Advertisement

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

11:24 PM Apr 08, 2023 | Team Udayavani |

ನಮ್ಮ ಬಂಧುವೊಬ್ಬರು ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದ­ರಿಂದ ವಾರಕ್ಕೆ ಎರಡು ಬಾರಿಯಾದರೂ ಅಲ್ಲಿಗೆ ಹೋಗುತ್ತಿ¨ªೆ. ಕುಂಟುತ್ತ ನಡೆಯುತ್ತಿದ್ದ ಹಿರಿಯ ರೊಬ್ಬರು ಆಸ್ಪತ್ರೆಯ ಆವರಣದಲ್ಲಿ ಕಾಣಸಿಗುತ್ತಿದ್ದರು. ವಿಶೇಷವೆಂದರೆ, ಅವರು ದಿನವೂ ಯಾರಾದರೊಬ್ಬ ರೋಗಿಗೆ ಸಹಾಯಕರಾಗಿ ಇರುತ್ತಿದ್ದರು. ಆಸ್ಪತ್ರೆಯಲ್ಲಿ ವಿಚಾರಿಸಿದಾಗ, ಅವರು ರೋಗಿಗಳ ಸೇವೆ ಮಾಡಲು ಸ್ವ-ಇಚ್ಛೆಯಿಂದ ಬಂದ ವರೆಂದೂ, ಅದಕ್ಕಿಂತ ಹೆಚ್ಚಿನ ಮಾಹಿತಿ ಯಾರಿಗೂ ಗೊತ್ತಿಲ್ಲ ವೆಂದೂ ತಿಳಿದು ಬಂತು. ಸಹಜವಾಗಿಯೇ ಅವರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಹೆಚ್ಚಿತು. ಆದರೆ ಕೇಳು ವುದು ಹೇಗೆ?

Advertisement

ಮೊನ್ನೆ ಸರಕಾರಿ ರಜೆಯ ಕಾರಣಕ್ಕೆ ರೋಗಿಗಳ ಕಡೆಯ ಬಂಧುಗಳಿಂದ ಆಸ್ಪತ್ರೆಯ ಆವರಣ ತುಂಬಿಹೋಗಿತ್ತು. ರೋಗಿಗಳೂ ತಂತಮ್ಮ ಕುಟುಂಬದವರನ್ನೇ ಹೆಚ್ಚು ಅವಲಂ ಬಿಸಿದ್ದರು. ಆ ದಿನದ ಮಟ್ಟಿಗೆ ಏನೂ ಕೆಲಸವಿಲ್ಲದೆ ಆ ಹಿರಿ ಯರು ಮರದ ನೆರಳಲ್ಲಿ ಕೂತಿದ್ದರು. ಇದೇ ಸುಸಮಯ ಅಂದುಕೊಂಡು ಹೋಗಿ ನಮಸ್ಕರಿಸಿ, ಒಂದೊಂದೇ ಮಾತಾ ಡುತ್ತಾ ಅವರ ವಿಶ್ವಾಸ ಗಳಿಸಿದೆ. ಹೀಗೇ ಅರ್ಧಗಂಟೆ ಕಳೆದ ಮೇಲೆ- “ಸರ್‌, ನಿಮ್ಮ ಕುರಿತು ಜಾಸ್ತಿ ಗೊತ್ತಿಲ್ಲ. ನೀವು ಉಚಿತ ವಾಗಿ ಸೇವೆ ಮಾಡ್ತೀರಲ್ಲ? ಅದರಿಂದ ಏನುಪಯೋಗ, ಅದಕ್ಕೇನಾದ್ರೂ ಕಾರಣ ಇದ್ಯಾ?’ ಎಂದು ಕೇಳಿಬಿಟ್ಟೆ.

ಒಮ್ಮೆ ನನ್ನನ್ನೇ ದಿಟ್ಟಿಸಿ ನೋಡಿದ ಆ ಹಿರಿಯರು- ಕಾರಣನೂ ಇದೆ, ಕಥೆಯೂ ಇದೆ. ಅದನ್ನೆಲ್ಲ ಹೇಳಿಕೊಂಡರೆ ಇನ್ನೇನಾಗದಿದ್ರೂ ಟೈಮ್‌ ಪಾಸ್‌ ಅಂತೂ ಆಗುತ್ತೆ, ಅಂದ ವರು-ಒಮ್ಮೆ ಕೆಮ್ಮಿ, ಗಂಟಲು ಸರಿಮಾಡಿಕೊಂಡು ಆರಂಭಿಸಿಯೇ ಬಿಟ್ಟರು. ಆ ಕಥೆ ಸಾಗಿದ್ದು ಹೀಗೆ:

ನಾನು, ಒಂದು ಪ್ರೈವೇಟ್‌ ಕಂಪೆನಿಯಲ್ಲಿ ಮ್ಯಾನೇಜರ್‌ ಆಗಿದ್ದೆ. ಹೆಂಡತಿ, ಇಬ್ಬರು ಮಕ್ಕಳ ಪುಟ್ಟ ಕುಟುಂಬವಿತ್ತು. ನಾನು, ನನ್ನ ಕುಟುಂಬ ಚೆನ್ನಾಗಿದ್ರೆ ಸಾಕು. ಉಳಿದವರ ಕಥೆ ಕಟ್ಕೊಂಡು ನನಗೇನು? ಎಂಬ ನಿಲುವು ನನ್ನದಿತ್ತು. ಕುಟುಂ ಬದ ಖುಷಿಗಾಗಿ ಏನು ಮಾಡುವುದಕ್ಕೂ ರೆಡಿಯಿದ್ದೆ. ಕಂಪೆನಿಯಲ್ಲಿ ನಾನೇ ಸೆಕೆಂಡ್‌ ಬಾಸ್‌. ಸಹೋದ್ಯೋಗಿಗಳನ್ನು ಸದಾ ಕಾಡುತ್ತಿದ್ದೆ.
ಹಣ, ಅಧಿಕಾರದ ಹಿಂದೆಯೇ ಆರೋಗ್ಯದ ಸಮಸ್ಯೆಗಳೂ ಜತೆಯಾ­ದವು. ಗಣ್ಯರ ಸಹವಾಸ ದಕ್ಕಿತು. ಫೈನಾನ್ಸ್ ಹೆಸರಲ್ಲಿ “ಹಣ ಹೆಚ್ಚಿಸಿಕೊಳ್ಳುವ’ ಕಲೆ ಗೊತ್ತಾಯಿತು. ಮನೆ ಕಟ್ಟಿಸ ಬೇಕು, ಆಸ್ತಿ ಮಾಡಬೇಕು, ಫಾರ್ಮ್ ಹೌಸ್‌ ನಿರ್ಮಿ ಸಬೇಕು ಎಂಬಂಥ ಆಸೆಗಳು ಜತೆಯಾದದ್ದೇ ಆಗ. ಹಣ ಹೆಚ್ಚಾದಂತೆ, ಅದನ್ನು ಹಾಗೇ ಉಳಿಸಿ­ಕೊಳ್ಳುವ ಸಣ್ಣ ಬುದ್ಧಿಯೂ ಮನುಷ್ಯ ನಿಗೆ ಬಂದುಬಿಡುತ್ತೆ. ನಾನೇನು ಮಾಡಿದೆ ಗೊತ್ತೆ? ನಮ್ಮಲ್ಲಿ ಯಾರೇ ಆಸ್ಪತ್ರೆ ಸೇರಿದರೂ ಜಾಸ್ತಿ ದುಡ್ಡು ಖರ್ಚಾಗಬಾರದು ಎಂಬ ಲೆಕ್ಕಾಚಾರದಿಂದ ಎಲ್ಲರ ಹೆಸರಿಗೆ ಮೆಡಿಕಲ್‌ ಇನ್ಶೂ ರೆ®Õ… ಮಾಡಿಸಿದೆ. ಮಕ್ಕಳ ಹೆಸರಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಇಟ್ಟೆ. ಒಂದಲ್ಲ, ಮೂರು ಮನೆ ಕಟ್ಟಿಸಿದೆ. ಈ ವೇಳೆಗೆ ಮಕ್ಕಳು ಓದು ಮುಗಿಸಿ, ನೌಕರಿ ಹಿಡಿದಿದ್ದರು. ನನ್ನ ವ್ಯವಹಾರಗಳಿಂದ ಅಂತರ ಕಾಯ್ದುಕೊಂಡಿ­ದ್ದರು. ಕೆಲವೊಮ್ಮೆ-ಇಷ್ಟು ದುರಾಸೆ ಒಳ್ಳೆಯದಲ್ಲ ಎನ್ನುತ್ತಿದ್ದರು. ಆಗೆಲ್ಲ ನಾನು ಮಾಡ್ತಿ ರೋದು ಸರಿ ಎಂದು ವಾದಿಸಿ, ಅವರ ಬಾಯಿ ಮುಚ್ಚಿಸುತ್ತಿದ್ದೆ.

ಹೀಗಿದ್ದಾಗಲೇ ಕುಟುಂಬ ಸಮೇತ ತಿರುಪತಿಗೆ ಹೋಗಿ ಬರಬೇಕು ಅನ್ನಿಸಿತು. ಹೆಂಡತಿಯೂ ಒಪ್ಪಿದಳು. ಡ್ರೈವಿಂಗ್‌ ಕೆಲಸವನ್ನು ಮಕ್ಕಳು ಹಂಚಿ­ಕೊಂಡರು. ತಿರುಪತಿಯಲ್ಲಿ ಹೆಂಡತಿ, ಮಕ್ಕಳು ಇನ್ನಿಲ್ಲದ ಸಡಗರದಿಂದ ಓಡಾಡಿದರು. ದರ್ಶನದ ಸಮಯದಲ್ಲಿ, ನಮ್ಮನ್ನು ತಳ್ಳುತ್ತಿದ್ದ ಅಲ್ಲಿನ ಸಿಬಂದಿಗೆ- “ಸರಿಯಾಗಿ ನೋಡಲು ಆಗಲಿಲ್ಲ. ಇನ್ನೊಮ್ಮೆ ಕಣ್ತುಂಬ ನೋಡಿ ಹೋಗ್ತೀವೆ, ಪ್ಲೀಸ್‌…’ ಎಂದು ನನ್ನ ಹೆಂಡತಿ ಬೇಡಿಕೊಂಡಳು. ಆ ಸಿಬಂದಿ ಇದಕ್ಕೆ ಒಪ್ಪಿದ್ದು ಮಾತ್ರವಲ್ಲ, ಪೂರ್ತಿ ಎರಡು ನಿಮಿಷ ಅಲ್ಲಿ ನಿಂತಿರಲು ಅವಕಾಶ ಮಾಡಿಕೊಟ್ಟರು. ಈ ವಿಶೇಷ ದರ್ಶನದಿಂದ ಹೆಂಡತಿ- ಮಕ್ಕ ಳಿಗೆ ತುಂಬಾ ಖುಷಿಯಾಗಿತ್ತು. ತಮ್ಮ ಅದೃಷ್ಟಕ್ಕೆ ಸಂಭ್ರಮಿ­ಸುತ್ತಲೇ ಕಾರು ಹತ್ತಿದರು. ಇನ್ನೊಂದು ಗಂಟೆ ಪ್ರಯಾಣಿಸಿದರೆ ಮನೆ ತಲುಪುತ್ತೇವೆ ಅನ್ನುವಾಗಲೇ, ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು..!

Advertisement

ಕಣ್ಣು ತೆರೆದಾಗ ನಾನು ಆಸ್ಪತ್ರೆಯಲ್ಲಿದ್ದೆ. ನನಗೆ ಕಾಲಿನ ಮೂಳೆ ಮುರಿ­ದಿತ್ತು. ಹೆಂಡತಿ, ಮಕ್ಕಳು ತೀವ್ರ ಗಾಯದಿಂದ ಕೋಮಾಕ್ಕೆ ಹೋಗಿ ಬಿಟ್ಟಿದ್ದರು. ಅನಂತರದ ನಾಲ್ಕು ದಿನಗಳಲ್ಲಿ ಒಂದೊಂದೇ ಸುದ್ದಿಗಳು ನನ್ನನ್ನು ತಲುಪಿದ್ದವು. ಮೊದಲು ಹೆಂಡತಿ, ಅನಂತರ ಮಕ್ಕಳು ತೀರಿಕೊಂಡರು. ಹಣದಿಂದ ಏನ ನ್ನು ಬೇಕಾದರೂ ತಗೋಬಹುದು, ಆದರೆ ಆರೋಗ್ಯ ಮತ್ತು ಆಯಸ್ಸನ್ನು ಖರೀದಿಸಲು ಆಗದು ಎಂಬ ಸತ್ಯದರ್ಶನವಾದ ಸಂದರ್ಭ ಅದು.

ಆನಂತರದಲ್ಲಿ ಪ್ರತಿಯೊಂದು ಘಟನೆಯೂ ಹೊಸದಾಗಿ ಕಾಣಿಸ­ತೊಡ­ಗಿತು. ಇದು ಕೊನೆಯ ಪ್ರವಾಸ ಎಂಬ ಕಾರ ಣಕ್ಕೇ ಹೆಂಡತಿ-­ಮಕ್ಕಳಿಗೆ ವಿಶೇಷ ದರ್ಶನಕ್ಕೆ ಅವಕಾಶ ಸಿಕ್ಕಿತೇ ನೋ ಅನ್ನಿಸತೊಡಗಿತು. ಅವರನ್ನು ದೇವರು ಸನ್ನಿಧಿಗೆ ಕರೆಸಿ ಕೊಂಡಿದ್ದ. ನನ್ನನ್ನು ಬದುಕಿಸುವ ಮೂಲಕ ಸಾವಿಗಿಂತಲೂ ದೊಡ್ಡ ಶಿಕ್ಷೆಯನ್ನು ದಯಪಾಲಿಸಿದ್ದ! ನನ್ನಲ್ಲಿ ಹಣ, ಆಸ್ತಿಯ ರಾಶಿಯಿತ್ತು. ಆದರೆ ಅದನ್ನು ಅನುಭವಿಸುವ ಯೋಗ ವಿರಲಿಲ್ಲ. ಮನೆಗಳಿದ್ದವು, ಜನರಿರಲಿಲ್ಲ. ಬಿಪಿ, ಶುಗರ್‌ ಜತೆ ಯಾಗಿದ್ದುದರಿಂದ ಬಯಸಿದ್ದನ್ನೆಲ್ಲ ತಿನ್ನುವಂತಿರಲಿಲ್ಲ. ಪೇಶಂಟ್‌ ಆದರೆ ನೋಡಿಕೊಳ್ಳುವವರಿರಲಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಬಂಧುಗಳನ್ನು ನೋಡಬೇಕಾಯಿತು, ಊರುಗಳಿಗೆ ಹೋಗಬೇಕಾಯಿತು. ಬಂಧುಗಳ ಹೊಟ್ಟೆ ಉರಿ ಯನ್ನ, ಅವರ ಸಣ್ಣ ತನವನ್ನ ಪ್ರತ್ಯಕ್ಷ ಕಂಡದ್ದೇ ಆಗ. ಒಂದಿಬ್ಬರು ದೊಡ್ಡ ಮೊತ್ತದ ಧನಸಹಾಯ ಕೇಳಿದರು. “ಅಷ್ಟೊಂದಿಲ್ಲ, ಸ್ವಲ್ಪ ಸಹಾಯ ಮಾಡುವೆ’ ಅಂದೆ. ಸರಿ ಸರಿ ಅನ್ನುತ್ತಾ ಹೋದವರು-“ಸತ್ತ ಮೇಲೆ ಹೊತ್ಕೊಂಡ್‌ ಹೋಗ್ತಾನಾ? ಕಂಜೂಸ್‌ ನನ್ಮಗ! ಇವ್ನು ಮಾಡಬಾರದ್ದು ಮಾಡಿದ್ದಕ್ಕೆ ಆಗಬಾರದ್ದು ಆಗಿದೆ’ ಎಂದು ಸುದ್ದಿ ಹಬ್ಬಿಸಿದರು. ಕೇಳಿದ ಮೊತ್ತಕ್ಕೆ ಮನೆ ಮಾರಲು ಒಪ್ಪಲಿಲ್ಲ ಎಂಬ ಕಾರಣಕ್ಕೆ, ಮತ್ತೂಬ್ಬರು ನನ್ನ ಮೇಲೇ ಸುಳ್ಳು ದೂರು ದಾಖಲಿಸಿದರು.

ಸಂಬಂಧಗಳು, ಬಾಂಧವ್ಯಗಳು ಎಷ್ಟೊಂದು ಟೊಳ್ಳು ಎಂದು ಅರ್ಥವಾಗಿದ್ದೇ ಆಗ. ಆ ಕ್ಷಣದಲ್ಲೇ ನಾನೊಂದು ನಿರ್ಧಾರಕ್ಕೆ ಬಂದೆ. ಇನ್ನು ಮುಂದೆ ಜನರನ್ನು ಕಾಡುವುದಿಲ್ಲ, ಕಾಯುತ್ತೇನೆ ಎಂದು ನಿರ್ಧರಿಸಿದೆ. ಒಂದು ಮನೆಯನ್ನಷ್ಟೇ ಉಳಿಸಿಕೊಂಡು, ಉಳಿದದ್ದನ್ನೆಲ್ಲ ಮಾರಿಬಿಟ್ಟೆ. ವೃದ್ಧಾಶ್ರಮ ಗಳಿಗೆ, ಅನಾಥಾ­ಶ್ರಮಕ್ಕೆ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ದಾನ ಮಾಡಿದೆ. ಇಷ್ಟಾದರೂ ಮನೆಯಲ್ಲಿ ಸಮಯ ಕಳೆಯು ವುದಕ್ಕೆ ಹಿಂಸೆಯಾಗುತ್ತಿತ್ತು. ನನ್ನಂಥ ದುರ್ದೈವಿಗಳು ಯಾರೂ ಇಲ್ಲ ಅನ್ನಿಸುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳೋಣ ಅನ್ನಿಸುತ್ತಿತ್ತು. ಅಕಸ್ಮಾತ್‌ ಆಗಲೂ ಬದುಕಿಬಿಟ್ಟರೆ ಗತಿಯೇನು ಎಂಬ ಯೋ ಚನೆಯೂ ಬರುತ್ತಿತ್ತು. ಮನೆಯಲ್ಲಿದ್ದು ದಿನವೂ ಹೀಗೆ ಸಂಕಟ ಪಡುವುದಕ್ಕಿಂತ ಹೊರಗೆ ಹೋಗಿ ನಾಲ್ಕು ಜನಕ್ಕೆ ಸಹಾಯ ಮಾಡಬಾರದೇಕೆ ಅನಿಸಿದ್ದೇ ಆಗ. ಹಾಗೆ ಹೊರಟವನು ಈ ಆಸ್ಪತ್ರೆಯ ಅಂಗಳ ತಲುಪಿಕೊಂಡೆ. ಇಲ್ಲಿ ಹತ್ತಾರು ಮಂದಿಗೆ ಸಹಾಯಕ ಆಗಿದ್ದೇನೆ. ಏನೇ ಹೇಳಿ; ನನಗೋಸ್ಕರ ಒಬ್ಬರು ಕಾಯುತ್ತಿದ್ದಾರೆ ಅನ್ನಿಸಿದಾಗಲೇ ಮನುಷ್ಯನಿಗೆ ಖುಷಿ ಯಾಗೋದು. ತನಗಿಂತ ಹೆಚ್ಚು ನೋವು ತಿಂದವರನ್ನು ಕಂಡಾ ಗಲೇ ಸಮಾಧಾನವಾಗೋದು! ನನ್ನ ಕಥೆಯೂ ಹಾಗೇ ಆಯ್ತು. ಇಲ್ಲಿನ ರೋಗಿಗಳನ್ನು ಕಂಡು ನನ್ನ ನೋವು ಮರೆತೆ. ಇವರ ಸೇವೆಯ ನೆಪದಲ್ಲಿ ಬದುಕಲು ಕಲಿತೆ.

ಈಗ ಬೆಳಗ್ಗಿನಿಂದ ಸಂಜೆಯವರೆಗೂ ಇಲ್ಲೇ ಇರ್ತೇನೆ. ಕೆಲವರ ಪಾಲಿಗೆ ನಾನು ಅಣ್ಣ, ಮತ್ತೆ ಕೆಲವರಿಗೆ ಅಂಕಲ್ ಇನ್ನಷ್ಟು ಜನರಿಗೆ ಫ್ರೆಂಡ್‌. ಒಬ್ಬೊಬ್ಬರದು ಒಂದೊಂದು ಕಥೆ. ಎಲ್ಲಕ್ಕೂ ಕಿವಿಯಾಗುತ್ತೇನೆ. ಅವರಿಗೆ ಸಮಾಧಾನ ಹೇಳುತ್ತೇನೆ, ಧೈರ್ಯ ತುಂಬುತ್ತೇನೆ. ಒಮ್ಮೊಮ್ಮೆ ಕಂಬನಿ ಒರೆಸುತ್ತೇನೆ, ಕೆಲ ವೊಮ್ಮೆ ನಾನೂ ಅಳುತ್ತೇನೆ! ಹೀಗೆ ಒಂದೊಂದು ದಿನ ಕಳೆ ದಾಗಲೂ ಸ್ವಲ್ಪಮಟ್ಟಿಗಿನ ರಿಲೀಫ್ ಜೊತೆಯಾಗುತ್ತೆ. ನಾಲ್ಕು ಜನಕ್ಕೆ ಸಹಾಯ ಮಾಡಿದ ಸಂತೃಪ್ತಿಗೆ ಒಳ್ಳೆಯ ನಿದ್ರೆ ಬರುತ್ತದೆ. ಖುಷಿಯನ್ನು ಕೊಟ್ಟ ದೇವರು ಕಷ್ಟವನ್ನೂ ಕೊಟ್ಟಿದ್ದಾನೆ. ನೋವು ಕೊಟ್ಟವನು ನಲಿವನ್ನೂ ಕೊಡುತ್ತಾನೆ ಎಂಬ ನಂಬಿಕೆ ಯಲ್ಲಿ ಬದುಕುತ್ತಿದ್ದೇನೆ. ನನ್ನವರು ಯಾರೂ ಇಲ್ಲ ಅಂದು ಕೊಂಡು ಬದುಕಿದರೆ ದುಃಖವಾಗುತ್ತೆ. ಎಲ್ಲಾ ನನ್ನವರೇ ಅಂದುಕೊಂಡಾಗ ಬದುಕಲು ಹುಮ್ಮಸ್ಸು ಬರುತ್ತೆ…

ಆ ಹಿರಿಯರು ಛಕ್ಕನೆ ಮಾತು ನಿಲ್ಲಿಸಿದರು. ಅಷ್ಟು ಹೊತ್ತಿ ನಿಂದ ನಿರಂತರವಾಗಿ ಮಾತಾಡಿದ್ದಕ್ಕೋ ಏನೋ; ಬಿಕ್ಕಳಿಕೆ ಶುರುವಾಯಿತು. ಅದನ್ನು ತೋರಗೊಡದೆ- ಓಹ್‌, ಯಾರೋ ಪೇಶೆಂಟ್‌ ನನ್ನನ್ನು ನೆನಪು ಮಾಡಿಕೊಂಡ್ರು ಅನ್ನಿಸ್ತದೆ, ಅದಕ್ಕೇ ಬಿಕ್ಕಳಿಕೆ ಬಂದುಬಿಡು¤ ನೋಡಿ. ಇನ್ನೊಮ್ಮೆ ಸಿಗೋಣ ಅನ್ನುತ್ತಾ ಒಂದೊಂದೇ ಹೆಜ್ಜೆ ಮುಂದಿಟ್ಟರು…

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next