿ ನಗರದ ಹೊರ ಭಾಗದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿಸಿ ಅಲ್ಲಿಂದ ನಗರಕ್ಕೆ ನೀರು ಹರಿಸುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next