ರಾಯಚೂರು: ರಾಜ್ಯ ಸರ್ಕಾರಿ ನೌಕರರಿಗೆ ನಿರಾಸೆ ಮೂಡಿಸಿರುವ ಆರನೇ ವೇತನ ಆಯೋಗದ ಶಿಫಾರಸುಗಳು ಅವೈಜ್ಞಾನಿಕವಾಗಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಅಖೀಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರ 6ನೇ ವೇತನ ಆಯೋಗದ ವರದಿ ವಾಸ್ತವಿಕತೆಯಿಂದ ಕೂಡಿಲ್ಲ. ನೌಕರರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡದೇ ವಿರುದ್ಧವಾಗಿರುವ ಶಿಫಾರಸುಗಳನ್ನು ಮಾಡಿದೆ ಎಂದು ಆರೋಪಿಸಿದರು.
ಹಿಂದಿನ ವೇತನ ಸಮಿತಿಯ ಶಿಫಾರಸುಗಳನ್ನು 2012 ರಿಂದ ಜಾರಿಗೊಳಿಸಲಾಗಿದ್ದು, ಇದು ಮಾರ್ಚ್ 2017ಕ್ಕೆ ಮುಕ್ತಾಯವಾಗಿದೆ. ಆದರೆ, ಈ ಸೌಲಭ್ಯಗಳ ಆರ್ಥಿಕ ಸೌಲಭ್ಯಗಳನ್ನು 1 ಏಪ್ರಿಲ್ 2018ರಿಂದ ನೀಡಲು ಆಯೋಗವು ವರದಿಯಲ್ಲಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ನೌಕರರಿಗೆ ನಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನಗಳ ವ್ಯತ್ಯಾಸವು ಶೇ. 67ರಷ್ಟಿದೆ. ಆದರೆ, ಆಯೋಗವು ಮಾಡಿರುವ ಕನಿಷ್ಠ ವೇತನ ವ್ಯತ್ಯಾಸ ಹೆಚ್ಚಾಗಿದೆ. ಮನೆ ಬಾಡಿಗೆ ಭತ್ಯೆಯಲ್ಲಿ ಶೇ 6ರಷ್ಟು ಕಡಿತಗೊಳಿಸಿರುವುದರಿಂದ ವಾಸ್ತವ ಏರಿಕೆಯ ಶೇ 30ರ ಬದಲಿಗೆ ಶೇ 24 ಮಾತ್ರ ಆಗಿದೆ ಎಂದು ದೂರಿದರು.
ರಾಜ್ಯದಲ್ಲಿ ಆರನೇ ವೇತನ ಆಯೋಗದ ಪ್ರಕಾರ 7.73 ಲಕ್ಷ ಮಂಜೂರಾದ ಹುದ್ದೆಗಳಿದ್ದು, ಇದರದಲ್ಲಿ 5.22 ಲಕ್ಷ ನೌಕರರು
ಸೇವೆ ಸಲ್ಲಿಸುತ್ತಿದ್ದಾರೆ. ಶೇ. 33ರಷ್ಟು ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ. ಈ ಬಗ್ಗೆ ಆಯೋಗವು ಯಾವುದೇ ಶಿಫಾರಸು ಮಾಡಿಲ್ಲ. ಇಂಥ ಅನೇಕ ವಿಷಯಗಳ ಕುರಿತು ಶಿಫಾರಸುಗಳನ್ನು ಮಾಡಿಲ್ಲ ಎಂದು ಆಪಾದಿಸಿದರು.
ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ವೇತನ ಹಾಗೂ ಸೌಲಭ್ಯಗಳನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು
ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ತಾಯಪ್ಪ ಮರ್ಚೆಟಾಳ, ಒಕ್ಕೂಟದ ಪದಾಧಿಕಾರಿಗಳಾದ ವಿಜಯಕುಮಾರ, ನಾರಾಯಣ, ಶಕೀಲ್ ಅಹಮ್ಮದ್, ಎಂ.ಬಿ. ದೊಡ್ಡಮನಿ, ಜಂಬಯ್ಯ, ಜಿಂದಪ್ಪ ಅಮರೇಶ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.