Advertisement

ಮನೆ ಮನೆಗೆ ತೆರಳಿ ವರದಿ ಕೊಡಿ ಗಣತಿದಾರರಿಗೆ ಸೂಚನೆ

11:51 AM Jun 16, 2019 | Suhan S |

ಕೊಪ್ಪಳ: ಗಣತಿದಾರರು ತಮಗೆ ನಿರ್ದಿಷ್ಟಪಡಿಸಿದ ಗಡಿಯೊಳಗೆ ಬರುವ ಪ್ರತಿಮನೆ, ಕಟ್ಟಡಗಳಿಗೆ ಭೇಟಿ ನೀಡುವುದರ ಮೂಲಕ ಅಲ್ಲಿ ನಡೆಯುವ ವ್ಯಾಪಾರ-ಉದ್ಯಮದ ವರದಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

7ನೇ ಆರ್ಥಿಕ ಗಣತಿಯ ಉದ್ದೇಶ, ಕಾರ್ಯವ್ಯಾಪ್ತಿ ಅನ್ವಯ ಭಾರತ ಸರ್ಕಾರದ ಸಾಂಖ್ಯೀಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಕಾಮನ್‌ ಸರ್ವಿಸ್‌ ಸೆಂಟರ್‌, ಮಿನಿಸ್ಟರಿ ಆಫ್‌ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಇದರ ಮೂಲಕ 7ನೇ ಆರ್ತಿಕ ಗಣತಿಯನ್ನು ಕೈಗೊಳ್ಳಲು ಉದ್ದೇಶಿಸಿದ್ದು ದೇಶಾದ್ಯಂತ ಚಾಲನೆಗೊಂಡಿದೆ. ಆರ್ಥಿಕ ಗಣತಿಯ ಅವಧಿ ಮೂರು ತಿಂಗಳದ್ದಾಗಿದೆ. ಆರ್ಥಿಕ ಗಣತಿ ಕಾರ್ಯದಲ್ಲಿ ಗಣತಿದಾರರು ತಮಗೆ ನಿರ್ದಿಷ್ಟಪಡಿಸಿದ ಗಡಿಯೊಳಗೆ ಬರುವ ಪ್ರತಿಮನೆ, ಕಟ್ಟಡಗಳಿಗೂ ಭೇಟಿ ನೀಡುವುದರ ಮೂಲಕ ಅಲ್ಲಿ ನಡೆಯುವ ಉದ್ಯಮದ ಅಥವಾ ವ್ಯಾಪಾರ ಘಟಕದ ಎಣಿಕೆ ಮಾಡಬೇಕು. ಯಾವುದೇ ಘಟಕದಲ್ಲಿ ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ, ಮಾರಾಟ ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವಂತಹ ಉದ್ಯಮಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದರು.

ಪಟ್ಟಿಮಾಡುವಾಗ ನಿರ್ದಿಷ್ಟ ಕಟ್ಟಡ ಹೊಂದಿ ವ್ಯವಹಾರ ಮಾಡುವ ಉದ್ಯಮಗಳಲ್ಲದೆ ನಿರ್ದಿಷ್ಟ ಕಟ್ಟಡವಿಲ್ಲದೆ ಸಂತೆ, ಬೀದಿ ಬದಿಯ ವ್ಯಾಪಾರ, ಮನೆಯಲ್ಲಿಯೇ ಕುಳಿತು ನಿರ್ವಹಿಸುವ ಟೈಲರಿಂಗ್‌ ಮತ್ತು ವಿವಿಧ ಸ್ವಉದ್ಯೋಗಗಳು, ಸಣ್ಣ ಪ್ರಮಾಣದ ಹೈನುಗಾರಿಕೆ ಇತ್ಯಾದಿ ಆರ್ಥಿಕ ಚಟುವಟಿಕೆ ನಡೆಸುವ ಉದ್ಯಮಗಳನ್ನು ಅದರ ಮಾಲೀಕರ ಮನೆಯಲ್ಲಿ ಎಣಿಕೆ ಮಾಡಲಾಗುತ್ತದೆ. ಉದ್ದಿಮೆ ಮಾಲೀಕರ ಲಿಂಗವಾರು, ಸಾಮಾಜಿಕ ಗುಂಪುವಾರು ಮಾಹಿತಿಗಳು, ಗಂಡು, ಹೆಣ್ಣು ಕೆಲಸಗಾರರು, ಮಜೂರಿದಾರ ಕೆಲಸಗಾರರು, ಮಜೂರಿದಾರರಲ್ಲದ ಕೆಲಸಗಾರರು, ಉದ್ದಿಮೆಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಗಳು ಸಹ ಲಭ್ಯವಾಗುತ್ತದೆ ಎಂದರು.

ದೇಶದಲ್ಲಿ ಈವರೆಗೆ 6 ಆರ್ಥಿಕ ಗಣತಿಗಳು ನಡೆದಿದ್ದು, 1977ರಲ್ಲಿ ಮೊದಲ ಆರ್ಥಿಕ ಗಣತಿ, ಆ ಬಳಿಕ 1980, 1990, 1998, 2005, 2013ರಲ್ಲಿ ನಂತರದ ಗಣತಿ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ 6ನೇ ಆರ್ಥಿಕ ಗಣತಿಯಲ್ಲಿ 36,964 ಉದ್ಯಮ ಗುರುತಿಸಿದ್ದು, ಈ ಉದ್ಯಮಗಳಲ್ಲಿ ಒಟ್ಟು 1,60,472 ಕೆಲಸಗಾರರನ್ನು ಗುರುತಿಸಲಾಗಿದೆ. 5ನೇ ಆರ್ಥಿಕ ಗಣತಿಯಲ್ಲಿ ಗುರುತಿಸಿದ 60381 ಉದ್ಯಮಗಳಿಗಿಂತ ಶೇ. 37ರಷ್ಟು ಉದ್ಯಮಗಳ ಹೆಚ್ಚಳವಾಗಿರುತ್ತದೆ ಎಂದರು.

Advertisement

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, 7ನೇ ಆರ್ಥಿಕ ಗಣತಿಯನ್ನು ಸುಗಮವಾಗಿ ಅನುಷ್ಠಾನದ ಉಸ್ತುವಾರಿಗಾಗಿ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಸಂಬಂಧಿಸಿದ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ಸರ್ಕಾರವು ರಚಿಸಿ ಆದೇಶಿಸಿರುತ್ತದೆ ಎಂದರು.

ಸಿಎಸ್‌ಸಿ ಪ್ರಕಾರ 7ನೇ ಆರ್ಥಿಕ ಗಣತಿಗೆ ಜಿಲ್ಲೆಯ ನಗರ ಪ್ರದೇಶಗಳಲ್ಲಿ 75, ಗ್ರಾಮೀಣ ಪ್ರದೇಶದಲ್ಲಿ 244 ಸೇರಿ ಒಟ್ಟು 319 ಗಣತಿದಾರರು ಮತ್ತು 45 ನಗರ, 98 ಗ್ರಾಮೀಣ ಸೇರಿ ಒಟ್ಟು 143 ಮೇಲ್ವಿಚಾರಕರು ಕಾರ್ಯ ನಿರ್ವಹಿಸಬೇಕಾಗಿದೆ. ಸಾರ್ವಜನಿಕರೆಲ್ಲರೂ 7ನೇ ಆರ್ಥಿಕ ಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರ್‌ರು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next