Advertisement

ಶುಭ ಶುಕ್ರವಾರ: ಶಿಲುಬೆ ಒಂದು ಸ್ಫೂರ್ತಿ

10:12 AM Apr 14, 2017 | |

ಶಿಲುಬೆಯು ಕೇವಲ ಒಂದು ಚಿಹ್ನೆಯಲ್ಲ, ಅದು ಮಾನವನ ಕರ್ತವ್ಯವನ್ನು ಸೂಚಿಸುತ್ತದೆ. ಅದರ ಉತ್ತರ ತುದಿಯು ನಮ್ಮಲ್ಲಿರಬೇಕಾದ ಪರಲೋಕದ ಪ್ರಜ್ಞೆಯ ಸಂಕೇತ. ಶಿಲುಬೆಯ ದಕ್ಷಿಣದ ತುದಿ ನಾವು ಬೆಳೆದು ಬಂದ ಸಮಾಜ, ಪರಿಸರ, ಸಮುದಾಯಕ್ಕೆ ನಾವು ಮಾಡಬೇಕಾದ ಕರ್ತವ್ಯಗಳೇನು ಎಂಬುದನ್ನು ನೆನಪಿಸುತ್ತದೆ.

Advertisement

ಸತ್ಯವನ್ನು ತಿಳಿಸುವುದಕ್ಕಾಗಿ ನಮ್ಮೆಲ್ಲರಿಗೆ ಸಾದೃಶ್ಯವಾದ ಯೇಸು ಕ್ರಿಸ್ತನ ತ್ಯಾಗಪೂರಿತ ಕ್ರೂಜೆಯ ಮರಣವನ್ನು ಕ್ರೈಸ್ತರು ಆಚರಿಸುವ ಸಮಯ “ಕಪ್ಪು ದಿನಗಳು’- ಆಂಗ್ಲ ಭಾಷೆಯಲ್ಲಿ “ಲೆಂಟ್‌ ಡೇಸ್‌’ ಅಥವಾ “ಉಪವಾಸದ ದಿನಗಳು’. ಯೇಸು ಕ್ರಿಸ್ತನು ತ್ಯಾಗ ಮಾಡಿ ತನ್ನನ್ನು ತಾನು ಅರ್ಪಣೆ ಮಾಡಿಕೊಂಡ ದಿನವೇ ಶುಭ ಶುಕ್ರವಾರ. ತಾನು ಕಲ್ಟಾರ ಎನ್ನುವ ಸ್ಥಳದಲ್ಲಿ ಗೋಲ್ಗೊಥ ಶಿಖರದ ಮೇಲೆ ಶಿಲುಬೆಯಲ್ಲಿ ನಿಕೃಷ್ಟ ಮರಣವನ್ನು ಹೊಂದಿದ ಈ ದಿನದಲ್ಲಿ ಸರ್ವರ ಪಾಪಕ್ಕೆ ಸಲ್ಲಬೇಕಾದ ಸಾಲವನ್ನು ಕ್ರಿಸ್ತನು ಸಮರ್ಪಿಸಿದ್ದಾನೆ. ಆದುದರಿಂದ ಈ ದಿನ ಸರ್ವರಿಗೂ ಪಾಪ ವಿಮೋಚನೆ ಒದಗಿದ, ಬಿಡುಗಡೆಯನ್ನು ಕೊಟ್ಟ ಶುಭ ದಿನವಾಗಿದೆ.

ಶಿಲುಬೆಯ ಗುರುತು ಏಕಾಗಿ ಶುಭದ ಗುರುತಾಯಿತು? ಕ್ರೈಸ್ತರು ತಮ್ಮ ಕುತ್ತಿಗೆಯಲ್ಲಿ ಧರಿಸುವ ಬಂಗಾರದ ಸರಗಳಿಗೆ ಶಿಲುಬೆಯ ಗುರುತನ್ನು ಮಾಡಿಸಿ, ಪೋಣಿಸುತ್ತಾರೆ. ಕೈಯ ಉಂಗುರಗಳಲ್ಲಿ ಶಿಲುಬೆಯ ಗುರುತಿರುತ್ತದೆ. ತಾವು ಕಟ್ಟುವ ಕಟ್ಟಡಗಳಲ್ಲಿ ಶಿಲುಬೆಯ ಗುರುತನ್ನು ಹಾಕಿಸಿಕೊಳ್ಳುತ್ತಾರೆ. ಇದನ್ನು ನೋಡಿದಾಕ್ಷಣ ಇವರು ಅಥವಾ ಇವುಗಳು ಕ್ರೈಸ್ತ ಸಮುದಾಯಕ್ಕೆ ಸೇರಿದವರು, ಸೇರಿದವುಗಳು ಎನ್ನುವ ಸಾಮಾನ್ಯ ಭಾವನೆ ಜನರಲ್ಲಿ ಮೂಡುವುದಿದೆ. ಆದರೆ ಶಿಲುಬೆ ಕೇವಲ ಒಂದು ಚಿಹ್ನೆ ಅಲ್ಲ. ಯೇಸು ಆ ಶಿಲುಬೆಯ ಮರಣವನ್ನು ಸ್ವೀಕಾರ ಮಾಡಿದ್ದಾನೆ, ಅದರಲ್ಲಿ ಅಡಗಿರುವ ಚೈತನ್ಯದಾಯಕ ಶಕ್ತಿಯನ್ನು ಜನರಿಗೆ ಅರ್ಥ ಮಾಡಿಸಿಕೊಟ್ಟಿದ್ದಾನೆ.

ಶಿಲುಬೆಯ ಮರಣ, ಅವಮಾನದ ಮರಣ
ಶಿಲುಬೆಯ ಮರಣವನ್ನು ಪರಿಚಯಪಡಿಸಿದವರು ಪಾರಸಿಯರು. ಇವರ ಸಮುದಾಯದಲ್ಲಿ ಯಾರಾದರೂ ಸಾಮಾಜಿಕ ದುಷ್ಕೃತ್ಯಗಳನ್ನು ಮಾಡಿದ್ದರೆ, ದಂಗೆಕೋರರಾಗಿದ್ದರೆ, ದರೋಡೆಯನ್ನು ಮಾಡಿದ್ದರೆ ಅಂಥವರನ್ನು ಬಂಧಿಸಿ,  ಶಿಲುಬೆಯ ಆಕೃತಿಯ ಮರಗಳಿಗೆ ಅವರ ಕಾಲುಗಳನ್ನು ಜೋಡಿಸಿ, ಕೈಗಳನ್ನು ತೆರೆದು ಮೊಳೆಗಳಿಂದ ಜಡಿದು, ಅರೆ ಜೀವಾವಸ್ಥೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಆಕಾಶದಲ್ಲಿ ಹಾರಾಡುವ ಕ್ರೂರ ಪಕ್ಷಿಗಳು, ಗಿಡುಗಗಳು, ರಣಹದ್ದುಗಳು ಆ ದೇಹಗಳನ್ನು ಕುಕ್ಕಿ ಕುಕ್ಕಿ ಸಾಯುವಂತೆ ಬಿಸಿಲಿನ ಬೇಗೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಯಹೂದ್ಯರಲ್ಲಿ ಯಾವುದೇ ವ್ಯಕ್ತಿಯಾಗಲಿ, ಮರದಲ್ಲಿ ನೇತಾಡಿ ಸತ್ತರೆ ಅದು ಅತಿಯಾದ ಅಶುದ್ಧ ಮರಣ ಎಂಬ ನಂಬಿಕೆಯಿತ್ತು. ಆದುದರಿಂದ ಶಿಲುಬೆಯ ಮರಣವನ್ನು ಅವರು ನಿರಾಕರಿಸುತ್ತಿದ್ದರು. ಆದರೆ ತಪ್ಪಿತಸ್ಥರಿಗೆ ಇಂತಹ ಮರಣವನ್ನು ನೀಡಬೇಕೆನ್ನುವ ಪದ್ಧತಿಯನ್ನು ಪಾರಸಿಯರಿಂದ ಅವರು ಸ್ವೀಕರಿಸಿದರು. 

ಹಾಗಾದರೆ ಈ ಶಿಲುಬೆ ಹೇಗೆ ಒಂದು ಚಿಹ್ನೆಯಾಯಿತು? ಎರಡನೇ ಶತಮಾನದಲ್ಲಿ ಆಫ್ರಿಕಾದಲ್ಲಿ ಮಹಾ ಮೇಧಾವಿಯಾದ ತೆರ್ತುಲ್ಲಯಾನೆ ಎಂಬ ಒಬ್ಬ ಬಿಶೋಪನಿದ್ದನು. ಇವನು ಪ್ರಾಮುಖ್ಯವಾಗಿ ಪೌಲನ ಪತ್ರಿಕೆಗಳಲ್ಲಿ ನಿರೂಪಣೆಯಾಗಿರುವ ಕ್ರಿಸ್ತನ ಕ್ರೂಜೆಯ ಮರಣದ ಮಹತ್ವವನ್ನು ವ್ಯಾಖ್ಯಾನ ಮಾಡಿದನು. ಒಬ್ಬನು ಕ್ರೈಸ್ತನಾಗುವುದೆಂದರೆ, ಕ್ರಿಸ್ತನ ಶ್ರಮ, ಮರಣ ಮತ್ತು ಪುನರುತ್ಥಾನಗಳಲ್ಲಿ ಆತ್ಮೀಯವಾಗಿ ಪಾಲು ಹೊಂದುವುದೇ ಎಂಬ ಅಂಶವನ್ನು ಆತ ಅರಿತುಕೊಂಡನು. ಈ ಲೋಕದಲ್ಲಿ ಕ್ರಿಸ್ತನನ್ನು ಹಿಂಬಾಲಿಸುವುದೆಂದರೆ ಅದು ಶ್ರಮ- ಮರಣಗಳ ಹಾದಿಯೇ; ತನ್ನ ಶಿಲುಬೆಯನ್ನು ಹೊತ್ತುಕೊಂಡು ದಿನಾಲೂ ಕ್ರಿಸ್ತನನ್ನು ಹಿಂಬಾಲಿಸುವುದು ಎಂದು ಬೋಧಿಸತೊಡಗಿದನು. ಆದುದರಿಂದ ಮತಾಂತರದ ಮೂಲಕ ಕ್ರೈಸ್ತರಾಗಲು ಬಯಸಿದವರಿಗೆ ದೀಕ್ಷಾಸ್ನಾನದ ಸಮಯದಲ್ಲಿ ಸಾಂಕೇತಿಕವಾಗಿ ಅವರ ಹಣೆಗಳ ಮೇಲೆ ತನ್ನ ಕೈಬೆರಳುಗಳಿಂದ ಕ್ರೂಜೆಯ ಚಿಹ್ನೆಯನ್ನು ಹಾಕಲು ತೊಡಗಿದನು. ಅದೇ ಪ್ರಾರಂಭದ ಮೊಳಕೆಯಾಯಿತು.

Advertisement

ಮುಂದೆ ಕ್ರಿ.ಶ. 312ರಲ್ಲಿ ರೋಮ್‌ನ ಚಕ್ರವರ್ತಿಯಾಗಿದ್ದ ಕಾನಸ್ಟೆಂಟೈನ್‌ ಒಂದು ಯುದ್ಧಕ್ಕಾಗಿ ತನ್ನ ಸೈನ್ಯ ತೆಗೆದುಕೊಂಡು ಹೊರಟಿದ್ದನು. ಆ ಯುದ್ಧವನ್ನು ಚರಿತ್ರೆಯಲ್ಲಿ “ಮಿಲ್ವಿಯನ್‌ ಸೇತುವೆಯ ಸಮರ’ ಎಂದು ಕರೆದಿದ್ದಾರೆ. ಯುದ್ಧಕ್ಕಾಗಿ ಪ್ರಯಾಣ ಮಾಡುತ್ತಿದ್ದ ಚಕ್ರವರ್ತಿಗೆ ಒಂದು ಮುಸ್ಸಂಜೆ ಆಕಾಶದಲ್ಲಿ ಪ್ರಕಾಶಮಾನವಾಗಿ ಶಿಲುಬೆಯ ಗುರುತು ಕಾಣಿಸಿತು. ಅಲ್ಲದೆ, ಅದರೊಂದಿಗೆ ಒಂದು ಅಶರೀರವಾಣಿ ಅವನ ಕಿವಿಗೆ ಕೇಳಿಸಿತು. ಈ ವಾಣಿ ಜಟc sಜಿಜ್ಞಟ vಜಿncಛಿs ಅಂದರೆ, “ಈ ಗುರುತಿನಿಂದ ಜಯಶಾಲಿಯಾಗುವಿ’ ಎಂದರ್ಥದ್ದಾಗಿತ್ತು. ಈ ಸನ್ನಿವೇಶದಿಂದ ಪ್ರಭಾವಿತನಾಗಿ ಯುದ್ಧದಲ್ಲಿ ಜಯಶಾಲಿಯಾದ ಕಾನ್‌ಸ್ಟೆಂಟೈನ್‌ ಸ್ವತಃ ಕ್ರೈಸ್ತನಾಗಿ ಪರಿವರ್ತನೆ ಹೊಂದಿದನಲ್ಲದೆ, ಶಿಲುಬೆಯ ಗುರುತನ್ನು ತನ್ನ ರಾಜ ಮುದ್ರೆಯನ್ನಾಗಿ ಮಾಡಿಕೊಂಡನು. ಆಗಿನ ಕಾಲದಲ್ಲಿ ರಾಜನ ಧರ್ಮವೇ ಅಧಿಕೃತ ಧರ್ಮವಾಗಿತ್ತು. ಆದುದರಿಂದ ಕ್ರೈಸ್ತತ್ವವು ಅಧಿಕೃತವಾದದ್ದು ಎಂಬುದನ್ನು ಸೂಚಿಸಲು ರಾಜಮುದ್ರೆಯಾಗಿದ್ದ ಶಿಲುಬೆಯ ಗುರುತನ್ನು ಆಗ ತಾನೇ ಅಲ್ಲಲ್ಲಿ ನಿರ್ಮಾಣವಾಗುತ್ತಿದ್ದ ಕ್ರೈಸ್ತ ಆರಾಧನಾ ಕಟ್ಟಡಗಳ ಮೇಲ್ಭಾಗದಲ್ಲಿ ಸ್ಥಾಪಿಸುವ ವಾಡಿಕೆ ರೂಢಿಗೆ ಬಂದಿತು. ಈಗ ಶಿಲುಬೆ ಪವಿತ್ರ ಚಿಹ್ನೆಯಾಗಿ ಉಳಿದುಕೊಂಡಿದೆ; ಆದರೆ ಬಹುತೇಕರಿಗೆ ಈ ಸಂಪ್ರದಾಯ ಬೆಳೆದು ಬಂದ ಬಗೆ ತಿಳಿದಿರುವುದಿಲ್ಲ.

ಶಿಲುಬೆಯ ಮರಣಕ್ಕೆ ಸಂದ ಗೌರವ
ಯೇಸುವಿನ ವಿಚಾರವಾಗಿ ಬಹಳಷ್ಟು ನಂಬಿಕೆ, ಶ್ರದ್ಧೆಗಳನ್ನು ಹೊಂದಿದ ಸಂತ ಪೌಲನು “ನಾನಾ ವಿರೋಧ, ತಿರಸ್ಕಾರಗಳ ನಡುವೆಯೂ ಶಿಲುಬೆಯ ಮಾತು ನಂಬು, ಅದು ನಮಗೆ ದೇವರ ಶಕ್ತಿಯಾಗಿದೆ’ ಎನ್ನುತ್ತಾರೆ. ಯೇಸುಕ್ರಿಸ್ತನು ಚಿಕ್ಕಂದಿನಿಂದಲೂ ತಂದೆಯು ವಿಧಿಸಿದ ಶಿಲುಬೆಯ ಮಾರ್ಗದಿಂದಲೇ ರಕ್ಷಣೆಯನ್ನು ಸಾಧಿಸುವುದು ತನ್ನ ಗುರಿ ಎಂಬುದಾಗಿ ಸಂಕಲ್ಪ ಹೊಂದಿದ್ದವನು. ಹಲವು ಬಾರಿ ಜನರು ತನ್ನನ್ನು ಅರಸನನ್ನಾಗಿ ಮಾಡಲು ನಿರ್ಧರಿಸಿದಾಗಲೂ ಮೌನವಾಗಿಯೇ ಆ ಸ್ಥಳದಿಂದ, ಆ ಅವಕಾಶದಿಂದ ತಪ್ಪಿಸಿಕೊಂಡು ಹೊರಟು ಹೋಗುತ್ತಿದ್ದವನು. ತಾನು ಹೊಂದಲಿರುವ ಘೋರ ಹಿಂಸೆಯಾದ ಶಿಲುಬೆಯ ಮರಣವನ್ನು ಯೇಸು ಮುಂಗಂಡಿದ್ದನು. ಈ ಕಾರಣದಿಂದಾಗಿಯೇ ಕ್ರೈಸ್ತರು ಯೇಸುವಿನ ಶಿಲುಬೆಯ ಮರಣವನ್ನು ಸಕಲ ಪಾಪಗಳಿಂದ ತಮಗೆ ಲಭಿಸಿದ ಮುಕ್ತಿಯ ಕ್ರಿಯೆ ಎಂಬುದಾಗಿ ಪರಿಗಣಿಸುತ್ತಾರೆ. 

ಶಿಲುಬೆಯು ಮಾನವನಿಗಿರಬೇಕಾದ ಕರ್ತವ್ಯವನ್ನು ಸೂಚಿಸುತ್ತದೆ. ಅದರ ಉತ್ತರ ತುದಿಯು ಪರಲೋಕದ ಕಡೆಗಿನ ಬೆಳವಣಿಗೆಯ ಸೂಚನೆ. ಮಾನವರಾಗಿ ಹುಟ್ಟಿದ ನಾವು ಕೇವಲ ನಮ್ಮ ಜ್ಞಾನ, ಪದವಿ, ಹಣ, ಅಂತಸ್ತು ಇವುಗಳಲ್ಲಿಯಷ್ಟೇ ತೃಪ್ತಿ ಹೊಂದದೆ, ಸತ್ತ ಬಳಿಕ ನಮ್ಮ ಆತ್ಮವು ಸೇರುವ ಪರಲೋಕದ ಬಗ್ಗೆಯೂ ಚಿಂತಿಸಬೇಕೆನ್ನುವ ಆದ್ಯ ಕರ್ತವ್ಯದ ಬಗ್ಗೆ ಅದು ಎಚ್ಚರಿಸುತ್ತದೆ. ಜೀವನವು ಕೇವಲ ಮರಣವಷ್ಟೇ ಅಲ್ಲ, ಸಾವಿನಲ್ಲಿ ಅಂತ್ಯ  ಹೊಂದುವುದಿಲ್ಲ. ಪ್ರತಿಯೊಬ್ಬನ ಆತ್ಮವು ದೇವರಲ್ಲಿ ಲೀನವಾಗುವುದರಿಂದ ದೇವರ ಜತೆಗಿನ ಮನುಜನ ಸಂಬಂಧ ಸರ್ವ ಕಾಲಕ್ಕೂ ವೃದ್ಧಿಸಬೇಕು ಎನ್ನುವುದನ್ನು ಸೂಚಿಸುತ್ತದೆ. 

ಇನ್ನು ಶಿಲುಬೆಯ ದಕ್ಷಿಣದ ತುದಿಯು ನಾವು ಬೆಳೆದು ಬಂದಿರುವ ಸಮಾಜದ ಕಡೆಗೆ ನಮ್ಮ ದೃಷ್ಟಿಯನ್ನು ಹಾಯಿಸುವುದಕ್ಕೆ ಸಹಾಯ ಮಾಡುತ್ತದೆ. ನಾವು ಬೆಳೆದು ಬಂದ ಸಮಾಜಕ್ಕೆ, ಪರಿಸರಕ್ಕೆ, ಸಮುದಾಯಕ್ಕೆ ನಾವು ಮಾಡಬೇಕಾದ ಕರ್ತವ್ಯಗಳೇನು, ಇತರರ ಮಾತಿನಲ್ಲಿ, ಸುಖ -ದುಃಖಗಳಲ್ಲಿ ಸ್ಪಂದಿಸಿ ಸಲ್ಲಿಸಬೇಕಾದ ಕರ್ತವ್ಯಗಳೇನು ಎಂಬುದನ್ನು ಸೂಚಿಸುತ್ತದೆ. ಏಕೆ ಎಂದರೆ, ನಾವು ದೇವರ ಸ್ವರೂಪವಾಗಿ ಸೃಜಿಸಲ್ಪಟ್ಟವರು, ಪರೋಪಕಾರವೇ ನಮ್ಮ ಜೀವದ ಉಸಿರು. ಇದನ್ನು ಸಮರ್ಪಕವಾಗಿ ನಡೆಸಿಕೊಡುವುದಕ್ಕೆ ಶಿಲುಬೆ ಕರೆಯನ್ನು  ಕೊಡುತ್ತದೆ. ಇದು ಶುಕ್ರವಾರದ ಶುಭ ಸಂದೇಶ.

– ರೆವರೆಂಡ್‌ ಡಾ. ಹನಿ ಕಬ್ರಾಲ್‌ 

Advertisement

Udayavani is now on Telegram. Click here to join our channel and stay updated with the latest news.

Next