Advertisement

ಕ್ರೀಡೆಗೂ ಶಿಕ್ಷಣದಷ್ಟೇ ಪ್ರಾಮುಖ್ಯತೆ ನೀಡಿ

03:19 PM Apr 24, 2022 | Team Udayavani |

ಚಿತ್ರದುರ್ಗ: ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಬೇಕು. ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಎಂದು ಒಂದನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬನ್ನಿಕಟ್ಟೆ ಹನುಮಂತಪ್ಪ ಆರ್‌. ಹೇಳಿದರು.

Advertisement

ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಲಾದ 2022 ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಪ್ರೌಢಶಾಲೆ ಮತ್ತು ಕಾಲೇಜು ಮಟ್ಟದಿಂದ ಕ್ರೀಡಾ ಆಸಕ್ತಿ ಬೆಳೆಸಿಕೊಂಡ ನೌಕರರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಹಾಗೇ ಉಳಿದ ನೌಕರರು ಆಸಕ್ತಿಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಹಿಂದೆ ಹಳ್ಳಿಗಳಲ್ಲಿ ಕಬಡ್ಡಿ, ಖೋ-ಖೋ ಆಟಗಳನ್ನು ಗ್ರಾಮಸ್ಥರು ಪ್ರೋತ್ಸಾಹಿಸುತ್ತಿದ್ದರು. ನಗರೀಕರಣವಾದಂತೆ ಕ್ರೀಡೆಯಲ್ಲಿ ಆಸಕ್ತಿ ಕುಂಠಿತವಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದರೆ ದೈಹಿಕವಾಗಿ ಸದೃಢರಾಗಿರುತ್ತೀರಿ ಎಂದರು.

ನೌಕರರ ಸಂಘದಿಂದ ತಾಲೂಕು ಮಟ್ಟದಲ್ಲೂ ಕ್ರೀಡಾಕೂಟ ಆಯೋಜನೆ ಮಾಡುವ ಕಾರ್ಯವಾಗಬೇಕು. ಮಹಿಳೆಯರು ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಮಾತನಾಡಿ, ಕ್ರೀಡೆ ಮತ್ತು ಆರೋಗ್ಯ ಒಂದು ನಾಣ್ಯದ ಎರಡು ಮುಖಗಳು. ಇವು ಅವಿಭಾಜ್ಯ ಅಂಗಗಳು. ಕ್ರೀಡೆಗೆ ಮಹತ್ವ ನೀಡುವುದು ಅಗತ್ಯವಾಗಿದೆ. ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾರತಕ್ಕಿಂತ ಸಣ್ಣ ದೇಶಗಳ ಸಾಧನೆ ಹೆಚ್ಚಿದೆ. ಕ್ರೀಡೆಗೆ ಮಹತ್ವ, ಪ್ರೋತ್ಸಾಹ ನೀಡುವುದರೊಂದಿಗೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವಂತೆ ಆಗಬೇಕು. ಸ್ವಾಸ್ಥ್ಯ ದೇಹದಲ್ಲಿ ಸ್ವಾಸ್ಥ್ಯ ಮನಸ್ಸು ಇರುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ನೋಡಿ ಸುಮ್ಮನಾಗದೆ ಉಳಿದ ನೌಕರರು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ದಿನನಿತ್ಯ ಮನೆಗಳಲ್ಲಿ ಲಘು ವ್ಯಾಯಾಮ, ನಡಿಗೆ ಮಾಡುವುದರ ಮೂಲಕ ಆರೋಗ್ಯವಾಗಿರಬಹುದು ಎಂದರು.

Advertisement

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ ಮಾತನಾಡಿ, 2022 ಸಾಲಿನ ಕ್ರೀಡಾಕೂಟ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಂಘ ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ರಾಜ್ಯಾಧ್ಯಕ್ಷ ಷಡಕ್ಷರಿಯವರು ನೌಕರರ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಂತಹಂತವಾಗಿ ಬಗೆಹರಿಸುತ್ತಿದ್ದಾರೆ ಎಂದರು.

ಕ್ರೀಡಾಕೂಟದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ

ದಾವಣಗೆರೆಯಲ್ಲಿ ಜರುಗಿದ 2020-21 ಸಾಲಿನ ರಾಜ್ಯ ಮಟ್ಟದ ಕ್ರೀಡಾ ಕೂಟದ ಕುಸ್ತಿಯಲ್ಲಿ ವಿಜೇತರಾದ ನ್ಯಾಯಾಂಗ ಇಲಾಖೆ ಸುರೇಶ್‌ ಟಿ.ಬಿ. ಸಮಾಜ ಕಲ್ಯಾಣ ಇಲಾಖೆ ಶ್ರೀಕಾಂತ ಬೀರಪ್ಪ ಶಿರೋಳ, ಹಿಂದುಳಿದ ವರ್ಗಗಳ ಇಲಾಖೆ ಪೃಥ್ವಿ ಎಸ್‌, ಪಶು ಇಲಾಖೆಯ ತಿಮ್ಮೇಶ್‌, ಈಜು ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಹಿಂದುಳಿದ ವರ್ಗಗಳ ಇಲಾಖೆ ಚೇತನ ಅದಲಾಟ್ಟಿ, ಚೆಸ್‌ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ವೀರೇಶ್.ಟಿ, ಶಾಟ್‌ಪುಟ್‌ನಲ್ಲಿ ಪ್ರಶಸ್ತಿ ಪಡೆದ ಕಂದಾಯ ಇಲಾಖೆಯ ಸೌಮಶ್ರೀ, ರನ್ನಿಂಗ್‌ ಹಾಗೂ ಹೈಜಂಪ್‌ನಲ್ಲಿ ಪ್ರಶಸ್ತಿ ಪಡೆದ ಕಾರಾಗೃಹ ಇಲಾಖೆಯ ವೃಂದ.ಬಿ, ಶಟಲ್‌ ಬ್ಯಾಡ್ಮಿಂಟನ್‌ ಡಬಲ್ಸ್ ನಲ್ಲಿ ಪ್ರಶಸ್ತಿ ಪಡೆದ ಪೊಲೀಸ್‌ ಇಲಾಖೆಯ ಅನಿತ. ಜೆ, ಶಿಕ್ಷಣ ಇಲಾಖೆಯ ವಿಜಯಲಕ್ಷ್ಮೀ 100 ಮೀ ರನ್ನಿಂಗ್‌ ನಲ್ಲಿ ಪ್ರಶಸ್ತಿ ಪಡೆದ ಶ್ರೀನಿವಾಸ.ಜಿ ಅವರನ್ನು ಸನ್ಮಾನಿಸಲಾಯಿತು. ಪ್ರಸಕ್ತ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಆರ್.ಜಯಲಕ್ಷ್ಮಿ ಬಾಯಿ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌, ಉಪಾಧ್ಯಕ್ಷ ರಾಘವೇಂದ್ರ, ಗೌರವ ಅಧ್ಯಕ್ಷ ವೀರಣ್ಣ, ಹಿರಿಯೂರು ತಾಲೂಕು ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್‌ ಹೊಸದುರ್ಗ ತಾಲೂಕು ನೌಕರರ ಸಂಘದ ಅಧ್ಯಕ್ಷ ಶಶಿಧರ, ಕ್ರೀಡಾ ಕಾರ್ಯದರ್ಶಿಗಳಾದ ವೆಂಕಟಪತಿ, ಶಶಿಧರ್‌, ಕ್ರೀಡಾ ತರಬೇತುದಾರ ಮಹಿಬುಲ್ಲಾ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next