Advertisement

Gonwar Kishan Rao: ಓದುಗರು ಇರುವವರೆಗೂ ಭಾಷೆ ಗಟ್ಟಿಯಾಗಿ ಇರುತ್ತದೆ…

12:26 PM Sep 17, 2023 | Team Udayavani |

ಹೈದರಾಬಾದ್‌ನಲ್ಲಿ ಕನ್ನಡಿಗರ ಪ್ರತಿನಿಧಿಯಂತೆ ಇರುವವರು ಅಧ್ಯಾಪಕ, ಅನುವಾದಕ ಗೋನವಾರ ಕಿಶನ್‌ ರಾವ್‌. ರಾಯಚೂರು ಮೂಲದ ಇವರು, ಕವಿ ಕೆ. ವಿ. ತಿರುಮಲೇಶ್‌ರ ಪರಮಾಪ್ತ ಆಗಿದ್ದವರು. ಹಿಂದಿ, ಇಂಗ್ಲಿಷ್‌, ತೆಲುಗಿನ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೈದರಾಬಾದ್‌ನಲ್ಲಿ ಕನ್ನಡ, ಕನ್ನಡಿಗರ ಸ್ಥಿತಿಗತಿ, ಅಲ್ಲಿನ ಸಾಹಿತ್ಯಿಕ ವಾತಾವರಣ ಕುರಿತು ಹೇಳಿಕೊಂಡಿದ್ದಾರೆ.

Advertisement

ತೆಲುಗು ಮಾತೃಭಾಷೆಯ, ಉರ್ದು/ ಹಿಂದಿ ಭಾಷೆಗಳ ಪ್ರಭಾವ ಇರುವ ಹೈದರಾಬಾದ್‌ನಲ್ಲಿ ಕನ್ನಡ ಶಾಲೆಗೆ ಮಕ್ಕಳನ್ನು ಕಳಿಸುವ ವಾತಾವರಣವಿದೆ. ಅಲ್ಲಿನ ಜನರಿಗೆ ಕನ್ನಡದ ಬಗೆಗೆ ಆಸಕ್ತಿ ಉಂಟಾಗಲು ಏನು ಕಾರಣ?

ಇಲ್ಲಿಯ ಅಧಿಕೃತ ಭಾಷೆಗಳು ತೆಲುಗು ಮತ್ತು ಉರ್ದು. ಹೈದರಾಬಾದಿಗೆ ಬರುವವರಿಗೆ, ತೆಲುಗು ಬಾರದೇ ಇದ್ದರೂ ಅರೆ ಬರೆ ಹಿಂದಿ ಬಂದರೂ ಮ್ಯಾನೇಜ್‌ ಮಾಡಬಹುದು. ಇಲ್ಲಿ ಹೊಟ್ಟೆಪಾಡಿಗೆ ಬಂದಿರುವ, ಬೀದರ್‌ ಭಾಗದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಂದೋ ಒಂದು ದಿನ ತಾಯ್ನಾಡಿಗೆ ಮರಳುತ್ತೇವೆ ಎನ್ನುವ ಆಶಯದಿಂದ ಅವರು ಮಕ್ಕಳಿಗೆ ಕನ್ನಡ ಕಲಿಸುತ್ತಾರೆ. ಬ್ಯಾಂಕ್‌, ರೈಲ್ವೆ ಇಲಾಖೆ, ಎಲ್.ಐ.ಸಿ. ಸಂಸ್ಥೆಗಳಿಗೆ ವರ್ಗವಾಗಿ ಬರುವ ಅಧಿಕಾರಿಗಳು ಮಾತ್ರವಲ್ಲ; ಈ ಊರಿಗೆ ಸೊಸೆಯರಾಗಿ ಬರುವವರೂ ತಮ್ಮ ಮಕ್ಕಳು ಕನ್ನಡ ಕಲಿಯಬೇಕೆಂದು ಬಯಸುತ್ತಾರೆ. ಇಂಥ ಕಾರಣಗಳಿಂದಾಗಿ ಇಲ್ಲಿ ಕನ್ನಡ, ಕನ್ನಡ ಶಾಲೆ, ಸಾಹಿತ್ಯ ಮಂದಿರಗಳು ತಮ್ಮ ಅಸ್ಮಿತೆ ಉಳಿಸಿಕೊಂಡಿವೆ.

ಹೈದರಾಬಾದ್‌ನಲ್ಲಿ ಪ್ರತಿವರ್ಷ ಯಕ್ಷಗಾನ ಮತ್ತು ನೀನಾಸಂ ನಾಟಕಗಳ ಪ್ರದರ್ಶನ ನಡೆಯುತ್ತದಂತೆ! ಅದನ್ನು ಆಯೋಜಿಸುವವರು ಯಾರು?

ಇಲ್ಲಿ “ಕನ್ನಡ ನಾಟ್ಯರಂಗ ಎಂಬ ಸಂಸ್ಥೆ ಇದೆ.ಅದಕ್ಕೆ ಕರ್ನಾಟಕದ ಕರಾವಳಿ ಭಾಗದ ಹೋಟೆಲ್‌ ಉದ್ಯಮಿಗಳು ನೀಡುವ ಸಹಾಯ ದೊಡ್ಡದು. ಇಲ್ಲಿ ಪ್ರತಿ ವರ್ಷ ಯಕ್ಷಗಾನ ಸಪ್ತಾಹ ನಡೆಯುತ್ತದೆ. ಯಕ್ಷಗಾನ ಪ್ರಸಂಗವನ್ನು ಹೋಟೆಲ್‌ ಉದ್ಯಮಿಗಳು ಪ್ರಾಯೋಜಿಸುತ್ತಾರೆ. ಯಕ್ಷಗಾನ ವರ್ಕ್‌ಶಾಪ್‌ಗ್ಳನ್ನು ಆಯೋಜಿಸಿ ತರಬೇತಿ ನೀಡುತ್ತಾರೆ. ಯಕ್ಷಗಾನ ಮತ್ತು ನಾಟಕಗಳಲ್ಲಿ ಸ್ವತಃ ಅಭಿನಯಿಸುತ್ತಾರೆ. ಇನ್ನು “ನೀನಾಸಂ’ ನಾಟಕಗಳನ್ನು “ಸಾಹಿತ್ಯ ಮಂದಿರ’ ಆಯೋಜಿಸುತ್ತದೆ. ಶಿಕ್ಷಣ ಸಮಿತಿ ಮತ್ತು ನಾಟ್ಯರಂಗದ ಸದಸ್ಯರು ಪ್ರತ್ಯಕ್ಷ- ಪರೋಕ್ಷವಾಗಿ ಸಹಾಯ ನೀಡುತ್ತಾರೆ.‌

Advertisement

ಐಟಿಬಿಟಿ ಔದ್ಯೋಗಿಕರಣದ ನಂತರವೂ ಹೈದ್ರಾಬಾದ್‌ನಲ್ಲಿ ಕನ್ನಡಿಗರು ತಮ್ಮತನ ಉಳಿಸಿಕೊಂಡದ್ದು ಹೇಗೆ? ಎಲ್ಲವೂ ಇಂಗ್ಲಿಷ್‌ಮಯವಾಗುತ್ತಿರುವ ಈ ಸಂದರ್ಭದಲ್ಲಿ ದೇಶಭಾಷೆಗಳು ಅಸ್ತಿತ್ವ ಕಾಪಾಡಿಕೊಳ್ಳುವುದು ಹೇಗೆ?

ಔದ್ಯೋಗೀಕರಣದ ನಂತರ, ಹೆಚ್ಚು ಕನ್ನಡಿಗರು ಉದ್ಯೋಗಾರ್ಥಿಗಳಾಗಿ ಬಂದು ನೆಲೆನಿಂತಿದ್ದಾರೆ. ಕನ್ನಡ ಸಂಘ ಕಟ್ಟಿ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿ¨ªಾರೆ. ಅವರಿಂದಾಗಿ ಹೈಟೆಕ್‌ಸಿಟಿ ಪ್ರದೇಶದಲ್ಲಿ ಕನ್ನಡ ಸಿನೆಮಾಗಳು ಬಿಡುಗಡೆಯಾಗುತ್ತವೆ. ವಾರಗಟ್ಟಲೆ ಪ್ರದರ್ಶನ ಕಾಣುತ್ತವೆ. ಹಾಗಾಗಿ ಅಸ್ಮಿತೆಯ ಹುಡುಕಾಟದ ಸಮಸ್ಯೆ ಇಲ್ಲವೇನೋ. ಭಾಷೆಯ ಅಸ್ತಿತ್ವ ಅಂದಾಗ ಕನ್ನಡಿಗರು ಗಾಬರಿಯಾಗುವ ಅಗತ್ಯವಿಲ್ಲ ಎನಿಸುತ್ತದೆ. ಕಾರಣ, ಬರೆಯುವವರ ಸಂಖ್ಯೆ ಹೆಚ್ಚಿದೆ. ಹೊಸ ಪುಸ್ತಕಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಓದುವವರು, ಬರೆಯುವವರು ಇರುವಷ್ಟು ದಿನವೂ ಕನ್ನಡಕ್ಕೆ ಭಯವಿಲ್ಲ ಅನ್ನಬಹುದು.

“ಅಂತ’ ಖ್ಯಾತಿಯ ಎಚ್‌. ಕೆ. ಅನಂತರಾವ್‌ ಮತ್ತು ಕೆ. ವಿ. ತಿರುಮಲೇಶ್‌ರ ಪರಮಾಪ್ತರು ನೀವು. ಅವರಿಬ್ಬರನ್ನು ಕುರಿತು  ಹೇಳುವುದಾದರೆ…

“ಅಂತ’ ಕಾದಂಬರಿ ಸಿನೆಮಾ ಆದಮೇಲೆ ಅನಂತರಾವ್‌ ಅವರ ಪುಸ್ತಕಗಳ ಮಾರುಕಟ್ಟೆ ಬೆಳೆಯಿತು. ಸಪ್ನ ಬುಕ್‌ ಹೌಸ್‌ನವರ ಬೆಂಬಲದಿಂದ ಅರ್ಥಿಕವಾಗಿ ಸದೃಢರಾದರು. ಆದರೂ ಪತ್ತೆದಾರಿ ಸಾಹಿತ್ಯ Main Stream ಸಾಹಿತ್ಯ ಆಗಲಿಲ್ಲ, ಹಿರಿಯ ಸಾಹಿತಿಗಳು ತನ್ನನ್ನು ಗುರುತಿಸಲಿಲ್ಲ ಅನ್ನುವ ಬೇಸರ ಅವರಿಗಿತ್ತು.

ದ.ರಾ.ಬೇಂದ್ರೆ ಮತ್ತು ತಿರುಮಲೇಶರು ಕನ್ನಡದ ಇಬ್ಬರು ಪ್ರಮುಖ ಕವಿಗಳು ಅಂತೇನೆ ನಾನು. ಒಬ್ಬರು ಶಬ್ದ ಗಾರುಡಿಗರಾದರೆ ಇನ್ನೊಬ್ಬರು ನುಡಿ ಗಾರುಡಿಗ. ಬೇಂದ್ರೆಯವರ ಬಗ್ಗೆ ಸಾಹಿತ್ಯ ಲೋಕಕ್ಕೆ ಗೊತ್ತಿದೆ. ತಿರುಮಲೇಶ್‌ ಅವರು ಕವಿಯಾಗಿ ಮಾಡಿರುವ ಪ್ರಯೋಗಗಳು ಅಸಂಖ್ಯ. ಅವರೊಂದಿಗೆ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ. .

ನೀವು ಕನ್ನಡದಿಂದ ಇಂಗ್ಲಿಷಿಗೆ, ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸುವಿರಿ. ಆ ಬಗೆಗಿನ ನಿಮ್ಮ ಅನುಭವಗಳನ್ನು ಹೇಳಿ.

ಆರಂಭದಲ್ಲಿ ಕೆಲವು ಕಂಪನಿಗಳ ಜಾಹೀರಾತುಗಳನ್ನು ಇಂಗ್ಲಿಷ್‌/ ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡುತ್ತಿದ್ದೆ. ಹಣ ಸಂಪಾದನೆಯ ಒಂದು ಮಾರ್ಗ ಅದು. ನಂತರ ಫಿಲಂ ಡಿವಿಷನ್‌ನ ಸಾಕ್ಷ್ಯಚಿತ್ರಗಳನ್ನು ಕನ್ನಡಕ್ಕೆ ತಂದೆ. ನನ್ನ ಅನುವಾದಗಳು ಕ್ಲಿಕ್‌ ಆದವು. ತೆಲುಗು, ಇಂಗ್ಲಿಷ್‌, ಹಿಂದಿ ಭಾಷೆಯ ಮೇಲೆ ಹಿಡಿತ ಸಿಕ್ಕಿತ್ತು. ಯಾವುದೇ ಹಿಂದಿ, ತೆಲುಗು, ಇಂಗ್ಲಿಷ್‌ ನ ಕವಿತೆ/ನಾಟಕ, ಓದುತ್ತಿದ್ದರೆ ಅದರ ಕನ್ನಡ ಅನುವಾದ ಸಹ ಹೊಳೆಯುತ್ತ ಹೋಗುತ್ತಿತ್ತು. ಮುಂದೆ ಬೆಂಗಳೂರಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಅನುವಾದ ಕಮ್ಮಟದಲ್ಲಿ ಅನೇಕ ಸಾಹಿತಿಗಳ ಪರಿಚಯವಾಗಿ, ಅನುವಾದ ಚಟುವಟಿಕೆಗೆ ಬಹಳಷ್ಟು ಸಹಾಯವಾಯಿತು. ಹಲವು ಪುಸ್ತಕಗಳನ್ನು ಪ್ರಕಟಿಸಲೂ ಸಾಧ್ಯವಾಯಿತು.

ಸಾಹಿತ್ಯ ಸಂಸ್ಕೃತಿಯ ಸೇವೆಗೆಂದು ಹೈದರಾಬಾದ್‌ನಲ್ಲಿ 1936 ರಲ್ಲಿ “ಕರ್ನಾಟಕ ಸಾಹಿತ್ಯ ಮಂದಿರ’ ಸ್ಥಾಪನೆಯಾಯಿತು. ಅದರ ಮೂಲಕವೇ  “ಪರಿಚಯ’  ಸಾಹಿತ್ಯ ಪತ್ರಿಕೆಯೂ ಆರಂಭವಾಯಿತು. ಕರ್ನಾಟಕದ ಎಲ್ಲಾ ಸಾಹಿತಿಗಳೂ ಅದಕ್ಕೆ ಕಥೆ, ಕವನ, ಅಂಕಣ ಬರೆದು ಪೋ›ತ್ಸಾಹಿಸಿದರು. ಸಾರ್‌, “ಪರಿಚಯ’ ಪತ್ರಿಕೆಗೆ ಒಂದು ಲೇಖನ ಕೊಡಿ ಎಂದು ತಿರುಮಲೇಶ್‌ ಅವರನ್ನು ಕೇಳಿದಾಗ, ಅವರು- ಒಂದೇ ಯಾಕೆ? ಪ್ರತಿ ತಿಂಗಳೂ ಕೊಡುವೆ ಅಂದು- “ಅಕ್ಷರ ಲೋಕದ ಅಂಚಿನಲ್ಲಿ’ ಎಂಬ ಶೀರ್ಷಿಕೆಯಲ್ಲಿ ಸರಣಿ ಲೇಖನಗಳನ್ನೇ ಬರೆದರು.

ಗೋನವಾರ ಕಿಶನ್‌ರಾವ್‌

ಅಧ್ಯಾಪಕ/ ಅನುವಾದಕರು. ಹೈದರಾಬಾದ್‌

Advertisement

Udayavani is now on Telegram. Click here to join our channel and stay updated with the latest news.

Next