Advertisement

ಮಗನಿಗೊಂದು ಚಿನ್ನದ ಚಿತ್ರ!

06:35 AM Mar 02, 2018 | Harsha Rao |

“ಅವಕಾಶ ಸಿಗದೆ ಮಗ ಮಾನಸಿಕವಾಗಿ ಖನ್ನತೆಗೊಳಗಾಗಿದ್ದ. ಅವನ ಸಂಕಟ ನೋಡಲಾರದೆ ನಾನೇ ಅವನಿಗಾಗಿ ಈ ಚಿತ್ರ ನಿರ್ಮಿಸಿದ್ದೇನೆ. ಒಳ್ಳೆಯ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಬೇಕು …’

Advertisement

– ಹೀಗೆ ವಿನಮ್ರವಾಗಿ ಮನವಿ ಮಾಡಿಕೊಂಡರು ನಿರ್ಮಾಪಕ ಪಿ.ಕೃಷ್ಣಪ್ಪ. ಅವರು ತಮ್ಮ ಮಗನಿಗಾಗಿ ನಿರ್ಮಿಸಿದ ಮೊದಲ ಚಿತ್ರ ಇಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಜೊತೆ ಮಾತುಕತೆಗೆ ಕುಳಿತಿದ್ದರು ಕೃಷ್ಣಪ್ಪ. “ಚಿನ್ನದ ಗೊಂಬೆ’ ಮೂಲಕ ನಿರ್ಮಾಣಕ್ಕಿಳಿದಿರುವ ಕೃಷ್ಣಪ್ಪ ಅವರಿಗೆ ಚಿತ್ರರಂಗ ಹೊಸದು. ಆದರೆ, ಯಾವುದೇ ಕಮರ್ಷಿಯಲ್‌ ಚಿತ್ರಗಳಿಗೆ ಕಡಿಮೆ ಇಲ್ಲವೆಂಬಂತೆ ಚಿತ್ರ ಮಾಡಿರುವ ಖುಷಿ ಅವರದು. ಚಿತ್ರಕ್ಕೆ ಕೀರ್ತಿಕೃಷ್ಣ ಹೀರೋ. ಸಾಕಷ್ಟು ಕಡೆ ಅವಕಾಶಕ್ಕಾಗಿ ಅಲೆದಾಡಿದ್ದ ಕೀರ್ತಿಕೃಷ್ಣ ಅವರ ಸಂಕಟ ನೋಡಲಾರದೆ, ಕೃಷ್ಣಪ್ಪ ಅವರೇ ಹಣ ಹಾಕಿ ಮಗನನ್ನು ಹೀರೋ ಮಾಡಿದ್ದಾರೆ.

ಇದೊಂದು ಸಿನಿಮಾದೊಳಗಿನ ಸಿನಿಮಾ ಕಥೆ. ಮದ್ಯಮ ವರ್ಗದ ಹುಡುಗಿಯೊಬ್ಬಳು ಸಿನಿಮಾ ಅವಕಾಶಕ್ಕಾಗಿ ಅಲೆಯುತ್ತಾಳೆ. ಕೆಲ ನಿರ್ದೇಶಕ, ನಿರ್ಮಾಪಕರು ಆಕೆಯನ್ನು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸುತ್ತಾರೆ. ಕೊನೆಗೆ ಒಳ್ಳೆಯ ಅವಕಾಶ ಎದುರು ನೋಡುವ ಆಕೆಗೆ ಅಂಥದ್ದೊಂದು ಅವಕಾಶ ಬರುತ್ತೆ. ಚಿತ್ರೀಕರಣಕ್ಕೆಂದು ಒಂದು ಹಳ್ಳಿಗೆ ಹೋದಾಗ, ಆ ಹಳ್ಳಿಯ ಖಳನೊಬ್ಬನ ಕಣ್ಣಿಗೆ ಬೀಳುವ ಆಕೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗುತ್ತಾಳೆ. ಆಮೇಲೆ ಪ್ರೇತವಾಗಿ ಕಾಡುತ್ತಾಳೆ. ಮುಂದೆ ಏನೆಲ್ಲಾ ಆಗುತ್ತೆ ಎಂಬುದು ಕಥೆ. ಇನ್ನು, ನಿರ್ದೇಶಕ ಪಂಕಜ್‌ ಬಾಲನ್‌ ಅವರಿಗೆ ಇದು ಹೊಸ ಅನುಭವ. ಕನ್ನಡ ಬಾರದ ಅವರು ಐದು ವಾಕ್ಯಗಳಲ್ಲೇ ಚಿತ್ರದ ಬಗ್ಗೆ ಹೇಳಿ ಸುಮ್ಮನಾದರು.

ನಾಯಕ ಕೀರ್ತಿಕೃಷ್ಣ ಅವರಿಲ್ಲಿ, ಕಲಾವಿದ ಆಗುವ ಆಸೆಯಿಂದ ಅವಕಾಶಕ್ಕಾಗಿ ಅಲೆದಾಡುವ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. ನಿಜ ಜೀವನದಲ್ಲೂ ಅಂತಹ ಸಮಸ್ಯೆ ಎದುರಿಸಿದ್ದ ಕೀರ್ತಿ ಕೃಷ್ಣ ಅವರಿಗೆ ಅಂತಹ ಪಾತ್ರ ಸಿಕ್ಕಿದ್ದರಿಂದ ನ್ಯಾಯ ಒದಗಿಸಲು ಸಾಧ್ಯವಾಗಿದೆಯಂತೆ. ಪೊಲೀಸ್‌ ಅಧಿಕಾರಿಯಾಗಿಯೂ ಅಲ್ಲಿ ಕಾಣಿಸಿಕೊಂಡಿದ್ದು, ಯಾಕೆ ಆ ಪಾತ್ರ ಬರುತ್ತೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎನ್ನುತ್ತಾರೆ ಅವರು.

ಚಿತ್ರದಲ್ಲಿ ಲೀನಾ ಖುಷಿ ಮತ್ತು ಅಂಜಶ್ರೀ ನಾಯಕಿಯರು. ಈ ಪೈಕಿ ಅಂಜಶ್ರೀ ಮಾತ್ರ ಅಂದು ಆಗಮಿಸಿದ್ದರು. ಅವರದು ಡ್ರೀಮ್‌ಗರ್ಲ್ ಪಾತ್ರವಂತೆ. ಸಿನಿಮಾ ನಟಿಯಾಗಬೇಕು ಅಂತ ಅಲೆದಾಡುವ ಹುಡುಗಿ ಲೈಫ‌ಲ್ಲಿ ಏನೆಲ್ಲಾ ಆಗುತ್ತೆ ಎಂಬುದು ಕಥೆ’ ಎಂದರು ಅಂಜಶ್ರೀ.

Advertisement

ಅಂದು ಚಿತ್ರಕ್ಕೆ ಶುಭಕೋರಲು ನಿರ್ಮಾಪಕ ಕನಕಪುರ ಶ್ರೀನಿವಾಸ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಕುಂಬಳಗೋಡು ಜಯಕರ್ನಾಟಕ ಅಧ್ಯಕ್ಷ ನಾಗರಾಜ್‌, ವಿತರಕ ಶಿವಪತಿ ಇತರರು ಆಗಮಿಸಿದ್ದರು. ಚಿತ್ರದಲ್ಲಿ ಗಡ್ಡಪ್ಪ, ಸೆಂಚುರಿ ಗೌಡ, ಪಂಕಜ್‌ ಬಾಲನ್‌, ಪೇನಮಣಿ, ಪಿ.ಕೃಷ್ಣಪ್ಪ, ನಾಗರಾಜ್‌, ಜ್ಯೋತಿ ಧನಲಕ್ಷ್ಮೀ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next