Advertisement

Government; ಡಿಜಿಟಲೀಕರಣದತ್ತ ಅಬಕಾರಿ ಇಲಾಖೆ: ಭ್ರಷ್ಟಾಚಾರಕ್ಕೆ ಬೀಳಲಿದೆ ಕಡಿವಾಣ!

01:07 AM Jul 08, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರಕ್ಕೆ ಅತ್ಯಧಿಕ ಲಾಭ ತಂದುಕೊಡುವ ಅಬಕಾರಿ ಇಲಾಖೆಯು ಡಿಜಿಟಲೀಕರಣದತ್ತ ಹೆಜ್ಜೆಯಿಟ್ಟಿದ್ದು, ಈ ನೂತನ ತಂತ್ರಾಂಶದಿಂದ ಆಡಳಿತದಲ್ಲಿ ಸುಧಾರಣೆ ತರುವುದರ ಜತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಲಾಗುತ್ತಿದೆ.

Advertisement

ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಸಹಯೋಗದಲ್ಲಿ ಅಬಕಾರಿ ಇಲಾಖೆಯು ಹೊಸ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿ ಅನುಷ್ಠಾನಕ್ಕೆ ತಂದಿದೆ. ಇದರಲ್ಲಿ ಪ್ರಾಥಮಿಕ ಹಂತದಲ್ಲಿ ಮದ್ಯದಂಗಡಿ ಪರವಾನಿಗೆ ನವೀಕರಣ, ವರ್ಗಾವಣೆ ಸೇರಿ ಇತರೆ ಸೇವೆಗಳು ದೊರೆಯಲಿವೆ. ಇಲಾಖೆಯ ಎಲ್ಲ ಸೇವೆಗಳೂ ತಂತ್ರಾಂಶದಲ್ಲೇ ಲಭ್ಯವಿದ್ದು, ಅರ್ಜಿ ಸಲ್ಲಿಸಿದ 5 ದಿನಗಳಲ್ಲಿ ಬಾರ್‌ ಪರವಾನಿಗೆ ನವೀಕರಣಗೊಳ್ಳಲಿದೆ. ತಂತ್ರಾಂಶದಲ್ಲಿ ಬಳಕೆದಾರ ಆಧಾರಿತ ಸೇವೆ (ಯೂಸರ್‌ ಬೇಸ್ಡ್ ಸರ್ವೀಸ್‌) ವ್ಯವಸ್ಥೆ ಕಲ್ಪಿಸಲಾಗಿದ್ದು, ಭ್ರಷ್ಟಾಚಾರದ ಜತೆಗೆ ಮದ್ಯವರ್ತಿಗಳ ಹಾವಳಿಯೂ ತಪ್ಪಲಿದೆ.

ಲಂಚ ನೀಡಲೇಬೇಕಿತ್ತು!
ಪ್ರತೀ ವರ್ಷ ಜೂನ್‌ನಲ್ಲಿ ಮದ್ಯದಂಗಡಿಗಳ ಪರವಾನಿಗೆ ನವೀಕರಣಕ್ಕೆ ಮಾಲಕರು ತಮ್ಮ ವ್ಯಾಪ್ತಿಯ ಅಬಕಾರಿ ನಿರೀಕ್ಷಕರ ಕಚೇರಿಗೆ ಅರ್ಜಿ ಸಲ್ಲಿಸುತ್ತಿದ್ದರು. ಈ ಅರ್ಜಿ ಜಿಲ್ಲಾ ಉಪ ಆಯುಕ್ತರ ಟೇಬಲ್‌ ತಲುಪಲು ಅಬಕಾರಿ ನಿರೀಕ್ಷಕರ ಕೈ ಬೆಚ್ಚನೆ ಮಾಡಬೇಕೆಂಬ ಆರೋಪವಿತ್ತು. ಉಪ ಆಯುಕ್ತರ ಕಚೇರಿಯಲ್ಲಿ ಅರ್ಜಿ ಪರಿಶೀಲನೆಗೆ ಒಳಪಟ್ಟು ಜಿಲ್ಲಾಧಿಕಾರಿ ಕಚೇರಿಗೆ ಹೋಗಲು ಲಕ್ಷಾಂತರ ರೂಪಾಯಿ ಲಂಚ ನೀಡಬೇಕೆಂಬ ಆರೋಪವೂ ಇತ್ತು. ಅಂತಿಮವಾಗಿ ಜಿಲ್ಲಾಧಿಕಾರಿ ಸಹಿ ಹಾಕಿ ನವೀಕರಿಸುತ್ತಾರೆ. ಈ ಪ್ರಕ್ರಿಯೆಗೆ ಈ ಹಿಂದೆ ಕನಿಷ್ಠ 1-2 ತಿಂಗಳೇ ಬೇಕಾಗುತ್ತಿತ್ತು.

ಭ್ರಷ್ಟಾಚಾರಕ್ಕೆ ಕಡಿವಾಣ ಹೇಗೆ?
ಅಬಕಾರಿ ಇಲಾಖೆಯ ರೂಲ್‌-5 ಪ್ರಕಾರ ಆಕ್ಷೇಪಣ ಸ್ಥಳಗಳಲ್ಲಿರುವ (ದೇವಾಲಯ, ಶಾಲಾ-ಕಾಲೇಜು, ವಸತಿ ಪ್ರದೇಶ, ಸರಕಾರಿ ಕಚೇರಿ 100 ಮೀ. ಒಳಗೆ ಬರುವ ಮದ್ಯದಂಗಡಿ) ಮದ್ಯದಂಗಡಿಗಳ ಲೈಸೆನ್ಸ್‌ ನವೀಕರಿಸಬಾರದು. ಆದರೆ, ಬಾರ್‌ ಮಾಕರಿಂದ ಲಂಚ ಪಡೆದು ದಾಖಲೆಗಳಲ್ಲಿ ತಪ್ಪು ಮಾಹಿತಿ ಉಲ್ಲೇಖೀಸಿ ಬಾರ್‌ಗಳ ಪರವಾನಿಗೆ ನವೀಕರಣ, ಸ್ಥಳಾಂತರ ಮಾಡುತ್ತಿರುವ ಗಂಭೀರ ಆರೋಪಗಳಿವೆ. ಅಬಕಾರಿ ಸಂಬಂಧಿತ ಸೇವೆಗಳಿಗೆ ಲಂಚ ಕೊಡುವ ಅನಿವಾರ್ಯತೆ ಎದುರಾಗಿತ್ತು. ಇನ್ನು ಮುಂದೆ ಈ ತಂತ್ರಾಂಶದ ಮೂಲಕವೇ ಎಲ್ಲ ಅಬಕಾರಿ ಸೇವೆಗಳನ್ನೂ ಆನ್‌ಲೈನ್‌ನಲ್ಲೇ ಪಡೆಯಬಹುದಾಗಿದೆ. ಇದರಿಂದ ಇಲಾಖೆಯ ಭ್ರಷ್ಟಾಚಾರ ಹಾಗೂ ಅಕ್ರಮಕ್ಕೆ ಬ್ರೇಕ್‌ ಬೀಳಲಿದೆ ಎನ್ನಲಾಗಿದೆ.

ರಾಜ್ಯದಲ್ಲಿವೆ 12,614 ಮದ್ಯದಂಗಡಿ
ಕರ್ನಾಟಕದಲ್ಲಿ ಒಟ್ಟಾರೆ 3,988 ವೈನ್‌ಶಾಪ್‌ (ಸಿಎಲ್‌-2), 3,634 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ (ಸಿಎಲ್‌-9), 2,382 ಹೊಟೇಲ್‌ ಹಾಗೂ ವಸತಿಗೃಹ (ಸಿಎಲ್‌-7), 1,041 ಎಂಎಸ್‌ಐಎಲ್‌ (ಸಿಎಲ್‌-11ಸಿ), 745 ಆರ್‌ವಿಬಿ, 279 ಕ್ಲಬ್‌ (ಸಿಎಲ್‌-4), 78 ಸ್ಟಾರ್‌ ಹೊಟೇಲ್‌ಗ‌ಳು (ಸಿಎಲ್‌-6ಎ) ಇವೆ. ಜತೆಗೆ 68 ಮಿಲಿಟರಿ ಕ್ಯಾಂಟಿನ್‌ (ಸಿಎಲ್‌-8) ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ರಾಜ್ಯದಲ್ಲಿ ಒಟ್ಟು 32 ಮದ್ಯ ತಯಾರಿಕಾ ಘಟಕಗಳಿವೆ.

Advertisement

ಹೊಸ ತಂತ್ರಾಂಶ ಸೇವೆಯಿಂದ ಉಪಯೋಗಗಳೇನು ?
ಮದ್ಯ, ವೈನ್‌ ಮತ್ತು ಬಿಯರ್‌ ರಫ್ತಿಗೆ ಸಹಮತಿ ಪತ್ರ, ಮೈಕ್ರೋಬ್ರೆವರಿ, ವೈನರಿ, ಡಿಸ್ಟಿಲರಿ, ಬ್ರೆವರಿ, ಮದ್ಯದಂಗಡಿಗಳ ಸನ್ನದುಗಳ ನವೀಕರಣ ಮತ್ತು ವರ್ಗಾವಣೆ, ಮದ್ಯ ರಪು¤-ಆಮದಿಗೆ (ಹೊರ ದೇಶಕ್ಕೆ) ಸಹಮತಿ ಪತ್ರ, ಡಿಪಿ, ಎಂಆರ್‌ಪಿ, ಆರ್‌ಎಂಆರ್‌ಪಿ, ಹೊರ ರಾಜ್ಯ ಹಾಗೂ ವಿದೇಶಗಳ ಲೇಬಲ್‌, ಸ್ಥಳೀಯ ಲೇಬಲ್‌ಗೆ ಅನುಮೋದನೆ, ಕಾಕಂಬಿ ಸನ್ನದು, ಸ್ಥಗಿತಗೊಂಡ ಸನ್ನದುಗಳ ನವೀಕರಣ, ಪ್ರಾಥಮಿಕ ಮತ್ತು ಮದ್ಯ ಉತ್ಪಾದನಾ ಡಿಸ್ಟಲರಿ, ವೈನರಿಗೆ, ಮದ್ಯಸಾರ ಹಂಚಿಕೆಗೆ ಸಂಬಂಧಿಸಿದ ಪ್ರತಿ ಸೇವೆಗಳು ಈ ತಂತ್ರಾಂಶದಲ್ಲಿ ದೊರೆಯಲಿವೆ. ಜತೆಗೆ ಮದ್ಯದಂಗಡಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನೀಡುವುದರಿಂದ ಮಾಲಕರ ವಿವರ ಪಡೆದು ತಂತ್ರಾಂಶದಲ್ಲಿ ನಮೂದು ಮಾಡಲಾಗುವುದು. ಹೀಗಾಗಿ ಮಾಲಕರಿಗೆ ಯೂಸರ್‌ ಬೇಸ್ಡ್ ಲಾಗಿನ್‌ ನೀಡುವುದರಿಂದ ಯುಐಡಿ ಸಂಖ್ಯೆ ನಮೂದಿಸಿದರೆ ಮಾಲೀಕರ ವಿವರ ಇಲ್ಲಿ ಸಿಗಲಿವೆ.

“ಅಬಕಾರಿ ಇಲಾಖೆ ಡಿಜಿಟಲೀಕರಣವಾದರೆ ಮದ್ಯದಂಗಡಿ ಮಾಲಕರಿಗೆ ಅನುಕೂಲವಾಗುತ್ತದೆ. ಈ ಹಿಂದೆ ಇಲಾಖೆಯ ಸೇವೆ ಪಡೆಯಲು ಸಾಕಷ್ಟು ಅಲೆದಾಡಬೇಕಿತ್ತು. ಈ ಎಲ್ಲ ಸಮಸ್ಯೆಗೆ ಈ ತಂತ್ರಾಂಶದಿಂದ ಮುಕ್ತಿ ಸಿಗುವ ನಿರೀಕ್ಷೆ ಇದೆ.”  -ಗೋವಿಂದರಾಜ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ಫೆಡರೇಷನ್‌ ಆಫ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಷನ್‌

 

ಮದ್ಯ ದರ ಏರಿಕೆ ಪ್ರಸ್ತಾವ ಸರಕಾರದ ಮುಂದಿಲ್ಲ: ತಿಮ್ಮಾಪುರ
ಹುಬ್ಬಳ್ಳಿ: ಮದ್ಯ ದರ ಏರಿಕೆ ಪ್ರಸ್ತಾವ ಸರಕಾರದ ಮುಂದೆ ಇಲ್ಲ. ಈ ಕುರಿತ ಊಹಾಪೋಹಗಳು ಬೇಡ. ಎಂಎಸ್‌ಐಎಲ್‌ಗ‌ಳಿಗೆ ಯಾವುದೇ ಪರವಾನಿಗೆ ಕೊಟ್ಟಿಲ್ಲ. ಇನ್ನು ಮುಂದೆಯೂ ಕೊಡುವುದಿಲ್ಲ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಬಾರ್‌ ವ್ಯಾಪಾರಸ್ಥರಿಗಾಗಿ ವ್ಯಾಪಾರ ಸ್ನೇಹಿ ಅದಾಲತ್‌ ಆರಂಭ ಕುರಿತು ಚಿಂತನೆ ನಡೆದಿದೆ. ಗೋವಾದಲ್ಲಿ ಲಿಕ್ಕರ್‌ ಬಹಳ ಕಡಿಮೆ ದರದಲ್ಲಿ ಸಿಗುತ್ತದೆ. ಅಲ್ಲಿ ಯಾವುದೇ ತೆರಿಗೆ ಇಲ್ಲ. ಗೋವಾ, ಮಹಾರಾಷ್ಟ್ರಕ್ಕೆ ಸ್ಪಿರಿಟ್‌ ಹೋಗುತ್ತದೆ. ಅದನ್ನು ಮೊದಲು ತಡೆಗಟ್ಟಬೇಕು. ನಮ್ಮ ರಾಜ್ಯದ ಲಿಕ್ಕರ್‌ ಚೆನ್ನಾಗಿದೆ. ಬೇರೆ ರಾಜ್ಯದ ಕಳಪೆ ಲಿಕ್ಕರ್‌ ನಮ್ಮ ರಾಜ್ಯಕ್ಕೆ ಬರಬಾರದು. ಅದಕ್ಕೆ ಮೊದಲು ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ ಎಂದರು.

 

– ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next