Advertisement

ಲೋಕ ಚುನಾವಣೆಗೆ ಸಿದ್ಧ‍ರಾಗಿ

07:25 AM Feb 22, 2019 | |

ತುಮಕೂರು: ಸಾಮಾಜಿಕ ಜಾಲತಾಣಗಳು ಹೆಚ್ಚು ಶಕ್ತಿಯುತ ಹಾಗೂ ಪ್ರಭಾವಶಾಲಿಯಾಗಿದ್ದು, ಎಚ್ಚರಿಕೆಯುತವಾಗಿ ಸೂಕ್ಷ್ಮವಾಗಿ ಬಳಸಬೇಕಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಸಂಸದ ಎಸ್‌.ಪಿ.ಮುದ್ದಹನುಮೇಗೌಡ ತಿಳಿಸಿದರು.

Advertisement

ನಗರದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಬೂತ್‌ ಮಟ್ಟದ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಮಾತನಾಡುತ್ತಾ, ಭಾರತದಲ್ಲಿ ತಂತ್ರಜ್ಞಾನಕ್ಕೆ ಅಡಿಪಾಯ ಹಾಕಿದವರು ದಿವಂಗತ ಮಾಜಿ ಪ್ರಧಾನಿ ರಾಜೀವ್‌ಗಾಂಧಿ.

ಅವರು ಅಂದು ತಂತ್ರಜ್ಞಾನದ ಬಗ್ಗೆ ಮಾತನಾಡಿದಾಗ ಲೇವಡಿ ಮಾಡಿದ ಬಿಜೆಪಿ ಪಕ್ಷದವರು, ಅದೇ ತಂತ್ರಜ್ಞಾನ ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್‌ ಪಕ್ಷ ತಂತ್ರಜ್ಞಾನ ಬಳಕೆಯಲ್ಲಿ ಹಿಂದೆ ಉಳಿದಿದ್ದು, ತಂತ್ರಜ್ಞಾನವನ್ನು ಪರಿಣಾಮಕಾರಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಹೇಳಿದರು.

ಸುಳ್ಳು ಪ್ರಚಾರಕ್ಕೆ ಪ್ರತಿರೋಧ ಮಾಡಿ: ಸಾಮಾಜಿಕ ಜಾಲತಾಣಗಳು ಜನರನ್ನು ಸುಲಭವಾಗಿ ತಲುಪುವ ಮಾಧ್ಯಮವಾಗಿದ್ದು, ಸತ್ಯಕ್ಕೆ ದೂರವಾದ ವಿಚಾರಗಳನ್ನು ಹರಿಯಬಿಡುವ ಮೂಲಕ ಜನರನ್ನು ನಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಅವರ ಸುಳ್ಳುಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಹೊಣೆಗಾರಿಕೆಯನ್ನು ಯುವ ಕಾರ್ಯಕರ್ತರು ಸಮರ್ಥವಾಗಿ ನಿಭಾಯಿಸಬೇಕಿದೆ. ಸುಳ್ಳನ್ನು ಸುಳ್ಳು ಎಂದು ತೋರಿಸಬೇಕಾದ ಅನಿವಾರ್ಯತೆ ಇದ್ದು, ಸುಳ್ಳು ಪ್ರಚಾರಕ್ಕೆ ಪ್ರತಿರೋಧ ಮಾಡಬೇಕು ಎಂದರು.

ಎಲ್ಲ ತಿಳಿದು ಪ್ರಶ್ನಿಸುತ್ತಾರೆ: ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎಂದು ಪ್ರಧಾನಿ ಮೋದಿ ಪ್ರಶ್ನಿಸುತ್ತಾರೆ. ದೇಶದಲ್ಲಿ ಸಾರ್ವಜನಿಕ ಉದ್ದಿಮೆ ಸ್ಥಾಪಿಸಿದ್ದು, ದೂರವಾಣಿ ಸಂಪರ್ಕ ಸಾಧಿಸಿದ್ದು, ದೇಶದ ರಕ್ಷಣೆಗಾಗಿ ಸಮರ್ಥ ಸೈನ್ಯ ರೂಪಿಸಿದ್ದು ಕಾಂಗ್ರೆಸ್‌. ದೇಶದ ಆರ್ಥಿಕ ಸುಸ್ಥಿತಿ ಕಾರಣವಾಗಿದ್ದು ಕಾಂಗ್ರೆಸ್‌. ದೇಶವನ್ನು ಸದೃಢವಾಗಿ ಕಟ್ಟಿದ್ದು ಕಾಂಗ್ರೆಸ್‌. ಆದರೆ, ಪ್ರಧಾನಿ ಮೋದಿ ಅವರು ಎಲ್ಲ ತಿಳಿದರೂ ಕಾಂಗ್ರೆಸ್‌ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆಂದು ವ್ಯಂಗ್ಯವಾಡಿದರು.

Advertisement

ಸುಳ್ಳುಗಳನ್ನು ತಿಳಿಸಿ: ಮೋದಿ ಅಧಿಕಾರಕ್ಕೆ ಬಂದ ಮೇಲೆ ಮನ್‌ ಕಿ ಬಾತ್‌, ಸಾರ್ಟ್‌ ಅಪ್‌, ಸ್ಟಾಂಡ್‌ ಅಪ್‌ ಅಂತೆಲ್ಲ ಹೇಳುತ್ತಾರೆ.  ರೈತರಿಗೆ ನೆರವಾಗುವ ಯೋಜನೆ ನೀಡಲಿಲ್ಲ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಿಲ್ಲ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗಾಗಿ, ದಲಿತರಿಗಾಗಿ ಯಾವ ಯೋಜನೆ ತರಲಿಲ್ಲ, ಬರೀ ಘೋಷಣೆಗಳಿಂದ ಚುನಾವಣೆ ಗೆಲ್ಲಬಹುದು ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಅವರ ಸುಳ್ಳುಗಳ ಬಗ್ಗೆ ಸತ್ಯ ತಿಳಿಸಬೇಕಾದ ಬದ್ಧತೆಯನ್ನು ಯುವ ಕಾರ್ಯಕರ್ತರು ಹೊಂದಬೇಕು ಎಂದರು.

ಜಾಲತಾಣ ಬಳಸಿ: ರಾಜ್ಯ ಸಾಮಾಜಿಕ ಜಾಲತಾಣ ಉಸ್ತುವಾರಿ ನಟರಾಜ್‌ಗೌಡ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗಿದ್ದು, ಪ್ರಧಾನಿಯವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣವನ್ನು ಅಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರು ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಸುಳ್ಳುಗಳಿಗೆ ಕೊನೆಗಾಣಿಸಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಮಂಜುನಾಥ್‌ ಅದ್ದೆ ಮಾತನಾಡಿ, 2013ರಲ್ಲಿ ಬಿಜೆಪಿ ಪರ ಸಂಘಟನೆಗಳು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರಿಂದ ಶೇ.30ರಷ್ಟು ಮತಗಳ ಮೇಲೆ ಪ್ರಭಾವ ಬೀರಿತು ಎನ್ನುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ರಾಜೀವ್‌ಗಾಂಧಿ ಜಾರಿಗೆ ತಂದ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎನ್ನುವುದನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಮಹತ್ವದಾಗಿದೆ ಎಂದು ತಿಳಿಸಿದರು.

ದಿನಕ್ಕೆ 40 ಮಂದಿ ತಲುಪಬಹುದು: ಇಂದು ಜಗತ್ತು ಅಂಗೈನಲ್ಲಿಯೇ ಇದೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಬ್ಬರು ದಿನಕ್ಕೆ ನಲ್ವತ್ತು ಮಂದಿಯನ್ನು ತಲುಪಬಹುದಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸಬೇಕಾದ ಅವಶ್ಯಕತೆ ಇಂದು ರಾಜಕೀಯ ಪಕ್ಷಗಳಿಗಿದ್ದು, ಎಲ್ಲ ಕಾರ್ಯಕರ್ತರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಟೂಡ ಮಾಜಿ ಅಧ್ಯಕ್ಷ ಸಿ.ಶಿವಮೂರ್ತಿ, ಆರ್‌.ರಾಜೇಂದ್ರ, ಮುರುಳೀಧರ ಹಾಲಪ್ಪ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ರುದ್ರೇಶ್‌, ನಿರಂಜನ್‌, ತು.ಬಿ.ಮಲ್ಲೇಶ್‌, ರಾಯಸಂದ್ರ ರವಿಕುಮಾರ್‌, ನಯಾಜ್‌ ಅಹ್ಮದ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next