Advertisement

ಆಡಳಿತ, ಪ್ರತಿಪಕ್ಷ ಕದನಕ್ಕೆ ವೇದಿಕೆ ಸಜ್ಜು

03:45 AM Jun 04, 2017 | Team Udayavani |

ಸೋಮವಾರದಿಂದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಬರ ಪರಿಹಾರ ಕಾರ್ಯದಲ್ಲಿ ವೈಫ‌ಲ್ಯ, ರೈತರ ಸಾಲ ಮನ್ನಾಕ್ಕೆ ಆಗ್ರಹ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಷಯಗಳಲ್ಲಿ
ಆಡಳಿತಾರೂಢ ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಸಜ್ಜಾಗಿವೆ. ಈ ಮಧ್ಯೆ, ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್‌ ಯತ್ನ ನಡೆಸಿದ್ದು, ಈ ಅಧಿವೇಶನದಲ್ಲೇ ಸಾಕಾರಗೊಳ್ಳಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಕಾರ್ಯದಲ್ಲಿ ಕಾಂಗ್ರೆಸ್‌ನ ಸೋಲು-ಗೆಲುವು ಜೆಡಿಎಸ್‌ ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಬಿಸಿದ್ದು, ಆ ಪಕ್ಷದ ನಡೆ ತೀವ್ರ ಕುತೂಹಲ ಮೂಡಿಸಿದೆ.

Advertisement

ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಶಸ್ತ್ರಸನ್ನದ್ಧ
ಬೆಂಗಳೂರು:
ಬರ ಪರಿಹಾರ ಕಾರ್ಯದಲ್ಲಿ ವೈಫ‌ಲ್ಯ, ರೈತರ ಸಾಲ ಮನ್ನಾಕ್ಕೆ ಆಗ್ರಹ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಅಸ್ತ್ರಗಳೊಂದಿಗೆ ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಹೋರಾಟಕ್ಕೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಸನ್ನದ್ಧವಾಗಿದೆ.

ಇದರೊಂದಿಗೆ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅನುಮಾನಾಸ್ಪದ ಸಾವು, ಆಹಾರ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಎನ್ನುವ ಖಾಸಗಿ ಸಂಸ್ಥೆಯೊಂದರ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೂಡ ಪ್ರಯತ್ನಿಸಲಿದೆ.

ಸದನದಲ್ಲಿ ಸರ್ಕಾರದ ವಿರುದ್ಧ ವೈಫ‌ಲ್ಯಗಳನ್ನ ಪ್ರಸ್ತಾಪಿಸಲು ಬಿಜೆಪಿ ದೊಡ್ಡ ಪಟ್ಟಿಯೊಂದಿಗೆ ಸಿದ್ಧವಾಗಿದೆ. ಆದರೆ, ಕಲಾಪ ಕೇವಲ ಹತ್ತು ದಿನ ಮಾತ್ರ ನಡೆಯಲಿದ್ದು, ಇದರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಕುರಿತಂತೆ ಚರ್ಚಿಸಬೇಕಿದೆ. ಅಲ್ಲದೆ, ನಿಲುವಳಿ ಸೂಚನೆ ಸೇರಿದಂತೆ ಯಾವುದೇ ವಿಚಾರ ಪ್ರಸ್ತಾಪ ಮಾಡುವುದಿದ್ದರೂ ಅದು ಮಧ್ಯಾಹ್ನನಂತರದ ಕಲಾಪದಲ್ಲೇ ಮಾಡಬೇಕು ಎಂಬ ನಿಯಮ ಜಾರಿಗೊಳಿಸಿರುವುದರಿಂದ ಉದ್ದೇಶಿತ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸುವುದು ಕಷ್ಟಸಾಧ್ಯ. ಹೀಗಾಗಿ ಆದ್ಯತಾ ಪಟ್ಟಿಯೊಂದನ್ನೂ ಅದು ಸಿದ್ಧಮಾಡಿಕೊಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಈಗಾಗಲೇ ಜಿಲ್ಲಾ ಪ್ರವಾಸ ಮಾಡುತ್ತಿದ್ದು, ಅವರು ಸಂಗ್ರಹಿಸಿರುವ ಮಾಹಿತಿಯನ್ನು ಸೇರಿಸಿಕೊಂಡು ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ಹೇಗೆ ವಿಫ‌ಲವಾಗಿದೆ ಎಂಬುದನ್ನು ಸದನದಲ್ಲಿ ಪ್ರಸ್ತುತಪಡಿಸಲು ಮುಂದಾಗಿದೆ. ಅಲ್ಲದೆ, ಸತತ ಬರಗಾಲದಿಂದ ತತ್ತರಿಸಿರುವ ರೈತರ ಸಾಲ ಮನ್ನಾ ಕುರಿತು ಸದನದಲ್ಲಿ ಹೋರಾಟಕ್ಕೆ ಮುಂದಾಗಿದ್ದು ಇದಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ.

Advertisement

ಎರಡನೆಯದಾಗಿ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಾವು, ಆಹಾರ ಇಲಾಖೆಯಲ್ಲಿ ನಡೆದಿದೆ ಎನ್ನಲಾದಅವ್ಯವಹಾರ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ. 1 ಸ್ಥಾನ ಪಡೆದಿರುವುದನ್ನು ಪ್ರಸ್ತಾಪಿಸಿದರೆ, ಮೂರನೆಯದಾಗಿ ಆನೇಕಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್‌ಸಿ, ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಹರೀಶ್‌ ಹತ್ಯೆ ಪ್ರಕರಣದ ಜತೆಗೆ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಪ್ರಸ್ತಾಪಿಸಲು ಸಹ ನಿರ್ಧರಿಸಲಾಗಿದೆ.

ಅಲ್ಲದೆ, ಮಾಜಿ ಸಚಿವ ಎಚ್‌.ವೈ.ಮೇಟಿ ಅವರಿಗೆ ಸಿಐಡಿ ಕ್ಲೀನ್‌ಚಿಟ್‌ ನೀಡಿರುವುದು, ಈ ಹಿಂದೆ ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳು ಮತ್ತು ನಂತರದಲ್ಲಿ ಎಸಿಬಿ ದಾಳಿಗೊಳಗಾದ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಮುಂತಾದ ವಿಚಾರಗಳನ್ನೂ ಪ್ರಸ್ತಾಪಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಈ ಮಧ್ಯೆ ಗೋಹತ್ಯೆ ಕುರಿತಂತೆ ಕೇಂದ್ರ ಸರ್ಕಾರದ ಅಧಿಸೂಚನೆ ಮುಂದಿಟ್ಟುಕೊಂಡು ಆಡಳಿತಾರೂಢ ಕಾಂಗ್ರೆಸ್‌ ತನ್ನ ವಿರುದ್ಧ ಮುಗಿಬಿದ್ದರೆ ಅದನ್ನು ಎದುರಿಸಲು ಕೂಡ ಸಿದ್ಧವಾಗಿರುವಂತೆ ಎಲ್ಲಾ ಶಾಸಕರಿಗೆ ಬಿಜೆಪಿ ಸೂಚನೆ ನೀಡಿದೆ. ಅಧಿವೇಶನದಲ್ಲಿ ಇಲಾಖಾವಾರು ಚರ್ಚೆ ನಡೆದು 2017-18ನೇ ಸಾಲಿನ ಬಜೆಟ್‌ಗೆ ಅನುಮೋದನೆ ನೀಡಬೇಕಿದೆ. ಆದರೆ, ಅಧಿವೇಶನದ ಕಾಲಾವಧಿ ಕೇವಲ 10 ದಿನಕ್ಕೆ ಮಾತ್ರ ನಿಗದಿಪಡಿಸಿರುವುದರಿಂದ ಸಮಗ್ರ ಚರ್ಚೆ ಸಾಧ್ಯವಿಲ್ಲ. ಹೀಗಾಗಿ ಅಧಿವೇಶನದ ಅವಧಿ ವಿಸ್ತರಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲು ಬಿಜೆಪಿ ತೀರ್ಮಾನಿಸಿದೆ.

ರಾಜ್ಯದಲ್ಲಿ ಮಳೆಯಾದರೂ ಬರ ಪರಿಸ್ಥಿತಿ ಇನ್ನೂ ನಿವಾರಣೆಯಾಗಿಲ್ಲ. ಪರಿಹಾರ ಕಾರ್ಯದಲ್ಲಿ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ. ಇದರ ಜತೆಗೆ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಾವು, ಆಹಾರ ಇಲಾಖೆಯಲ್ಲಿ ನಡೆದಿರುವ ಸಾವಿರಾರು ಕೋಟಿ ರೂ. ಅವ್ಯವಹಾರ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಮುಂತಾದ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು. ಸಾಲ ಮನ್ನಾ ಕುರಿತು ಸದನದಲ್ಲಿ ಘೋಷಣೆ ಮಾಡದಿದ್ದಲ್ಲಿ ಹೋರಾಟಕ್ಕಿಳಿಯಲಾಗುವುದು.
– ಜಗದೀಶ್‌ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷ ನಾಯಕ

ಎದುರೇಟು ನೀಡಲು ಸರ್ಕಾರ ಸಿದ್ಧ
ಬೆಂಗಳೂರು
: ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪಟ್ಟಿಗೆ ಎದುರೇಟು ನೀಡಲು ಸರ್ಕಾರ ಸಿದ್ದವಾಗಿದೆ. ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿರುವ ಆಡಳಿತ ಪಕ್ಷ ಕಾಂಗ್ರೆಸ್‌, ಪಕ್ಷದಲ್ಲಿನ ಗೊಂದಲಗಳಿಗೂ ತೆರೆ ಎಳೆಯುವ ಪ್ರಯತ್ನ ನಡೆಸಿದ್ದು, ಪ್ರತಿಪಕ್ಷಗಳಿಗೂ ಅನಗತ್ಯಚರ್ಚೆಗೆ ಅವಕಾಶ ಕೊಡದಂತೆ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದೆ.

ರಾಜ್ಯದಲ್ಲಿನ ಸತತ ಬರಗಾಲದಿಂದ ಕಂಗೆಟ್ಟಿರುವ ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಎರಡೂ ಪ್ರತಿಪಕ್ಷಗಳು ಸಿದ್ದವಾಗಿದ್ದು, ಅದಕ್ಕೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ಕಡೆಗೆ ಬೆರಳು ಮಾಡಲು ಆಡಳಿತ ಪಕ್ಷ ತೀರ್ಮಾನಿಸಿದೆ. ಮುಂಗಾರು ಹಾಗೂ ಹಿಂಗಾರಿನಲ್ಲಿ ಬರಗಾಲದಿಂದ ಆಗಿರುವ ನಷ್ಟಕ್ಕೆ  ಸುಮಾರು 7 ಸಾವಿರ ಕೋಟಿ ರೂಪಾಯಿ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದ್ದರೂ, ಕೇಂದ್ರ ಸರ್ಕಾರ ಇದುವರೆಗೂ ಕೇವಲ 1782 ಕೋಟಿ ರೂಪಾಯಿ ನೀಡಿರುವುದರಿಂದ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದಿರುವುದನ್ನೇ ಬಿಜೆಪಿಗೆ ತಿರುಗುಬಾಣ ಬಿಡಲು ಕಾಂಗ್ರೆಸ್‌ ನಿರ್ಧರಿಸಿದೆ.

ಬಜೆಟ್‌ ಬಗ್ಗೆ ಇಲಾಖೆವಾರು ಚರ್ಚೆಗೆ ಅವಕಾಶ ನೀಡಿ ಮುಂಗಡ ಪತ್ರಕ್ಕೆ ಸದನದ ಅನುಮೋದನೆ ಪಡೆಯುವುದು ಈ ಅಧಿವೇಶನದ ಪ್ರಮುಖ ಉದ್ದೇಶವಾಗಿದ್ದು,ಪ್ರತಿಪಕ್ಷಗಳ ಅಪಸ್ವರದ ನಡುವೆ ಯಾವುದೇ ವಿವಾದಗಳಿಗೆ ಹೆಚ್ಚು ಅವಕಾಶ ನೀಡದೆ ಬಜೆಟ್‌ಗೆ ಅಂಗೀಕಾರ ದೊರಕಿಸಿಕೊಳ್ಳಲು ಸರಕಾರ ತನ್ನ ಪ್ರಥಮ ಆದ್ಯತೆ ನೀಡಲಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ತಿದ್ದುಪಡಿ ಮಾಡಿರುವ ಗೋಹತ್ಯೆ ನಿಷೇಧ ಕಾಯ್ದೆಯ ಗೊಂದಲಗಳ ಕುರಿತು ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಲು ರಾಜ್ಯ ಸರ್ಕಾರ ಯೋಚಿಸಿದೆ. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ, ಕಾನೂನು ಸುವ್ಯಸ್ಥೆ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಂಡಿರುವುದರಿಂದ ಅದನ್ನೂ ಎದುರಿಸಲು ಸನ್ನದ್ದವಾಗಿದೆ.

ಪಕ್ಷದ ಎಲ್ಲ ವರ್ಗದ ನಾಯಕರಿಗೆ ಹೈ ಕಮಾಂಡ್‌ ಹುದ್ದೆಗಳನ್ನು ನೀಡಿ, ಪಕ್ಷದಲ್ಲಿನ ಸಣ್ಣ ಪುಟ್ಟ ಗೊಂದಲಗಳನ್ನು ನಿವಾರಿಸಿರುವುದರಿಂದ ರಾಜಕೀಯವಾಗಿ ಸದನದಲ್ಲಿ ಪಕ್ಷದ ಒಗ್ಗಟ್ಟು ತೋರಿಸಲು ಅನುಕೂಲವಾಗಿದ್ದು, ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷ ಬಿಜೆಪಿಯಲ್ಲಿಯೇ ಸಾಕಷ್ಟು ಗೊಂದಲಗಳು ಮುಂದುವರೆದಿರುವುದರಿಂದ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಇತ್ತೀಚೆಗೆ ನಡೆದ ಎರಡು ಉಪ ಚುನಾವಣೆಯಲ್ಲಿಯೂ ಪಕ್ಷ ಅಭೂತಪೂರ್ವ ಜಯ ಸಾಧಿಸಿರುವುದು ನೈತಿಕವಾಗಿ ಕಾಂಗ್ರೆಸ್‌ ಶಕ್ತಿಯನ್ನು ವೃದ್ಧಿಸಿದ್ದು, ಪ್ರತಿಪಕ್ಷ ಬಿಜೆಪಿಯ ವಾಗ್ಧಾಳಿಗೆ ತಿರುಗೇಟು ನೀಡಲು ಈ ಚುನಾವಣೆ ಫ‌ಲಿತಾಂಶವೂ ತಮ್ಮ ನೆರವಿಗೆ ಬರಲಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರೆ. ಮೊದಲ ಎರಡು ದಿನ ಪ್ರತಿಪಕ್ಷಗಳ ಕಾರ್ಯತಂತ್ರ ನೋಡಿಕೊಂಡು ಬುಧವಾರ ಅಥವಾ ಗುರುವಾರ ಶಾಸಕಾಂಗ ಪಕ್ಷದ ಸಭೆ ಕರೆದು ಪ್ರತಿಪಕ್ಷಗಳನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತಂತೆಯೂ ಚರ್ಚಿಸಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ.

ಇದಲ್ಲದೇ ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಸಾಗಾಣಿಕೆ ವಿಧೇಯಕವನ್ನು ಅಂಗೀಕರಿಸುವುದು, ಉನ್ನತ ಶಿಕ್ಷಣ ಇಲಾಖೆಯಲ್ಲಿ ವಿಶ್ವ ವಿದ್ಯಾಲಯಗಳಿಗೆ ಸಮನ್ವಯತೆ ತರುವ ಸಮಗ್ರ ಕಾಯ್ದೆಗೆ ತಿದ್ದುಪಡಿ ವಿಧೇಯಕ ಮಂಡನೆ ಹಾಗೂ ಧನ ವಿನಿಯೋಗ ವಿಧೇಯಕ ಮಂಡನೆಗೆ ಸರ್ಕಾರ ಸಿದ್ದತೆ ಮಾಡಿಕೊಂಡಿದೆ.

ಈ ಅಧಿವೇಶನದ ಸಮಯದಲ್ಲಿ ಕಾಂಗ್ರೆಸ್‌ ಪಾಳಯದಲ್ಲಿ ಸದನದಲ್ಲಿ ಹಾಜರಾಗಿ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ಅಧಿವೇಶನದ ನಂತರ ನಡೆಯುವ ಸಂಪುಟ ವಿಸ್ತರಣೆಯ ಬಗ್ಗೆಯೇ ಸದಸ್ಯರು ಹೆಚ್ಚು ತಲೆ ಕೆಡಿಸಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ವಿಧಾನ ಪರಿಷತ್ತಿನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಹಾಗೂ ಸಭಾ ನಾಯಕರ ಹುದ್ದೆ ಮತ್ತು ಮೇಲ್ಮನೆಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವುದರ ಕಡೆಯೇ ಕಾಂಗ್ರೆಸ್‌ ಸದಸ್ಯರ ಲೆಕ್ಕಾಚಾರ ಹೆಚ್ಚಿರುವ ಸಾಧ್ಯತೆ ಇದೆ.

ವೈಫ‌ಲ್ಯ ಎತ್ತಿತೋರಲು ಜೆಡಿಎಸ್‌ ಸಜ್ಜು
ಬೆಂಗಳೂರು
:
ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನದಲ್ಲಿ ಬರ ಪರಿಹಾರ ಕಾರ್ಯದಲ್ಲಿನ ವೈಫ‌ಲ್ಯತೆ, ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗೆ ಸಮರ್ಪಕವಾಗಿ ಅನುದಾನ ಒದಗಿಸದಿರುವುದು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಜೆಡಿಎಸ್‌ ಸಜ್ಜಾಗಿದೆ.

ಉತ್ತರ ಕರ್ನಾಟಕ ಭಾಗ ಸೇರಿ ರಾಜ್ಯಾದ್ಯಂತ ಸುಮಾರು ಏಳು ಸಾವಿರ ಕಿ.ಮೀ. ಪ್ರವಾಸ ಕೈಗೊಂಡು ಬರ ಪರಿಹಾರ ಕಾಮಗಾರಿ, ರೈತ ಸಮುದಾಯ ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾಹಿತಿ ಕಲೆ ಹಾಕಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ವೈಫ‌ಲ್ಯಗಳನ್ನು ಸದನದ ಮುಂದಿಡಲು ತೀರ್ಮಾನಿಸಿದ್ದು ರೈತರ ಸಾಲಮನ್ನಾ ಕುರಿತು ಮತ್ತೂಮ್ಮೆ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.

ಈ ವಿಷಯದಲ್ಲಿ ಧರಣಿ ಕೂರುವ ಬಗ್ಗೆಯೂ ಪಕ್ಷದಲ್ಲಿ ಚಿಂತನೆ ನಡೆದಿದೆ.ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿಯಲ್ಲಿನ ಜಂತಕಲ್‌ ಮೈನಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದಟಛಿ ರಾಜಕೀಯ ಷಡ್ಯಂತ್ರ ರೂಪಿಸುತ್ತಿವೆ ಎಂದು ಹರಿಹಾಯ್ದಿದ್ದ ಕುಮಾರಸ್ವಾಮಿ, ಸದನದಲ್ಲಿ ಆ ಬಗ್ಗೆ ವಿಷಯ ಪ್ರಸ್ತಾಪಿಸಿ ಕೆಲವೊಂದು ಸಂಗತಿ ಬಹಿರಂಗಗೊಳಿಸಿ ಸದನದ ಮೂಲಕವೇ ತಿರುಗೇಟು ನೀಡಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಾವು ಪ್ರಕರಣ, ಎಸ್‌ಐಟಿ, ಸಿಐಡಿ, ಎಸಿಬಿ ಸಂಸ್ಥೆಗಳಲ್ಲಿ ಸರ್ಕಾರದ ಮಧ್ಯಪ್ರವೇಶ ಅಧಿಕಾರ ದುರ್ಬಳಕೆ ಕುರಿತು ಸದನದಲ್ಲಿ ಜೆಡಿಎಸ್‌ ಪ್ರಸ್ತಾಪಿಸಲಿದೆ ಎಂದು ಹೇಳಲಾಗಿದೆ.

ರಾಷ್ಟ್ರಾದ್ಯಂತ ತೀವ್ರ ಚರ್ಚೆಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಜೆಡಿಎಸ್‌ ತಟಸ್ಥ ನಿಲುವು ಹೊಂದಲು ತೀರ್ಮಾನಿಸಿದೆ. ಬಿಜೆಪಿ ಮೇಲೆ ಮುಗಿಬೀಳಲು ಆಡಳಿತಾರೂಢ ಕಾಂಗ್ರೆಸ್‌ ಗೋಹತ್ಯೆ ನಿಷೇಧ ಕಾಯ್ದೆ ಪ್ರಸ್ತಾಪಿಸಿದರೂ ಜೆಡಿಎಸ್‌ ಆ ವಿಚಾರದಲ್ಲಿ ಪರ ಅಥವಾ ವಿರೋಧ ಎರಡೂ ವ್ಯಕ್ತಪಡಿಸದೆ ಮೌನ ವಹಿಸಲಿದೆ ಎಂದು ತಿಳಿದು ಬಂದಿದೆ.

ಅಧಿವೇಶನದ ಮೊದಲ ದಿನ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಯಿದ್ದು ಎರಡೂ ಸದನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಲಾಗಿದೆ.

ಕಾದು ನೋಡುವ ತಂತ್ರ
ವಿಧಾನಪರಿಷತ್‌ನಲ್ಲಿ ಈ ಬಾರಿ ಪ್ರಮುಖವಾಗಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ವಿರುದಟಛಿದ ಅವಿಶ್ವಾಸ ನಿರ್ಣಯ ಪ್ರಸ್ತಾಪವಾಗುವುದರಿಂದ ಜೆಡಿಎಸ್‌ ಯಾವ ನಿಲುವು ತಾಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.ಸದ್ಯಕ್ಕೆ ಆ ವಿಚಾರದಲ್ಲಿ ಯಾರೂ ಬಹಿರಂಗವಾಗಿ ಏನೂ ಮಾತನಾಡಬೇಡಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಸೂಚಿಸಿದ್ದಾರೆ. ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಪ್ರಸ್ತಾಪ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಿ ತೀರ್ಮಾನ ಕೈಗೊಳ್ಳೋಣ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ನವರು ಅವಿಶ್ವಾಸ ನಿರ್ಣಯ ವಿಚಾರವಾಗಿ ಜೆಡಿಎಸ್‌ ಬಳಿ ಚರ್ಚಿಸಿಲ್ಲ. ಇದು ಸಹ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೋಪ ತರಿಸಿದೆ. ಒಂದೊಮ್ಮೆ ಕಾಂಗ್ರೆಸ್‌ ಸಭಾಪತಿ ಬದಲಾವಣೆಗೆ ಬಿಗಿ ಪಟ್ಟು ಹಿಡಿದಿದ್ದೇ ಆದರೆ ತೆರವಾಗುವ ಸಭಾಪತಿ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡಲಿ ಎಂಬ ಷರತ್ತು ವಿಧಿಸುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next