Advertisement

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

12:26 AM Jul 18, 2024 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಗೆ ಅಭಿವೃದ್ಧಿಪಡಿಸಲು ಟೆಂಡರ್‌ ಕರೆದು ಮುಂದಿನ ಮಾರ್ಚ್‌ನೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ರೈಲ್ವೇ ಹಾಗೂ ಜಲ ಶಕ್ತಿ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ತಿಳಿಸಿದರು.

Advertisement

ನಗರದ ಜಿ.ಪಂ. ಸಭಾಂಗಣದಲ್ಲಿ ಬುಧವಾರ ರೈಲ್ವೇ ಅಧಿಕಾರಿಗಳು, ಸಂಸದರು, ಶಾಸಕರನ್ನೊಳಗೊಂಡಂತೆ ಸಭೆ ನಡೆಸಿದ ಅವರು, ಸುಮಾರು 300 ಕೋಟಿ ರೂ. ಗಳಲ್ಲಿ ನಡೆಯಲಿರುವ ಈ ಅಭಿವೃದ್ಧಿ ಕಾಮ ಗಾರಿಗಳನ್ನು 3 ವರ್ಷಗಳಲ್ಲಿ ಪೂರ್ಣಗೊಳಿ ಸುವುದಾಗಿ ಅಧಿಕಾರಿಗಳು ಹೇಳಿದ್ದು, ನಾನೇ ಸಚಿವನಾಗಿದ್ದಲ್ಲಿ 2 ವರ್ಷಗೊಳಗೆ ಪೂರ್ಣಗೊಳಿಸಿ ಕೇಂದ್ರ ರೈಲ್ವೇ ಸಚಿವರಿಂದ ಉದ್ಘಾಟನೆ ನೆರವೇರಿಸಲಾಗುವುದು ಎಂದು ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.

ನಿನ್ನೆ ರಾತ್ರಿಯೇ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇನೆ, ರೈಲ್ವೇ ಮೇಲ್ಸೇ ತುವೆ, ಕೆಳಸೇತುವೆ ಕಾಮಗಾರಿಗಳೂ 4-5 ವರ್ಷದಿಂದ ಪೂರ್ಣಗೊಳ್ಳದಿರುವುದು ವಿಷಾದನೀಯ. ಆಯಾ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಅಲ್ಲಲ್ಲೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಎಂದರು.

ಕೊಂಕಣ ರೈಲ್ವೇ ವಿಲೀನ: ಚೌಟ ಆಗ್ರಹ
ವಿಚಿತ್ರ ಪರಿಸ್ಥಿತಿಯಲ್ಲಿರುವ ಮಂಗಳೂರಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ರೈಲ್ವೇ ವಿಭಾಗಗಳು ಒಳಗೊಂಡಿರುವುದರಿಂದ ಅಭಿವೃದ್ಧಿಗೆ ಸಂಬಂಧಿಸಿ ತೊಡಕಾಗಿ ಪರಿಣಮಿಸಿದೆ. ಹಾಗಾಗಿ ಕೊಂಕಣ ರೈಲ್ವೇ ಯನ್ನು ಭಾರತೀಯ ರೈಲ್ವೇ ಜತೆಗೆ ವಿಲೀನ ಗೊಳಿಸುವುದು ಅಗತ್ಯ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಸಚಿವರಿಗೆ ತಿಳಿಸಿದರು.

ಮಂಗಳೂರು-ಬೆಂಗಳೂರು ನಡುವಿನ ರೈಲು ಪ್ರಯಾಣಕ್ಕೆ ಪ್ರಸ್ತುತ 11 ಗಂಟೆ ತೆಗೆದುಕೊಳ್ಳುತ್ತಿರುವುದು ಈಗಿನ ಸಮಯದಲ್ಲಿ ಸ್ವೀಕಾರಾರ್ಹವಲ್ಲ, ಹಾಗಾಗಿ ರೈಲ್ವೇಯಿಂದ ಘಾಟಿ ಪ್ರದೇಶದಲ್ಲಿ ರೈಲ್ವೇ ವೇಗ ಹೆಚ್ಚಿಸುವ ಬಗ್ಗೆ ಅಧ್ಯಯನವಾಗಬೇಕು ಎಂದರು.

Advertisement

ರೋರೋ ಸೇವೆ ಸುರತ್ಕಲ್‌ನಿಂದ ತೋಕೂ ರಿಗೆ ಸ್ಥಳಾಂತರಿಸುವ ಮೂಲಕ ಸುರತ್ಕಲ್‌ ಸ್ಟೇಷನ್‌ ಸುಧಾರಣೆಯಲ್ಲಿ ಪ್ರಯಾಣಿಕರ ಸೌಲಭ್ಯ ಹೆಚ್ಚಿಸಬೇಕು, ಮೂಲ್ಕಿ ಸ್ಟೇಷನ್‌ನಲ್ಲೂ ನಾಗರಿಕ ಸೌಲಭ್ಯ ಹೆಚ್ಚಬೇಕು ಎಂದರು.
ಈ ಭಾಗದ ರೈಲ್ವೇ ಸ್ಟೇಷನ್‌ಗಳಲ್ಲಿ ಸ್ಥಳೀಯರನ್ನು ನಿಯೋಜಿಸಬೇಕು ಅಥವಾ ಇರುವವರು ಕನ್ನಡ ಕಲಿಯಬೇಕು ಎಂದು ಚೌಟ ಆಗ್ರಹಿಸಿದರು.

ಉಡುಪಿ: ಆ.16 ಅಥವಾ 17ರಂದು ಸಭೆ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಯವರೂ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇ ಜತೆಗೆ ವಿಲೀನಗೊಳಿಸುವ ಬೇಡಿಕೆ ಮುಂದಿಟ್ಟರಲ್ಲದೆ, ಉಡುಪಿ ಕುಂದಾಪುರ ಭಾಗದ ರೈಲ್ವೇ ವಿಚಾರ ಚರ್ಚಿಸಲು ಆ.16 ಅಥವಾ 17ರಂದು ಸಭೆ ನಡೆಸುವಂತೆ ಕೋರಿ ಕೊಂಡರು. ಅದಕ್ಕೆ ಉತ್ತರಿಸಿದ ಸೋಮಣ್ಣ ಆ ಕುರಿತು ಚರ್ಚಿಸಲು ಸಿದ್ಧ ಎಂದರು.

ಕೊಂಕಣ ರೈಲ್ವೇಯ ಪ್ರಧಾನ ವ್ಯವಸ್ಥಾಪಕ ಸಂತೋಷ್‌ ಕುಮಾರ್‌ ಝಾ ಮಾತನಾಡಿ, ಉಡುಪಿ ರೈಲು ನಿಲ್ದಾಣಕ್ಕೆ ಅಮೃತ್‌ ಭಾರತ್‌ ಯೋಜನೆಯ ಅನುದಾನ ಬೇಗನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ, ಸುರತ್ಕಲ್‌ನಿಂದ ರೋರೋ ಸೇವೆಯನ್ನು ತೋಕೂರಿಗೆ ಸ್ಥಳಾಂತರಿಸಲು ಭೂಮಿಯ ಅಗತ್ಯವಿದ್ದು, ರಾಜ್ಯ ಸರಕಾರ ಸಹಕರಿಸಬೇಕು ಎಂದರು.

ಪಾಂಡೇಶ್ವರ ಕ್ರಾಸಿಂಗ್‌ ಸಮಸ್ಯೆ
ಗೂಡ್ಸ್‌ಶೆಡ್‌ ಉಳ್ಳಾಲಕ್ಕೆ ಸ್ಥಳಾಂತರಗೊಂಡ ಬಳಿಕ ಪ್ರಯಾಣಿಕರ ರೈಲು ಬೋಗಿ ತೊಳೆಯಲು ಬಂದರು ಯಾರ್ಡ್‌ಗೆ ರೈಲು ತರಲಾಗುತ್ತಿದೆ, ಇದರಿಂದ ಹಲವು ಬಾರಿ ಪಾಂಡೇಶ್ವರ ಕ್ರಾಸಿಂಗ್‌ ಬಂದ್‌ ಮಾಡಲಾಗುತ್ತಿದೆ. ಇಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌ ಗಮನ ಸೆಳೆದರು.

ಸುರತ್ಕಲ್‌ ಸ್ಟೇಷನ್‌ ಅಭಿವೃದ್ಧಿ
ಎಂಆರ್‌ಪಿಎಲ್‌, ಬಿಎಎಸ್‌ಎಫ್‌, ಎನ್‌ಐಟಿಕೆ ಇರುವ ಪ್ರಸ್ತುತ ಮಹತ್ವದ ಪ್ರದೇಶವಾದ ಸುರತ್ಕಲ್‌ ಸ್ಟೇಷನ್‌ ತೀರಾ ಕೆಳಹಂತದಲ್ಲಿದೆ, ಇದನ್ನು ಕನಿಷ್ಠ 100 ಕೋಟಿ ರೂ. ಮೊತ್ತದಲ್ಲಿ ಮೇಲ್ದರ್ಜೆಗೇರಿಸಬೇಕು, ಎಂಸಿಎಫ್‌ ಗೆ ಬರುವ ರೈಲು ರೇಕ್‌ಗಳಿಂದ ಎನ್‌ಎಚ್‌-66ರಲ್ಲಿ ಆಗಾಗ ಬ್ಲಾಕ್‌ ಆಗುತ್ತಿದ್ದು, ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ| ಭರತ್‌ ಶೆಟ್ಟಿ ಪರವಾಗಿ ಕಾರ್ಪೊರೇಟರ್‌ ವರುಣ್‌ ಚೌಟ ಮನವಿ ಮಾಡಿದರು.

ಸುಬ್ರಹ್ಮಣ್ಯ-ಗೋವಾ ರೈಲು: ಪೂಂಜ
ಸುಬ್ರಹ್ಮಣ್ಯ, ಧರ್ಮಸ್ಥಳ, ಕಾರ್ಕಳ, ಕೊಲ್ಲೂರು ಮೂಲಕ ಗೋವಾ ಸಂಪರ್ಕಿಸಲು ಹೊಸ ರೈಲ್ವೇ ಮಾರ್ಗದ ಅಧ್ಯಯನ
ಮಾಡಬೇಕು ಎಂದು ಶಾಸಕ ಹರೀಶ್‌ ಪೂಂಜ ವಿನಂತಿಸಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಮಂಗಳೂರಿನಿಂದ ಚೆನ್ನೈಗೆ ರೈಲು ಇದೆ, ಆದರೆ ಇದು ಕೊಯಮತ್ತೂರು ಮಾರ್ಗವಾದ್ದರಿಂದ 200 ಕಿ.ಮೀ. ಹೆಚ್ಚು ದೂರವಾಗುತ್ತದೆ, ಅದರ ಬದಲು ಬೆಂಗಳೂರು ಮೂಲಕ ಸಂಚರಿಸುವುದು ಉತ್ತಮ ಎಂದರು.

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಎಕ್ಸ್‌ಪ್ರೆಸ್‌ ರೈಲುಗಳಿಗೆ ಕಡಬ ಬಳಿಯ ಕೋಡಿಂಬಾಳದಲ್ಲಿ ನಿಲುಗಡೆ ಕೊಡಬೇಕು ಎಂದು ಮನವಿ ಮಾಡಿದರು.ರೈಲ್ವೇ ಹೋರಾಟಗಾರ ಹನುಮಂತ ಕಾಮತ್‌, ಜಿ.ಕೆ.ಭಟ್‌ ವಿವಿಧ ಬೇಡಿಕೆಗಳ ಬಗ್ಗೆ ಗಮನ ಸೆಳೆದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಅನಂತೇಶ್‌ ಪ್ರಭು, ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಲ್‌.ಧರ್ಮ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮುಂತಾದವರು ಮನವಿ ಸಲ್ಲಿಸಿದರು.

ದಕ್ಷಿಣ ರೈಲ್ವೇ ಮಹಾಪ್ರಬಂಧಕ ಆರ್‌.ಎನ್‌.ಸಿಂಗ್‌, ನೈರುತ್ಯ ರೈಲ್ವೇ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ್‌, ಕೊಂಕಣ ರೈಲ್ವೇ ಸಿಎಂಡಿ ಸಂತೋಷ್‌ ಕುಮಾರ್‌ ಝಾ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ ಸಿಇಒ ಡಾ.ಆನಂದ್‌ ಉಪಸ್ಥಿತರಿದ್ದರು.

ಮಂಗಳೂರು ಬೆಂಗಳೂರು ಯಥಾಸ್ಥಿತಿ
ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸುವ 16511/12 ರೈಲನ್ನು ಮುಂದಿನ 154 ದಿನಗಳ ಕಾಲ ಬಯ್ಯಪ್ಪನಹಳ್ಳಿ ಎಸ್‌ಎಂವಿಟಿಯಿಂದ ಹೊರಡಿಸುವ ರೈಲ್ವೇ ಇಲಾಖೆ ನಿರ್ಧಾರವನ್ನು ಕೈಬಿಡುವಂತೆ ಸಚಿವ ಸೋಮಣ್ಣ ಸೂಚಿಸಿದರು.
ಈ ಕುರಿತು ಕ್ಯಾ| ಬ್ರಿಜೇಶ್‌ ಚೌಟರು ಸಚಿವರ ಗಮನಕ್ಕೆ ತಂದರು.

ಜು.20ಕ್ಕೆ ಮತ್ತೆ ಸಭೆ
ದಕ್ಷಿಣ, ನೈಋತ್ಯ ಹಾಗೂ ಕೊಂಕಣ ರೈಲ್ವೇ ಅಧಿಕಾರಿಗಳನ್ನು ಸೇರಿಸಿಕೊಂಡು ಜು.20ರಂದು ಮತ್ತೆ ಜನಪ್ರತಿನಿಧಿಗಳು ಸಭೆ ನಡೆಸಲಿದ್ದಾರೆ.

ಸಂಸದ ಚೌಟ ಕುರಿತು ಸೋಮಣ್ಣ ಮೆಚ್ಚುಗೆ
ಒಂದು ತಿಂಗಳಿನಿಂದ ಸಂಸದ ಕ್ಯಾ|ಬ್ರಿಜೇಶ್‌ ಚೌಟ ನನ್ನ ಗಮನಕ್ಕೆ ಇವುಗಳನ್ನು ತಂದಿದ್ದು ಪದೇಪದೆ ಸಭೆ ನಡೆಸುವಂತೆ ಕೇಳುತ್ತಲೇ ಬಂದಿದ್ದಾರೆ, ಈ ವಿಚಾರದಲ್ಲಿ ಸಾಕಷ್ಟು ಅಧ್ಯಯನ ನಡೆಸಿ ಅಧಿಕಾರಿಗಳನ್ನು ಒಟ್ಟು ಸೇರಿಸಿರುವ ಸಂಸದರ ಪ್ರಯತ್ನ ಶ್ಲಾಘನೀಯ ಎಂದರು.

ನಾನೂ ಹಿಂದಿ ಕಲಿಯುತ್ತಿದ್ದೇನೆ, ನೀವೂ ಕನ್ನಡ ಕಲಿಯಿರಿ!
ನಾನು ಹಿಂದಿಯ ಮಹತ್ವ ಈಗ ಅರಿತಿದ್ದೇನೆ, ಹಾಗಾಗಿ ಕಲಿಯುತ್ತಿದ್ದೇನೆ, ಇನ್ನು ಆರು ತಿಂಗಳಲ್ಲಿ ಸಂಸತ್ತಿನಲ್ಲಿ ಹಿಂದಿಯಲ್ಲಿ ಮಾತನಾಡಲು ಸಿದ್ಧನಾಗುತ್ತೇನೆ ಎಂದು ಸಚಿವ ಸೋಮಣ್ಣ ಹೇಳಿದರು.ಹಿಂದಿ ಹೇರಿಕೆ ವಿರುದ್ಧ ಪ್ರತಿಭಟಿಸಿದ್ದ ನನಗೆ ಈಗ ಭಾಷೆಯ ಅಗತ್ಯತೆಯ ಅರಿವಾಗಿದೆ. ಜತೆಗೆ ರೈಲ್ವೇ ಇಲಾಖೆಯ ಅಧಿಕಾರಿಗಳು ಕನ್ನಡ ಕಲಿಯಬೇಕು, ಜನರೊಂದಿಗೆ ಕೆಲಸ ಮಾಡುವವರು ಜನರ ಭಾಷೆ ಅರಿತುಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next