Advertisement

ರಾಜ್ಯದ ಹಿತದೃಷ್ಟಿಯಿಂದ ಕೈಗೆ ಮತ ನೀಡಿ

04:22 PM Apr 30, 2018 | |

ಸಿಂದಗಿ: ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಮತನೀಡುವ ಮೂಲಕ ಬಿಜೆಪಿ-ಜೆಡಿಎಸ್‌ ಪಕ್ಷಗಳನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರವಿವಾರ ಅಂಜುಮನ್‌ ಕಾಲೇಜಿನ ಮೈದಾನದಲ್ಲಿ ಸಿಂದಗಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿದ್ದ ಸಿಂದಗಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮಲ್ಲಣ್ಣ ನಿಂಗಣ್ಣ ಸಾಲಿ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.

Advertisement

ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ದೇಶದ ಎಲ್ಲರ ಕಣ್ಣು ರಾಜ್ಯ ಚುನಾವಣೆ ಫಲಿತಾಂಶದ ಮೇಲಿದ್ದು 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ನೂರಕ್ಕೆ ನೂರು ಗೆಲ್ಲುವುದು ಖಚಿತ. ಕಾಂಗ್ರೆಸ್‌ ರಾಜ್ಯದಲ್ಲಿ ಸರಕಾರ ರಚಿಸಿ ದೇಶದ ರಾಜಕಾರಣಕ್ಕೆ ಹೊಸ ತಿರುವು ನೀಡುತ್ತದೆ ಎಂದರು. 

ಬಿಜೆಪಿ-ಜೆಡಿಎಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈಗಾಗಲೇ ಒಂದು ಬಾರಿ ಇಬ್ಬರೂ ಸೇರಿ ಅಧಿಕಾರ ಅನುಭವಿಸಿದ್ದಾರೆ. ಅಧಿಕಾರಕ್ಕಾಗಿ ಕಚ್ಚಾಡಿದ್ದಾರೆ ಹೊರತು ರಾಜ್ಯದ ಅಭಿವೃದ್ಧಿ ಮಾಡಿಲ್ಲ ಎಂದ ಅವರು, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಮಾಡುವುದು ದೇವೆಗೌಡರ ಕೊನೆ ಆಸೆ ಎಂದು ಹೇಳುತ್ತ ನಿಮ್ಮನ್ನು ಮೋಸ ಮಾಡುತ್ತಾರೆ.

ದಯಮಾಡಿ ಯಾವ ಕಾಲಕ್ಕೂ ಜೆಡಿಎಸ್‌ ಪಕ್ಷಕ್ಕೆ ಮತ ಹಾಕಬೇಡಿ ಎಂದು ಮನವಿ ಮಾಡಿಕೊಂಡರು. ನಾನು ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಸುಳ್ಳು ಹೇಳುವ ಕುಮಾರಸ್ವಾಮಿ ಅವರಿಗೆ ಒಂದು ಪ್ರಶ್ನೆ ಕೇಳುತ್ತೇನೆ? ನೀವು 20 ತಿಂಗಳು ಮುಖ್ಯಮಂತ್ರಿಯಾಗಿದ್ದರಿ, ನಿಮ್ಮ ತಂದೆ ಮುಖ್ಯಮಂತ್ರಿ ಆಗಿರುವುದಲ್ಲದೇ ದೇಶದ ಪ್ರಧಾನಿಯಾಗಿದ್ದರು. ಆಗ ರೈತರ ಸಾಲ ಮನ್ನಾ ಮಾಡಲಿಲ್ಲ ಏಕೆ? ಅವರಲ್ಲಿ ಉತ್ತರ ಇಲ್ಲ ಎಂದರು.

ಕೋಮುವಾದಿ ಬಿಜೆಪಿ ಸಂವಿಧಾನ ತಿದ್ದಲು ಹೊರಟಿದೆ. ಬಿಜೆಪಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಹಿಂದುತ್ವದ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರ ಪಡೆದು ಅಧಿಕಾರ ಅನುಭವಿಸುತ್ತಿದೆ. ಸಬ್‌ ಕಾ ಸಾತ- ಸಬ್‌ ಕಾ ವಿಕಾಸ ಎನ್ನುತ್ತಾರೆ. ಅದರೇ ವಿಕಾಸವಾಗದೇ ವಿನಾಶವಾಗುತ್ತಿದೆ ಎಂದರು.

Advertisement

ಕಾಂಗ್ರೆಸ್‌ ಪಕ್ಷ ಟಿಕೆಟ್‌ ಹಂಚಿಕೆ ಮಾಡುವಲ್ಲಿ ಸರ್ವ ಸಮಾಜಕ್ಕೆ ಪ್ರಾಮುಖ್ಯತೆ ನೀಡಿದೆ. ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಹಾಲುಮತ ಸಮಾಜದ ಮಲ್ಲಣ್ಣ ಸಾಲಿ ಅವರಿಗೆ ನೀಡಲಾಗಿದೆ. ಒಂದು ಅವಕಾಶ ಸಿಕ್ಕಿದೆ. ಇದು ಮತ್ತೆ ಸಿಗುವುದಿಲ್ಲ. ಸಿಕ್ಕ ಅವಕಾಶದಿಂದ ವಂಚಿತರಾಗಬೇಡಿ. ಎಲ್ಲರೂ ಒಂದಾಗಿ ಮಲ್ಲಣ್ಣ ಸಾಲಿ ಅವರನ್ನು ಗೆಲ್ಲಿಸಿ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರ ಹಿತಾಸಕ್ತಿ ಕಾಪಾಡುತ್ತೇವೆ. ಆದರೇ ಅವರು ಮಲ್ಲಣ್ಣ ಸಾಲಿ ಅವರನ್ನು ಗೆಲ್ಲಿಸಿ ತರಬೇಕು ಎಂದು ಮಾತಿನಲ್ಲಿ ಶರಣಪ್ಪ ಸುಣಗಾರ ಅವರಿಗೆ ಕರಾರು ಮಾಡಿದರು.

ರಾಜ್ಯದ ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ, ದಲಿತರಿಗೆ, ಮಹಿಳೆಯರಿಗೆ, ರೈತರಿಗೆ ಸಾಕಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ಮಾಡಿದ್ದೇವೆ. ಆದರೆ ಇಂಥ ಯೋಜನೆಗಳನ್ನು ಅನುಷ್ಠಾನ ಮಾಡುವ ಕೆಲಸ ಜೆಡಿಎಸ್‌-ಬಿಜೆಪಿ ಸರಕಾರವಿದ್ದಾಗ ಏಕೆ ಮಾಡಲಿಲ್ಲ. ರಾಜ್ಯದ ಜನೆತಯ ಅಭಿವೃದ್ಧಿ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ. ಸಿಂದಗಿ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಮುಗ್ದ ವ್ಯಕ್ತಿ ಮಲ್ಲಣ್ಣ ಸಾಲಿ ಅವರಿಗೆ ಮತ ನೀಡುವ ಮೂಲಕ ಅವರನ್ನು ಗೆಲ್ಲಿಸಿ ತರಬೇಕು. ಕ್ಷೇತ್ರದಲ್ಲಿನ ಎಲ್ಲ ಸಮಾಜದ ನಾಯಕರು ಅವರ ಗೆಲುವಿಗೆ ಶ್ರಮಿಸಬೇಕು ಎಂದರು.

ಸಿಂದಗಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮಲ್ಲಣ್ಣ ನಿಂಗಣ್ಣ ಸಾಲಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರಕಾರ ರಚಿಸಲು ಸಿದ್ದರಾಮಯ್ಯ ಅವರ ಕೈ ಬಲ ಪಡಿಸಲು ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next