Advertisement

ಜೈಲಿಂದ ಹೋಗಿ ಉತ್ತಮ ವ್ಯಕ್ತಿಯಾಗಿ

06:40 AM Sep 10, 2018 | |

ಬೆಂಗಳೂರು: ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗುತ್ತಿರುವ ಕೈದಿಗಳು ಮುಂದಿನ ದಿನಗಳಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ನಡೆಸಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಕಿವಿಮಾತು ಹೇಳಿದರು.

Advertisement

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಸನ್ನಡತೆಯ ಬಂಧಿಗಳ ಅವಧಿ ಪೂರ್ವ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈಲಿನಲ್ಲಿರುವ ಎಲ್ಲ ಕೈದಿಗಳು ಉದ್ದೇಶಪೂರ್ವಕವಾಗಿ ತಪ್ಪು ಮಾಡದಿದ್ದರೂ, ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಅನುಭವಿಸಲೇಬೇಕು. ಈ ವೇಳೆ ಕಾರಾಗೃಹದಲ್ಲಿ ಕಲಿತ ಸನ್ನಡತೆ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಹೊಸ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಸುಮಾರು 14 ಸಾವಿರ ಕೈದಿಗಳಿದ್ದಾರೆ. ಇದರಲ್ಲಿ ಕೆಲವರು ಆಕಸ್ಮಿಕವಾಗಿ ಅಥವಾ ಆ ಕ್ಷಣದಲ್ಲಾದ ತಪ್ಪಿನಿಂದ ಜೈಲಿಗೆ ಬಂದಿರುತ್ತಾರೆ. ನಂತರ ಅವರಿಗೆ ತಪ್ಪಿನ ಅರಿವಾಗಿರುತ್ತದೆ. ಅಂಥವರ ನಡವಳಿಕೆ ಗಮನಿಸಿ ಸರ್ಕಾರ ಅವರನ್ನು ಬಿಡುಗಡೆಗೊಳಿಸಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಮತ್ತೂಂದು ಅವಕಾಶ ಮಾಡಿಕೊಡುತ್ತದೆ ಎಂದರು.

ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆಗೆ ಈ ಮೊದಲೇ ನಿರ್ಧರಿಸಲಾಗಿತ್ತು. ಕೆಲ ದಿನಗಳ ಹಿಂದೆಯೇ ರಾಜ್ಯಪಾಲರ ಬಳಿಗೂ ಕಳುಹಿಸಲಾಗಿತ್ತು. ಆದರೆ, ಅವರು ಸಮ್ಮತಿ ನೀಡುವುದು ವಿಳಂಬವಾದ ಕಾರಣ ಈ ಪ್ರಕ್ರಿಯೆ ತಡವಾಗಿದೆ ಎಂದು ಹೇಳಿದರು.

ಕಾರಾಗೃಹ ಇಲಾಖೆ ಪೊಲೀಸ್‌ ಉಪ ಮಹಾನಿರೀಕ್ಷಕ ಎಚ್‌.ಎಸ್‌.ರೇವಣ್ಣ ಮಾತನಾಡಿ, ಸರ್ಕಾರ ಈಗಾಗಲೇ 500 ವಸತಿ ಗೃಹ ಮಂಜೂರು ಮಾಡಿದೆ. ಕೈದಿಗಳ ಕೌಶಲ್ಯ ಅಭಿವೃದ್ಧಿಗಾಗಿ 2.5 ಕೋಟಿ ರೂ. ಮೀಸಲಿಡಲಾಗಿದೆ. ಕಾರಾಗೃಹದಲ್ಲಿರುವ ಸಿಬ್ಬಂದಿ ಕೊರತೆ ನೀಗಿಸಲು 1,171 ವಾರ್ಡನ್‌ ಮತ್ತು 32 ಜೈಲರ್‌ಗಳನ್ನು ನೇಮಿಸಲಾಗಿದೆ. ಕೈದಿಗಳ ಮನರಂಜನೆಗೆ 700 ಟಿ.ವಿ ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

Advertisement

ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಒಳಾಡಳಿತ ಇಲಾಖೆ ಕಾರ್ಯದರ್ಶಿ ಉಮೇಶ್‌ ಕುಮಾರ್‌, ಆಗ್ನೇಯ ವಲಯ ಡಿಸಿಪಿ ಡಾ ಬೋರಲಿಂಗಯ್ಯ, ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯಅಧೀಕ್ಷಕ ಎಂ. ಸೋಮಶೇಖರ್‌, ಅಧೀಕ್ಷಕ ಪಿ.ಎಸ್‌.ರಮೇಶ್‌ ಹಾಗೂ ರಾಜ್ಯದ ವಿವಿಧ ಕಾರಾಗೃಹಗಳ ಅಧಿಕ್ಷಕರು, ಮುಖ್ಯಅಧೀಕ್ಷಕರು ಇದ್ದರು.

48 ಕೈದಿಗಳ ಬಿಡುಗಡೆಗೆ ಶಿಫಾರಸು
ಅ.2ರಂದು ನಡೆಯುವ 150ನೇ ಮಹಾತ್ಮ ಗಾಂಧಿ ಜಯಂತಿಯಂದು 48 ಕೈದಿಗಳ ಬಿಡುಗಡೆಗೆ ಶಿಫಾರಸು ಮಾಡಲಾಗಿದೆ ಎಂದು ಕಾರಾಗೃಹ ಇಲಾಖೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎನ್‌.ಎಸ್‌.ಮೇಘರಿಕ್‌ ಹೇಳಿದರು.
ಮಹಿಳೆಯರು ಸೇರಿ 48 ಮಂದಿ ಕೈದಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಒಂದು ವೇಳೆ ಸರ್ಕಾರ ಹಾಗೂ ರಾಜ್ಯಪಾಲರು ಅಂಕಿತ ಹಾಕಿದರೆ ಅ.2ರಂದು ಅವರನ್ನು ಬಿಡುಗಡೆ ಮಾಡಲಾಗುವುದು. ಈ ಹಿಂದೆ 93 ಕೈದಿಗಳ ಬಿಡುಗಡೆಗೆ ಶಿಫಾರಸು ಮಾಡಿ ರಾಜ್ಯ ಸರ್ಕಾರಕ್ಕೆ ಪಟ್ಟಿ ಕಳುಹಿಸಲಾಗಿತ್ತು. ಸರ್ಕಾರ 79 ಕೈದಿಗಳ ಬಿಡುಗಡೆ ಮಾಡಿದೆ. ಡಕಾಯಿತಿ, ರಾಬರಿ, ಎನ್‌ಐಎ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಬಿಡುಗಡೆ ಕುರಿತು ಪ್ರತ್ಯೇಕ ನಿಯಮಾವಳಿಗಳು ಇದ್ದು, ಇದನ್ನು ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮಹಿಳಾ ಕೈದಿಗಳಿಲ್ಲ
ಈ ಬಾರಿ ಬಿಡುಗಡೆಯಾದ 79 ಕೈದಿಗಳಲ್ಲಿ ಮಹಿಳಾ ಕೈದಿಗಳಿರಲಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವರನ್ನು ಕೆಲ ಮಹಿಳಾ ಕೈದಿಗಳು ಈ ಕುರಿತು ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಯಾವೊಬ್ಬ ಮಹಿಳೆಯೂ ತಮ್ಮನ್ನು ಪ್ರಶ್ನಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು?
ಕಾರಾಗೃಹ     ಕೈದಿಗಳು
ಬೆಂಗಳೂರು   28
ಮೈಸೂರು     18
ಬೆಳಗಾವಿ       08
ಕಲಬುರಗಿ     14
ವಿಜಯಪುರ  04
ಬಳ್ಳಾರಿ         05
ಧಾರವಾಡ   02
ಒಟ್ಟು         79

ಕಾರಾಗೃಹಗಳಲ್ಲಿ ಮೊಬೈಲ್‌, ಗಾಂಜಾ ಪತ್ತೆಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸುತ್ತೇನೆ. ಇಂತಹ ಅಕ್ರಮಕ್ಕೆ ಸಹಕಾರ ನೀಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಮಾತ್ರವಲ್ಲದೆ, ಅಮಾನತು ಮಾಡಲಾಗುತ್ತದೆ.
– ಡಾ ಜಿ.ಪರಮೇಶ್ವರ, ಗೃಹ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next