Advertisement

ಸರಕಾರದ ಕ್ರಮ, ಜನರ ಸಹಕಾರದಿಂದ ಕೋವಿಡ್ ನಿಯಂತ್ರಣ : ಡಾ. ಗಿರಿಧರ ಉಪಾಧ್ಯಾಯ

04:54 PM May 24, 2021 | Team Udayavani |

ಬೆಂಗಳೂರು: ಫೆಬ್ರವರಿ 2021ರಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಆಗಿದ್ದವು. ಪಾಸಿಟಿವಿಟಿ ರೇಟ್ 0.58ಕ್ಕೆ ಬಂದಿತ್ತು. ಆದರೆ, ಏಕಾಏಕಿ ಚಂಡಮಾರುತದ ರೀತಿಯಲ್ಲಿ ಮಾರ್ಚ್ 15ರ ವೇಳೆಗೆ ಪ್ರಕರಣಗಳು ಹೆಚ್ಚಿದವು. ಒಂದು ಸಂದರ್ಭದಲ್ಲಿ ಪಾಸಿಟಿವಿಟಿ ದರ ಗರಿಷ್ಠ ಏರಿಕೆಯಾಗಿತ್ತು. ಜನತಾ ಕಫ್ರ್ಯೂ ಮತ್ತು ಲಾಕ್‍ಡೌನ್ ಪರಿಣಾಮವಾಗಿ ಪಾಸಿಟಿವಿಟಿ ದರ ಶೇ 20ಕ್ಕಿಂತ ಕಡಿಮೆ ಆಗಿದೆ. ಲಾಕ್‍ಡೌನ್ ವಿಚಾರದಲ್ಲಿ ಜನರ ಸಹಕಾರದಿಂದ ಪಾಸಿಟಿವಿಟಿ ದರ ಇನ್ನಷ್ಟು ಕಡಿಮೆ ಆಗಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರರಾದ ಡಾ. ಗಿರಿಧರ ಉಪಾಧ್ಯಾಯ ಅವರು ತಿಳಿಸಿದರು.

Advertisement

ಮಲ್ಲೇಶ್ವರದ ಬಿಜೆಪಿ ನಗರ ಕಾರ್ಯಾಲಯ ಭಾವುರಾವ್ ದೇಶಪಾಂಡೆ ಭವನದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪಾಸಿಟಿವಿಟಿ ದರ ಶೇ 10ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕಿದೆ. ಇದರಿಂದ ವೈದ್ಯಕೀಯ ರಂಗವು ಹೆಚ್ಚು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದರು.
2020ರಿಂದ ಇಲ್ಲಿನವರೆಗೆ ವೈದ್ಯಕೀಯ ಲೋಕದಲ್ಲಿ ಒಂದು ರೀತಿಯ ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಅನಂತಾನಂತ ಧನ್ಯವಾದಗಳನ್ನು ತಿಳಿಸಿದರು. ಪ್ರಕರಣ ಕಡಿಮೆ ಆಗುವುದರಲ್ಲಿ ಅವರ ಪಾತ್ರವೂ ಪ್ರಮುಖವಾಗಿದೆ ಎಂದರು.

ಆಕ್ಸಿಜನೇಟೆಡ್ ಬೆಡ್ 2020ರಲ್ಲಿ ಸುಮಾರು ಒಂದು ಸಾವಿರ ಇದ್ದುದು ಈಗ 24 ಸಾವಿರಕ್ಕೆ ಅಭೂತಪೂರ್ವ ಮಾದರಿಯಲ್ಲಿ ಹೆಚ್ಚಾಗಿದೆ. 444 ವೆಂಟಿಲೇಟರ್ ಇದ್ದುದು ಸುಮಾರು 2 ಸಾವಿರಕ್ಕೆ ಹೆಚ್ಚಾಗಿದೆ. ಒಮ್ಮಿಂದೊಮ್ಮೆಲೆ ಪ್ರಕರಣ ಹೆಚ್ಚಾದಾಗ ವೆಂಟಿಲೇಟರ್ ಸುಲಭವಾಗಿ ಸಿಗುವುದಿಲ್ಲ ಎಂದು ವಿವರಿಸಿದರು.

ಆಕ್ಸಿಜನ್ ನಿರ್ವಹಣೆ ಮತ್ತು ಸರಬರಾಜಿನಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಈಗ ಅದು ಸರಿಯಾಗಿದೆ. ನಿನ್ನೆ 850 ಮೆಟ್ರಿಕ್ ಟನ್ ಆಮ್ಲಜನಕವಷ್ಟೇ ಬಳಸಲಾಗಿದೆ. ಬೆಳಿಗ್ಗೆ 6ರಿಂದ 10ರವರೆಗೆ ಜನರಿಗೆ ಲಾಕ್‍ಡೌನ್ ವಿಷಯದಲ್ಲಿ ವಿರಾಮ ನೀಡಲಾಗಿದೆ. ಆದರೆ, ವೈರಸ್‍ಗೆ ವಿರಾಮ ಇಲ್ಲ ಎಂದು ಜನರು ನೆನಪಿನಲ್ಲಿ ಇಡಬೇಕು ಎಂದು ತಿಳಿಸಿದರು. ಮನೆಗೆ ಬೇಕಾದ ಸಾಮಗ್ರಿಗಳನ್ನು ವಾರಕ್ಕೊಮ್ಮೆ ಖರೀದಿ ಮಾಡಿ ಎಂದು ಮನವಿ ಮಾಡಿದರು.

ಜೂನ್ ಮೊದಲ ವಾರದಲ್ಲಿ ಇನ್ನಷ್ಟು ಕೋವಿಡ್ ಲಸಿಕೆ ಸಿಗಲಿದೆ. ಸ್ಫುಟ್ನಿಕ್ ಬಗ್ಗೆ ಅಧ್ಯಯನ ನಡೆದ ಬಳಿಕ ಲಸಿಕೆ ಕೊಡಲಾಗುತ್ತಿದೆ. ಭಾರತದಲ್ಲಿ ಲಸಿಕೆ ಹಾಕುವುದೆಂದರೆ ಅದು ಪ್ರಪಂಚದ ಶೇ 33 ಜನರಿಗೆ ಲಸಿಕೆ ಕೊಡುವಂಥ ದೊಡ್ಡ ಕಾರ್ಯಕ್ರಮ. ದೇಶದ ಸುಮಾರು 20 ಕೋಟಿ ಜನರಿಗೆ ಮತ್ತು ಕರ್ನಾಟಕದ 1.2 ಕೋಟಿ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ ಎಂದರು. ಸೋಂಕಿತರ ಸಂಖ್ಯೆ ನಿರಂತರವಾಗಿ ಕಡಿಮೆ ಆಗುತ್ತಿದೆ. ಅಲ್ಲದೆ, ಚಿಕಿತ್ಸೆ ಪಡೆದು ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಆಶಾದಾಯಕ ಬೆಳವಣಿಗೆ ಎಂದರು.

Advertisement

ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಈ ಸೋಂಕಿತರ ಸೇವೆಯಲ್ಲಿ ತೊಡಗಿದ್ದಾರೆ. ಸೇವೆಯ ವೇಳೆ ಅನೇಕ ಕಾರ್ಯಕರ್ತರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ, ವಿರೋಧ ಪಕ್ಷಗಳು ಕೋವಿಡ್ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿರುವುದು ದುರ್ದೈವದ ಸಂಗತಿ ಎಂದರು.
ಸೇವಾ ಹೀ ಸಂಘಟನೆಯಡಿ ದೇಶದಲ್ಲೆಡೆ ಬಿಜೆಪಿ ಆಂದೋಲನ ನಡೆಯುತ್ತಿದೆ. ಬೆಡ್ ಸಿಗದವರು, ಆಮ್ಲಜನಕ ಸಿಗದೆ ಇರುವವರು, ವಿವಿಧ ವೈದ್ಯಕೀಯ ಸೌಕರ್ಯಕ್ಕಾಗಿ ಪ್ರಯತ್ನ ಪಡುವವರ ನೆರವಿಗೆ ಬಿಜೆಪಿ ಕಾರ್ಯಕರ್ತರು ಧಾವಿಸುತ್ತಿದ್ದಾರೆ. ಊಟದ ಕಿಟ್ ಕೂಡ ವಿತರಿಸಲಾಗುತ್ತಿದೆ. ನಾವೇ ಮಾಡಿಕೊಂಡ ಅನಾಹುತಕ್ಕೆ ಪ್ರಧಾನಿಯವರನ್ನು ದೂರುವ ವಿರೋಧ ಪಕ್ಷಗಳ ಪರಿಪಾಠ ಈಗಲೂ ಮುಂದುವರಿದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೋವಿಡ್ ಪರಿಹಾರಕ್ಕೆ ಸಹಕರಿಸುವ ಪ್ರವೃತ್ತಿ ಮತ್ತು ಜನಜಾಗೃತಿ ಮೂಡಿಸುವಲ್ಲಿ ವಿರೋಧ ಪಕ್ಷಗಳು ನೆರವಾಗಬೇಕಿದೆ. ಪಟ್ಟಣ ಪ್ರದೇಶದಿಂದ ಹಳ್ಳಿಗಳಿಗೆ ಕೋವಿಡ್ ಸಮಸ್ಯೆ ಹರಡಿದೆ. ಜನರಿಗೆ ಧೈರ್ಯ ತುಂಬುವ ಕಾರ್ಯ ನಡೆಯಬೇಕಿದೆ ಎಂದರು.
ಜ್ಯೋತಿ ಬೆಳಗಿಸಿದ್ದು, ಚಪ್ಪಾಳೆ ತಟ್ಟಿದ್ದು ಕೊರೊನಾ ಹೋಗುತ್ತದೆ ಎಂದಲ್ಲ. ವಾರಿಯರ್‍ಗಳಿಗೆ ಪ್ರೋತ್ಸಾಹ ಕೊಡಲು ಈ ಕೆಲಸ ಮಾಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು. ಮೊದಲ ಹಂತದಲ್ಲಿ ಕಾಂಗ್ರೆಸ್ ಪಕ್ಷದವರು ಲಸಿಕೆ ಬಗ್ಗೆ ಜೀವಭಯ ಮೂಡಿಸಿದರು. ಈಗ ಲಸಿಕೆ ಪ್ರಯೋಜನಕಾರಿ ಎಂಬುದು ಅವರಿಗೂ ಅರ್ಥವಾಗಿದೆ ಎಂದು ತಿಳಿಸಿದರು. ಸುಳ್ಳು, ಅಪಪ್ರಚಾರದ ಮೂಲಕ ಜನರ ದಾರಿ ತಪ್ಪಿಸುವ ಕಾರ್ಯವನ್ನು ಇನ್ನಾದರೂ ಕೈಬಿಡಿ ಎಂದು ಅವರು ಆಗ್ರಹಿಸಿದರು.

ಲಾಕ್‍ಡೌನ್ ಬಳಿಕ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿವೆ ವೈದ್ಯಕೀಯ ಪ್ರಕೋಷ್ಠದ ಬೆಂಗಳೂರು ದಕ್ಷಿಣ ಜಿಲ್ಲಾ ಸಂಚಾಲಕರಾದ ಡಾ.ಸುನೀಲ್ ಬಾಬು ಅವರು ತಿಳಿಸಿದರು. ಆಕ್ಸಿಜನ್ ಕೊರತೆ ನೀಗಿಸಲಾಗಿದೆ. ಹಾಸಿಗೆಗಳ ಸಂಖ್ಯೆ ಮತ್ತು ಲಭ್ಯತೆ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಪ್ಲಾಸ್ಮಾದ ಕೊರತೆಯನ್ನೂ ಸರಿಪಡಿಸಲಾಗಿದೆ. ಬ್ಲ್ಯಾಕ್ ಫಂಗಸ್‍ಗೆ ಕೂಡ ಚಿಕಿತ್ಸೆ ಲಭ್ಯವಿದೆ ಎಂದು ವಿವರಿಸಿದರು.

ಪಾಸಿಟಿವ್ ರೇಟ್ ಕಡಿಮೆಯಾಗುತ್ತಿದೆ. ಲಸಿಕೆ ಕಾರ್ಯಕ್ರಮ ನಿಂತಿಲ್ಲ. ಅದು ಮುಂದುವರಿದಿದೆ. ಬೇಡಿಕೆ ಮತ್ತು ಸರಬರಾಜಿನಲ್ಲಿ ಸ್ವಲ್ಪ ಏರಿಳಿತ ಸಂಭವಿಸಿದ ಕಾರಣ ಅದು ಸಮಸ್ಯೆಯಂತೆ ಕಾಣುತ್ತಿದೆ. ಹಿಂದೆ ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಕರೆಯುವ ಸ್ಥಿತಿ ಇತ್ತು. ಆದರೆ, ಲಸಿಕೆ ಬಗ್ಗೆ ಅಪಪ್ರಚಾರ ನಡೆಯಿತು. ಇದರಿಂದ ಬೇಡಿಕೆ ಕುಸಿಯಿತು. ವ್ಯಾಕ್ಸಿನ್ ಸ್ಟಾಕ್ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ವ್ಯಾಕ್ಸಿನ್‍ನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದೆ ಎಂದರು. ಬಿಜೆಪಿಯಿಂದ ಲಸಿಕೆ ಅಭಿಯಾನ ಮುಂದುವರಿದಿದೆ. ಜೂನ್ ಮೊದಲ ವಾರದಿಂದ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಈ ವರ್ಷ ಕಡಿಮೆ ವಯಸ್ಸಿನವರಿಗೆ ಕೋವಿಡ್ ತಗುಲುತ್ತಿದೆ. ಹೆಚ್ಚು ದಿನಗಳ ಕಾಲ ವೆಂಟಿಲೇಟರ್ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಮರಣ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ರೋಗಿಗಳು ಮನೆಯಲ್ಲೇ ಇರುವುದು, ಸರಿಯಾಗಿ ಚಿಕಿತ್ಸೆ ಸಿಗದೆ ಇರುವುದರಿಂದ ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಅವರು ವಿವರಿಸಿದರು. ರೋಗಿಗಳು ಪರೀಕ್ಷೆ ಮಾಡಿಸಬೇಕು. ಭಯ ಮತ್ತು ಆತಂಕ ದೂರವಿಡಬೇಕು ಎಂದು ಅವರು ಮನವಿ ಮಾಡಿದರು.

ಅಕ್ಟೋಬರ್‍ಗೆ ಮೂರನೇ ಅಲೆ ಬರುವ ಸಾಧ್ಯತೆ ಇದ್ದು, ಅದಕ್ಕಾಗಿ ಸರ್ವಸಿದ್ಧತೆ ನಡೆದಿದೆ. ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ನಗರದಲ್ಲಿ ಈಗಾಗಲೇ 14 ಕೋವಿಡ್ ಕೇರ್ ಸೆಂಟರ್ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಆಕ್ಸಿಜನ್ ಬೆಡ್‍ಗಳ ಸಮಸ್ಯೆ ಕಾಡುತ್ತಿಲ್ಲ ಎಂದರು.
ರೆಮಿಡಿಸಿವಿರ್ ರಾಮಬಾಣ ಎಂಬ ಚಿಂತನೆ ಇತ್ತು. ಇದರಿಂದ ಬೇಡಿಕೆ ಹೆಚ್ಚಾಗಿತ್ತು. ಈಗ ಪಾರದರ್ಶಕ ರೀತಿಯಲ್ಲಿ ಈ ಇಂಜೆಕ್ಷನ್ ವಿತರಣೆ ನಡೆಯುತ್ತಿದೆ. ಬ್ಲ್ಯಾಕ್ ಮಾರ್ಕೆಟ್ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಬ್ಲ್ಯಾಕ್ ಫಂಗಸ್‍ಗೆ ಬೇಕಾದ ಇಂಜೆಕ್ಷನ್ ಕೂಡ ಲಭಿಸುತ್ತಿದೆ. ಇದಕ್ಕೆ ಸಂಬಂಧಿಸಿ ತಜ್ಞರ ಸಮಿತಿ ರಚಿಸಿರುವುದಾಗಿ ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ಅವರು ತಿಳಿಸಿದ್ದಾರೆ ಎಂದರು.

ಮಧುಮೇಹ ಕಾಯಿಲೆ ಇದ್ದವರಿಗೆ ಹಿಂದೆಯೂ ಬ್ಲ್ಯಾಕ್ ಫಂಗಸ್ ಸಮಸ್ಯೆ ಇತ್ತು. ಒಮ್ಮಿಂದೊಮ್ಮೆಲೆ ಆಕ್ಸಿಜನ್ ಬೇಡಿಕೆ ಹೆಚ್ಚಳದಿಂದ ಒಮ್ಮೆ ಆಮ್ಲಜನಕದ ಕೊರತೆ ಆಗಿತ್ತು. ಈಗ ಆ ಸಮಸ್ಯೆ ನಿವಾರಣೆಯಾಗಿದೆ ಎಂದು ತಿಳಿಸಿದರು.
2019ರಲ್ಲಿ ಕೋವಿಡ್ ಪ್ರಕರಣಗಳೂ ಕಡಿಮೆ ಇದ್ದವು. ಅದರ ನಿಯಂತ್ರಣದ ಮಾಹಿತಿಯೂ ಇರಲಿಲ್ಲ. ವೈದ್ಯಕೀಯ ಕಿಟ್‍ಗಳು, ಮಾಸ್ಕ್, ಸ್ಯಾನಿಟೈಸರ್ ಅಭಾವವೂ ಇತ್ತು ಎಂದರು.

2020ರಲ್ಲಿ ವೈದ್ಯಕೀಯ ಕಿಟ್‍ಗಳು, ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಸೌಕರ್ಯಗಳ ಕೊರತೆಯನ್ನು ನೀಗಿಸಲಾಯಿತು. 2020ರಲ್ಲಿ ಒಮ್ಮಿಂದೊಮ್ಮೆಲೆ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರಿಂದ ಅದನ್ನು ನಿಭಾಯಿಸುವುದು ದೊಡ್ಡ ಸವಾಲಾಯಿತು. ಆಮ್ಲಜನಕ, ಪ್ಲಾಸ್ಮಾ, ಬೆಡ್, ವೈದ್ಯರ ಸಂಖ್ಯೆ, ಸಿಬ್ಬಂದಿ ಸೇರಿದಂತೆ ಎಲ್ಲವನ್ನೂ ನಿಭಾಯಿಸಲು ಸಜ್ಜಾಗಿದ್ದೆವು. ಆದರೆ, ದಿಢೀರ್ ಆಗಿ ಕೋವಿಡ್ ಆಗಿ ಸಂಖ್ಯೆ ಹೆಚ್ಚಾದ ಕಾರಣ ನಿಯಂತ್ರಿಸಲು ಸ್ವಲ್ಪ ಕಷ್ಟವಾಯಿತು. ಆದರೂ ಸರಕಾರವು ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಆದ್ಯತೆಯಲ್ಲಿ ಲಸಿಕೆ ಕೊಟ್ಟ ಕಾರಣ ವೈದ್ಯಕೀಯ ಸಿಬ್ಬಂದಿ ಕೊರತೆ ಆಗಲಿಲ್ಲ. ಅವರೆಲ್ಲರೂ ಧೈರ್ಯದಿಂದ ಕರ್ತವ್ಯ ನಿರತರಾಗಿದ್ದಾರೆ ಎಂದರು.

ಬೆಂಗಳೂರು ಉತ್ತರ ಜಿಲ್ಲಾ ಸಂಚಾಲಕರಾದ ಡಾ.ಅನಂತರಾಮ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆಯ ಡಾ.ಶಾಂತಗಿರಿ ಮಲ್ಲಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next