Advertisement

ನಾರಾಯಣ ಗುರುಗಳನ್ನು ಅವಮಾನಿಸಿದ ಬಿಜೆಪಿಗೆ ಈಗ ಗುರುಗಳ ನೆನಪು: ಸತ್ಯಜಿತ್‌

12:41 AM Apr 14, 2024 | Team Udayavani |

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಕೇಂದ್ರ ಸರಕಾರವು ಗಣರಾಜ್ಯೋತ್ಸವ ದಿನದಂದು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ ಮಾಡಿದಾಗ, ರಾಜ್ಯದಲ್ಲಿ ಬಿಜೆಪಿ ಸರಕಾರವು ನಾರಾಯಣ ಗುರುಗಳ ಪಾಠವನ್ನು ಕೈಬಿಟ್ಟಾಗ, ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿಯಾಗಿ ಬಿಜೆಪಿ ಮುಖಂಡರು ಮಾತಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿಗೆ ಈಗ ಚುನಾವಣೆ ಬಂದಾಗ ನಾರಾಯಣ ಗುರುಗಳ ನೆನಪಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್‌ ಸುರತ್ಕಲ್‌ ಹೇಳಿದರು.

Advertisement

ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜ ಬಿಜೆಪಿಯಿಂದ ಕೈಬಿಟ್ಟು ಹೋಗುತ್ತದೆ ಎಂಬ ಭಾವನೆ ಬಂದ ಕಾರಣದಿಂದ ಈಗ ಬಿಜೆಪಿಯು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾಗಿದೆ ಎಂದರು.

2 ವರ್ಷದ ಹಿಂದೆ ಮಹಿಳಾ ಸಶಕ್ತೀಕರಣ ವಿಷಯದಲ್ಲಿ ಕೇರಳ ಸರಕಾರ ಕೇಂದ್ರಕ್ಕೆ ಕಳುಹಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಪ್ರದರ್ಶಿಸಲು ಅವಕಾಶ ನೀಡುತ್ತಿದ್ದರೆ ಅದು ನಾರಾಯಣ ಗುರುಗಳಿಗೆ ಸಿಗುವ ದೊಡ್ಡ ಗೌರವವಾಗುತ್ತಿತ್ತು. ಆದರೆ ಅಂದು ಅವಕಾಶ ನಿರಾಕರಣೆ ಮಾಡಿದಾಗ ಇಲ್ಲಿ ಸಮಾಜ ಪ್ರತಿಭಟನೆ ಮಾಡಿದಾಗ ಸ್ತಬ್ಧಚಿತ್ರದ ಅಳತೆ ಸರಿ ಇಲ್ಲ ಎಂಬಿತ್ಯಾದಿ ಹೇಳಿಕೆ ನೀಡಿ ಸಮಾಜದ ದಾರಿತಪ್ಪಿಸಲಾಗಿತ್ತು. ಸ್ಥಳೀಯ ಬಿಜೆಪಿ ಪ್ರಮುಖರು ಆಗ ಪತ್ರಿಕಾಗೋಷ್ಠಿ ನಡೆಸಿ ಬರುವ ವರ್ಷ ನಾವೇ ಸ್ತಬ್ಧಚಿತ್ರ ಮಾಡಿ ಕೊಡುತ್ತೇವೆ ಎಂದರೂ ಅದು ಇಲ್ಲಿಯವರೆಗೆ ಆಗಲೇ ಇಲ್ಲ. ಇದನ್ನು ಖಂಡಿಸಿ ನಾರಾಯಣ ಗುರುಗಳಿಗೆ ಅವಮಾನ ಆಗಿದೆ ಎಂಬ ನೋವಿನಿಂದ ಕರಾವಳಿಯಲ್ಲಿ ಪ್ರತಿಭಟನೆ ನಡೆದಾಗ ಅಂದು ಯಾವುದೇ ಬಿಜೆಪಿ ನಾಯಕರು ಕೂಡ ಇದಕ್ಕೆ ಬೆಂಬಲವನ್ನೇ ನೀಡಲಿಲ್ಲ ಎಂದರು.

“ಬಿಲ್ಲವ ಸಮಾಜ’ ಭಾವನೆಗೆ ಬೆಲೆಕೊಡುವ ನಂಬಿಗಸ್ತ ಹಾಗೂ ಮುಗ್ಧ ಸಮುದಾಯ. ಬ್ರಹ್ಮಶ್ರೀ ನಾರಾಯಣ ಗುರುಗಳು, ಕೋಟಿ ಚೆನ್ನಯರ ಹೆಸರಿನಲ್ಲಿ ನಮ್ಮ ಸಮಾಜದ ಜನರ ಭಾವನೆಗಳ ಜತೆ ಚೆಲ್ಲಾಟ ನಡೆಸಿದರೆ ಅದಕ್ಕೆ ಸಮಾಜದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ನಾರಾಯಣ ಗುರುಗಳು ಸ್ಥಾಪನೆ
ಮಾಡಿದ ಕ್ಷೇತ್ರದಲ್ಲಿ ಜವಾಬ್ದಾರಿ ನಿರ್ವಹಿಸಿದ, ಸಮಾಜದ ಹೋರಾಟದಲ್ಲಿ ಭಾಗಿ ಯಾಗಿದ್ದ ವ್ಯಕ್ತಿಯೊಬ್ಬರು ಬೇರೊಂದು ಪಕ್ಷದಿಂದ ಚುನಾವಣೆ ಯಲ್ಲಿ ಕಣಕ್ಕಿಳಿದ ಪರಿಣಾಮ ಸಮಾಜದ ಬೆಂಬಲ ಎಲ್ಲಿ ಕೈಬಿಟ್ಟು ಹೋಗುತ್ತದೆಯೋ ಎಂಬ ಯೋಚನೆಯಿಂದ ಬಿಜೆಪಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ, ಕೋಟಿ ಚೆನ್ನಯರ ನೆನಪಾಗುತ್ತದೆ ಎಂದರು.

Advertisement

ಕಳೆದ ಕೆಲವು ದಿನಗಳಿಂದ ಬಿಜೆಪಿ ಅಭ್ಯರ್ಥಿ ಸಾಮಾಜಿಕ ಜಾಲತಾಣದ ಪೋಸ್ಟರ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು, ಕೋಟಿ ಚೆನ್ನಯರ ಭಾವಚಿತ್ರ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ನಮ್ಮ ಸಮಾಜದ ಜತೆ ಭಾವ ನಾತ್ಮಕವಾಗಿ ಚೆಲ್ಲಾಟವಾಡ ಬಹುದು ಎಂದು ಸ್ಥಳೀಯ ನಾಯಕರು ಭಾವಿಸಿದ್ದರೆ ಸಾಧ್ಯವಿಲ್ಲ ಎಂದರು.

ಅವಮಾನಿಸಿದವರಿಗೇ ಸಮ್ಮಾನ!
10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ನಾರಾಯಣ ಗುರು ಗಳ ಪಾಠವನ್ನು ತೆಗೆದು ಹಾಕುವ ಕೆಲಸ ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡಿತ್ತು. ಇದಕ್ಕೆ ಸಮಾಜ ಪ್ರತಿಭಟನೆ ಮಾಡಿದಾಗ ಇಲ್ಲಸಲ್ಲದ ಸಬೂಬು ನೀಡಲಾಗಿತ್ತು. ಸಮಾಜದಿಂದ ಪ್ರತಿಭಟನೆಯ ಕಾವು ಹೆಚ್ಚಾದಾಗ ಮಣಿದು ಗುರುಗಳ ಪಠ್ಯವನ್ನು ಮತ್ತೆ ಅಳವಡಿಸಲಾಗಿತ್ತು. ಪಠ್ಯವನ್ನು ಕೈಬಿಡುವಲ್ಲಿ ಕಾರಣಕರ್ತರಾಗಿದ್ದ ರೋಹಿತ್‌ ಚಕ್ರತೀರ್ಥರಿಗೆ ಜಿಲ್ಲೆಯ ದೇವಸ್ಥಾನವೊಂದರ ಬ್ರಹ್ಮಕಲಶೋತ್ಸವ ವೇಳೆ ನಮ್ಮ ಸಮಾಜದ ವಿರೋಧದ ನಡುವೆಯೂ ಮೆರವಣಿಗೆ ನಡೆಸಿ ಸಮ್ಮಾನ ಮಾಡಲಾಯಿತು ಎಂದರು.

ಕೋಟಿ ಚೆನ್ನಯರಿಗೆ, ಬಿಲ್ಲವರಿಗೆ ಅಪಮಾನ ಮಾಡಿದ, ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯೊ ಬ್ಬರು ಇನ್ನೂ ಬಿಜೆಪಿಯಲ್ಲಿದ್ದಾರೆ. ಈ ವರೆಗೆ ಅವರನ್ನು ಪಕ್ಷದಿಂದ ಉಚ್ಚಾಟಿ ಸಿಲ್ಲ ಎಂದರು. ಬೆಂಗಳೂರು ಬಿಲ್ಲವ ಅಸೋಸಿಯೇಶನ್‌ ಅಧ್ಯಕ್ಷ ವೇದ ಕುಮಾರ್‌, ಕುದ್ರೋಳಿ ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರದ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಇದ್ದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರನ್ನಿಡುವ ಮಾತನ್ನು ಇಲ್ಲಿನ ಬಿಜೆಪಿ ಅಭ್ಯರ್ಥಿ ಈಗ ಮಾತನಾಡುತ್ತಾರೆ. ಈ ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇತ್ತು. ಆಗ ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡುವ ಕೆಲಸ ಬಿಜೆಪಿ ಮಾಡಿಲ್ಲ. ಚಿತ್ತರಂಜನ್‌ ಗರೋಡಿ ಸಹಿತ ಸಮಾಜದ ಹಿರಿಯರ ನೇತೃತ್ವದಲ್ಲಿ ಅಂದು ಹೋರಾಟ ನಡೆಸಲು ಮುಂದಾದಾಗ ಅಂದಿನ ಸಂಸದರು ಒಂದು ವರ್ಷದಲ್ಲಿ ಈ ಕಾರ್ಯ ನಡೆಸುವುದಾಗಿ ಭರವಸೆ ನೀಡಿ ದಾರಿತಪ್ಪಿಸುವ ಕೆಲಸ ಮಾಡಿದ್ದರು. ಇದನ್ನು ನಾವು ಮರೆತಿಲ್ಲ. ದ.ಕ., ಶಿವಮೊಗ್ಗ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಮಾಜದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ನಡೆಯುತ್ತಿದೆ ಎಂದು ಸತ್ಯಜಿತ್‌ ಸುರತ್ಕಲ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next