Advertisement

ಆಸಿಡ್ ದಾಳಿಗೊಳಗಾದ ಮಹಿಳೆಗೆ ಸರ್ಕಾರಿ ಕೆಲಸ: ಸಿಎಂ ಬೊಮ್ಮಾಯಿ ಭರವಸೆ

10:57 AM Nov 01, 2022 | Team Udayavani |

ಬೆಂಗಳೂರು: ಸರ್ಕಾರಿ ಕೆಲಸ ಹಾಗೂ ಮನೆ ಮಂಜೂರು ಮಾಡಿಕೊಡ ಬೇಕೆಂಬ ಆಸಿಡ್ ದಾಳಿಗೊಳಗಾದ ಮಹಿಳೆಯ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಸ್ಪಂದಿಸಿ, ಮಹಿಳೆಗೆ ಸರ್ಕಾರಿ ಕೆಲಸ ನೀಡುವ ಭರವಸೆ ನೀಡಿದರು.

Advertisement

ತಮ್ಮ ನಿವಾಸದ ಬಳಿ ಇಂದು ಭೇಟಿ ಮಾಡಿದ ಆಸಿಡ್ ದಾಳಿಗೊಳಗಾದ ಮಹಿಳೆಗೆ    ಕೂಡಲೇ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯ ಮಂತ್ರಿಗಳು ಮಾಧ್ಯಮದವರಿಗೆ ತಿಳಿಸಿದರು.

ಫ್ಲ್ಯಾಟ್ ನೀಡಲು ಕ್ರಮ: ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಮಾಸಾಶನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಆಕೆ ಒಂದು ಮನೆಗೂ ಬೇಡಿಕೆ ಸಲ್ಲಿಸಿದ್ದು, ವಸತಿ ಸಚಿವರ ಬಳಿ ಮಾತನಾಡಿ, ಈ ಭಾಗದಲ್ಲಿ ಬಡವರಿಗಾಗಿ ನಿರ್ಮಿಸಲಾಗುತ್ತಿರುವ 40 ಸಾವಿರ ಫ್ಲ್ಯಾಟ್ ಗಳಲ್ಲಿ ಒಂದು ಫ್ಲ್ಯಾಟ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ಕನ್ನಡ ರಾಜ್ಯೋತ್ಸವದ ವಿಶೇಷ. ನವೆಂಬರ್ 1 ರಂದೇ ಪ್ರಶಸ್ತಿ ನೀಡಬೇಕೆನ್ನುವುದು ನನ್ನ ಇಚ್ಛೆಯಾಗಿತ್ತು. ಡಾ: ಪುನೀತ್ ರಾಜಕುಮಾರ್ ಅವರು ಕನ್ನಡಕ್ಕಾಗಿ ಸಂಪೂರ್ಣ ಬದುಕನ್ನೇ ಮೀಸಲಿಟ್ಟವರು. ಕನ್ನಡದ ಬಗ್ಗೆ, ಅಸ್ಮಿತೆಯ ಬಗ್ಗೆ ಜಾಗೃತಿ ಮೂಡಿಸಿದವರು. ಕನ್ನಡ ನಾಡಿನಲ್ಲಿ ಹಲವಾರು ಪರೋಪಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ತಮ್ಮ ಅಂಗಾಗಗಳನ್ನೇ ದಾನ ಇತರರಿಗೆ ಮಾದರಿಯಾಗಿದ್ದಾರೆ. ಲಕ್ಷಾಂತರ ಜನರು ಅಂಗಾಂಗ ದಾನ ಮಾಡಲು ಪ್ರೇರಣಾ ಶಕ್ತಿಯಾಗಿದ್ದಾರೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಇಂದು ಸಂಜೆ ಪ್ರದಾನ ಮಾಡಲಾಗುತ್ತಿದೆ. ಇದೊಂದು ಮಹತ್ವದ ಕಾರ್ಯಕ್ರಮ. ಪಠ್ಯ ಪುಸ್ತಕದಲ್ಲಿ ಪುನೀತ ಅವರ ಬಗ್ಗೆ ಪಾಠವನ್ನು ಸೇರ್ಪಡೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಬಹುದೋ ಅದನ್ನು ಮಾಡಲಾಗುವುದು ಎಂದರು.

ಇದನ್ನೂ ಓದಿ:ಗ್ರಾಹಕರಿಗೆ ಸಿಹಿ ಸುದ್ದಿ: ವಾಣಿಜ್ಯ ಬಳಕೆ 19 ಕೆಜಿ LPG ಸಿಲಿಂಡರ್ ಬೆಲೆ 115 ರೂ. ಇಳಿಕೆ

Advertisement

ಕನ್ನಡ ಡಿಂಡಿಮ ಬಾರಿಸಬೇಕು: ಸಮಸ್ತ ಕನ್ನಡ ನಾಡಿನ ಜನತೆಗೆ 67 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ ಮುಖ್ಯ ಮಂತ್ರಿಗಳು ಅತ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಆಚರಣೆ ಕೇವಲ ಆಚರಣೆಯಾಗಿ ಉಳಿಯದೆ ಪ್ರತಿಯೊಬ್ಬ ಕನ್ನಡಿಗರ ಹೃದಯಗಳಲ್ಲಿ ಕನ್ನಡ ಡಿಂಡಿಮ ಬಾರಿಸಬೇಕು. ಕನ್ನಡಿಗರು ಶಿಕ್ಷಣ, ಉದ್ಯೋಗ ಮತ್ತು ಎಲ್ಲಾ ರಂಗಗಳಲ್ಲಿ ಮುಂದೆ ಬರಲು ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಅದರ ಲಾಭವನ್ನು ಕನ್ನಡಿಗರು ಪಡೆಯಬೇಕು. ವಿಶೇಷವಾಗಿ ಯುವಕರು ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕು. ಪ್ರತಿ ಕನ್ನಡಿಗನೂ ಕನ್ನಡ ದ ಅಸ್ಮಿತೆ, ಸ್ವಾಭಿಮಾನದ ಬಗ್ಗೆ ಜಾಗೃತಿ ಮೂಡಿಸಿ ಎಲ್ಲಿದ್ದರೂ ಕನ್ನಡಿಗರಾಗಿಯೇ ಇರಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next