Advertisement

ಘಟಪ್ರಭಾ ನದಿಗೆ ಹೆಚ್ಚಿದ ನೀರು: ಮೂರು ದಿನಗಳಿಂದ ಎರಡು ಸೇತುವೆ ಜಲಾವೃತ

07:46 PM Jul 25, 2023 | Team Udayavani |

ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಿಂದಾಗಿ ಹಿರಣ್ಯಕೇಶಿ ನದಿಯು ತುಂಬಿ ಹರಿದು ಧೂಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಮೂರು ದಿನಗಳಿಂದ ಸಮೀಪದ ನಂದಗಾಂವ ಸೇತುವೆ ಹಾಗೂ ಅಕ್ಕಿಮರಡಿ ಮಿರ್ಜಿ ಹಳೆ ಸೇತುವೆ ಸಂಪೂರ್ಣ ಜಲಾವೃತವಾಗಿವೆ.

Advertisement

ಮಂಗಳವಾರ ಸಂಜೆ 6 ಗಂಟೆ ಮಾಹಿತಿಯಂತೆ ಮಾಹಿತಿಯಂತೆ ಹಿರಣ್ಯಕೇಶಿ ನದಿಯಿಂದ ದುಪದಾಳ ಜಲಾಶಯಕ್ಕೆ ಒಟ್ಟು 17800 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಇದರಲ್ಲಿ 14600 ಕ್ಯೂಸೆಕ್ ಘಟಪ್ರಭಾ ನದಿಗೆ, 800 ಜಿಆರ್‌ಬಿಸಿಗೆ, 2400 ಘಟಪ್ರಭಾ ಎಡದಂಡೆ ಕಾಲುವೆಗೆ ಸೇರಿದಂತೆ ಒಟ್ಟು 17800 ಕ್ಯೂಸೆಕ್ ನೀರನ್ನು ದುಪದಾಳ ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿದೆ. ಘಟಪ್ರಭಾ ನದಿಗೆ ಗೋಕಾಕ ಹತ್ತಿರ ಜೊತೆಗೆ ಬಳ್ಳಾರಿ ನಾಲಾ, ಮಾರ್ಕಂಡೆಯ ಉಪನದಿಗಳ ನೀರು ಮತ್ತು ಘಟಪ್ರಭಾ ಎಡದಂಡೆ ಕಾಲುವೆ ನೀರು ಸಹ ವಿವಿಧ ಗ್ರಾಮಗಳ
ಹಳ್ಳಗಳ ಮಾರ್ಗವಾಗಿ ಪುನ: ಘಟಪ್ರಭಾ ನದಿಗೆ ಸೇರುವದರಿಂದ ಢವಳೇಶ್ವರ ಸೇತುವೆ ಹತ್ತಿರ ಘಟಪ್ರಭಾ ನದಿಗೆ ಸುಮಾರು 17 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿರುವದರಿಂದ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಢವಳೇಶ್ವರ ಸೇತುವೆ ಜಲಾವೃತವಾಗಲು ಕ್ಷಣಗಣನೆ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಢವಳೇಶ್ವರ ಮತ್ತು ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮಗಳ ಗಡಿರೇಖೆಯಂತಿರುವ ಘಟಪ್ರಭಾ ನದಿಯ ಸೇತುವೆಯು ಜಲಾವೃತವಾಗಲು ಕೆಲವು ಇಂಚುಗಳು ಬಾಕಿ ಇರುವ ಕಾರಣ ಬಹುತೇಕ ಮಂಗಳವಾರ ರಾತ್ರಿ ಸೇತುವೆಯು ಜಲಾವೃತವಾಗಿ ಬುಧವಾರ ಮುಂಜಾನೆಯಿಂದ ಬಹುತೇಕ ಸೇತುವೆ ಮೇಲಿನ ಸಂಚಾರವು ಬಂದ್ ಆಗಲಿದೆ.

ಕಳೆದ ಮೂರು ದಿನಗಳಿಂದ ನಂದಗಾಂವ ಸೇತುವೆ ಜಲಾವೃತವಾದ ಕಾರಣ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅವರಾದಿ, ಯರಗುದ್ರಿ, ತಿಮ್ಮಾಪೂರ, ಅರಳಿಮಟ್ಟಿ, ವೆಂಕಟಾಪೂರ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಈ ಗ್ರಾಮಕ್ಕೆ ಹೋಗುವವರು ಮತ್ತು ಮಹಾಲಿಂಗಪುರಕ್ಕೆ ಬರುವವರು ಢವಳೇಶ್ವರ ಸೇತುವೆಯ ಮಾರ್ಗವಾಗಿ ಹತ್ತಾರು ಕೀಮಿ ಸುತ್ತುವರೆದು ಸಂಚರಿಸುವಂತಾಗಿದೆ.

ಸಂಚಾರ ನಿಷೇಧ : ನಂದಗಾಂವ ಅವರಾದಿ ಸೇತುವೆಯು ಜಲಾವೃತವಾಗಿರುವ ಕಾರಣ ಮಹಾಲಿಂಗಪುರ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೇತುವೆ ಹತ್ತಿರ ಬ್ಯಾರಿಕೇಡ್ ಅಳವಡಿಸಿ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next