Advertisement

ನಾನು ನನ್ ಫ್ಯಾಮಿಲಿ

12:49 PM Apr 10, 2020 | Suhan S |

“ಇಷ್ಟು ದಿನ ನಾನು ಕಥೆ ಕೇಳ್ತಾ ಇದ್ದೆ, ಈಗ ಕಥೆ ಹೇಳ್ತಾ ಇದ್ದೀನಿ… ‘ – ಹೀಗೆ ಹೇಳುತ್ತಾ ಹೋದರು ನಟ ಗಣೇಶ್‌. ಕೋವಿಡ್ 10 ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್‌ ಆಗಿದ್ದು, ಎಲ್ಲರೂ ಮನೆಯಲ್ಲೇ ಕೂರುವಂತಹ ಸ್ಥಿತಿ ಬಂದೊದಗಿದೆ. ಹಾಗೆಯೇ, ಸಿನಿಮಾ ಸ್ಟಾರ್ ಕೂಡ ಮನೆಯಲ್ಲೇ ಇದ್ದಾರೆ.

Advertisement

ತಮ್ಮ ಮನೆಯಲ್ಲೇ ಇರುವ ಗಣೇಶ್‌ ಕೂಡ ಈ ಸಮಯದಲ್ಲಿ ಸುಮ್ಮನೆ ಕೂತಿಲ್ಲವಂತೆ. ಇಷ್ಟು ದಿನ ಅವರು ಬಿಡುವಿದ್ದಾಗೆಲ್ಲ ಕೆಲ ಯುವ ನಿರ್ದೇಶಕರು ಬಂದು ಕಥೆ ಹೇಳಿದ್ದನ್ನು ಕೇಳುತ್ತಿದ್ದರು. ಈಗ ಯಾರೂ ಮನೆಗೆ ಬರುವಂತಿಲ್ಲ. ಇವರೂ ಆಚೆ ಹೋಗುವಂತಿಲ್ಲ. ಹಾಗಾಗಿ, ತಮ್ಮ ಮಕ್ಕಳಿಗೆ ಒಂದೊಂದು ಸಣ್ಣ ಕಥೆ ಹೇಳುವ ಮೂಲಕ ಸಮಯ ಕಳೆಯುತ್ತಿದ್ದಾರೆ.

ಹೌದು, ಗಣೇಶ್‌ ಮನೆಯಲ್ಲಿದ್ದರೂ, ಸಿನಿಮಾ ಹೊರತಾಗಿ ಬೇರೇನೂ ಮಾಡುತ್ತಿಲ್ಲ. ಒಂದಷ್ಟು ಜಗತ್ತಿನ ಹಲವು ಭಾಷೆಯ ಹಾಗು ಕನ್ನಡದ ಅಪರೂಪದ ಸಿನಿಮಾಗಳನ್ನು ನೋಡುತ್ತಿದ್ದಾರೆ. ಮಕ್ಕಳ ಜೊತೆ ಆಟವಾಡುತ್ತಲೇ ಸಂತಸದಿಂದಲೇ ಸಮಯ ದೂಡುತ್ತಿದ್ದಾರೆ. ಆ ಕುರಿತು ಹೇಳುವ ಗಣೇಶ್‌, ” ಸದ್ಯಕ್ಕೆ ಮನೆಯೇ ಮಂತ್ರಾಲಯವಾಗಿದೆ. ನನ್ನ ಅಭಿನಯದ “ಗಾಳಿಪಟ 2’ ಮತ್ತು “ಸಖತ್‌ ‘ ಚಿತ್ರಗಳು ಕೋವಿಡ್ 10  ಎಫೆಕ್ಟ್ ಹಿನ್ನೆಲೆಯಲ್ಲಿ ನಿಂತಿವೆ.

ನಾನೀಗ ಮನೆಯಲ್ಲೇ ಮಕ್ಕಳು, ಮಡದಿ ಜೊತೆ ಲಾಕ್‌ ಆಗಿದ್ದೇನೆ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಪಾಲಿಸಬೇಕು. ಇದು ಎಲ್ಲರಿಗೂ ಒಳ್ಳೆಯದು. ನಿಜ ಹೇಳಬೇಕೆಂದರೆ, ನಾನು ಇಷ್ಟೊಂದು ದೀರ್ಘ‌ವಾಗಿ ಮನೆಯಲ್ಲಿ ಇದ್ದ ಉದಾಹರಣೆ ಇಲ್ಲ. ಯಾವತ್ತಿಗೂ ನಾನು ಚಿತ್ರೀಕರಣ ಬಿಟ್ಟು, ಇಷ್ಟು ದಿನಗಳ ಕಾಲ ಮಕ್ಕಳ ಹಾಗು ಪತ್ನಿ ಜೊತೆ ಇರಲಿಲ್ಲ. ಈಗ ಮನೆಯಲ್ಲಿರುವಂತಾಗಿದೆ. ಇಷ್ಟು ದಿನಗಳಲ್ಲಿ ನಾನು ಮಕ್ಕಳ ಜೊತೆ ಸಾಕಷ್ಟು ಸಮಯ ಕಳೆದ ನೆಮ್ಮದಿ ಸಿಕ್ಕಿದೆ.

ಚಿತ್ರೀಕರಣ ಸಮಯದಲ್ಲಿ ಬಿಡುವು ಇರುತ್ತಿರಲಿಲ್ಲ. ಸಿಕ್ಕ ವಾರಕ್ಕೊಂದು ರಜೆಯಲ್ಲಿ ಮಕ್ಕಳ ಜೊತೆ ಇರುತ್ತಿದ್ದೆ. ಈಗ ಅವರೊಂದಿಗೆ ಸಂಪೂರ್ಣ ದಿನಗಳನ್ನು ಕಳೆಯುತ್ತಿದ್ದೇನೆ. ಈ ಸಮಯದಲ್ಲಿ ನನ್ನ ದಿನಚರಿ ಕೂಡ ಬದಲಾಗಿದೆ. ಬೆಳಗ್ಗೆ ಎದ್ದು, ಯೋಗ ಮಾಡ್ತೀನಿ. ವರ್ಕೌಟ್ ಕೂಡ ಮೂರ್‍ನಾಲ್ಕು ದಿನಗಳಿಗೊಮ್ಮೆ ಆಗುತ್ತಿದೆ. ಉಳಿದಂತೆ ಟೇಬಲ್‌ ಟೆನ್ನಿಸ್‌ ಆಡೋದು, ಮಕ್ಕಳ ಜೊತೆ ಹರಟುವುದು, ಅವರೊಂದಿಗೆ ಕುಳಿತು ಒಂದಷ್ಟು ಸಿನಿಮಾ ನೋಡೋ ಕೆಲಸ ಆಗಿದೆ’ ಎನ್ನುತ್ತಾರೆ ಗಣೇಶ್‌.

Advertisement

ಗಣೇಶ್‌ ಬಿಡುವಿದ್ದಾಗ, ಚಿತ್ರೀಕರಣದ ಸಮಯದಲ್ಲೋ ಅಥವಾ ಮನೆಯಲ್ಲೋ ಒಂದಷ್ಟು ಕಥೆ ಕೇಳುತ್ತಿದ್ದರು. ಅವರು ಶೂಟಿಂಗ್‌ ಇಲ್ಲವೆಂದರೆ ಸಾಕು, ಮನೆಗೆ ಬಂದು ಕಥೆ ಹೇಳುವವರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಬಿಡುವಲ್ಲಿ ಕಥೆ ಕೇಳುತ್ತಿದ್ದ ಗಣೇಶ್‌ ಈಗ ಕಥೆ ಹೇಳುವಂತಾಗಿದೆ.

ಹೌದು, ಆ ಬಗ್ಗೆ ಹೇಳುವ ಅವರು, ” ನಾನು ಮಕ್ಕಳ ಜೊತೆ ಆಟ ಆಡ್ತಾ ಇದ್ದೇನೆ. ಅದು ಸಾಕಾದಾಗ, ಅವರಿಗೆ ಒಂದಷ್ಟು ಸಣ್ಣ ಕಥೆಗಳನ್ನು ಹೇಳ್ತೀನಿ. ಅವರಿಗೆ ಮೂಡ್‌ ಇರೋವರೆಗೆ ಕೂತು ಕೇಳುತ್ತಾರೆ. ಮೂಡ್‌ ಇಲ್ಲ ಅಂದಾಗ, ಎದ್ದು ಹೋಗ್ತಾರೆ. ಆಮೇಲೆ ನಾನು ಸಿನಿಮಾ ನೋಡೋಕೆ ಶುರುಮಾಡ್ತೀನಿ. ಅದೇನೆ ಇರಲಿ, ಇಷ್ಟು ದಿನ ನಾನು ಮಕ್ಕಳ ಜೊತೆ ಇದ್ದದ್ದೇ ಖುಷಿ ಕೊಟ್ಟಿದೆ.

ಇನ್ನು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿನಿಮಾ ಕಾರ್ಮಿಕರು, ದಿನಗೂಲಿ ನೌಕರರಿಗೆ ಸಾಕಷ್ಟು ಸಮಸ್ಯೆಯಾಗಿದೆ. ನನ್ನ ಅಭಿಮಾನಿ ಬಳಗದ ಪದಾಧಿಕಾರಿಗಳು ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾರೆ. ನಮ್ಮ ಕಡೆಯಿಂದ ಆದಂತಹ ಸಹಾಯ ಆಗುತ್ತಿದೆ. ಯಾರೂ ಕೂಡ ಉಪವಾಸ ಇರಬಾರದು ಎಂಬ ಉದ್ದೇಶ ನನ್ನದು. ಅಗತ್ಯ ಇರುವವರನ್ನು ಗುರುತಿಸಿ, ಸಂಘದಿಂದ ನಮ್ಮ ಅಭಿಮಾನಿಗಳು ಅಕ್ಕಿ, ಬೇಳೆ, ಎಣ್ಣೆ ಇತರೆ ದಿನಸಿ ವ್ಯವಸ್ಥೆ ಮಾಡುತ್ತಿದ್ದಾರೆ. ಇದರಲ್ಲಿ ಸಿಗುವ ಖುಷಿ ಬೇರೆಲ್ಲೂ ಸಿಗುತ್ತಿಲ್ಲ ಎಂಬುದು ಅವರ ಮಾತು.

ಇನ್ನು, ಕೋವಿಡ್ 10 ದಿಂದಾಗಿ ಇಡೀ ಜಗತ್ತೇ ತತ್ತರಿಸಿದೆ. ಇದರಿಂದ ಆರ್ಥಿಕ ವ್ಯವಸ್ಥೆಯೂ ಹದಗೆಟ್ಟಿದೆ. ಸಿನಿಮಾ ಇಂಡಸ್ಟ್ರಿಯೂ ಇದಕ್ಕೆ ಹೊರತಲ್ಲ. ಇದೆಲ್ಲವೂ ಸರಿಹೋಗುತ್ತೆ ಎಂಬ ವಿಶ್ವಾಸವಿದೆ. ಸಿನಿಮಾ ಬಿಡುಗಡೆ ದಿನದಂದೇ ಲಾಕ್‌ಡೌನ್‌ ಆಗಿದ್ದರಿಂದ ಹಲವು ಸಿನಿಮಾಗಳಿಗೆ ಪೆಟ್ಟು ಬಿದ್ದಿದೆ. ಮೊದಲು ಅಂತಹವರಿಗೆ ಬಿಡುಗಡೆ ಮಾಡಲು ಅವಕಾಶ ಕೊಡಬೇಕು. ಆ ನಂತರ ಎಲ್ಲರೂ ಅನುಸರಿಸಿಕೊಂಡು ಬರಬೇಕು. ಸದ್ಯಕ್ಕೆ ನಾನಂತೂ ಮನೆಯ ಕಾಂಪೌಂಡ್‌ ಬಿಟ್ಟು ಆಚೆ ಹೋಗುತ್ತಿಲ್ಲ. ಈಗ ಮನೆಯೇ ಮಂತ್ರಾಲಯ ಎಂದಷ್ಟೇ ಹೇಳುತ್ತಾರೆ ಗಣೇಶ್‌.­

Advertisement

Udayavani is now on Telegram. Click here to join our channel and stay updated with the latest news.

Next