Advertisement

ಬಿಜೆಪಿಯಿಂದ ಗೋಪಾಲ ಸಿ. ಶೆಟ್ಟಿ ನಾಮಪತ್ರ ಸಲ್ಲಿಕೆ

04:00 PM Apr 03, 2019 | Vishnu Das |

ಮುಂಬಯಿ: ನಗರದ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರನ್ನು ಭಾರತೀಯ ಜನತಾ ಪಕ್ಷವು ಮತ್ತೆ ಕಣಕ್ಕಿಳಿಸಿ ಬಿ-ಫಾರ್ಮ್ ನೀಡಿದ್ದು, ದ್ವಿತೀಯ ಬಾರಿಗೆ ಶಿವಸೇನೆ ಮತ್ತು ಆರ್‌ಪಿಐ ಪಕ್ಷಗಳ ಮೈತ್ರಿಕೂಟದ ಲೋಕಸಭಾ ಸದಸ್ಯತ್ವಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು.

Advertisement

ಮಂಗಳವಾರ ಬೆಳಗ್ಗೆ ಮಾತೃಶ್ರೀ ಗುಲಾಬಿ ಸಿ. ಶೆಟ್ಟಿ ಅವರ ಆಶೀರ್ವಾದ ಪಡೆದ ಹಾಲಿ ಸಂಸದ ಗೋಪಾಲ್‌ ಶೆಟ್ಟಿ ಅವರು ಬೊರಿವಿಲಿ ಪಶ್ಚಿಮದ ಎಸ್‌. ವಿ. ರಸ್ತೆಯ ಸರ್ಕಲ್‌ಗೆ ಆಗಮಿಸಿ ಉಪಸ್ಥಿತರಿದ್ದ ರಾಜ್ಯ ಶಿಕ್ಷಣ ಸಚಿವ ವಿನೋದ್‌ ತಾಬ್ಡೆ, ದಹಿಸರ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮನೀಷಾ ಚೌಧರಿ, ಶಾಸಕರಾದ ಶಿವಸೇನೆಯ ಪ್ರಕಾಶ್‌ ಸುರ್ವೆ, ಬಿಜೆಪಿಯ ಅತುಲ್‌ ಭಟ್‌ಖಳ್ಕರ್‌ ಅವರನ್ನೊಳಗೊಂಡು ಸ್ವರ್ಗೀಯ ಡಾ| ಶಾಮ ಪ್ರಸಾದ್‌ ಮುಖರ್ಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಬೃಹತ್‌ ರ್ಯಾಲಿಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ರ್ಯಾಲಿಯ ಸಂಯೋಜಕ ಎರ್ಮಾಳ್‌ ಹರೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ, ಸಂಸದ ಗೋಪಾಲ್‌ ಶೆಟ್ಟಿ ತುಳು-ಕನ್ನಡಿಗ ಅಭಿಮಾನಿ ಬಳಗದ ಸಹಕಾರದೊಂದಿಗೆ ನಡೆದ ಮೆರವಣಿಗೆಯಲ್ಲಿ ನಗರದ ಜಾತೀಯ ಹಾಗೂ ತುಳು-ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಸದಸ್ಯರು, ಅನ್ಯಭಾಷಿಗರು ಸೇರಿದಂತೆ ಬಿಜೆಪಿ, ಶಿವಸೇನೆ ಮತ್ತು ಆರ್‌ಪಿಐ ಪಕ್ಷಗಳ ಭಾರೀ ಸಂಖ್ಯೆಯ ಕಾರ್ಯಕರ್ತರು, ಗೋಪಾಲ್‌ ಶೆಟ್ಟಿ ಅವರ ಅಭಿಮಾನಿ ಬಳಗದವರು, ಹಿತೈಷಿಗಳು, ತುಳು-ಕನ್ನಡಿಗರು ಸೇರಿದಂತೆ ರ್ಯಾಲಿಯಲ್ಲಿ ಸುಮಾರು 24 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿರುವುದು ವಿಶೇಷತೆಯಾಗಿತ್ತು. ಶಾಮ ಪ್ರಸಾದ್‌ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಪಾಲ್ಗೊಂಡ ಗೋಪಾಲ್‌ ಶೆಟ್ಟಿ ಅವರು ಬಾಂದ್ರಾಕ್ಕೆ ತೆರಳಿ ಅಲ್ಲಿ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಎದುರಾಳಿ ಸ್ಪರ್ಧಿಯಾಗಿ ಕಾಂಗ್ರೆಸ್‌ ಪಕ್ಷದ ಬಾಲಿವುಡ್‌ ನಟಿ ಊರ್ಮಿಳಾ ಮಾತೊಂಡ್ಕರ್‌ ಕಣದಲ್ಲಿದ್ದಾರೆ.

ಗುರು-ಶಿಷ್ಯರ ಪ್ರತಿಷ್ಠೆಯ ಕ್ಷೇತ್ರ
ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದಲ್ಲಿ ಗುಜರಾತಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಕನ್ನಡಿಗ ಗೋಪಾಲ್‌ ಶೆಟ್ಟಿ ಅವರ ರಾಜಕೀಯ ಗುರು ಎಂದೇ ಬಿಂಬಿತಗೊಂಡಿರುವ 1999 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಐದ‌ನೇ ಬಾರಿ ಸ್ಪರ್ಧಿಸಿದ್ದ ರಾಮ್‌ ನಾಯ್ಕ ಸುಮಾರು 5,17,941 ಮತಗಳನ್ನು ಪಡೆದು ವಿಜೇತರಾಗಿದ್ದರು. ಆ ಮೂಲಕ ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧರಾಗಿದ್ದ ನಾಯ್ಕ 2004 ರಲ್ಲಿ ಆರನೇ ಬಾರಿ ಸ್ಪರ್ಧಿಸಿ ಎದುರಾಳಿ ಸ್ಪರ್ಧಿ ಬಾಲಿವುಡ್‌ ನಟ ಗೋವಿಂದ ಅವರಿಂದ ಸುಮಾರು 41,822 ಮತಗಳಿಂದ ಸೋಲುಂಡಿದ್ದರು. 2009ರಲ್ಲೂ ಏಳನೇ ಬಾರಿ ಸ್ಪರ್ಧಿಸಿದ್ದ ರಾಮ್‌ ನಾಯ್ಕ 5,779 ಮತಗಳಿಂದ ಸೋಲು ಅನುಭವಿಸಿದ್ದರು.

ಆದರೆ 2014ರಲ್ಲಿ ಭಾರತೀಯ ಜನತಾ ಪಾರ್ಟಿಯು ಗುರು ರಾಮ್‌ ನಾಯ್ಕ ಬದಲಾಗಿ ಶಿಷ್ಯ ಗೋಪಾಲ ಶೆಟ್ಟಿ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಸುಮಾರು 6,64,004 ಮತಗಳನ್ನು ಪಡೆದ ಗೋಪಾಲ್‌ ಶೆಟ್ಟಿ ಎದುರಾಳಿ ಕಾಂಗ್ರೆಸ್‌ನ ಸಂಜಯ್‌ ನಿರುಪಮ್‌ ಅವರಿಗಿಂತ 4,46,562 ಹೆಚ್ಚುವರಿ ಮತಗಳೊಂದಿಗೆ ಜಯಭೇರಿ ಪಡೆದು ಎಲ್ಲರು ಈ ಕ್ಷೇತ್ರದತ್ತ ಚಿತ್ತಹರಿಸುವಂತೆ ಮಾಡಿದ್ದರು. ಆಮೂಲಕ ರಾಷ್ಟ್ರದಲ್ಲೇ ದ್ವಿತೀಯ ಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಥಮ ಸ್ಥಾ§ನದ ಕೀರ್ತಿಗೆ ಗೋಪಾಲ್‌ ಶೆಟ್ಟಿ ಭಾಜನರಾಗಿದ್ದರು.

Advertisement

ಅಂದು ಹನ್ನೆರಡು ಪಕ್ಷಗಳು ಮತ್ತು ಎಂಟು ಪಕ್ಷೇತರರು
2014ರಲ್ಲಿ ಈ ಕ್ಷೇತ್ರದಿಂದ ಬಿಜೆಪಿ (ಶಿವಸೇನೆ ಬಿಂಬಲಿತ), ಕಾಂಗ್ರೆಸ್‌ (ಐ), ಆಮ್‌ ಆದ್ಮಿ ಪಾರ್ಟಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಎಐಪಿ, ಬಿಬಿಎಂ, ಎಂಪಿಎಸ್‌ (ಟಿ), ಬಿಎಂಪಿ, ಫಾರ್ವರ್ಡ್‌ ಬ್ಲಾಕ್‌, ಪ್ರಬುದ್ಧನ್‌ ರಿಪಬ್ಲಿಕನ್‌ ಪಾರ್ಟಿ, ಎಸ್‌ವಿಪಿಪಿ, ಪಿಪಿಐ (ಎಸ್‌) ಸುಮಾರು 12ಪಕ್ಷಗಳು ಸೇರಿದಂತೆ 8-ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಾಮರಸ್ಯದ ದ್ಯೋತಕರಾದ ಶಿಸ್ತಿನ ಶಿಪಾಯಿ ಗೋಪಾಲ ಶೆಟ್ಟಿ ಅವರನ್ನು ಕ್ಷೇತ್ರದ ಮತದಾರರು ಲಕ್ಷಾಂತರ ಮತಗಳ ಅಂತರದಿಂದ ತಮ್ಮ ಪ್ರತಿನಿಧಿಯನ್ನಾಗಿಸಿ ಲೋಕಸಭೆಗೆ ಕಳುಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next