ಪಣಜಿ: ಗೋವಾದಲ್ಲಿ ದೇಶದಲ್ಲೇ ದಾಖಲೆಯ ಸಂಖ್ಯೆಯಲ್ಲಿ ರಾಜಕಾರಣಿಗಳು ಪಕ್ಷಾಂತರ ಮಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ದೇವಸ್ಥಾನ ಮತ್ತು ಚರ್ಚಗೆ ಕರೆದೊಯ್ದು ಚುನಾವಣೆಯ ನಂತರ ಪಕ್ಷ ಬದಲಾಯಿಸುವುದಿಲ್ಲ ಎಂದು ಪ್ರಮಾಣವಚನ ಮಾಡಿಸಿಕೊಂಡಿತ್ತು, ಅದೇ ಹಾದಿಯಲ್ಲಿ ಆಮ್ ಆದ್ಮಿ ಪಕ್ಷ ಕೂಡ ಪಣಜಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ಅಭ್ಯರ್ಥಿಗಳ ಕಾನೂನಾತ್ಮಕ ಅಫಿಡವಿಟ್ಗೆ ಸಹಿ ಹಾಕುವ ಮೂಲಕ ಪಕ್ಷ ಬದಲಾಯಿಸುವುದಿಲ್ಲ ಮತ್ತು ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಿದೆ.
ಆಮ್ ಆದ್ಮಿ ಪಕ್ಷದ ಉದ್ದೇಶ ಭ್ರಷ್ಟಾಚಾರ ನಿರ್ಮೂಲನೆ. ಆದ್ದರಿಂದ ಯಾವುದೇ ಅಭ್ಯರ್ಥಿ ಭ್ರಷ್ಟಾಚಾರ ಮಾಡುವುದಿಲ್ಲ, ಲಂಚ ಪಡೆಯುವುದಿಲ್ಲ ಎಂದು ಬುಧವಾರ ಪಣಜಿಯಲ್ಲಿ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ಅಭ್ಯರ್ಥಿಗಳು ಪ್ರಮಾಣ ಮಾಡಿದರು.
ಗೋವಾದ ಜನತೆ ಬಿಜೆಪಿಗೆ ಎರಡು ಅವಕಾಶ ನೀಡಿದ್ದರು. ಆದರೆ ಅದನ್ನು ಅವರು ಹಾಳುಮಾಡಿದ್ದಾರೆ. ಗೋವಾದಲ್ಲಿ ನಾವು ಅಧಿಕಾರಕ್ಕೆ ಬಂದರೆ ಸ್ವಚ್ಛ ಮತ್ತು ಭ್ರಷ್ಟ ಮುಕ್ತ ಆಡಳಿತ ನೀಡುತ್ತೇವೆ. ನಾವು ಯಾವ ಪಕ್ಷದೊಂದಿಗೂ ಕೈಜೋಡಿಸುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಎಲ್ಲ ಅಭ್ಯರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು.
ಅಮಿತ್ ಶಾ ಮನೆಗೆ ಆಪ್ ಸರ್ಕಾರದಿಂದ ಉಚಿತ ವಿದ್ಯುತ್..!
ಅಮಿತ್ ಶಾ ಇತರರನ್ನು ಟೀಕಿಸುವ ಮೊದಲು ದೆಹಲಿಯ ತಮ್ಮ ಮನೆಗೆ ತೆರಳಿ ವಿದ್ಯುತ್ ಬಿಲ್ ಪರಿಶೀಲಿಸಬೇಕು. ಆಮ್ ಆದ್ಮಿ ಸರ್ಕಾರ ಅವರ ಮನೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಹೀಗಾಗಿ ಗೋವಾದಲ್ಲಿ ಚುನಾವಣಾ ಫಲಿತಾಂಶ ಹೊರ ಬೀಳುವ ದಿನ ಅಮಿತ್ ಶಾ ಶಾಕ್ ಆಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರು ಟೀಕಾಪ್ರಹಾರ ನಡೆಸಿದರು.