Advertisement

ಗೋವಾ ವಿಮೋಚನೆ: ಸೈನಿಕ ಕಾರ್ಯಾಚರಣೆಯ ವಿಜಯ ವೃತ್ತಾಂತ

11:38 PM Dec 18, 2021 | Team Udayavani |

ಸಮುದ್ರ ಮಾರ್ಗವಾಗಿ ಭಾರತಕ್ಕೆ ಕಾಲಿರಿಸಿದ ಐರೋಪ್ಯ ವ್ಯಾಪಾರಿಗಳಲ್ಲಿ ಮೊತ್ತ ಮೊದಲನೆಯವರೇ ಪೋರ್ಚುಗೀಸರು. ಈ ನಮ್ಮ ಮಾತೃಭೂಮಿಯಿಂದ ಹೊರದಬ್ಬಲ್ಪಟ್ಟವರಲ್ಲಿ ಕೊನೆಯವರೂ ಇವರೇ. ಸ್ವಾತಂತ್ರ್ಯೋತ್ಸವದ ಅಮೃತ ವರ್ಷದ ಆಚರಣೆಯ ಈ ಸಂದರ್ಭ ಇತಿಹಾಸದೊಂದಿಗೆ ಮುಖಾಮುಖಿಯಾದಾಗ ನಮಗೆ ಅಚ್ಚರಿಯ ಸರಮಾಲೆಯೇ ಗೋಚರಿಸುತ್ತದೆ. ಒಂದೆಡೆ, ಕಡಲಿನ ಒಡಲು ಸೀಳಿ ನೌಕೆಗಳ ಮೂಲಕ ಬಂದ ಈಸ್ಟ್‌ ಇಂಡಿಯಾ ಕಂಪೆನಿಯೂ ಸೇರಿ, ಪೋರ್ಚುಗೀಸರು, ಫ್ರೆಂಚರು, ಸ್ವಲ್ಪಕಾಲ ಡಚ್ಚರೂ ತಂತಮ್ಮ ಕಂಪೆನಿ ಹಾಗೂ ಮುಂದೆ ಯುರೋಪ್‌ ಸರಕಾರಗಳ ಮೂಲಕ ಈ ವಿಶಾಲ ಭಾರತವನ್ನೇ ಹೇಗೆ ಹಾಗೂ ಏಕೆ ಆಳಿದರು? ಅದೇ ರೀತಿ 1947 ರಲ್ಲಿ ಬ್ರಿಟಿಷರು, 1950-51ರ ಸುಮಾರಿಗೆ ಫ್ರೆಂಚರು ಇಲ್ಲಿಂದ ಕಾಲುಕಿತ್ತರೂ ಲಿಸ್ಬನ್ ಆಡಳಿತ ಯಾಕಾಗಿ 1961ರ ಡಿಸೆಂಬರ್‌ವರೆಗೂ ಗೋವಾ, ದಿಯು ದಾಮನ್‌ನ ಆಡಳಿತದ ಗದ್ದುಗೆಯಲ್ಲೇ ಉಳಿದಿತ್ತು?,  ಭಾವನಾತ್ಮಕ, ಊಹನಾತ್ಮಕ ಆಗಸದಿಂದ ವಾಸ್ತವಿಕತೆಯ ಗಟ್ಟಿ ನೆಲದ ಮೇಲೆ ಗೋವಾ ವಿಮುಕ್ತಿಯ ಬಗೆಗೆ ಕಾಲಿಡಲು ಸ್ವತಂತ್ರ ಭಾರತ ಸರಕಾರಕ್ಕೆ 1947 ರಿಂದ 1961ರ ವರೆಗೂ ಕಾಲಾವಕಾಶ ಬೇಕಾಯಿತೇ ಎಂಬುದೂ ಪ್ರಚಲಿತ ಇತಿಹಾಸದ ಯಕ್ಷ ಪ್ರಶ್ನೆ.

Advertisement

1498ರಲ್ಲಿ ಭಾರತಕ್ಕೆ ಕಾಲಿರಿಸಿದ ವಾಸ್ಕೋಡಿಗಾಮ ಇಲ್ಲಿನ ಪೋರ್ಚುಗೀಸರ ಆಳ್ವಿಕೆ ಹಾಗೂ ಬಿರುಸಿನ ಮತಾಂತರದ ಮೂಲ ಪುರುಷ. ಅಂದಿನಿಂದ ಸುಮಾರು 463 ವರ್ಷಗಳ ಸುದೀರ್ಘ‌ ಪರಕೀಯ ಆಳ್ವಿಕೆ, ಸಾಮಾಜಿಕ ಸಂಚಲನ, ಹೋರಾಟದ ಮೈಲಿಗಲ್ಲುಗಳು ವಿಶಾಲ ಭಾರತದ ಇತಿಹಾಸದ ಅಂತರ್ಗತ ಒಂದು ವಿಶಿಷ್ಠ ಭಾಗ. ಯುರೋಪ್‌ನಲ್ಲಿ ಘಟಿಸಿದ ಲಂಡನ್‌-ಲಿಸ್ಬನ್ ಮಹಾಮೈತ್ರಿಯ ಫ‌ಲಶ್ರುತಿಯಾಗಿ ನಮ್ಮ ನೆಲದಲ್ಲಿ ಕೇವಲ ಗೋವಾ, ದಿಯು ದಾಮನ್‌ ಪ್ರದೇಶಗಳಿಗೇ ಸೀಮಿತಗೊಳಿಸಿ ಪೋರ್ಚುಗೀಸ್‌ ಸಾಮ್ರಾಜ್ಯವನ್ನು ಬ್ರಿಟನ್‌ “ಕಟ್ಟಿ ಹಾಕಿತು’. ಆದರೆ 1654ರಿಂದ ಮೊದಲ್ಗೊಂಡು, ಸ್ವಾತಂತ್ರ್ಯೋತ್ತರದ ವಿಶಾಲ ಭಾರತದ ಸ್ಪೂರ್ತಿಯಿಂದ 1961ರ ವರೆಗೂ ಗೋವನರ ನಾಡ ಬಿಡುಗಡೆಯ ಹೋರಾಟ, ಸಾವು- ನೋವಿನ ವೀರಗಾಥೆಯ ಮೈಲಿಗಲ್ಲುಗಳು ಮೆಲುಕು ಹಾಕಲು ಯೋಗ್ಯ ಎನಿಸುವಂತಹದು. 1852ರಲ್ಲಿ ಅರ್ಥಾತ್‌ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೆಲವು ವರ್ಷಗಳ ಮುನ್ನವೇ ದೀಪಾಜಿ ರಾಣೆ ನೇತಾರಿಕೆಯಲ್ಲಿ ಬೃಹತ್‌ ಹೋರಾಟ ಪ್ರಾರಂಭಗೊಂಡಿತು. ತತ್ಪರಿಣಾಮ, ಉಸಿರು ಬಿಗಿಗೊಳಿಸುವಂತಹ ಧಾರ್ಮಿಕ, ರಾಜಕೀಯ ಕಟ್ಟುಪಾಡುಗಳಿಗೆ ಒಂದಿನಿತು ಮುಕ್ತಿ ಸಿಕ್ಕಿತು. ಮುಂದೆ 1895 ರಿಂದ 1912ರ ವರೆಗೆ ದಾದಾರಾಣೆ ನಾಯಕತ್ವದಲ್ಲಿ ಗೋವಾ ವಿಮುಕ್ತಿಯ ಯತ್ನ ನಡೆಯುತ್ತಲೇ ಸಾಗಿತು.

1928ರಲ್ಲಿ ಡಾ| ಟಿ.ಬೃಗಾಂಜ ಕುನ್ಹಾ ನೇತೃತ್ವದಲ್ಲಿ ಗೋವಾ ನ್ಯಾಶನಲ್‌ ಕಾಂಗ್ರೆಸ್‌ ಉದಯಗೊಂಡು ಗೋವಾ ವಿಮುಕ್ತಿಯ ಹೋರಾಟ ವಿನೂತನ ಪಥದರ್ಶಿಕತ್ವ ಹೊಂದಿತು. 1946ರಲ್ಲಿ, ಭಾರತದ ಉದ್ದಗಲದಲ್ಲಿ ಕ್ವಿಟ್‌ ಇಂಡಿಯಾದ ಕಾವೇರುತ್ತಿದ್ದಂತೆಯೇ, ಗೋವಾದಲ್ಲಿನ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ದಯವಾಗಿ ಹಿಂಸಿಸುವ, ಮಾತ್ರವಲ್ಲ ಪೋರ್ಚುಗಲ್‌ ಹಾಗೂ ಆಫ್ರಿಕಾ ದೇಶಗಳಿಗೆ ಗಡೀಪಾರು ಮಾಡುವ ಪ್ರಕ್ರಿಯೆ ಬಿರುಸುಗೊಂಡಿತು. 1954ರಲ್ಲಿ ಡಾ| ಗಾಯಿತೊಂಡೆ ಎಂಬ ವೀರ ಹೋರಾಟಗಾರನನ್ನು ಬಂಧಿಸಿ ನೇರವಾಗಿ ಪೋರ್ಚುಗಲ್‌ಗೇ ರವಾನಿಸಲಾಯಿತು. ಅಲ್ಲಿಂದ ಮುಂದೆ “ನಮ್ಮನ್ನು ವಿಮುಕ್ತಿಗೊಳಿಸಿ, ಭಾರತದೊಂದಿಗೆ ಸೇರಿಸಿ’ ಎಂಬ ಘೋಷಣೆ ಗೋವಾದ ಮನೆಮನದಲ್ಲಿ ಪ್ರತಿಧ್ವನಿಸಿತು. ಆದರೂ ಭಾರತ ಸರಕಾರ ಮಾತ್ರ  ಚಾದರ್‌ ಹೊದೆದು “Watching the events” ಧೋರಣೆಗೇ ನೇತಾಡಿಕೊಂಡಿತ್ತು! “ಶಾಂತಿಯುತ ಸಹಬಾಳ್ವೆ, ಸತ್ಯಾಗ್ರಹ ಹಾಗೂ ವಿಶ್ವಶಾಂತಿ’ ಯ ಭಾರತ ತ್ರಿತಣ್ತೀ ಲಿಸ್ಬನ್ ಆಡಳಿತಕ್ಕೆ ಸವೆದ ನಾಣ್ಯವಾಗಿ ಗೋಚರಿಸಿತು! ಸಮಗ್ರ ಯುರೋಪಿಗೂ ಭಾರತದ ಈ ಆದರ್ಶಗಳ ತ್ರಿವರ್ಣ ಧ್ವಜ ಆಕರ್ಷಣೆಯ ಬಲಿಷ್ಠ ಕಂಬದ ಮೇಲೆ ಹಾರುವಂತೆ ತೋರುತ್ತಿರಲೇ ಇಲ್ಲ. ಅಮೆರಿಕದ ಅಂದಿನ ರಾಯಭಾರಿ ಜಾನ್‌ ಕೆನ್ನೆತ್‌ ಗಾಲ್‌ಬ್ರೆತ್‌ ಅವರ ಸಕಾಲಿಕ ಎಚ್ಚರಿಕೆಗೂ ಪ್ರಧಾನಿ ನೆಹರೂ ಅವರ ಉತ್ತರ “ನಾವು ಹೆಜ್ಜೆ ಹೆಜ್ಜೆ ಗಮನಿಸುತ್ತಿದ್ದೇವೆ..’ ಎಂಬುದಾಗಿತ್ತು.

ಈ ಮಧ್ಯೆ ಹಲವಾರು ಕಹಿ-ಸಿಹಿ ಘಟನೆಗಳು ಸಂಭವಿ ಸಿದವು. ಒಂದೆಡೆ ಮಹಾರಾಷ್ಟ್ರ, ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲಾ ಸತ್ಯಾಗ್ರಹಿಗಳೂ ಗೋವಾ ವಿಮುಕ್ತಿಗೆ ಕೈ ಜೋಡಿಸಿ ದರು. ಬಂಧನಸತ್ರ, ಗುಂಡೇಟು, ಗಡೀಪಾರು ಶಿಕ್ಷೆ ಮೇರೆ ಮೀರತೊಡಗಿತು. ಇನ್ನೊಂದೆಡೆ ಲಿಸºನ್‌ ಆಡಳಿತ ಪಾಕಿಸ್ಥಾನದ ನೆರವು ಪಡೆಯಲಾರಂಭಿಸಿತು. ಆರ್ಥಿಕ ದಿಗ್ಬಂಧನವೂ ನಿರರ್ಥಕತೆಯ ಕತೆ ಎನಿಸಿತು. 1954ರ ಜುಲೈ 21ರಂದು “ಆಜಾನ್‌ ಗೋಮಾಂತಕ ದಳ ಪೋರ್ಚುಗೀಸರಿಂದ ದಾದ್ರ ಹಾಗೂ ನಗರಹವೇಲಿಯನ್ನು ಮುಕ್ತಿಗೊಳಿಸಿಯೇ ಬಿಟ್ಟಿತು! ಮತ್ತೊಂದೆಡೆ, ಗೋವಾದ ಕ್ರೆçಸ್ತರೇ ಹೋರಾಟದ ಮುಂಚೂಣಿ ಯಲ್ಲಿದ್ದ ಕಾರಣ ಯುರೋಪಿನ ರಾಷ್ಟ್ರಗಳೂ ತಟಸ್ಥ ಧೋರಣೆ “ಸಾಮಯಿಕ ನ್ಯಾಯ’ (Time honoured Justice)ದ ತಕ್ಕಡಿಯಲ್ಲಿ ಗೋವಾವಿಮುಕ್ತಿಯನ್ನು ತೂಗಲಾರಂಭಿಸಿತು. ಹೀಗಾಗಿ ಒಂದೆಡೆ ಲಿಸºನ್‌ ಆಳ್ವಿಕೆಯ ಏಕಾಂಗಿತನ ಹಾಗೂ ಭಾರತದ “ಶಾಂತಿಯುತ ಸಂಧಿ’ಯ ಪ್ರಸ್ತಾವದಿಂದ “ಮಿಲಿಟರಿ ಕಾರ್ಯಚರಣೆ’ಯ ಅನಿವಾರ್ಯತೆ ಏರುಗತಿಯಲ್ಲಿ ಸಾಗಿತು. 1961ರ ಡಿ. 18ರಂದು ಲೆ| ಜ| ಜೆ.ಎನ್‌. ಚೌಧರಿ ನೇತೃತ್ವದಲ್ಲಿ ಭಾರತದ ಸೈನಿಕ ಪಡೆ ಗೋವಾದೊಳಗೆ ನುಗ್ಗಿತು. ಅತ್ತ ನೌಕಾಪಡೆ ಕಡಲ ದಂಡೆಯಲ್ಲಿ ಅಭೇದ್ಯವಾಗಿ ಕೋಟೆ ನಿರ್ಮಿಸಿತು. ವೈಮಾನಿಕ ಪಡೆ “ಸ್ವತಂತ್ರ ಶುಭಘಳಿಗೆ ಸಮೀಪಿಸಿತು’ ಎಂಬ ಕರಪತ್ರ ಸುಂದರ ಗೋವಾದ ಮಡಿಲಿಗೆ ಸುರಿಯಿತು. ದೂರದ ಸುಯೇಜ್‌ ಕಾಲುವೆಯಲ್ಲಿ ಒಂದೇ ಒಂದು ಪೋರ್ಚುಗೀಸ್‌ ಯುದ್ಧ ನೌಕೆ ನುಸುಳದಂತೆ ಈಜಿಪ್ಟ್ ಭದ್ರ ಚಿಲಕ ಜಡಿಯಿತು. ವಿಶ್ವಸಂಸ್ಥೆ ಹಾಗೂ ಪಾಶ್ಚಾತ್ಯ ಜಗತ್ತು ಹೊಸತನಕ್ಕೆ ಅಡ್ಡಿಯಾಗದಂತೆ ಮೈಯೊಡ್ಡಿತು. ಆಜ್ಞೆಯನ್ನು ಧಿಕ್ಕರಿಸಿ ಡಿ.19ರಂದು ಗೋವಾದ ಅಂದಿನ ಗವರ್ನರ್‌ ಸಂಧಿಪತ್ರಕ್ಕೆ ಸಹಿ ಇರಿಸಿ, ಶ್ವೇತ ಬಾವುಟ ಏರಿಸಿದರು. ಇದರೊಂದಿಗೆ ಗೋವಾ ಭಾರತದ ಭೂಪಟದೊಂದಿಗೆ ವಿಲೀನವಾಯಿತು ಹಾಗೂ ಕೇವಲ 3,702 ಚ. ಕಿ.ಮೀ. ವಿಸ್ತೀರ್ಣದ, ಎರಡು ಜಿಲ್ಲೆಗಳ ಪುಟ್ಟ ರಾಜ್ಯವಾಗಿ ಗೋವಾ ತನ್ನದೇ ಕೊಂಕಣಿ ಭಾಷಾಮಾನ್ಯತೆಯೊಂದಿಗೆ ಹೊಸ ಮನ್ವಂತರವನ್ನು ಸೃಜಿಸಿತು.

– ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next